Monday, January 14, 2019

ಸ್ಕಂದಗಿರಿಯಲ್ಲಿ ಅಲೆಮಾರಿಗಳು !!!

 ಆಸೆ ಪಟ್ಟರೆ ಸಾಕೆ.. ಅದರ ಬೆನ್ನು ಬಿದ್ದು ಸಾಧಿಸಬೇಕು.. !!!

೨೦೦೫ ರಲ್ಲಿ . ಜಿಇ ಕಂಪನಿಯಲ್ಲಿ ಕೆಲಸಮಾಡುವಾಗ .. ಆಫೀಸ್ ಮೇಲ್ ಗೆ ಒಂದು ಪೋಸ್ಟ್ ಬಂತು.. ಹಾಲಿನ ನೊರೆಯಲ್ಲಿ ಸುತ್ತ ಮುತ್ತಲ ಗುಡ್ಡಗಳು ಮುಳುಗೇಳುತ್ತಿದ್ದವು.. ಆ ಚಿತ್ರಗಳನ್ನ ಕಂಡಾಗ ಸಹಜವಾಗಿಯೇ ಕುತೂಹಲ ಮೂಡಿತು... ಎಲ್ಲಿದೆ ಆ ಜಾಗ ಎಂದು ತಡಕಾಡಿದಾಗ ಸಿಕ್ಕಿದ ಉತ್ತರ ಬೆಂಗಳೂರಿಂದ ಕೇವಲ ೭೦-೮೦ ಕಿಮೀಗಳ ದೂರ ಎಂದು ಗೊತ್ತಾಯಿತು..

ಅರೆ ಇಸ್ಕಿ.. ಹೋಗಿಯೇ ಬಿಡೋಣಾ ಅಂತ.. ಅವತ್ತಿಂದ ಪ್ಲಾನ್ ಮಾಡಿದ್ದೆ ಮಾಡಿದ್ದು.. ಫಲಕಾರಿಯಾಗಿರಲಿಲ್ಲ.. ನನ್ನದೇ ಗುಂಪು ಅಲೆಮಾರಿಗಳು ತಂಡವನ್ನು ಕಟ್ಟಿಕೊಂಡಮೇಲೂ ಸಾವಿರಾರು ಕಿಮೀಗಳು..ಸುತ್ತಿದೆವು.. ಹತ್ತಾರು ಜಾಗಗಳಲ್ಲಿ ಅಲೆಮಾರಿಗಳ ಹೆಜ್ಜೆ ಗುರುತು ಮೂಡಿಸಿದ್ದೆವು.. ಆದರೆ ಕೇವಲ ೭೦-೮೦ ಕಿಮಿದೂರದಲ್ಲಿರುವ ಸ್ಕಂದಗಿರಿಗೆ ಮಾತ್ರ ಹೆಜ್ಜೆ ಇಡೋಕೆ ಆಗಿರಲಿಲ್ಲ.. ಅದರ ಸುತ್ತ ಮುತ್ತಲ ನಂದಿ ಬೆಟ್ಟ, ಚನ್ನಗಿರಿ, ಮಾಕಳಿದುರ್ಗ ನೋಡಿ ಬಂದಿದ್ದೆವು ಆದರೆ ಸ್ಕಂದ ಗಿರಿ ಕರೆಯುತ್ತಲೇ ಇತ್ತು..

ಆ ದಿನ ಬಂದೆ ಬಿಡ್ತು.. ಮಲೆನಾಡಿನ ಹುಡುಗ ಗಿರಿ ಪದೇ ಪದೇ ಶ್ರೀ ಎಲ್ಲಾದರೂ ಹೋಗೋಣ ಎನ್ನುವ ನಿರಂತರ ಬೇಡಿಕೆ.. ಸ್ಕಂದಗಿರಿಯ ತಪ್ಪಲಿಗೆ ಕರೆದೊಯ್ಯಲು ಸಿದ್ಧವಾಗಿತ್ತು..  ಒಂದು ಪ್ರವಾಸಕ್ಕೆ ಹೇಗೆ ಎಲ್ಲವೂ ಒದಗಿ ಬಂದು ಹೂವಿನ ಸರವಾಗುತ್ತೆ ಎನ್ನುವುದಕ್ಕೆ ಉದಾಹರಣೆ ಈ ಚಾರಣ..

ಗಿರಿ ಮತ್ತು ನಾನು ಸಿದ್ಧವಾದೆವು.. ರಶ್ಮಿ ಬರ್ತೀನಿ ಅಂತ ಹೇಳಿದ್ಲು.. ಅವಳಿಗೆ ಹೇಳಿದ ಮೇಲೆ.. ಅವಳಿಂದ ಚಿನ್ಮಯ್, ಲಕ್ಷ್ಮಿಪ್ರಿಯ, ಜಮುನಾ, ದಾಮಿನಿ, ಮಂಜುಳಾ ಜೊತೆಯಾದರು.. ನಂತರ ಕಿಶೋರ್ ಬರುವೆ ಎಂದು ಒಪ್ಪಿದರು.. ಇನ್ನೊಬ್ಬಳು ರಶ್ಮಿ ಹೆಗಡೆ ಸಂಜೆ ಸುಮಾರಿಗೆ ಒಪ್ಪಿದಳು.. ಜೊತೆಯಲ್ಲಿ ನನ್ನ ಗೆಳತೀ ಶೀತಲ್.. ಸರಿಯಾಗಿ ಹನ್ನೊಂದು ಮಂದಿ.. ಅದರಲ್ಲಿ ಹೆಣ್ ಮಕ್ಕಳದೇ ಸೈನ್ಯ.. ಏಳು ಮಂದಿ.. ಯಪ್ಪೋ.
ಚಿತ್ರಕೃಪೆ -  ಚಿನ್ಮಯ್ 
ರಾತ್ರಿ ೧೨. ೪೫ಕ್ಕೆ ಹೊರಟ ನಮ್ಮ ವಾಹನ ಎಲ್ಲರನ್ನು ಅವರವರ ಮನೆ ಬಾಗಿಲಿನಿಂದ ಹತ್ತಿಸಿಕೊಂಡು ಬಳ್ಳಾರಿ ರಸ್ತೆಯಲ್ಲಿ ಮುನ್ನುಗುತ್ತಾ ಸಾಗಿ ಸ್ಕಂದಗಿರಿ ತಪ್ಪಲಿಗೆ ಬಂದದ್ದು ಬೆಳಗಿನ ಜಾವ ೪.೧೫ಕ್ಕೆ.. ಅಲ್ಲೊಂದು ಸಂತೆಯೇ ನೆರೆದಿತ್ತು..ನೂರಾರು ಮಂದಿ ಚಾರಣಿಗರು ಬೆಳಗಿನ ಆ ಹಾಲುನೊರೆಯಲ್ಲಿ ಮುಳುಗೇಳುವ ಬೆಟ್ಟಗಳ ಸಾಲನ್ನು ನೋಡಲು ಕಾತುರತೆಯಿಂದ ಟಿಕೆಟ್ ಖರೀದಿಸಲು ನೆರೆದಿದ್ದರು.. ನಮಗೆ ಒಂದು ಶಾಕ್ ಕಾದಿತ್ತು.. ಟಿಕೆಟ್ ಮುಗಿದುಹೋಗಿದೆ.. ಆನ್ಲೈನ್ ಬುಕ್ ಮಾಡಿ ಅಂತ ಅಲ್ಲಿದ್ದ ಸಿಬ್ಬಂದಿ  ಹೇಳಿದರು.. ತಕ್ಷಣ ಎಲ್ಲರ  ಮೊಬೈಲ್ ನೆಟ್ ಆನ್ ಆಯಿತು.. ಆದರೆ ಅಲ್ಲಿಯೂ ನಿರಾಸೆ.. ಅಂದಿನ ದಿನದ ಟಿಕೆಟ್ ಕೋಟಾ ಮುಗಿದುಹೋಗಿತ್ತು ಅಂತ ಮೊಬೈಲ್ ಹೇಳಿತು..

ಎಲ್ಲರಿಗೂ ನಿರಾಸೆ.. ಆ ನಿರಾಸೆ ಹೊತ್ತ ಮುಖಗಳಲ್ಲಿ ಬಂದ ನಿಟ್ಟುಸಿರು.. ಮತ್ತು ಆ ಬೇಸರದ ಛಾಯೆ ಆ ಕತ್ತಲಿನಲ್ಲಿಯೂ ಕಾಣಿಸುವಷ್ಟು ಸ್ಪಷ್ಟವಾಗಿತ್ತು.. ನಮ್ಮ ಆರ್ಮಿ ಮ್ಯಾನ್ ಚಿನ್ಮಯ್ "ಶ್ರೀಕಾಂತಣ್ಣ ಒಳಗೆ ಹೋಗಿ ಮಾತಾಡಿಕೊಂಡು ಬರ್ತೀನಿ" ಅಂತ.. ಹೋಗಿ ಮಾತಾಡಿಕೊಂಡು ಬಂದು.. ತಕ್ಷಣವೇ ಮೊಬೈಲ್ನಲ್ಲಿ ಬುಕ್ ಮಾಡಿ.. ಟಿಕೆಟ್ ಸಿಕ್ಕ ಸಂದೇಶ ನೋಡಿದಾಗ ಎಲ್ಲರ ಮೊಗವೂ..  "ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ" ಹಾಡಿನಂತೆ ಅರಳಿತ್ತು..

ಇದಕ್ಕೂ ಮೊದಲು.. ಟೆಂಪೋ ಟ್ರಾವೆಲ್ಲರ್ ನಲ್ಲಿ ಎಲ್ಲರೂ ಹತ್ತಿದ ಮೇಲೆ.. ನನಗೆ ಎಲ್ಲರೂ ಪರಿಚಯ.. ಆದರೆ ಕಿಶೋರ್ ಮತ್ತು ಗಿರಿಗೆ ಎಲ್ಲರೂ ಹೊಸಬರು.. ಲಾಡು ಬಾಯಿಗೆ ಬಿತ್ತಾ ಎನ್ನುವ ಸಂಧರ್ಭವೇ ಒದಗಿರಲಿಲ್ಲ.. ಐಸ್ ಬ್ರೇಕಿಂಗ್ ಸೆಶನ್ ನೆಡೆದರೂ  ಒಬ್ಬರಿಗೊಬ್ಬರ ಮಧ್ಯೆ ಆ ಮಟ್ಟದ ಮಾತುಗಳು ನೆಡೆಯೋಕೆ ಅವಕಾಶ ಆಗಿರಲಿಲ್ಲ.. ನನಗೆ ಗೊತ್ತಿತ್ತು.. ಚಾರಣ ಶುರುವಾದ ಮೇಲೆ.. ನನ್ನ ಮಧ್ಯಸ್ಥಿಕೆ ಬೇಕಾಗೋಲ್ಲ.. .ಅವರೆಲ್ಲರೂ ನನ್ನ ಮರೆತು ಒಂದಾಗಿ ಮುನ್ನೆಡೆಯುತ್ತಾರೆ ಎಂದು..

ಬೆಟ್ಟ ಹತ್ತಲು ಶುರುಮಾಡಿದಾಗ.. ಒಬ್ಬರಿಗೊಬ್ಬರು ಮಾತು, ಒಬ್ಬರಿಗೊಬ್ಬರು ಆ ಕತ್ತಲೆಯಲ್ಲಿ ಕೈ ಹಿಡಿದು ಸಹಾಯ ಮಾಡುತ್ತಾ ಹಾಸ್ಯ ಮಾಡುತ್ತಾ ಎಡಬಿಡದೆ ಮಾತಾಡುತ್ತಾ ಹೆಜ್ಜೆ ಹಾಕುತ್ತಾ ಹೋದ ಹಾಗೆ ನಡುವೆ ಇದ್ದ ಕಾಣದೆ ಇದ್ದ ಗೋಡೆ ನಿಧಾನವಾಗಿ ಕರಗಿ ಹೋಯಿತು.. ಎಲ್ಲರಿಗೂ ಕಾಮನ್ ಕೊಂಡಿಯಾಗಿದ್ದ ನಾನು ನಿಟ್ಟುಸಿರು ಬಿಟ್ಟು.. ನನ್ನ ಪಾಡಿಗೆ ನನ್ನ  ಕ್ಯಾಮೆರಾಗೆ ಕೆಲಸ ಕೊಡುತ್ತಾ ಹೋದೆ..  ನಾ ನಿರಾಳ ಆಗಿದ್ದೆ.. ಎಲ್ಲರೂ ಒಂದಾಗಿದ್ದು ನನಗೆ ಖುಷಿ ಕೊಟ್ಟಿತ್ತು.. !!!

ಆ ಮಬ್ಬುಗತ್ತಲಿನಲ್ಲಿ ನಿಧಾನವಾಗಿ ಬೆಟ್ಟವೇರತೊಡಗಿದೆವು... ಗುಂಪು ಮೂರು ಭಾಗವಾಗಿತ್ತು.. ಸ್ವಲ್ಪ ಸಲೀಸಾಗಿ ಹೆಜ್ಜೆ ಹಾಕುತ್ತಾ ಸಾಗುವ ಗುಂಪಿಗೆ ಗಿರಿ ಮುಂದಾಳಾಗಿ ಮಂಜುಳಾ, ದಾಮಿನಿ, ರಶ್ಮಿ ಹೆಗಡೆ, ಲಕ್ಷ್ಮಿಪ್ರಿಯ, ಜಮುನಾ ಜೊತೆಯಲ್ಲಿ ಶೀತಲ್ ಮುನ್ನೆಡೆಸಿದರು .. ಕಿಶೋರ್, ರಶ್ಮಿ ಜಿ ಇವರಿಬ್ಬರನ್ನು ತಾಳ್ಮೆಯ ಚಿನ್ಮಯ್ ಮುನ್ನೆಡೆಸುತ್ತಾ ಹೋದರು.. ಈ ಎರಡು ಗುಂಪುಗಳ ಮಧ್ಯೆ ನಾನು ಸಾಗುತ್ತಾ ಹೋದೆ..



ದಿನಕರನ ತಾಯಿ.. "ಮಗು ಸೂರ್ಯ.. ಬೆಳಿಗ್ಗೆ ನಮ್ಮ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳಲ್ಲಿ ಹಾಲು ಕರೆದು ಹಂಡೆಗಳಲ್ಲಿ ತುಂಬಿಸಿಟ್ಟಿದ್ದೀನಿ.. ಒಲೆ ಹೆಚ್ಚು . ಹಾಲು ಕಾಯಬೇಕು.. " ಎಂದು ಹೇಳಿದ್ದನ್ನು ಕೇಳಿ.. ಬಾಲಕ ದಿನಕರ ಒಲೆ ಹಚ್ಚಿದ ಮೇಲೆ  ಹಂಡೆಗಳು  ಬಿಸಿಯಾಗುತ್ತಿತ್ತು.. ಅದನ್ನು ನೋಡಿ ಖುಷಿ ಪಟ್ಟ.. ತುಂಟ ಹುಡುಗನ ಮನಸ್ಸು ಆಟದ ಕಡೆಗೆ ವಾಲಿತು.. ಆದರೆ ಆಟವಾಡಲು ಸುಮಾರು ಮೆಟ್ಟಿಲು ಮೇಲೆ ಹತ್ತಿ ಬರಬೇಕಿತ್ತು..ಹಾಲು ಕಾಯುವ ಹೊತ್ತಿಗೆ ಒಂದಷ್ಟು ಆಟವಾಡಿ ಬರೋಣ ಎಂದು ಒಂದೊಂದೇ ಮೆಟ್ಟಿಲು ಹತ್ತುವಾಗೂ.. ಹಂಡೆಗಳು ಕಾದು ಕಾದು ಕೆಂಪಾಗುತ್ತಿತ್ತು.. ಆಟದ ಮಧ್ಯೆ ಹಾಲಿನ ಕಡೆಗೆ ಗಮನವನ್ನೇ ನೀಡದ ತುಂಟ ಆಡುತ್ತಲೇ ಹೋದ.. ಹಂಡೆಗಳು ಕೆಂಪಾಗಿ.. ಹಾಲು ಕುದ್ದು ಕುದ್ದು ಉಕ್ಕಲು ಶುರುಮಾಡಿತು.. ಉಕ್ಕಿ ಉಕ್ಕಿ ಎಲ್ಲೆಡೆಯೂ ಹರಿಯತೊಡಗಿತು.. ತನ್ನ ಬುಡಕ್ಕೂ ಬಿಸಿ ಬಿಸಿ ಹಾಲು ತಾಕಿದಾಗ ಆಟದ ಗಮನ ಬಿಟ್ಟು.. ಅಯ್ಯೋ.. ಅಮ್ಮ ನನ್ನ ನೋಡಿದರೆ ಚೆನ್ನಾಗಿ ಬಾರಿಸುವಳು ಎನ್ನುತ್ತಾ ಅವಳ ಕೈಗೆ ಸಿಗಬಾರದು ಎಂದು  ಹಂತ ಹಂತವಾಗಿ ಮೇಲೇರತೊಡಗಿದ.. ಅವನು ಏರುತ್ತಾ ಹೋದ ಹಾಗೆ ಹಾಲಿನ ನೊರೆಗಳು ದಿನಕರನನ್ನು ಹಿಡಿಯಲು ಅವನನ್ನೇ ಹಿಂಬಾಲಿಸಿದವು.. ಆದರೆ ದಿನಕರನು ಪುಟ್ಟ ಪುಟ್ಟದಾಗಿದ್ದ ಆದ್ದರಿಂದ ವೇಗ ಹೆಚ್ಚು ಮಾಡುತ್ತಾ ಹೋದ.. ಸೋತ ಹಾಲಿನ ನೊರೆಗಳು.. ಹಾಗೆಯೇ ಸಿಕ್ಕ ಕಡೆಯೆಲ್ಲಾ ಹರಡಿಕೊಳ್ಳತೊಡಗಿದವು.. ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಿನಕರನ ತಾಯಿಗೆ ಏನೋ ಅನುಮಾನ ಬಂದು.. ಒಲೆಯ ಹತ್ತಿರ ಬಂದು ನೋಡಿದರೆ.. ಹಾಲಿನ ನೊರೆಯ ಸಾಗರವೇ ಇತ್ತು.. ಅಚ್ಚರಿ ಎಂದರೆ.. ಒಲೆ ಮಾತ್ರ ಆರಿರಲಿಲ್ಲ.. ಅದೇ ವಿಶೇಷ.. ಆಕೆಯೇ ದಿನಕರನ್ನು ಬಯ್ಯದೆ.. ತುಂಟ ಮಗು.. ಅವನ ಗೆಳೆಯರ ಜೊತೆ ಆಟಕ್ಕಾಗಿ ಪಾಪ ಇದನ್ನೇ ಮರೆಯಿತು.. ಎನ್ನುತ್ತಾ ಒಲೆಯೊಳಗೆ ಇದ್ದ ಸೌದೆಗಳನ್ನ ತೆಗೆದಳು.. ಒಲೆ ಉರಿ ಕಡಿಮೆ ಆದ ಮೇಲೆ.. ನೊರೆಗಳ ಪ್ರವಾಹವೂ ಕಡಿಮೆಯಾಗತೊಡಗಿತು.. ಅಷ್ಟರಲ್ಲಿ ದಿನಕರ ಕೈಗೆ ಸಿಗದಷ್ಟು ಮೇಲಕ್ಕೆ ಹೋಗಿದ್ದ.. ಆಕೆಗೆ  ಗೊತ್ತಿತ್ತು.. ಸಂಜೆ ಮನೆಗೆ ಬಂದೆ ಬರುತ್ತಾನೆ.. ಆಗ ವಿಚಾರಿಸಿಕೊಳ್ಳುತ್ತೇನೆ.. ಎನ್ನುತ್ತಾ ನಕ್ಕು ಅಡಿಗೆ ಮನೆಯೊಳಗೇ ತನ್ನ ಕೆಲಸ ಕಾರ್ಯ ಗಮನಿಸಲು ಹೋದಳು..

ಮೊದಲ ಹಂತದಲ್ಲಿ ಸಾಗರವಾಗಿ ಕಂಡು ಬಂದ ಹಾಲಿನ ನೊರೆಯ ಬೆಟ್ಟ ಗುಡ್ಡಗಳನ್ನು ಕಂಡಾಗ ಮನಸ್ಸು ಹಾಯ್ ಎಂದಿತು.. ಸೂರ್ಯ ಆಗಲೇ ಉದಯಿಸಲು ಶುರು ಮಾಡಿದ್ದ .. ಬಾನಲ್ಲಿ ರಂಗು ಮೂಡಿಸಿದ್ದ .. ಆಗ ಮೂಡಿ ಬಂದಿದದ್ದೇ ದಿನಕರನ ಉದಯದ ಕಾಲದ ಘಟನೆ..  ನನ್ನ ತುಂಟ ಮನದಲ್ಲಿ ಆ ದೃಶ್ಯಗಳು ಮೂಡಿತ್ತು.. ಅದು ಮೇಲಿನಂತೆ ಅಕ್ಷರಗಳ ರೂಪ ತಾಳಿತು..













ಅಲ್ಲಿನ ದೃಶ್ಯಗಳನ್ನು ನೋಡುತ್ತಾ ಮೈ ಮನಸ್ಸು ಹಗುರಾಯಿತು.. ಕ್ಯಾಮೆರಾದ ಹೊಟ್ಟೆ ತುಂಬುತ್ತಾ ಹೋಯಿತು.. ಸೂಪರ್ ಸೂಪರ್ ಅನ್ನುವಂತಹ ದೃಶ್ಯಗಳು.. ಕ್ಯಾಮೆರವೋ.. ಕಣ್ಣೋ ಎನ್ನುವ ಹೊಡೆದಾಟದಲ್ಲಿ ಕ್ಯಾಮೆರಾ ಗೆದ್ದಿತ್ತು.. ನಮ್ಮ ತಂಡದ ಎಲ್ಲರೂ ಒಂದೇ ಕಡೆಯಲ್ಲಿ ಸಿಕ್ಕಿದೆವು.. ಬೇಕಾದಷ್ಟು ಮಾತುಗಳು.. ತಂದಿದ್ದ ಕುರುಕುಲು ಹೊಟ್ಟೆಯೊಳಗೆ ಮನೆಮಾಡಿದ್ದೆವು..ಯಾರಿಗೂ ಹೊರಡುವ ಮನಸ್ಸು ಇರಲಿಲ್ಲ .. ಐದು ನಿಮಿಷ ಹತ್ತು ನಿಮಿಷ ಎನ್ನುತ್ತಾ ಕಳೆದದ್ದು ಬರೋಬ್ಬರಿ ಒಂದು ಘಂಟೆಗೂ ಹೆಚ್ಚು.. ಕಡೆಗೆ ಇಡೀ ಬೆಟ್ಟದ ಮೇಲೆ ನಾವಷ್ಟೇ ಮಂದಿ ಎಂದು ಅರಿವಾದ ಹೊತ್ತು.. ಸರಿ ನಡೀರಪ್ಪ ಎನ್ನುತ್ತಾ ಭಾರವಾದ ಮನಸ್ಸಿಂದ ಹೊರಟೆವು.. ಬೆಳಿಗ್ಗೆ ಹಾಲಿನ ನೊರೆಯಿಂದ ತುಂಬಿಕೊಂಡಿದ್ದ ಬೆಟ್ಟ ಗುಡ್ಡಗಳು ದಿನಕರನ ಬೆಳಕಿನ ಪ್ರವಾಹದಲ್ಲಿ ಮೀಯಲು ಪುಟ್ಟ ಮಗು ಬಚ್ಚಲು ಮನೆಗೆ ಹೊರಡಲು ಸಿದ್ಧವಾದಂತೆ ಕಂಡಿತು..

ಇಳಿಯುವಾಗ ಎಚ್ಚರಿಕೆ ಹೆಚ್ಚು ಬೇಕಿತ್ತು.. ಜಾರುಬಂಡಿಗಳು ಸಿಕ್ಕಾಪಟ್ಟೆ ಇದ್ದವು.. ಸುಮಾರು ಎರಡು ಘಂಟೆಗಳ ಪ್ರಯತ್ನ.. ಬೆಟ್ಟದ ತಪ್ಪಲಿಗೆ ಬಂದೆವು.. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿಕೊಂಡು.. ಮತ್ತೆ ನಮ್ಮ ವಾಹನವನ್ನು ಹತ್ತಿದಾಗ.. ಎಲ್ಲರಿಗೂ ಒಂದು ತೃಪ್ತಿ.. ಅದೆಷ್ಟೋ ವರ್ಷಗಳ ತಪಸ್ಸಿಗೆ ವರ ಸಿಕ್ಕಿತೇನೋ ಅನ್ನುವ ಖುಷಿ.. ಒಬ್ಬರಿಗೊಬ್ಬರು ಧನ್ಯವಾದ ಹೇಳುತ್ತಾ ಈ ಚಾರಣ ರೂಪಿಸಿದ ನನಗೆ ಕೃತಜ್ಞತೆ ಹೇಳಿದರೂ ನನ್ನ ಮನಸ್ಸು ಮತ್ತು ನನ್ನ ಮಾತು ಹೇಳಿದ್ದು ಒಂದೇ.. "

ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ..
ಮಾಮರವೆಲ್ಲೂ ಕೋಗಿಲೆಯೆಲ್ಲೋ
ಏನೀ ಸ್ನೇಹ ಸಂಬಂಧ.. "

ಒಬ್ಬರಿಗೊಬ್ಬರು ಒಂದೇ ಬಳ್ಳಿಯಲ್ಲಿ ಹುಟ್ಟಲಿಲ್ಲ.. ಆದರೆ ಎಲ್ಲರೂ ಒಂದೇ ಮನೆಯವರ ಹಾಗೆ ಇದ್ದದ್ದು, ಹೊಂದಿಕೊಂಡು ಹೋದದ್ದು ಖುಷಿಯಾಗಿತ್ತು ..  ಹೋಗುವಾಗ ಇದ್ದ ನಿಶ್ಯಬ್ಧ ಬರುವಾಗಲೂ ಇತ್ತು.. ಆದರೆ ಹೋಗುವಾಗ ಇದ್ದ ಮೌನದಲ್ಲಿ ಈ ಚಾರಣ ಹೇಗೋ ಏನೋ ಎನ್ನುವ ಗೊಂದಲವಿದ್ದರೆ.. ಬರುವಾಗ ಅದ್ಭುತ ಚಾರಣದಿಂದ ಮನಸ್ಸು ತುಂಬಿ ಬಂದ ಮನಸ್ಸು ಮೂಕವಾಗಿತ್ತು ಆ ಧನ್ಯಲೋಕದ ದಿವ್ಯ ಮೌನದಲ್ಲಿ.. ಕೈಯನ್ನು ಮೇಲೆ ಎತ್ತಿ ನಮ್ಮನ್ನೆಲ್ಲಾ ಕೂಡಿಸಿದ ಆ ಮಹಾ ಮಹಿಮನಿಗೆ ಒಂದು ನಮಸ್ಕಾರ ಹೇಳಿತು!!!



ಶ್ರೀಚಿರ ಮಂದಾರಗಿ ಜಳಕಿಶಿ ಎನ್ನುವ ಈ ಸುಂದರ ಗುಂಪು ಮತ್ತೆ ಮತ್ತೆ ಒಂದಾಗಿ ಸಾಗುತ್ತೆ ಎನ್ನುವ  ವಿಶ್ವಾಸದಿಂದ ಎಲ್ಲರನ್ನು ಬೀಳ್ಕೊಟ್ಟು ಈ ಚಾರಣದ ಸುಂದರ ಅನುಭವದಲ್ಲಿ ಮಿಂದು ಮುಂದಿನ ಚಾರಣಕ್ಕೆ ಕಾಯುತ್ತ ಕುಂತಿತ್ತು ಮನಸ್ಸು!!!

3 comments: