Tuesday, December 25, 2012

ವಯನಾಡು, ಎಡಕಲ್ಲು, ಕಾರಪುಜ್ಹ, ಚೇಂಬರ ಪರ್ವತ


ದೇವರ ಪ್ರೀತಿ ಎಲ್ಲಿ ಇರುತ್ತೆ?
ದೇವರ ಪ್ರೀತಿ ಎಲ್ಲಿ ಸಿಗುತ್ತೆ?
ದೇವರ ಪ್ರೀತಿ ಹೇಗೆ ಇರುತ್ತೆ...?

ಈ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಅವಕಾಶ ಒದಗಿ ಬಂತು.   ಒಂದೇ ಹವ್ಯಾಸದ ಆರು ಹುಡುಗರು ಹೊರಟೆವು ದೇವರು ಇದೆ ನನ್ನ ದೇಶ ಎಂದು ಎದೆ ತಟ್ಟಿ ಹೇಳಿಕೊಳ್ಳುವ ಕೇರಳ ಕಡೆಗೆ.  ಅಲೆಮಾರಿಗಳು ಗುಂಪಿನಲ್ಲಿ ಈ ಪ್ರವಾಸ ಒಂದು ವಿಶಿಷ್ಟ. ಪ್ರತಿ ಬಾರಿಯೂ ನಮ್ಮ ಸಾರಥಿ ಸುನೀಲ್ ಬರುತಿದ್ದರು..ಕಾರಣಾಂತರಗಳಿಂದ ಅವರು ಬರಲಾಗಲಿಲ್ಲ..ಅದಕ್ಕೆ ನಾವೇ ಡ್ರೈವ್ ಮಾಡಿಬಿಡುವ ಎನ್ನುವ ನಿರ್ಧಾರ ಮಾಡಿದೆವು. ಪ್ರಶಾಂತ್ ಕಾರು ಚಲಾಯಿಸುವ ಭಾರವನ್ನು ನನ್ನ ಜೊತೆ ಹೊರುತ್ತೇನೆ ಎಂದು ಹೇಳಿದ. ಸರಿ ಮತ್ತೇನು ಹೊರಟೆವು ಶುಕ್ರವಾರದ ಮಧ್ಯ ರಾತ್ರಿಯಲ್ಲಿ.

ಮಾತಾಡುತ್ತ, ಹರಟುತ್ತ ನಮಗೆ ಬಂಡಿಪುರದ ಅರಣ್ಯ ಇಲಾಖೆಯ ಬಾಗಿಲ ಬಳಿ ಬಂದದ್ದೆ ತಿಳಿಯಲಿಲ್ಲ. ಆಗಲೇ ಹನುಮಂತನ ಬಾಲದ ಹಾಗೆ ಸಾಲಾಗಿ ನಿಂತಿತ್ತು ಲಾರಿಗಳು, ಟ್ರಕ್ ಗಳು, ಕಾರುಗಳು. ಸಮಯ ಸುಮಾರು ಬೆಳಗಿನ ಜಾವ ೫.೩೦ ಆಗಿತ್ತು. ಪ್ರಶಾಂತ್, ಸಂದೀಪ್ ಮತ್ತು ನಾನು ಕಾರಿನಿಂದ ಇಳಿದು ಸ್ವಲ್ಪ ದೂರ ಆ ಬೆಳಗಿನ ಚಳಿಯಲ್ಲಿ ಒಂದಷ್ಟು ದೂರ ನಡೆದೆವು. ಚಹಾ ಕುಡಿಯೋಣ ಅಂತ ಇನ್ನೊಂದಷ್ಟು ದೂರ ಹೋಗಲು ನಿರ್ಧಾರ ಮಾಡಿದಾಗ..ಅರಣ್ಯ ಇಲಾಖೆಯ ತಡೆ ತೆಗೆದಿದ್ದರು...ಗಾಡಿಗಳು ಒಂದೊಂದಾಗಿ ಶಬ್ಧ ಮಾಡುತ್ತಾ ಹೊರಟವು.

ಕಾಡಿನ ಬೆಳಗಿನ ಸೌಂದರ್ಯ ಸವಿಯುತ್ತ ಸಾಗಿತ್ತು ನಮ್ಮ ವಾಹನ.  ಸುಲ್ತಾನ್ ಬತ್ತೇರಿಯಾ ಹತ್ತಿರ ಚಹಾ ಕುಡಿಯೋಣ ಅಂತ ನಿಂತಾಗ ಅಲ್ಲಿನ ಪ್ರಕೃತಿಯ ರಮಣೀಯ ನೋಟ ನೋಡಿ ನಮ್ಮ ಕ್ಯಾಮೆರಗಳಿಗೆ ಕೆಲಸ ಕೊಟ್ಟೆವು.. ಸುಂದರ ಬೆಳಗಿನ ನೋಟ ಆಹಾ! ಪದಗಳಿಗೆ ಆಗೋಲ್ಲಾ ಅದನ್ನು ವರ್ಣಿಸಲು!.

ವಯನಾಡ ಅಂದ ಈ ತಾಣ ಚಂದ...ಸಂದೀಪ್!

ಅನತಿ ದೂರ ಸಾಗಿ ಉಪಹಾರದ ಕಾರ್ಯಕ್ರಮ ಮುಗಿಸಿ ಪ್ರಶಾಂತ್ ಮೊದಲೇ ಮಾತಾಡಿದ್ದ ಹೋಟೆಲ್ ಬಳಿ ಬಂದೆವು.ಎಲ್ಲರೂ ಪ್ರಾತಃಕರ್ಮಗಳನ್ನು ಮುಗಿಸಿ ತೌಫಿಕ್ ಹೋಟೆಲ್ ನಲ್ಲಿ ಅಚ್ಚುಕಟ್ಟಾಗಿ ಉಪಹಾರ ಮುಗಿಸಿದೆವು. ನಂತರ ನಮ್ಮ ಸವಾರಿ ಎಡಕಲ್ಲು ಗುಹೆಗೆ ತೆರಳಿತು.

ಸುಮಾರು ೫೦೦೦ದಿಂದ ೧೦೦೦೦ ವರ್ಷಗಳ ಹಿಂದೆ ಶಿಲಾಯುಗದ ಜನರು ಮೂಡಿಸಿದ್ದಾರೆ ಎನ್ನುವ ಬಂಡೆಗಲ್ಲಿನ ಮೇಲಿನ ಚಿತ್ರಗಳು ಸುಂದರವಾಗಿದ್ದವು.  ಅದನ್ನು ವಿವರಿಸುವ ಫಲಕಗಳಾಗಲಿ, ಅಥವಾ ಒಳ್ಳೆಯ ಮಾರ್ಗದರ್ಶಕ ಇಲ್ಲದ ಕಾರಣ ಪ್ರಕೃತಿ ಸೌಂದರ್ಯ ನೋಡಿ ಬರುವ ತಾಣವಾಯಿತು.  ಪುಟ್ಟಣ್ಣ ಅವರ ದಿಗ್ದರ್ಶನದಲ್ಲಿ  ಅರಳಿದ  "ಎಡಕಲ್ಲು ಗುಡ್ಡದ ಮೇಲೆ" ಚಿತ್ರ ನೋಡಿದಂದಿನಿಂದ ನನಗೆ ಈ ಸ್ಥಳ ನೋಡಬೇಕೆನ್ನುವ ಕುತೂಹಲ ಇತ್ತು. ಅದು ತಣಿಯಿತು.

ಎಡಕಲ್ ಗುಹೆಯಲ್ಲಿ ಒಂದು ಶಿಲಾ ಚಿತ್ರ..

ಎರಡು ಮಜಲಿನ ಗುಹೆ ಎನ್ನಲಾಗದ ಆದರೆ ಬಂಡೆಗಳು ಒಂದನ್ನೊಂದು ತಬ್ಬಿ ಆಸರೆಯಾಗಿ ಗುಹೆಯಾ ರೂಪದಲ್ಲಿ ನಿಂತಿದೆ..ಸುಮಾರು ಎರಡು ಘಂಟೆಗಳು ಕಳೆದ ನಂತರ...ಹೊಟ್ಟೆ ಹಸಿವಿನ ತಾಪ ತಾಳಲಾರದೆ ಕೆಳಗೆ ಇಳಿದು ಬರುವಾಗ ದಾರಿಯಲ್ಲಿ ಅನಾನಸ್, ಮಜ್ಜಿಗೆ, ತಂಪು ಪಾನೀಯ, ಎಳನೀರು ಮತ್ತು ಐಸ್ ಕ್ರೀಂ ಎಲ್ಲವನ್ನು ಗೊತ್ತು ಗುರಿಯಿಲ್ಲದೆ ತಿಂದು ಕಾರಿನತ್ತ ಹೆಜ್ಜೆ ಹಾಕಿದೆವು. 

ಅಲೆಮಾರಿಗಳ ಗುಂಪು!

ಅಲ್ಲಿಂದ ಅವರಿವರನ್ನು ಕೇಳುತ್ತ ನಿಧಾನವಾಗಿ ಕಾರಪುಜ್ಹ ಅಣೆಕಟ್ಟಿಗೆ ಬಂದೆವು..ಇದು ಒಂದು ರೀತಿ ನಿಸರ್ಗ ನಿರ್ಮಿತ ಹಲವಾರು ಸರೋವರಗಳು ಸೇರಿ ವಿಸ್ತಾರವಾದ ನೀರಿನ ಸಂಕುಲಕ್ಕೆ ಸುತ್ತವರಿದ ಬೆಟ್ಟ ಗುಡ್ಡಗಳು ನೈಸರ್ಗಿಕ ಅಣೆಕಟ್ಟನ್ನು ನಿರ್ಮಿಸಿದ್ದವು...ಮಾನವ ಸಣ್ಣ ಕುಸುರಿ ಕೆಲಸ ಮಾಡಿ ಇದನ್ನು ಸುಂದರ ಜಲಾಶಯವನ್ನಾಗಿ ಪರಿವರ್ತಿಸಿದ್ದಾನೆ. ಸಂಜೆ ಸೂರ್ಯಾಸ್ತ ನೋಡಲು ಮನೋಹರವಾದ ಈ ಸ್ಥಳದಲ್ಲಿ ನನಗೆ ಹಾಗೂ ಪ್ರಶಾಂತನಿಗೆ ಸುಮಧುರ ನಿದ್ದೆಯನ್ನು ಕೂಡ ತರಿಸಿತು. ಆದ್ರೆ ನಿದ್ದೆ ಮಾಡುವ ಮೊದಲು ಕೆಲವು ಸುಂದರ ದೃಶ್ಯಗಳನ್ನು ಸೆರೆಹಿಡಿದಿದ್ದೆವು...ಸೂರ್ಯಾಸ್ತ ನೋಡಲಾಗಲಿಲ್ಲ ಎನ್ನುವ ನೋವು ಇದ್ದರೂ ಕೂಡ ಗೆಳೆಯರ ಮಾತುಗಳು ಆ ಬೇಸರವನ್ನು ಹೋಗಲಾಡಿಸಿದವು.

ಕಾರಪುಜ್ಹ ಅಣೆಕಟ್ಟಿನ ಒಂದು ವಿಹಂಗಮ ನೋಟ 

ಮತ್ತೆ ತೌಫೀಕ್ ಹೋಟೆಲ್ ನಲ್ಲಿ ರುಚಿಕರವಾದ ಊಟ ಮಾಡಿ, ಮಲಗಲು ಹೋಟೆಲ್ ಗೆ ಬಂದಾಗ ಘಂಟೆ ಸುಮಾರು           ಎಂಟುವರೆ ದಾಟಿತ್ತು.. ಹೋಟೆಲಿನ ಮುಂದೆ ಕುಣಿಯುತಿದ್ದ ದೀಪಗಳನ್ನು ನೋಡಿದಾಗ ಅದನ್ನು ಸೆರೆ ಹಿಡಿಯುವ ಮನಸಾಯಿತು..ಅದೇ ಸಮಯದಲ್ಲಿ ನಮ್ಮ ಚಮಾತ್ಕಾರಿಕ ಛಾಯಾಗ್ರಾಹಕ ಸಂದೀಪ್ ದೀಪದಲ್ಲಿ ಚಿತ್ರ ರಚಿಸುವ ಪ್ರಯತ್ನ ಮಾಡಿದರು.. ಅದು ಪ್ರಯತ್ನವೇ...ಅಲ್ಲ ಅದೊಂದು ಸುಂದರ ವರ್ಣ ಕಲಾಕೃತಿ...ನೀವೇ ನೋಡಿ ನಿರ್ಧರಿಸಿ...

ಸಂ"ದೀಪ"ದ ಕೈಚಳಕ......

ಬೆಳಿಗ್ಗೆ ಬೇಗನೆ ಎದ್ದು, ಚೇಂಬರ ಪರ್ವತಕ್ಕೆ ಹೊರಟೆವು ಸುಮಾರು ೬೯೦೦ ಅಡಿ ಎತ್ತರದ ವಯನಾಡು ಪ್ರದೇಶದಲ್ಲಿ ಅತಿ ಎತ್ತರದ ಈ ಶಿಖರವೇರಲು ಎಲ್ಲರು ತುದಿಗಾಲಿನಲ್ಲಿ ನಿಂತಿದ್ದೆವು.  ಅದಕ್ಕೆ ಸ್ಫೂರ್ತಿ ಎನ್ನುವಂತೆ ದಾರಿಯಲ್ಲಿ ವುಡ್ ಲ್ಯಾಂಡ್ಸ್ ಹೋಟೆಲ್ನಲ್ಲಿ ಘಮ ಘಮವಿಸುವ ಮಸಾಲಾ ದೋಸೆ (ಈಗಲೂ ಬಾಯಿಯಲ್ಲಿ ನೀರು ಬರುತ್ತದೆ) ಎರಡು ಬಾರಿ ತಿಂದದ್ದು ಎಲ್ಲರನ್ನು ಹುರುಪಿನಲ್ಲಿ ಇಡಲು ಸಹಾಯ ಮಾಡಿತು. ರಸ್ತೆ ಇರಬಹುದು ಎನ್ನುವ ಹಾದಿಯಲ್ಲಿ ನಿಧಾನವಾಗಿ ಸಾಗಿದೆವು. ಅಲ್ಲಿನ ಅರಣ್ಯ ಇಲಾಖೆಯ ಕಚೇರಿಯಲ್ಲಿ ಅನುಮತಿಯ ಚೀಟಿ ಪಡೆದು..ಮೊದಲೇ ದಿನ ತುಂಬಿದ ಬಸುರಿಯಂತಿದ್ದ ನಮ್ಮ ಕಾರಿನಲ್ಲಿ ಮಾರ್ಗದರ್ಶಿಯನ್ನು ಕೂರಿಸಿಕೊಂಡು ನಿಧಾನವಾಗಿ ಘಟ್ಟದ ಏರು ಹಾದಿಯಲ್ಲಿ ಸಾಗಿದೆವು.

ಮಾರ್ಗ ಮಧ್ಯದಲ್ಲಿ ಅಲ್ಲಿದ್ದ ಹೊಸದಾಗಿ ತೆರೆದಿದ್ದ ಹೋಟೆಲ್ನಲ್ಲಿ ಮಧ್ಯಾನ್ಹಕ್ಕೆ ಊಟಕ್ಕೆ ಹೇಳಿ ದಾರಿಗೆ ಕೆಲವು ಬಿಸ್ಕತ್, ಅದು ಇದು ಕುರುಕು ತಿಂಡಿಗಳನ್ನು ತೆಗೆದುಕೊಂಡು ಹೊರಟೆವು. ವಾಹನ ನಿಲುಗಡೆ ತಾಣದಲ್ಲಿ  ಸುತ್ತಲು ನೋಡಿದಾಗ ರಮಣೀಯ ದೃಶ್ಯ ಕಾದಿತ್ತು.  ಚಹಾ ತೋಟಗಳ ಮಧ್ಯೆ ಸಾಗುತ್ತ ಹೋದೆವು. ಮಾರ್ಗದರ್ಶಿ ಹೇಳಿದ ಸರ್ ತುತ್ತ ತುದಿ ತಲುಪಲು ಏಳು ಚಿಕ್ಕ ಚಿಕ್ಕ ಬೆಟ್ಟಗಳನ್ನು ಹತ್ತಬೇಕು.  ಬೇಗ ಬೇಗ ನಡೆಯಿರಿ...ಅಂತ...ನಾವು ನಮ್ಮ "ವೇಗ"ವನ್ನು ಕಾಯ್ದು ಕೊಂಡೆವು.

ಮೊದಲ ಎರಡು ಬೆಟ್ಟಗಳನ್ನೂ ಹತ್ತಿದ ಮೇಲೆ ಸಿಗುವುದು ಪ್ರೀತಿಯ ಹೃದಯದ ಆಕಾರದಲ್ಲಿರುವ ಒಂದು ಸರೋವರ. ನಿಸರ್ಗ ನಿರ್ಮಿತವಾದ ಈ ಸರೋವರ ತನ್ನ ಆಕಾರದಿಂದ ಗಮನ ಸೆಳೆಯುತ್ತದೇ.  ಪ್ರಶಾಂತ ಇಲ್ಲಿಯೇ ತನ್ನ ಮಡದಿಗೆ ಪ್ರೀತಿಯ ಸಂದೇಶವನ್ನು ಚಿತ್ರದ ಮೂಲಕ ಕಳಿಸಿದ. ಸರಿಯಾಗಿ ಆಕಾರ ಕಾಣಬೇಕಾದರೆ ಇಲ್ಲಿಂದ ಇನ್ನೊಂದೆರಡು ಬೆಟ್ಟಗಳನ್ನು ಹತ್ತಿದರೆ ಸುಂದರವಾಗಿ ಕಾಣುತ್ತದೆ.

ನಮ್ಮ ಪ್ರಶ್ನೆಗಳಿಗೆ ಉತ್ತರ ಸಿಕ್ಕ ಪ್ರದೇಶ...!!!

ಇಲ್ಲಿಂದ ಪ್ರಶಾಂತ್ ಹಾಗೂ ಸಂದೀಪ್ ದೆವ್ವ ಹಿಡಿದವರ ಹಾಗೆ ಶಕ್ತಿ ತುಂಬಿಕೊಂಡು ತುತ್ತ ತುದಿಯತ್ತ ದಾಪುಗಾಲು ಹಾಕುತ್ತ ಸಾಗಿದರು. ಅವರ ಹಿಂದೆ ರಘು, ಮತ್ತು ನಾನು ಸಾಗಿದೆವು. ನಾಗೇಶ್ ಐದನೇ ಬೆಟ್ಟದ ಹತ್ತಿ ಇನ್ನು ಮೇಲೆ ನೋಡುವುದು ಏನಿಲ್ಲ.ನಾನು ಬರೋಲ್ಲ ಎಂದು ಕೂತು ಬಿಟ್ಟರು. ಮಾರ್ಗದರ್ಶಿಯು ಕೂಡ ಇಲ್ಲೇ ನಿಲ್ಲುತ್ತೇನೆ ಎಂದು ಕೂತು ಬಿಟ್ಟ. ಕಿಶೋರ್ ಮಾತ್ರ ತಾನು ಛಲದಂಕ ಮಲ್ಲನ ತರಹ ನಿಧಾನವಾಗಿ ಒಂದೊಂದೇ ಶಿಖರವನ್ನು ಏರುತ್ತ ಬರುತ್ತಿದ್ದರು.

ಸಂದೀಪ್, ಪ್ರಶಾಂತ್, ರಘು, ಹಾಗೂ ನಾನು ತುತ್ತ ತುದಿಯನ್ನು ತಲುಪಿ, ಚಿತ್ರಗಳನ್ನು ಸೆರೆಹಿಡಿಯುತ್ತ ಕುಳಿತಿದ್ದೆವು.  ಹಾಗೆ ಪ್ರಕೃತಿಯ ಮಡಿಲಲ್ಲಿ ಶಾಂತಿ ಅರಸುತ್ತ ಎಲ್ಲರು ತುಸು ಹೊತ್ತು ಹಾಗೆ ಪ್ರಕೃತಿಯ ಮಡಿಲಲ್ಲಿ ಶರಣಾದೆವು. ಎಚ್ಚರವಾದ ಮೇಲೆ ಹಾಗೆ ಕಣ್ಣು ಬಿಟ್ಟು ನೋಡಿದಾಗ ಕಿಶೋರ್ ಆಗಲೇ ಆರನೇ ಬೆಟ್ಟವನ್ನು ಹತ್ತಿ ನಿಂತಿದ್ದರು.  ನಾವೆಲ್ಲಾ ಅವರು ಬರಲಿ ನಾವು ಕಾಯುವ ಎಂದು ಅವರಿಗೆ ಹುರುಪನ್ನು ತುಂಬಲು ಕೂಗುತ್ತ, ಹುರಿದುಂಬಿಸುತ್ತಿದೆವು. ಚಕ್ರವ್ಯೂಹವನ್ನು ಹೊಕ್ಕ ವೀರ ಅಭಿಮನ್ಯುವಿನಂತೆ ಒಂದೊಂದೇ ಶಿಖರಗಳನ್ನು ಏರಿ ಕಿಶೋರ್ ತುತ್ತ ತುದಿಗೆ ತಲುಪಿದಾಗ ಅವರ ಮುಖದಲ್ಲಿ ಮೂಡಿದ ಆನಂದ...ಆಗ ಅದನ್ನು ನೋಡಿಯೇ ತಣಿಯಬೇಕು.

ವಯನಾಡಿನ ಅತಿ ಎತ್ತರದಲ್ಲಿ ಸಂಭ್ರಮಿಸುತ್ತಿರುವ ಅಲೆಮಾರಿಗಳು 

ಒಬ್ಬರಿಗೊಬ್ಬರೂ ಆಲಂಗಿಸಿಕೊಂಡು ಸಿಹಿಯನ್ನು ಹಂಚಿ ತಿಂದು ಸಂಭ್ರಮಿಸಿದೆವು. ಘಂಟೆ ಎರಡುವರೆ ದಾಟಿ ಮೂರರ ಹತ್ತಿರಕ್ಕೆ ಬಂದಿತ್ತು ಕಿಶೋರ್ ನನಗೆ ಸ್ವಲ್ಪ ಹೊತ್ತು ವಿಶ್ರಾಂತಿ ಬೇಕು ಎಂದು ಹೇಳಿದ್ದರಿಂದ ಇನ್ನರ್ಧ ಘಂಟೆ ಬಿಟ್ಟು ಹೊರಟೆವು. ನಿಧಾನವಾಗಿ ಸಾಗುತ್ತ ಬೆಟ್ಟದ ಬುಡಕ್ಕೆ ಬಂದಾಗ ಸುಮಾರು ಐದು ವರೆ.  ಇಡಿ ಶಿಖರದಲ್ಲಿದ್ದ ಪ್ರಾಣಿಗಳು ಕೇವಲ ನಾವು ಮಾತ್ರವೇ....!
ಸೂರ್ಯಾಸ್ತದ ಮನೋರಮಣೀಯ ದೃಶ್ಯ ವೈಭೋಗ

ನಮ್ಮ ಮಾರ್ಗದರ್ಶಿ ಹತ್ತುವಾಗ ಸರಿಯಾಗಿ ದಾರಿ ತೋರದಿದ್ದರೂ ಇಳಿಯುವಾಗ ಕಾಲು ನೋವು ಹಾಗೂ ನಿತ್ರಾಣಗೊಂಡಿದ್ದ ಕಿಶೋರ್ ಅವರನ್ನು ನಿಧಾನವಾಗಿ ನಡೆಸುತ್ತಾ  ಸುರಕ್ಷಿತವಾಗಿ ತಲುಪಿಸಿದರು. ಅದಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿ ಮಾರ್ಗದರ್ಶಿಯನ್ನು ನಮ್ಮ ಜೊತೆಯಲ್ಲೇ ಊಟವಾದ ನಂತರ ಅವನ ಮನೆಯ ಹತ್ತಿರ ಇಳಿಸಿ ಕಳಿಸಿದೆವು. ಅಲ್ಲಿಂದ ಹೊರಟಾಗಲೇ ಸಂಜೆ ಸುಮಾರು ಆರೂವರೆ ಯಾಗಿತ್ತು...

ಎದುರಿಗೆ ಕಾಣುತ್ತಿರುವುದೇ ಚೇಂಬರ ಪರ್ವತ!
ಮುಂದಿನ ಗುರಿ ಇದ್ದದ್ದು ರಾತ್ರಿ ಒಂಭತ್ತರ ಒಳಗೆ ಬಂಡೀಪುರದ ಅರಣ್ಯ ಇಲಾಖೆಯ ಚೆಕ್ ಪೋಸ್ಟನ್ನು ದಾಟಬೇಕಿತ್ತು. ಆ ಕತ್ತಲಲ್ಲಿ ಬೇರೆ ರಾಜ್ಯದಲ್ಲಿ ಕಾರನ್ನು ಓಡಿಸುವ ಒಂದು ಸಾಹಸಕ್ಕೆ ಕೈ ಹಾಕಿದೆ...ಅಪ್ಪ ಅಮ್ಮನ ಕೃಪೆ, ದೇವರ ಆಶೀರ್ವಾದ ಸುಲಲಿತವಾಗಿ ಗುಂಡ್ಲುಪೇಟೆ ಮುಟ್ಟಿದೆವು. ಒಂದು ಚಹಾ ವಿರಾಮದ ನಂತರ ಪ್ರಶಾಂತನಿಗೆ  ಬೆಂಗಳೂರು ಮುಟ್ಟಿಸುವ ಹೊಣೆ ಕೊಟ್ಟು ನಾನು ಹಿಂದಿನ ಸೀಟಿಗೆ ಬಂದೆ....

ಮೈಸೂರಿನಿಂದ ಹೊರ ಬಂದಮೇಲೆ ಅಲ್ಲೇ ಒಂದು ಡಾಬಾದಲ್ಲಿ ಲಘು ಊಟ ಮುಗಿಸಿ ಬೆಂಗಳೂರು ತಲುಪಿದಾಗ ರಾತ್ರಿ ಸುಮಾರು ಒಂದು ಘಂಟೆ. ಪ್ರಶಾಂತ, ಸಂದೀಪ್, ಮತ್ತು ರಘು ಮೈಸೂರ್ ರಸ್ತೆಯ ಬಿ.ಎಚ್.ಇ. ಎಲ್ ಬಳಿ ಇಳಿದರು.
ನಾಗೇಶ್ ರನ್ನು ಬ್ಯಾಂಕ್ ಕಾಲೋನಿಯ ಸೀತಾ ಸರ್ಕಲ್ ಬಳಿಯ ಮನೆಯ ಹತ್ತಿರ ಇಳಿಸಿ..ಕಿಶೋರ್ ಜೊತೆಗೆ ವಿಜಯನಗರದ ಮಾರುತಿ ಮಂದಿರದ ಹತ್ತಿರ ಬಂದಾಗ ಅವರ ಕಾರು ಸಿದ್ಧವಾಗಿತ್ತು. ಅವರನ್ನು ಕಳಿಸಿ ಮನೆಗೆ ಬಂದಾಗ ಮಡದಿ ಪ್ರೀತಿಯ ಮುಗುಳುನಗೆ ಬೀರಿದಳು ಎರಡು ದಿನದ ಪ್ರವಾಸದ ಪ್ರಯಾಸ ಕರ್ಪೂರದ ಹಾಗೆ ಕರಗಿ ಆವಿಯಾಯಿತು. ಅಲೆಮಾರಿಗಳು ಗುಂಪು ೬೯೦೦ ಅಡಿ ಎತ್ತರದಲ್ಲಿ ನಿಂತು ಸಂತಸ ಬೀರಿದ ಕ್ಷಣಗಳನ್ನು ನೆನೆಯುತ್ತಾ ನಿದ್ರಾದೇವಿಗೆ ಪರವಶನಾಗಿ ಕನಸಿನ ಲೋಕಕ್ಕೆ ಜಾರಿದೆ...

12 comments:

  1. ಶ್ರೀಮನ್...ಬಹಳ ಚನ್ನಾಗಿದೆ ನಿಮ್ಮ ಚಾರಣ ಕಥನ... ಚಿತ್ರಗಳು ಇನ್ನೂ ಇದ್ದಿದ್ದರೆ ಚನ್ನಾಗಿತ್ತು....

    ReplyDelete
    Replies
    1. ಅಜಾದ್ ಸರ್ ....ಹೌದು ಚಿತ್ರಗಳನ್ನ ಫೇಸ್ ಬುಕ್ ನಲ್ಲಿ ಹಂಚಿ ಕೊಂಡಿದ್ದೆ..ಹಾಗಾಗಿ ಬೇಕಿದ್ದು ಮಾತ್ರ ಹಾಕಿದ್ದೆ...ನಿಮ್ಮ ಪ್ರೋತ್ಸಾಹಕ ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  2. Replies
    1. Thank you SP, yes, there were uncountable snaps, so selecting the best ones was a great task :-)

      Delete
  3. ಕುಮಾರ ಪರ್ವತ ಹೋಗುವ ಪ್ಲಾನ್ ಇತ್ತು ಅಲ್ವ ನಿಮ್ಮದು,ನೀವು ಎಡಕಲ್ಲು ಗುಡ್ಡಕೆ ಹೋಗಿರುವುದು ನೆನೆಸಿಕೊಂಡರೆ ಹೊಟ್ಟೆ ಉರಿತಿದೆ ನನಗೆ...ಕಳೆದ ಏಪ್ರಿಲ್ ನಲ್ಲಿ ಅಲ್ಲಿಗೆ ಹೋಗಿದ್ದೆವು,ಅಲ್ಲಿ ಸಂಜೆ 4.00 ಘಂಟೆಯ ನಂತರ ಗುಡ್ಡ ಹತ್ತಲು ಬಿಡುವುದಿಲ್ಲವಂತೆ,ಆಗಾಗಿ ಕೆಳಗಿಂದಲೇ ಎಡಕಲ್ಲು ಗುಡ್ಡ ನೋಡಿ ಬಂದಿದ್ದಾಯಿತು,ಮತ್ತೊಮ್ಮೆ ಹೋಗಲೇಬೇಕು ಎಂದು ನಿರ್ಧರಿಸಿದ್ದೇನೆ...

    ReplyDelete
    Replies
    1. ಕುಮಾರ ಪರ್ವತ ಜನವರಿಯಲ್ಲಿ ಹೋಗುವ ಪ್ಲಾನ್ ಇದೆ..ವಯನಾಡಿಗೆ ಹೋದದ್ದು ಡಿಸೆಂಬರ್ ಒಂದನೇ ತಾರೀಕು. ಒಮ್ಮೆ ಹೋಗಿಬರಲು ಸ್ಥಳ ಎಡಕಲ್ ಗುಡ್ಡ..ಆದ್ರೆ ಬರಿ ಅಲ್ಲಿಗೆ ಮಾತ್ರ ಹೋಗಬೇಡಿ..ಬೇರೆ ಸ್ಥಳಗಳನ್ನು ಪಟ್ಟಿಯಲ್ಲಿ ಇಟ್ಕೊಂಡು ಹೋಗಿ..ಇಲ್ಲವೇ ನಿರಾಸೆ ಕಟ್ಟಿಟ್ಟ ಬುತ್ತಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಗಿರೀಶ್

      Delete
  4. ಸುಂದರ ಪ್ರವಾಸ ಕಥನ...ದೀಪದಲ್ಲಿ ಚಿತ್ರ ಬಿಡಿಸಿದ್ದು ನಿಜವಾಗಿಯೂ ಅದ್ಭುತವಾಗಿತ್ತು..........ಒಂದು ಸುಂದರ ತಾಣಕ್ಕೆ ನಮ್ಮನು ಕರೆದೊಯ್ದಕ್ಕೆ ಧನ್ಯವಾದಗಳು....ನಿಮ್ಮ ಪಯಣ ಹೀಗೆ ಮುಂದುವರಿಯಲಿ.....

    ReplyDelete
    Replies
    1. ಒಳ್ಳೆಯ ತಂಡದಲ್ಲಿ ಒಳ್ಳೆಯ ವಿಚಾರಗಳೇ ಹೊಮ್ಮುತ್ತವೆ..ಅಂತಹ ಒಂದು ಅಮೋಘ ಪ್ರಯತ್ನಕ್ಕೆ ಶ್ರಮ ಮಾಡಿದವರು ಸಂದೀಪ್. ಎಷ್ಟು ಸುಂದರವಾಗಿ ಮೂಡಿಬಂದಿದೆ..ನಿಜಕ್ಕೂ ಖುಷಿಯಾಯಿತು. ಧನ್ಯವಾದಗಳು ಅಶೋಕ್ ಸರ್ ನಿಮ್ಮ ಅನಿಸಿಕೆಗೆ. ನಿಮ್ಮ ಹಾರೈಕೆಗೆ ಧನ್ಯವಾದಗಳು

      Delete
  5. ಚೆನ್ನಾಗಿದೆ. ನಾವೂ ಇತ್ತೀಚಿಗೆ ಎಡಕಲ್ಲು ಗುಡ್ಡಕ್ಕೆ ಹೋಗಿದ್ವಿ.
    ಬ್ಲಾಗಿನಲ್ಲಿ ಬರೆದಿದ್ದೆ ಆದರೆ ನಿಮ್ಮಷ್ಟು ವಿವರವಾಗಿ ಅಲ್ಲ :)

    ReplyDelete
    Replies
    1. ಧನ್ಯವಾದಗಳು ಸ್ವರ್ಣ ಮೇಡಂ...ನಿಮ್ಮ ಬ್ಲಾಗ್ ನೋಡಿದೆ..ಸುಂದರವಾಗಿ ಬರೆದಿದ್ದೀರ..ಎಳೆಯಾಗಿ, ಮೊಗ್ಗಾಗಿ, ಹೂವಾಗಿ ಅರಳಿರುವ ನಿಮ್ಮ ಲೇಖನ ಸೊಗಸಾಗಿದೆ..ನಿಮ್ಮ ಪ್ರತ್ರಿಕ್ರಿಯೆಗೆ ಧನ್ಯವಾದಗಳು

      Delete
  6. ಎಶಕಲ್ಲು ಗುಹೆಗಳ ಬಗೆಗೆ ತುಂಬಾ ಕೇಳಿದ್ದೆ. ಈಗ ಅದರ ದರ್ಶನ ಭಾಗ್ಯ ಸಿಕ್ಕಿತು.

    ನಮ್ಮ ಯಾವ ಕಾಪು ಕಾಯದ ಪ್ರವಾಸ ತಾಣಗಳಲ್ಲೂ ನಾಮ ಫಲಕಗಳಾಗಲೀ, ಮಾಹಿತಿ ಪುಸ್ತಿಕೆಗಳಾಗಲೀ ಸಿಗದಿರುವುದು ಪು.ಇಲಾಖೆ ಮತ್ತು ಪ್ರ.ಇಲಾಖೆಗಳ ಸೋಮಾರಿತನಕ ಸಾಕ್ಷಿ.

    ವಯನಾಡಿನ ವಿವರಣೆ, ಅಣೆಕಟ್ಟಿನ ಚಿತ್ರಾಂಕಣ ಮೈ ಸೆಳೆಯಿತು.

    ಬೇಗ ಶ್ರವಣ ಬೆಳಗೊಳದ ಪ್ರವಾಸಿ ಕಥನ ಬರಲಿ.

    ReplyDelete
    Replies
    1. ಎಡಕಲ್ಲು ಗುಡ್ಡ ಕೆಲ ಘಂಟೆಗಳು ಕಳೆಯಲು ತಾಣ...ಒಮ್ಮೆ ನೋಡಿ ಬರಬಹುದು...ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ....ಸಧ್ಯದಲ್ಲೇ ಶ್ರವಣಬೆಳಗೊಳದ ಯಾತ್ರೆಯು ಬರುತ್ತದೆ..

      Delete