Monday, December 3, 2018

ಆ ಮಂಜುನಾಥನ ಕೃಪಾಕಟಾಕ್ಷವು ಎಂದೆಂದೂ ನಿಮಗಿರಲಿ --- ಧರ್ಮಸ್ಥಳ.. ಸೌತಡ್ಕ.. ಸುಬ್ರಮಣ್ಯ

ಅನೇಕ  ಹಾಳೆಗಳು ಸೇರಿ ಒಂದು ಪುಸ್ತಕವಾಗುತ್ತದೆ..
ಅನೇಕ ಕವನಗಳು ಕಥೆಗಳು ಸೇರಿ ಸಂಕಲನವಾಗುತ್ತದೆ
ಅನೇಕ ವೃಕ್ಷಗಳು, ಸಸ್ಯಗಳು ಸೇರಿ ಉದ್ಯಾನವನವಾಗುತ್ತದೆ
ಅನೇಕ ಕಂಬಗಳು ಸೇರಿ ದೇವಾಲಯವಾಗುತ್ತದೆ

ನನ್ನ ಜೀವನದಲ್ಲಿ ಹೀಗೆ ಪರಿಚಯವಾದ ಎರಡು ಸ್ನೇಹಮಯ ಗುಂಪು ಒಂದು ೩ಕೆ ಮತ್ತೊಂದು ಸ್ನೇಹಲೋಕ.. ಸಮಾಜದ ಹಲವಾರು ದಿಕ್ಕುಗಳಿಂದ ಸೇರಿರುವ ಸಹೃದಯರ ಗುಂಪು ಇದು ..ಕೆಲವೇ ಕೆಲವು ಸ್ನೇಹಿತರಿಂದ ಸೇರಿಕೊಂಡು ಆದ ಈ ಗುಂಪು ಇಂದು ಸಾವಿರಾರು ಜನರನ್ನು ಒಳಗೊಂಡಿದೆ.. ಅನೇಕ ಉತ್ತಮ ಕೆಲಸಗಳನ್ನು ಮಾಡುತ್ತಿದೆ..

ಹೀಗೆ ಒಂದು ಪ್ರವಾಸ ಮಲ್ಲೇಶ ಅಲಿಯಾಸ್ ಗುಂಡನ ಮದುವೆ ಧರ್ಮಸ್ಥಳದಲ್ಲಿ ಎಂದು ಆಹ್ವಾನ ಬಂದಾಗ ನಿರಾಕರಿಸಲು ಆಗಲಿಲ್ಲ..ಕಾರಿನಲ್ಲಿ ಹೋಗೋದು ಅಂತ  ನಿರ್ಧಾರವಾಗಿತ್ತು  ಆದರೆ ಕಾರಣಾಂತರಗಳಿಂದ ಒಬ್ಬನೇ ಹೋಗಬೇಕಾಗಿ ಬಂದದ್ದರಿಂದ ಈ ಸ್ನೇಹಲೋಕ ಆಯೋಜಿಸಿದ್ದ ಕಾರ್ಯಕ್ರಮದೊಳಗೆ ನಾ ನುಗ್ಗಿಬಿಟ್ಟೆ..

ಮುಂಬೈ ಲೋಕಲ್ ಯಾರಿಗೆ ಗೊತ್ತಿಲ್ಲ.. ಆ ಟ್ರೈನನ್ನು ಹತ್ತಲು ಇಳಿಯಲು ಪ್ರಯಾಸ ಪಡಬೇಕಿಲ್ಲ.. ಸುಮ್ಮನೆ ಬಾಗಿಲ ಬಳಿ ನಿಂತರೆ ತಳ್ಳುತ್ತ ತಳ್ಳುತ್ತಾ ಜನರೇ ಹತ್ತಿಸುತ್ತಾರೆ/ಇಳಿಸುತ್ತಾರೆ. ಈ ಸ್ನೇಹಲೋಕವೂ ಹಾಗೆ.. ಒಂದು ಸಲ ಆ ಸೆಳೆತಕ್ಕೆ ಬಂದರೆ.. ಹೊರಗೆ ಹೋಗಲು ಸಾಧ್ಯವೇ ಇಲ್ಲ..

ನಾಗರಭಾವಿ ವೃತ್ತದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆವು.. ಬಸ್ಸು ಬಂತು.. ಜೊತೆಯಲ್ಲಿ ನಗೆ ಹೊನಲು ಎಂಬ ನದಿಯನ್ನು ಕಟ್ಟಿದ್ದ ಅಣೆಕಟ್ಟಿನ ಬಾಗಿಲಿಗೆ ಬಂದು ನಿಂತಿದ್ದೆವು.. ಇನ್ನೊಂದೆರಡು ಸ್ಟಾಪುಗಳು ಬರೋರೆಲ್ಲಾ ಹತ್ತಿಕೊಂಡರು... ಬಸ್ಸು ತುಂಬಿಕೊಂಡು ನಲಿಯುತಿತ್ತು..

"ನೋಡ್ರಪ್ಪಾ.. ಇವತ್ತು ಬಸ್ಸಿನಲ್ಲಿ ಯಾರೂ ಮಲಗುವ ಹಾಗಿಲ್ಲ.. " ಒಂದು ಫರ್ಮಾನು ಹೊರಡಿಸಿಯೇಬಿಟ್ಟರು ಪಿಪಿ ಎಂದೇ ಹೆಸರಾದ ಸಂದೀಪ್.. ಅದಕ್ಕೆ ಸಾತ್ ನೀಡಿದ್ದು ಪಾರ್ಟ್ನರ್ ಎಂದು ಗುರುತಿಸಿಕೊಳ್ಳುತ್ತಿದ್ದ ಕಿರಣ್.. ಅದಕ್ಕೆ ಕೈಜೋಡಿಸಿದರು ಆಶಿ ಮಾಮ.. ರಮ್ಮಿ ಡಿಯರ್.. ಭುವನ್.. ಚಂದ್ರು, ನಾಗರಾಜ್ಇ.... ಇವರೆಲ್ಲ ಸೇರಿ ನಗೆ ಹೊನಲು ನದಿಗೆ ಕಟ್ಟಿದ್ದ ಅಣೆಕಟ್ಟಿನ ಎಲ್ಲಾ ಬಾಗಿಲನ್ನು ತೆರೆದೇ ಬಿಟ್ಟರು..

ಬರೋಬ್ಬರಿ ಮೂರುಘಂಟೆಗಳು ಹೇಗೆ ಕಳೆದವು ಗೊತ್ತಿಲ್ಲ.. ಬಸ್ಸಿನ ನಾವಿಕ ಹದವಾಗಿ ಓಡಿಸುತ್ತಿದ್ದ.. ಬೊಂಬಾಟ್ ರಸ್ತೆ.. ಹಾಸನ ದಾಟಿ ಸಕಲೇಶಪುರದ ಕಡೆ ಧಾವಿಸುತ್ತಿದ್ದ ಬಸ್ಸು.. ಮೆಲ್ಲನೆ ಒಬ್ಬೊಬ್ಬರೇ ಕಣ್ಣುಜ್ಜಿಕೊಳ್ಳುತ್ತಾ ಹಾಗೆ ನಿದ್ರಾದೇವಿಯ ಕರೆಗೆ ಓಗೊಟ್ಟರು..

ಯಾರ್ರೀ ಧರ್ಮಸ್ಥಳ ಎಂಬ ಧ್ವನಿ ಕೇಳಿದಾಗ.. ತಮಾಷೆ ಮಾಡುತ್ತಿದ್ದಾರೆ ಎಂದು ಅರ್ಧ ನಿದ್ರೆಯಲ್ಲಿದ್ದ ನನಗೆ ಅನ್ನಿಸಿತು.. ಸಮಯ ಬೆಳಗಿನ ಜಾವ ಮೂರು ಮುಕ್ಕಾಲು ಘಂಟೆ..ಬೆಂಗಳೂರಿಂದ ೫.೪೫ ಘಂಟೆಗಳಲ್ಲಿ ಧರ್ಮಸ್ಥಳ ಮುಟ್ಟಿದ್ದೆವು.. ಡ್ರೈವರಿಗೆ ಒಂದು ಸಲಾಂ..

ಸ್ವಲ್ಪ ಮಂದಿ ರೂಮಿಗೆ ಹೋದರು.. ಇನೊಂದಷ್ಟು ಮಂದಿ ನದಿಗೆ ಸ್ನಾನಕ್ಕೆ ಹೋದರು.. ಬಹುದಿನಗಳಾಗಿತ್ತು ನದಿಯಲ್ಲಿ ಸ್ನಾನ ಮಾಡಿ ಹಾಗಾಗಿ ನಾ ಆ ಗುಂಪಿಗೆ ನುಗ್ಗಿದೆ.. ಚಳಿ ಎಂದುಕೊಂಡಿದ್ದೆ ಆದರೆ ಮಂಜುನಾಥನ ಕೃಪೆ.. ಚಳಿಯಿರಲಿಲ್ಲ.. ನದಿ ನೀರು ಬೆಚ್ಚಗಿತ್ತು.. ಅಚ್ಚುಕಟ್ಟಾಗಿ ಸ್ನಾನವಾಯಿತು..

ಮದುವೆಗೆ ಹೋಗಬೇಕಾದ್ದರಿಂದ ವಿಶೇಷ ದರ್ಶನಕ್ಕೆ ನುಗ್ಗಿ.. ಮಂಜುನಾಥನ ಆಶೀರ್ವಾದ ಪಡೆದು.. ಹೊಟ್ಟೆಗೆ ಒಂದಷ್ಟು ಆಧಾರ ಮಾಡಿಕೊಂಡು.. ಮದುವೆ ಮಂಟಪಕ್ಕೆ ಬಂದೆವು.. ತಾಳಿಧಾರಣೆ ಮುಗಿದಿತ್ತು.. ಹಿರಿಯರಿಂದ ಆಶೀರ್ವಾದದ ಕಾರ್ಯಕ್ರಮ ನೆಡೆದಿತ್ತು.. ಅಷ್ಟರಲ್ಲಿ ನಮ್ಮ ಉಳಿದ ಸ್ನೇಹಿತರಲ್ಲಿ ಕೆಲವರು ದರ್ಶನ ಮುಗಿಸಿ ಬಂದರು.. ಇನ್ನೂ ಕೆಲವರು ಮದುವೆ ಮುಗಿಸಿ ದರ್ಶನಕ್ಕೆ ಹೋದರು.. ಬರೋಬ್ಬರಿ ಹತ್ತು ಘಂಟೆಯ ಹೊತ್ತಿಗೆ ಎಲ್ಲರೂ ದರ್ಶನ ಮುಗಿಸಿ, ತಿಂಡಿ ಮುಗಿಸಿ ಬಸ್ಸಿಗೆ ಬಂದೆವು..

ಬಸ್ಸಿನಲ್ಲಿ ಕೂತು.. ಮುಂದಿನ ನೆಡೆ ಸೌತಡ್ಕ ಗಣಪನ ದರ್ಶನಕ್ಕೆ ಎಂದಾಗ.. ಆಯಾಸದಿಂದ ಕಣ್ಣಾಲಿಗಳು ಮುಚ್ಚಿಕೊಂಡವು.. ಹಾಗೆ ಮಲ್ಲೇಶನ ಮದುವೆಯನ್ನು ಮತ್ತೊಮ್ಮೆ ಕಣ್ಣ ಮುಂದೆ ತಂದಿತು .. .

ಹುಡುಗಾಟದ, ತಮಾಷೆಯ ಮಲ್ಲೇಶ.. ಗಂಭೀರವಾಗಿ ವರನ ಧಿರಿಸಿನಲ್ಲಿ ಕೂತಿದ್ದು.. ಬಂದವರಿಗೆ ನಗೆ ಬೀರುತ್ತಾ ತನ್ನ ಮಡದಿಗೆ ಬಂದವರ ಪರಿಚಯ ಮಾಡಿಸಿಕೊಡುತ್ತಾ ಕೂತಿದ್ದರು.. ನಮ್ಮ ಸ್ನೇಹ ಕುಟುಂಬ ಒಬ್ಬೊಬ್ಬರಾಗಿ ಶುಭ ಹಾರೈಸಿ... ಹೊರಗೆ ಬಂದೆವು.. ಗ್ರೂಪ್ ಫೋಟೋಗೆ ಎಲ್ಲರನ್ನು ಸೇರಿಸಿ ಒಂದಷ್ಟು ಫೋಟೋಗಳನ್ನು ಜಮಾಯಿಸಿದ್ದು ಆಯಿತು.. ಆ ರಸ್ತೆಯಲ್ಲಿದ್ದವರೆಲ್ಲ ಅಚ್ಚರಿಗಣ್ಣಿಂದ ನಮ್ಮನ್ನೆಲ್ಲ ನೋಡುತ್ತಿದ್ದರು. ನಮ್ಮ ಸ್ನೇಹವಲಯದ ಸೆಳೆತ ಅರಿವಾಗತೊಡಗಿತ್ತು..

ಕಣ್ಣುಬಿಟ್ಟೆ.. ಬರಿ ಘಂಟಾನಾದ.. ಟಣ್ ಟಣ್ ಟಣ್.. ವಿಶಾಲವಾದ ಅಂಗಳ.. ಅಲ್ಲೊಂದು ಕಮಾನು.. ಅದಕ್ಕೆ ತೂಗು ಹಾಕಿದ್ದ ದೊಡ್ಡ ದೊಡ್ಡ ಘಂಟೆಗಳು.. ಪುಟ್ಟ ಘಂಟೆಗಳ ತೋರಣಗಳೇ ಇದ್ದವು.. ಅಭಿಷೇಕವಾಗುತ್ತಿತ್ತು.. ಭಕ್ತಿಯ ಒಂದು ಪದರವೇ ಅಲ್ಲಿತ್ತು.. ಈ ದೇವಸ್ಥಾನದ ಬಗ್ಗೆ ತುಂಬಾ ಕೇಳಿದ್ದೆ.. ನೋಡಬೇಕೆನ್ನುವ ಆಸೆ ಈ ದಿನ ನೆರವೇರಿತ್ತು.. ಗೊಂದಲದ ಗೂಡಾಗಿದ್ದ ಮನಸ್ಸಿಗೆ ಏನೋ ನೆಮ್ಮದಿ..

ಅಪ್ಪ ಮಂಜುನಾಥನ ದರ್ಶನದಿಂದ ಮನಸ್ಸು ಹಗುರಾಗಿತ್ತು.. ಈಗ ಮಗ ಗಣಪನ ದರ್ಶನ.. ಯಾರೊಡನೆಯೂ ಮಾತಾಡದೆ ಸುಮ್ಮನೆ ಒಂದು ಕಟ್ಟೆಯ ಮೇಲೆ ಕೂತಿದ್ದೆ.. ಧ್ಯಾನ ಮಾಡಿದೆ.. ಮನಸ್ಸು ಹತ್ತಿಯ ಹಾಗೆ ಹಗುರಾಗುತ್ತಿತ್ತು.. ಏನೋ ಒಂದು ರೀತಿಯ ನೆಮ್ಮದಿಯ ಅಲೆಗಳು ಮನಸ್ಸಿನ ಕಡಲಿಗೆ ಬಂದು ಬಡಿಯುತ್ತಿದ್ದವು..

ಅಲ್ಲಿಂದ ಹೊರಟಿದ್ದು ಮಂಜುನಾಥನ ಇನ್ನೊಬ್ಬ ಸುತ ಸುಬ್ರಮಣ್ಯನ ಆವಾಸ ಸ್ಥಾನಕ್ಕೆ..

ಕುಕ್ಕೆ ಸುಬ್ರಮಣ್ಯ ತಾಣ ನನಗೆ ಹೊಸದೇನಲ್ಲ ಕಳೆದ ಎಂಟು ವರ್ಷಗಳಲ್ಲಿ ಎಂಟು ಬಾರಿ ಕುಮಾರಪರ್ವತ ಚಾರಣಕ್ಕೆ ಹೋಗಿದ್ದಾಗೆಲ್ಲ ಸುಬ್ರಮಣ್ಯನ ದರ್ಶನ ನೆಡೆದೆ ಇತ್ತು.. ಆದರೂ ಪ್ರತಿಬಾರಿಯೂ ಭಿನ್ನ ಅನುಭವ ಕೊಡುವ ತಾಣವಿದು.. ಬೇಗ ಹೋಗಿ ಬೇಗ ಹೋಗಿ ದರ್ಶನ ಕ್ಲೋಸ್ ಆಗುತ್ತಿದೆ ಎಂದು ದೇವಸ್ಥಾನದ ಆವರಣದ ಸಿಬ್ಬಂಧಿ ಹೇಳುತ್ತಿದ್ದರು.. ಓಡಿದೆವು.. ಚಕ ಚಕ ದರ್ಶನವಾಯಿತು.. ಮನಸ್ಸು ಇನ್ನಷ್ಟು ಹಗುರಾಯಿತು.. ಅದರ ಫಲ.. ಬಸ್ಸು ಬೆಂಗಳೂರು ಹಾದಿ ಹಿಡಿದಾಗ ಅಮೋಘ ಎರಡು ಘಂಟೆಗೂ ಮಿಕ್ಕಿ ಭರ್ಜರಿ ನಿದ್ದೆ ಮಾಡಿದ್ದೆ.. ಕಾಫಿ ಬ್ರೇಕಿಗೆ ನಿಲ್ಲಿಸಿದಾಗೂ ಎಚ್ಚರವಿಲ್ಲ..  ಎಚ್ಚರವಿಲ್ಲದೆ ಮಲಗಿದ್ದ
ನನ್ನ ಎಬ್ಬಿಸಲು ಆಗದೆ ಸೋತಿದ್ದರು ನನ್ನ ಆತ್ಮೀಯ ಗೆಳೆಯರು..

ಗಂಗೂಲಿ ಮತ್ತು ದ್ರಾವಿಡ್ ಬ್ಯಾಟಿಂಗ್ ನೆಡೆಯುತ್ತಿತ್ತು.. ತುಂಬಾ ಮಹತ್ವದ ಪಂದ್ಯವಾಗಿತ್ತು.. ಕಾಮೆಂಟರಿ ಟೋನಿ ಗ್ರೆಗ್.. ಬೊಂಬಾಟ್ ಧ್ವನಿ.. ಈ "If India to win one of these two batsman need to cut loose.. " ದಾದಾ ಭರ್ಜರಿ ಬ್ಯಾಟಿಂಗ್ ಶುರುಮಾಡಿದರು.. ಬೌಂಡರಿ, ಸಿಕ್ಸುಗಳ ಮಳೆ ಸುರಿಯುತ್ತಿದ್ದವು.. ದ್ರಾವಿಡ್ ಕೂಡ ಶುರುಮಾಡಿದ್ದರು ಪರಿಣಾಮ ಗೆದ್ದದ್ದು ಭಾರತ..

ಇದೇನಪ್ಪ ಶ್ರೀ ಗೆ ಏನಾಯಿತು ಅಂದ್ರ... ಹೋಗುವಾಗ ಮಾತು ಮಾತು ಹಾಸ್ಯ ತುಂಬಿದ್ದ ಬಸ್ಸು.. ಬೆಂಗಳೂರು ಹಾದಿ ಹಿಡಿದಾಗ ಡಿಸ್ಕೋ ದೀಪಗಳು ಬಸ್ಸನ್ನು ಬೆಳಗಿದವು.. ಹಾಗೆ ಆ ದೀಪದ ಕುಣಿತಕ್ಕೆ ತಕ್ಕ ಹಾಗೆ ಚಿನ್ಮಯ್ ಮತ್ತು ನಾಗರಾಜ್ ತರಹಾವರಿ ಹಾಡುಗಳನ್ನು ಹಾಕಿದರು .. ಅಲ್ಲಿಯ ತನಕ ತಣ್ಣಗೆ ಕೂತು ಮಾತಾಡುತ್ತಿದ್ದ ರಮೇಶ್, ವಸಂತ್ ಕುಣಿಯಲು ಹೆಜ್ಜೆ ಹಾಕಿದರು.. ಅಲ್ಲಿಂದ ಶುರು.. ಎಲ್ಲರ ಪಾದಗಳು ಕುಣಿಯಲಾರಂಭಿಸಿತು.. ನನಗೆ ಕುಣಿಯಲು ಬರೋಲ್ಲ, ನಾಚಿಕೆ ಎಂದವರನ್ನು ಬಿಡದೆ ಎಳೆದು ತಂದು ಆ ಹಾಡಿನ ತಾಳಕ್ಕೆ ಒಂದಷ್ಟು ಹೆಜ್ಜೆಗಳು ಕುಣಿಯುವ ಹಾಗೆ ಮಾಡಿದರು .. ಇದಕ್ಕೆ ಹೇಳಿದ್ದು cut loose ಅಂತ.. ಸಂಕೋಚ ಬಿಟ್ಟು ಹಾಡಿನ ಲಯಕ್ಕೆ ಹೆಜ್ಜೆ ಹಾಕಿದ ಎಲ್ಲರಿಗೂ ಸಿಕ್ಕಿದ್ದು ಚಪ್ಪಾಳೆಯ ಸ್ವಾಗತ ಮತ್ತು ಪ್ರೋತ್ಸಾಹ..

ಶ್ರೀ.. ಮನಸ್ಸು ಹಗುರಾಗಿದೆ.. ಸ್ವಲ್ಪ ಹೊತ್ತು ವಿಶ್ರಾಂತಿ ಕೊಡು ಎಂದು ಮನಸ್ಸು ಹೇಳಿದಾಗ... ಅದಕ್ಕೆ ಶರಣಾಗಿ ಕಣ್ಣು ಮುಚ್ಚಿದೆ.. ಕಣ್ಣು ಬಿಟ್ಟಾಗ ಗೊರಗುಂಟೆಪಾಳ್ಯ... ಸ್ನೇಹಿತರಿಗೆ ವಂದನೆ ಹೇಳಿ ಮನೆಗೆ ತಲುಪಿದಾಗ.. ಕ್ಷೀರಸಾಗರದಿ ತೇಲುತ್ತ ಸಾಗುವ ಹಂಸದ ಹಾಗಾಗಿತ್ತು.. ಮನಸ್ಸು..

ಇಪ್ಪತ್ತನಾಲ್ಕು ಘಂಟೆಗಳು.. ಅದರಲ್ಲಿ ಸುಮಾರು ಹನ್ನೆರಡು ಘಂಟೆಗಳು ಬಸ್ಸಿನಲ್ಲಿಯೇ ಇದ್ದೆವು.. ಉಳಿದ ಸಮಯ ದೇವಸ್ಥಾನಗಳಲ್ಲಿ ಇನ್ನೇನು ಬೇಕು ಖುಷಿ ಪಡಲು.. ಸ್ನೇಹಿತನ ಮದುವೆ.. ಗೆಳೆಯರ ಜೊತೆಯಲ್ಲಿ ಪ್ರವಾಸ.. ಇದನ್ನೆಲ್ಲಾ ಅಚ್ಚುಕಟ್ಟಾಗಿ ಆಯೋಜಿಸಿದ್ದ ಸ್ನೇಹಲೋಕದ ಹೂವಿನ ಮನಸ್ಸಿನ ಗೆಳೆಯರಿಗೆ ಈ ಲೇಖನ ಅರ್ಪಿತಾ... ಇಡೀ ದಿನದ ಕೆಲವು ಚಿತ್ರಗಳು ನಿಮಗಾಗಿ ತೇಲುತ್ತಿವೆ..

ಮಲ್ಲೇಶ ಮತ್ತು ಅನುಪಮಾ ವೈವಾಹಿಕ  ಆನಂದದಾಯಕವಾಗಿರಲಿ. .. ಶುಭವಾಗಲಿ.. !!!















11 comments:

  1. Awesome... Mathe hogi banda haage aithu 😊😊

    ReplyDelete
  2. Annaa yeshtu sundaravaagide andre naanu baralaagalillavalla yemba bejaaru koda illadaitu.. odutthaa naanu nimmondigeye ah kshanagalannu kaledantha anubhavavayithu. . Superrr

    ReplyDelete
  3. Sundaravada varnane Anna...oduthiddare nadedaddu kanna Munde Banda haage ayithu...

    ReplyDelete
    Replies
    1. Welcome to my writing world putty..thank you for the loveley comment.

      Delete
  4. ಮೊದಲ ನೋಟದಲ್ಲೇ ಸೆಳೆಯುವ ಮೊದಲ ಸಾಲುಗಳು ಇಡೀ ಬರಹದ ಪ್ರತಿಬಿಂಬದಂತೆ ಹೊಳೆಯುತ್ತಿವೆ.. ಸ್ನೇಹಕ್ಕೆ ಚಾಚುವ ಹಸ್ತಗಳ ಕೊಂಡಿಗಳೇ ಸ್ನೇಹಲೋಕದ ಶಕ್ತಿಯಾಗಿ ಒಳ್ಳೆಯ ಕಾರ್ಯಕ್ಕೆ ತೊಡಗಿಸಿಕೊಂಡಿರುವುದು ಶ್ಲಾಘನೀಯ..
    ಹೊಸ ಬದುಕಿಗೆ ಮುನ್ನಡಿ ಬರೆದ ದಂಪತಿಗಳಿಗೆ ಶುಭವಾಗಲಿ..
    ಚಂದದ ಬರಹಕ್ಕೆ ಅಷ್ಟೇ ಚಂದದ ಫೋಟೊ ಸಾಥ್ ಕೊಟ್ಟಿದ್ದು ಕಣ್ಣು ಮನ ಎರಡೂ ತಣಿಯುವಂತಿದೆ..

    ReplyDelete
  5. ಮಂಜುನಾಥನ ಬ್ಯಾಂಕ್ ಕಮಿಂಗ್

    ReplyDelete