Thursday, April 17, 2014

ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಎರಡು !!!

ಮುಂದುವರೆದ ಚಡಪಡಿಕೆ ಚಡಪಡಿಕೆ.................!


ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲೆದಾಗಿತ್ತು.. ಕುಲಾವಿ ಈ 

ಕೊಂಡಿಯಲ್ಲಿ ಸಿಗುತ್ತಿತ್ತು.. 

ಕುಲಾವಿ ಹಾಕಿಕೊಂಡ ಕೊಂಡ ಕಂದ ಮೊದಲ ಹೆಜ್ಜೆ ಇಟ್ಟಿದ್ದು ಈ ಪಾದದ ಅಳತೆಯಲ್ಲಿ ಸಿಗುತ್ತಿತ್ತು

ಈಗ ಕಂದ ನಡೆದಾಡುವ ಸಮಯ.. ಮತ್ತೆ ಚಡಪಡಿಕೆ ಆರಂಭವಾಗಿತ್ತು.. ಅದ್ಭುತವಾಗಿ ಶುರುವಾದ ಪಯಣ ಒಂದು ಹಂತಕ್ಕೆ ಬಂದು ಸುಧಾರಿಸಿಕೊಳ್ಳುತ್ತಿತ್ತು.. ಮುಂದಿನ ದಿನದ ಬಗ್ಗೆ ದಾರದಲ್ಲಿ ನೇಯ್ಗೆ ಕೆಲಸ ಆರಂಭವಾಗಿತ್ತು..

"ಬೇಡ ಕಣೋ.. ಪಾಪ ಅಣ್ಣ.. ದಿನವೆಲ್ಲ ಕಾರು ಡ್ರೈವ್ ಮಾಡಿದ್ದಾರೆ.. ಏಳಿಸಬೇಡ.. ಮಲಗಿಕೊಳ್ಳಲಿ" ಎಂದಿದ್ದರಂತೆ ಅಮ್ಮ..

 ಕಣ್ಣು ಬಿಟ್ಟೆ.. ಸೂರ್ಯ "ಹಲೋ ಗುರು" ಎಂದು ಹೇಳುತ್ತಾ ಲ್ಯಾರಿ ಅಜ್ಜನ ಕೋಣೆಯ ಕಿಟಕಿಯಿಂದ ಒಳ ನುಸುಳುತಿದ್ದ..

ಸಿಕ್ಕ ಜಾಗದಲ್ಲಿ ತೂರಿಕೊಂಡು ನನ್ನನ್ನು ಮೃದುವಾಗಿ ಎಬ್ಬಿಸಿದ 
ಸೂರ್ಯ ಭಗವಾನ್!!!

"ಗುಡ್ ಮಾರ್ನಿಂಗ್ ಅಣ್ಣಾ" ಮಗಳ ಕೋಗಿಲೆ ಧ್ವನಿ.. ಮನಸನ್ನು ಅರಳಿಸಿತು...ತಂಗಿಯಾಗಿ ಬಂದು ಮಗಳಾಗಿದ್ದವಳ ಮಂಜುಳ ಧ್ವನಿ ಅದು..  ಪಕ್ಕದಲ್ಲಿ ನೋಡಿದೆ ಸ್ನೇಹಿತಳಂತ ಮಗಳು ಇನ್ನು ಸಕ್ಕರೆ ನಿದ್ದೆಯಲ್ಲಿದ್ದರೆ.. ಮನ ಮೆಚ್ಚಿದ ಮಡದಿ ಸಿಹಿ ನಿದ್ದೆಯ ಇಳಿಜಾರಿನಲ್ಲಿ ಜಾರಾಡುತ್ತಿದ್ದಳು....!

"ಅಣ್ಣಾ ಕಾಫೀ ಕುಡಿಯಿರಿ.. ಹಾಗೆ ಒಂದು ಪುಟ್ಟದಾಗಿ ಸುತ್ತಾಡಿ ಬರೋಣ.."

ಐದೇ ನಿಮಿಷ.. ಇಬ್ಬರು ಮನೆಯಿಂದ ಹೊರಗೆ.. ಆ ತಂಗಾಳಿಯಲ್ಲಿ.. ನಡೆಯುತ್ತಾ ಸಾಗಿದ್ದೆವು.. ಮೆಲ್ಲಗೆ ನನ್ನನ್ನೇ ಚಿವುಟಿಕೊಂಡೆ.. 

"ಅರೆ ಇದು ಕನಸೋ ನನಸೋ.. ಇಲ್ಲಿ ಬರಲು ಸಾಧ್ಯವೇ ಇಲ್ಲ.. ಕಾರಣವೇ ಇಲ್ಲಾ..  
ಏನಪ್ಪಾ ಅಯ್ಯೋ ತಪ್ಪು ತಪ್ಪು !!!!

ಏನಮ್ಮ ನಿನ್ನ ಲೀಲೆ ಶಾರದೇ.. ನಿನ್ನ ಲೋಕದ ಜೀವಿಗಳಲ್ಲಿ ಈ ಮಟ್ಟಿನ ಪ್ರೀತಿ ವಿಶ್ವಾಸ.. ನಿನ್ನ ಗಂಡನ ಲೋಕದಲ್ಲಿದ್ದರೆ.. ಆಹಾ. !"

ಬೆಳಗಿನ ತಂಗಾಳಿ... ಸೂರ್ಯ ಬೀರುತ್ತಿದ್ದ ಬಿಸಿಲು ಕೋಲು.. ಹಿತ ಮಿತ ಶಾಖ.. ಸುತ್ತ ಮುತ್ತಲು ಹಸಿರು.. ಜೊತೆಯಲ್ಲಿ ಪ್ರೀತಿ ಪಾತ್ರಳಾದ ಮಗಳು ತಾನು ಅಕ್ಷರದ ಮೆಟ್ಟಿಲನ್ನು ಹತ್ತಲು ಶುರುಮಾಡಿದ್ದ ಶಾಲಾ ದೇಗುಲದ ಬಳಿ ಕರೆದೊಯ್ದಿದ್ದಳು..
ಅಣ್ಣ.. ಇಲ್ಲೇ ಸ್ವಲ್ಪ ದೂರದಲ್ಲಿ ನನ್ನನ್ನು ರೂಪಿಸಿದ ದೇಗುಲ ಇರುವುದು!!!

ಅಣ್ಣ ನಾ ಇಲ್ಲೇ ನನ್ನ ವಿಧ್ಯಾಭ್ಯಾಸ ಶುರು ಮಾಡಿದ್ದು.. ಇದನ್ನು ಹೇಳುವಾಗ ಅವಳ ಕಣ್ಣಲ್ಲಿ ಹೆಮ್ಮೆಯ ಸಾಧನೆ ಕಂಡರೆ.. ಶಾಲಾ ದೇಗುಲದ ಆವರಣದಲ್ಲಿದ್ದ ಐದು ಸಿಂಹಗಳು..ಹೌದು ಹೌದು ಎಂದವು!

ಐದು ಸಿಂಹಗಳು ಒಂದೇ ಚೌಕಟ್ಟಿನಲ್ಲಿ.. 
ನಾವಿಲ್ಲಿ ಇರುವಾಗ ಭಾವನೆ ತುಂಬಿರುವ ಅಕ್ಷರಗಳ ತೇರುಗಳೇ ಸಿಂಹಗಳಾಗಿ ಹೊರ ಹೋಗುವುದು ಎನ್ನುವಂತೆ ಎದೆ ಸೆಟೆದು ಹೇಳುತ್ತಿದ್ದವು..

ತನ್ನ ಪ್ರೀತಿಯ ವಿದ್ಯಾರ್ಥಿಗೆ ಸ್ವಾಗತ ಕೋರಲು ಸಜ್ಜಾಗಿ ನಿಂತ 
ಶಾಲಾ ದೇಗುಲ. 

ಸುಂದರ ಭಾವದ ತೇರನ್ನು ಏರಿಸುವ ಬರಹಗಾರ್ತಿಗೆ ಅಡಿಪಾಯ ಹಾಕಿಕೊಟ್ಟ ಶಾಲಾ ದೇಗುಲಕ್ಕೆ ಮನದಲ್ಲಿ ನಮಿಸಿದೆ. ಮೆಲ್ಲಗೆ ಕಿರುಗಣ್ಣಲ್ಲಿ ಮಗಳನ್ನು ನೋಡಿದೆ.. "ಓಹ್ ನೋ" ಎಂದು ನಕ್ಕಳು.. ಇಬ್ಬರಿಗೂ ಅರ್ಥವಾಯಿತು.. ಇಬ್ಬರೂ ಶಾಲೆಗೇ ನಮಿಸಿ ಮನೆಗೆ ಬಂದೆವು..
ಶಾಲಾ ಫಲಕ.. !!!

ಅಣ್ಣಾ ನಾ ಓದಿದ ಶಾಲೆ.. !

ಒಂದು ಸುಂದರ ದಿನದ ಮುನ್ನುಡಿಗೆ  ಬೆಳಗಿನ ಒಂದು ಹಿತಮಿತ ನಡಿಗೆ ಕೊಟ್ಟ ಆರಂಭ ಸಕತ್ ಇತ್ತು.. ಪ್ರಾತಃಕರ್ಮಗಳನ್ನು ಮುಗಿಸಿ.. ತಿಂಡಿ ತಿಂದು.. ಮತ್ತೆ ಕಾರಲ್ಲಿ ಕೂತಾಗ ಘಂಟೆ ಎಂಟುವರೆ ಒಂಭತ್ತು ಆಗಿತ್ತು..

ಆ ಒಂದು ಪುಟ್ಟ ಪುಟ್ಟ ಸಮಯದಲ್ಲಿ ಮಾಯ್ನೋರ ಮನೆಯ ಯಜಮಾನರಾದ ಅಜ್ಜ, ಅವರ ಸಾರಥಿಯಾದ ಅಜ್ಜಿ, ದೊಡ್ಡಮ್ಮ, ದೊಡ್ಡಪ್ಪ, ಅಪ್ಪ ಅಮ್ಮ.. ಎಲ್ಲರ ಕಿರು ಪರಿಚಯವಾಗಿತ್ತು.. ಎಲ್ಲರ ಕುತೂಹಲದ ಕೇಂದ್ರ ಬಿಂಧು ನಾನಾಗಿದ್ದೆ ಎನ್ನುವುದು ನನಗೆ ಬೆಂಗಳೂರಿಗೆ ಬಂದ  ಮೇಲೆ ತಿಳಿಯಿತು.. !!!

ವಿಶಾಸ ಪ್ರೀತಿ ಮಮತೆಯ ಶರಧಿ.. ಮಾಯ್ನೋರ್ ಮನೆ 

ಕಾರು ಶಿರಸಿ ಕಡೆ ಹರಿಯುತಿತ್ತು.. ದಾರಿಯಲ್ಲಿ ಸಂದೇಶಗಳ ಮೇಲೆ ಸಂದೇಶ.

"ಪ್ಲೀಸ್ ಹೇಳು.. ಯಾತಕ್ಕೆ ಬರ್ತಾ ಇದ್ದೀಯ.. ಯಾರಿದ್ದಾರೆ.. ಎಷ್ಟು ಹೊತ್ತಿಗೆ.. ಐದು ನಿಮಿಷ ಹತ್ತು ನಿಮಿಷ ಇದಕ್ಕೆ ಬೆಲೆಯಿಲ್ಲವೇ.. ಬರದೆ ಇದ್ದರೆ ಹಗ್ಗ.. ಬಿಳಿ ಸೀರೆ.. " ಹೀಗೆ ಸಾಗುತ್ತಲೇ ಇತ್ತು.. ಮಗಳ ಮೊಬೈಲ್ ನಲ್ಲಿ.. ಎಲ್ಲರೂ ನಗುತ್ತಲೇ ಇದ್ದೆವು.. ಅಷ್ಟೇ!

ಸೀದಾ ಮತ್ತೊಂದು ಅಜ್ಜನ ಮನೆಗೆ ಬಂದೆವು.. ಮನಸ್ಸಲ್ಲಿ ಇರುವ ಪ್ರೀತಿ ಭೂಮಿಯ ಆಳಕ್ಕಿಂಥ ಕೆಳಗೆ ಇಳಿಯುವ ಸುಂದರ ಸಂದರ್ಭ.. ಲಗುಬಗೆಯಿಂದ ಕೊಟ್ಟ ಕಾಫೀ.. ದೇಹವನ್ನು ಮತ್ತೆ ಚುರುಕುಗೊಳಿಸಿತು.. ಎಲ್ಲರಿಗೂ ಸಂಜೆ ಬರುತ್ತೇವೆ ಎಂದು ಹೇಳಿ.. ನಾವು ಮತ್ತೆ ಹೊರಟೆವು..

ಅಜ್ಜನ ಮನೆಯ ಮೊದಲ ಮನೆಯಾಗಿ ಎಂದಳಾ ಭಾಗ್ಯ!!!

ಅಷ್ಟರಲ್ಲಿಯೇ.. "ಹೇ ನೀನು ಬರ್ತೀಯೋ ಇಲ್ಲಾ.. ನಾ"

"ಇಲ್ಲ ಬರ್ತಾ ಇದ್ದೀನಿ.. ಐದು ಹತ್ತು ನಿಮಿಷ.. ಸಿದ್ಧವಾಗಿರು ಪ್ಲೀಸ್"

"ನೀ ಬರೋಲ್ಲ.. ನಾ ಕಾಲೇಜಿಗೆ ಹೋಗುತ್ತೇನೆ.. "

"ಇಲ್ಲ ಪ್ಲೀಸ್.. ಪ್ಲೀಸ್.. "

ದೇವರಿಗೆ "ಅರ್ಚ"ನೆ ಪೂಜೆ ಮಂಗಳಾರತಿ ಏನೇ ಕೊಡಬಹುದು ಅಥವಾ ಮಾಡಬಹುದು ಆದರೆ..  ಈ ಚಿಕ್ಕ ಚಿಕ್ಕ ಪುಟ್ಟಿಯರನ್ನು ಸಂಭಾಳಿಸುವ ಕೆಲಸ.. ರಾಮರಾಮ!

ಸಿರ್ಸಿ ಹೃದಯ ಭಾಗದ ಹತ್ತಿರ.. ಒಂದು ತಿರುವಿನಲ್ಲಿ ಕಾರು ನಿಂತಿತು..

"ಓಹ್ ಓಹ್ ಇವರ.. ಓಕೆ ಓಕೆ.. ಕೋಗಿಲೆ ಧ್ವನಿ "ಕ್ರಶ್" ಮಾಡುತ್ತಾ ಹರಿಯಿತು.. ತಿರುಗಿ ನೋಡಿದೆ.. ಹಲ್ಲು ಬಿಟ್ಟೆ..

ಹಾಯ್ ಅತ್ತಿಗೆ.. ಹಾಯ್ ಶೀತಲ್.. "

ಹಾಯ್ ಒಯ್ ಗಳು ವಿನಿಮಯವಾದವು..

"ಏನ್ರಿ ಹೇಗಿದ್ದೀರ.. " 

ನಾ ಕೇಳಿದ ಗಂಭೀರ ಪ್ರಶ್ನೆಗೆ ಅಷ್ಟೇ ಗಂಭೀರವಾಗಿ "ನಾ ಚೆನ್ನಾಗಿದ್ದೀನಿ ಶ್ರೀಕಾಂತಣ್ಣ"

(ಪುಣ್ಯ ಮಗಳಿಗೆ.. ಅರ್ಚನ ಪುಟ್ಟಿಯಿಂದ ಅರ್ಚನೆಯಾಗಲಿಲ್ಲ.. ಇವರ ಬಗ್ಗೆನಾ ಇಷ್ಟೊಂದು ಬಿಲ್ಡ್ ಅಪ್ ಕೊಟ್ಟಿದ್ದು ಅಂತ)

ಮುಂದಿನ ಹತ್ತು ಘಂಟೆಗಳು ಮನಸಲ್ಲಿ ಒಂದು ಸುಂದರ ನೆನಪಾಗಿ ಅಚ್ಚು ಮೂಡಿಸಿತ್ತು..

ಸ್ನೇಹಿತೆಯಾದ ಶೀತಲ್.. ಮಗಳಾದ ಭಾಗ್ಯ ಪುಟ್ಟಿ.. ಮನದನ್ನೆಯಾಗಿ  ನಗುತ್ತಲೇ ಇರುವ  ಸವಿತಾ.. ನೋಡಿದ ತಕ್ಷಣ ತಂಗಿ ಅಂದ್ರೆ ಹೀಗೆ ಇರಬೇಕು ಎನ್ನಿಸುವ ಅರ್ಚನ ಪುಟ್ಟಿ.. ನನ್ನ ಪ್ರವಾಸಕ್ಕೆ ಯಾವಾಗಲೂ ತನ್ನ ಟೈರ್ ಗಳನ್ನೂ ತಟ್ಟಿಕೊಂಡು ಸಿದ್ಧವಾಗಿರುವ ನನ್ನ ರಿಟ್ಜ್ ಕಾರು.. ಶ್ರೀ ನಿನ್ನ ಎಲ್ಲ ನೆನಪುಗಳು  ನನ್ನ ಸಂಗಡ ಎನ್ನುವ ನನ್ನ ಕ್ಯಾಮೆರ.. ಇದಕ್ಕಿಂತ ಇನ್ನೇನು ಬೇಕು ಒಂದು ಸುಂದರ ಪ್ರವಾಸ ರಸಮಯವಾಗಲು..!

ಎಲ್ಲೆಲ್ಲಿಗೆ ಹೋಗೋದು.. ಕೆಲವರು ಅಲ್ಲೇನು ಇದೆ ಮಣ್ಣು ಅಂದರೆ.. ಇನ್ನು ಕೆಲವರು ಮಣ್ಣಾದರು ಸರಿ ಅಲ್ಲಿ ಕ್ರಶ್ ಇರುತ್ತದೆ ಎಂದು ಹೇಳುತ್ತಿದ್ದರು .. ಅಣ್ಣಾ ನೀವೆಲ್ಲಿಗೆ ಕರೆದುಕೊಂಡು ಹೋದರು ಸರಿ.. ನಾ ನಿಮ್ಮ ಜೊತೆ ಎನ್ನುತ್ತಾ ಎಲ್ಲರೂ ನನ್ನ ಕೊರಳಿಗೆ ಜೋತು ಬಿದ್ದರು...

ಕೊಸರು: ಶಾಲಾ ದೇಗುಲದ ಮುಂದೆ ಕಂಡ ಫಲಕ.. ನನ್ನ ಮನಸ್ಸೆಳೆಯಿತು.. ಅಕ್ಷರಗಳಲ್ಲೇ ಮತ್ತು ಬರಿಸುವ ಸುಮಧುರ ಭಾವಗಳ ಬರಹಗಳ ಒಡತಿಯನ್ನೇ ಸರಸ್ವತಿ ಲೋಕಕ್ಕೆ ಕೊಟ್ಟಾ ಈ ಶಾಲಾ ದೇಗುಲದ ಮುಂದೇ ಬೇರೆ ನಶೆ ಬರಿಸುವ ಪದಾರ್ಥಗಳನ್ನು ನಿಷೇದಿಸಿರುವುದು ಸಮಂಜಸ ಎನ್ನಿಸಿತು!!!!

ಬರಹಗಳ ನಶೆಯ ಮುಂದೇ ಈ ನಶಾ ಪದಾರ್ಥಗಳು ತೃಣ ಸಮಾನ!!!

ಮತ್ತೆ ಚಡಪಡಿಕೆ ಶುರುವಾಯಿತು.. !!!!

Monday, March 31, 2014

ಶಿರಬಾಗಿ ವಂದಿಸುವೆ... ಶಿರಸಿಗೆ....ಭಾಗ ಒಂದು - !!!

ಚಡಪಡಿಕೆ ಚಡಪಡಿಕೆ.................................................!



ನನಗೆ ಹುಚ್ಚಿತ್ತು.. ಪ್ರವಾಸಕ್ಕೆ ಹೋಗುವ ಮೊದಲೇ.. ಆ ಪ್ರವಾಸದ ಬಗ್ಗೆ ಬರೆದು ನಂತರ ಬರೆದ ಹಾಗೆಯೇ ಪ್ರವಾಸವನ್ನು ಅನುಭವಿಸಬೇಕು ಎಂದು.. ಈ ಹುಚ್ಚಿನ ಮೊದಲ ಮಜಲು ಈ ಲೇಖನ ಈ ಕೊಂಡಿಯಲ್ಲಿದೆ.. ಕೂಸು ಹುಟ್ಟುವ ಮುಂಚೆಯೇ ಕುಲಾವಿ!

ಸೂರ್ಯಂಗೇ ಟಾರ್ಚ್...  ಪ್ರವಾಸಕ್ಕೆ ಟಾರ್ಚ್!!!

ರವಿಯೂ ಕಾಯುತ್ತಿದ್ದ ಈ ಪ್ರವಾಸಕ್ಕೆ ಬೆಳಕಾಗಲು!!!
ಕಡೂರಿನ ವಾಹನ ನಿಲ್ಧಾಣದಲ್ಲಿ ಮಲ್ಲಿಗೆ ನಗೆ ಬೀರುತ್ತಾ ನನ್ನ ಮಗಳು ನಿಂತಿದ್ದಳು..


ಅಪ್ಪ ಭಾಗ್ಯ ಅಕ್ಕನನ್ನು ನಾನೆ ಕರೆದು ಕೊಂಡು ಬರುತ್ತೇನೆ ಎಂದಳು ನನ್ನ ಸ್ನೇಹಿತೆ ಶೀತಲ್!! 


ಅಣ್ಣಾ.. ಅಣ್ಣಾ "ನೀ(ವ್) ಇರಲು ಜೊತೆಯಲ್ಲಿ" 



"ಹೇಳು ಮಗಳೇ ಯಾಕೆ  ಅಲ್ಲಿಯೇ ನಿಲ್ಲಿಸಿದೆ"



"ನೀ(ವ್) ಇರಲು ಜೊತೆಯಲ್ಲಿ..
"ಬಾಳೆಲ್ಲ ಹಸಿರಾದಂತೆ"



"ಹ ಹ... ನೋಡು ಮಗಳೇ .. ನಿನಗೋಸ್ಕರ ಅದೇ ಹಾಡು ಬರುತ್ತಿದೆ.. "



ಉ. ಕು. ಸಾಂ ಆಯಿತು.. ಸವಿತಾ ಶೀತಲ್ ಮತ್ತು ನನ್ನ ಎರಡನೇ ಮಗಳು.. ಫುಲ್ ಜೋಶ್ ನಲ್ಲಿ ಮಾತಾಡತೊಡಗಿದರು.. ನಾನು ಸುಮ್ಮನೆ ಕಾರು ಓಡಿಸುತ್ತಾ  ಸಾಗಿದೆ.. ಸಂಜೆಗತ್ತಲು ಮುತ್ತುತ್ತಾ ಬೆಳಕನ್ನು ಮುಟ್ಟುತ್ತಾ ಬಂತು..


ರವಿ ನಮ್ಮ ಪಯಣಕ್ಕೆ ಶುಭಕೋರಿ ತನ್ನ ಗೂಡನ್ನು ಸೇರಲು ಹೊರಟ ಕ್ಷಣ!


ಅಣ್ಣಾ ಇದೆಲ್ಲ ಹೆಂಗೆ ಅಣ್ಣಾ.. ನೀವು ಯಾರೋ ನಾನು ಯಾರೋ.. ಅತ್ತಿಗೆ ಈ ಶೀತಲ್ ಪುಟ್ಟು... ಕೇವಲ ಒಂದು ವರ್ಷದ ಹಿಂದೆ ನೀವು ಯಾರೂ ಅಂತಲೇ ಗೊತ್ತಿರಲಿಲ್ಲ.. ಇಂದು  ನೋಡಿದರೆ ನೀವು ನನ್ನ ಮನೆಗೆ ಬರುತಿದ್ದೀರ.. ನನಗೆ ನಂಬೋದಕ್ಕೆ ಆಗುತ್ತಿಲ್ಲ..


ನಾ ಹಲ್ಲು ಬಿಡುವುದನ್ನು ಬಿಟ್ಟು ಬೇರೇನೂ ತೋಚಲಿಲ್ಲ ಕಾರಣ.. ನನಗೂ ಅದೇ ಪ್ರಶ್ನೆಗಳು ಕಾಡುತ್ತಿದ್ದವು. 

ನಿಮ್ಮ ಪ್ರವಾಸಕ್ಕೆ ನಾನು ಬರುತ್ತೇನೆ ಎಂದ ಶ್ವಾನ ಮಹಾರಾಜ!!! 

"ಶ್ರೀ ಇಷ್ಟು ದೂರ ಬಂದಿದ್ದೇವೆ.. ದೊಡ್ಡಮ್ಮನ ಮನೆಗೆ ಹೋಗಿ ಬರೋಣ" ಸವಿ ಉವಾಚ.. 

ಶೀತಲ್ ಕುಣಿಯುತ್ತಿದ್ದಳು..  ಮೆಲ್ಲಗೆ ಮಗಳ (ಭಾಗ್ಯ) ಕಡೆ ನೋಡಿದೆ ..

"ಅಣ್ಣಾ ನೀವು ಎಲ್ಲಿಗೆ ಕರೆದುಕೊಂಡು ಹೋದರು ನಾ ಬರುವೆ ನಿಮ್ಮೊಡನೆ.. "ಭಾಗ್ಯ ಉವಾಚ!

ಸರಿ ಶಿವಮೊಗ್ಗದ ಕೋಟೆ ಆಂಜನೇಯನ ಬೀದಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದೆವು.. ಅಲ್ಲಿ ನದಿಯಲ್ಲಿರುವ ನೀರು ಶರಧಿಗೆ ಸೇರುವಂತೆ.. ಪ್ರೀತಿಯ ಸಾಗರವನ್ನೇ ಹರಿಸಿ ಬಿಟ್ಟರು.. ಕೇವಲ ಒಂದು ಹತ್ತು ಹದಿನೈದು ನಿಮಿಷದ ಭೇಟಿ.. ಎರಡು ಘಂಟೆಗಳ ಭೇಟಿಗೆ ತಿರುಗಿತು.... 

ಹೊಟ್ಟೆ ತುಂಬಾ ಊಟ ಬಾಯಿ ತುಂಬಾ ಮಾತು.. ಸಂಕೋಚದ ಮುದ್ದೆ ಎನಿಸಿಕೊಂಡಿದ್ದ ಭಾಗ್ಯ.. ಉತ್ಸಾಹದ ಚಿಲುಮೆಯಾಗಿದ್ದಳು.. 

ಸುಮಾರು ಹೊತ್ತು ಇದ್ದು.. ಮಾತು ಮಾತು ಇನ್ನಷ್ಟು ಮಾತಿನ ನಂತರ ದೊಡ್ಡಮ್ಮನ ಆಶೀರ್ವಾದ ಪಡೆದು.. ಅಣ್ಣ ತಮ್ಮ ಎನ್ನುವ ಮಾತೆ ಇಲ್ಲದೆ ಗೆಳೆಯರ ತರಹ ಮಾತಾಡುತ್ತಿದ್ದ ಸುಬ್ಬರಾಮು ದಂಪತಿಗಳಿಂದ ಅಪ್ಪಣೆ ಪಡೆದು ಹೊರಟೆವು... !

ಮೆಲ್ಲನೆ ಒರೆಗಣ್ಣಲ್ಲಿ ನೋಡಿ "ಅಣ್ಣಾ ಗಿರೀಶ್ ಮತ್ತು ಅವರ ಸ್ನೇಹಿತ ಶಿವಮೊಗ್ಗದಲ್ಲಿ ಇದ್ದಾರಂತೆ" ಭೇಟಿ ಮಾಡೋಣ.. 

ಕಣ್ಣು ಮಿಟುಕಿಸಿದೆ... ನನ್ನ ಪ್ರೀತಿಯ ಕಾರು ಶಿವಮೊಗ್ಗದ ವಾಹನ ನಿಲ್ದಾಣದ ಮುಂದೆ ಹಾಜಿರ್.. ಗಿರೀಶ್ ಮತ್ತು ಅವರ ಸ್ನೇಹಿತರಾದ ಪೂರ್ಣೇಶ್ ನಿಂತಿದ್ದರು... ಮಾತು ಇನ್ನಷ್ಟು ಮಾತು.. ಭಾಗ್ಯ ಪುಟ್ಟಿಯ ಸಂತಸದ ನಗು.. ಅರೆ ಘಳಿಗೆ ಅರೆ ಘಳಿಗೆಯಲ್ಲೂ ಬದಲಾಗುತ್ತಿದ್ದ ನಮ್ಮ ಪಯಣದ ಪಟ್ಟಿ.. 

ಸಿದ್ದಾಪುರದಿಂದ ಕರೆ ಬರುತ್ತಲೇ ಇತ್ತು.. ಎಷ್ಟು ಹೊತ್ತಿಗೆ ಬರ್ತೀರಿ.. ಆ ಪ್ರಶ್ನೆಗೆ ಯಾರಲ್ಲೂ ಉತ್ತರವಿರದ ಪ್ರಶ್ನೆಯಾಗಿತ್ತು.. :-)

ಗಿರೀಶ್ ಮತ್ತು ಸ್ನೇಹಿತರಿಗೆ ಎಲ್ಲಾ ಆಮಿಷ ತೋರಿದೆವು ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಲು.. ಆದ್ರೆ ಅವರು (AAP) ಪೊರಕೆ ಗುರುತಿನ ಮಾಲೀಕನಂತೆ.. ಗಲಿಬಿಲಿ ನಿರ್ಧಾರವಿರಲಿಲ್ಲ.. ಇಲ್ಲ ಸರ್ ನಮ್ಮದು ಆಗಲೇ ಪೂರ್ವ ನಿಯೋಜಿತ ಕಾರ್ಯಕ್ರಮ.. ದಯಮಾಡಿ ಕ್ಷಮಿಸಿ ಮತ್ತೊಮ್ಮೆ ಬರುತ್ತೇವೆ.. ಎಂದರು. 

ಸಾಗರದ ನಿರೀಕ್ಷಣ ಮಂದಿರದತ್ತ ಕಾರು ಓಡಿತು.. ನಗುಮೊಗದ ಅಧ್ಯಾಪಕರು ಸರಿ ರಾತ್ರಿ ಹನ್ನೆರಡರ ಆಸುಪಾಸಿನಲ್ಲಿಯೂ ನಸು ನಗುತ್ತ ನಮ್ಮನ್ನು ಮಾತಾಡಿಸಿ ಬನ್ನಿ ಊಟ ಮಾಡುವಿರಂತೆ.. ಇಲ್ಲಾ ಕಡೆ ಪಕ್ಷ ಕಾಫಿಯಾದರೂ ಕುಡಿಯಲೇ ಬೇಕು ಎಂದು ಒತ್ತಾಯ ಮಾಡಿದರು. ಆಗದು ಎಂದು ಹೇಳಲು ಆಗಲಿಲ್ಲ.. 

ಏನೀ ಸ್ನೇಹ ಸಂಬಂಧ. ಎಲ್ಲಿಯದೂ ಈ ಅನುಬಂಧ.. ಸರಿ ರಾತ್ರಿಯಲ್ಲಿ ಬ್ಲಾಗ್ಲೋಕದ ಜೊತೆಯಲ್ಲಿ!!! 

ಭಾಗ್ಯ ನಗುತ್ತಲೇ ಇದ್ದಳು.. "ಅಣ್ಣಾ ನಿಮ್ಮ ಹೃದಯ ನಿಮ್ಮ ಕಾರಿಗಿಂತ ದೊಡ್ಡದು....:) "

ಮಧ್ಯರಾತ್ರಿಯಲ್ಲಿ ಪರಿಚಯವೇ ಇಲ್ಲದ ಒಂದು ಕುಟುಂಬದ ಭೇಟಿಗೆ ಮನ ಕಾಯುತ್ತಿತ್ತು. ಮುದ್ದಾದ ಮಗುವಿನ.. ತಾಳ್ಮೆಯ ಮಡದಿ ಕೂಡಿದ ಚಂದದ ಸಂಸಾರ ಅವರದ್ದು.. ಬನ್ನಿ ಬನ್ನಿ ಸ್ವಲ್ಪ ಹೊತ್ತು ಮಾತಾಡುತ್ತಾ ಕೂತಿರಿ.. ಬಿಸಿ ಬಿಸಿ ಅಡಿಗೆ ಮಾಡಿಬಿಡುತ್ತೇನೆ. ಆ ಮಲೆನಾಡಿನ ಹೆಬ್ಬಾಗಿಲಲ್ಲಿ ಸರಿ ರಾತ್ರಿಯ ತಣ್ಣನೆ ಗಾಳಿಯಲ್ಲೂ ಮೈ ಸಣ್ಣಗೆ ಬೆವರಿತು. 

ಬೇಡ ಸರ್.. ಕಾಫಿ ಮಾತ್ರ ಕೊಡಿ.. ಭಾಗ್ಯ ಮತ್ತೆ ಮತ್ತೆ ನಗುತ್ತಿದ್ದಳು.. "ಅಣ್ಣ ನಿಮಗೆ ಕಾಫಿ ಸಿಕ್ಕರೆ.. ಆ ದೇವರನ್ನು ಕೂಡ ಒಮ್ಮೆ.... ಹಹಹ ಹಹಹ" ಅವಳ ನಗು ನಿಂತಿರಲಿಲ್ಲ. 

ಕಾಫಿ ಬಂತು.. ಸರ ಸರ ಕುಡಿದು.. ದೇವರಲ್ಲಿ ಪ್ರಾರ್ಥಿಸಿದೆವು. ದೇವರೇ ಇನ್ನು ನಮ್ಮ ಮುಂದಿನ ನಿಲ್ದಾಣ ಸಿದ್ದಾಪುರದ ಮಾಯ್ನೋರಮನೆ ಆಗಿರಲಪ್ಪ. ಕಾರಣ ಭಾಗ್ಯ ಪುಟ್ಟಿಯ ಮೊಬೈಲ್ ಅಳುತ್ತಲೇ ಇತ್ತು.. ಪಾಪ ಅದನ್ನು ಎತ್ತಿ ಕೊಂಡು ಎತ್ತಿ ಕೊಂಡು ಸಮಾಧಾನ ಮಾಡಿ ಮಾಡಿ.... !

"ಅಣ್ಣಾ ಮಾತಾಡುತ್ತಿರಿ.. "

ಸರಿ ಜೀವನದ ಕೆಲವು ಸ್ವಾರಸ್ಯಕರ ಘಟನೆಗಳು.. ಎಲ್ಲವೂ ನನ್ನ ಬಾಯಿಂದ ಅನಾವರಣಗೊಳ್ಳುತ್ತಿದ್ದವು!

ಕಾರು ಸಿದ್ದಾಪುರ ದಾಟಿತು.. ಮಾಯ್ನೋರಮನೆಯ ಮುಂದೆ ಬಂದು ನಿಂತಿತು..!!! 

ಆ ದೊಡ್ಡ ಮನೆಯಲ್ಲಿ.. ಇರುವವರ ಮನಸ್ಸು ಇನ್ನೂ ದೊಡ್ಡದು.. ಇವರು ಇವರು ಅವರು ಇವರು ಅಂತ  ಪರಿಚಯ ಆಯಿತು.. ಆ ಮನೆಯವರು "ಶ್ರೀಕಾಂತ್ ನೀವು ಏನು ಹೇಳಲೇ ಬೇಡಿ.. ಇವಳು ಆಗಲೇ ಕಿವಿ ತೂತಾಗುವಷ್ಟು ನಿಮ್ಮ ಬಗ್ಗೆ ನಿಮ್ಮ ಮನೆಯವರ ಬಗ್ಗೆ ಎಲ್ಲಾ ಹೇಳಿದ್ದಾಳೆ.. ಹೇಳ್ತಾನೆ ಇರ್ತಾಳೆ.. ನೀವೆಲ್ಲಾ ಬಂದದ್ದು ಬಹಳ ಕುಶಿ ಆಯಿತು.. "

ನನಗೆ ಮನದಲ್ಲಿಯೇ ಸಣ್ಣ ಸಣ್ಣ ಸಂತಸದ ತರಂಗಗಳು ಏಳುತ್ತಿದ್ದವು.. ಬೆಳಿಗ್ಗೆ ಇಂದ ಕಾರು ಓಡಿಸಿದ್ದ ಪರಿಣಾಮ.. ತಣ್ಣನೆ ಗಾಳಿ.. ಹೊಟ್ಟೆ ತುಂಬಾ ಪೊಗದಸ್ತಾದ ಊಟ.. ನಿದ್ರಾದೇವಿ ಎಳೆಯುತ್ತಿದ್ದಳು..!

ಆದರೆ ಬೇಸಿಗೆಯಲ್ಲಿ ಈ ಸುಂದರ ಊರಿನ ಪರಿಸರದಲ್ಲಿ ನಿದ್ದೆ ಮಾಡಿ ಸಮಯ ವ್ಯರ್ಥ ಮಾಡುವುದು ನನಗೆ ಇಷ್ಟವಾಗಲಿಲ್ಲ.. ಆದರೆ ಮರುದಿನ ಬೆಳಿಗ್ಗೆ.. (ಮರುದಿನ ಬೆಳಿಗ್ಗೆ ವಾಟ್ ನಾನ್ಸೆನ್ಸ್.. ನಾವು ತಲುಪಿದ್ದು ಬೆಳಗಿನ ಜಾವ ಎರಡು ಘಂಟೆ ಹೊತ್ತಿಗೆ) ಮತ್ತೆ ಪ್ರಯಾಣ ಮುಂದುವರೆಸ ಬೇಕಾಗಿದ್ದರಿಂದ.. ಲ್ಯಾರಿ ಅಜ್ಜನ ಕೋಣೆಯಲ್ಲಿ ಮಲಗಿಕೊಂಡೆವು.. ಸವಿತಾ ಶೀತಲ್ ಆಗಲೇ ನಿದ್ರಾದೇವಿಯ ಅಸ್ತ್ರಕ್ಕೆ ಬೆರಗಾಗಿದ್ದರು. ನಾನು ಕೆಲಹೊತ್ತು ಸಂದೇಶಗಳನ್ನು ನೋಡಿ..ಹಾಗೇ.. ನಿದ್ರಾದೇವಿಯ ಮಡಿಲಿಗೆ ಜಾರಿದೆ. 

ಮುಂದಿನ ದಿನದ ದಿನಚರಿಯ ಬಗ್ಗೆ ಮತ್ತೆ ಚಡಪಡಿಕೆ.. ಚಡಪಡಿಕೆ.........................! 

Thursday, March 27, 2014

ಶಿರಬಾಗಿ ವಂದಿಸುವೆ... ಶಿರಸಿಗೆ!!!

ಚಡಪಡಿಕೆ ಚಡಪಡಿಕೆ.................................................!

"ಏನೋ ಹೊಸ ಉಲ್ಲಾಸ ಇಂದು ನನ್ನಲ್ಲಿ ನೋಡು" ಪ್ರಳಯಾಂತಕ ಚಿತ್ರದ ಹಾಡು ಬೇಡವೆಂದರೂ ಕಾಡುತ್ತಿತ್ತು.

"ಒಂದು ಎರಡು ಮೂರು ನಾಲ್ಕು ಆಮೇಲೆ ಏನು" ಆಚನಾಕ್ಕಾಗಿ ಅಣ್ಣಾವ್ರು ಒಂದು ಮುತ್ತಿನ ಕಥೆಯಿಂದ ಎದ್ದು ಹಾಡ ತೊಡಗಿದರು.

ಅರೆ ಏನಿದು ಎಲ್ಲರು ಒಮ್ಮೆಲೇ ಕಾಡಬೇಕೆ.. ಕಾರಿನ ಹಾಡುವ ಪೆಟ್ಟಿಗೆಯ ಕಿವಿ ಹಿಂಡಿದೆ.. ಕಡ್ಡಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಹಾಡು ನನಗೆ ಅಮಲು ಏರಿಸಲಾರಂಭಿಸಿತು. ಶ್ರೀ ಇವತ್ತು ಏನಾದರೂ ಹುಚ್ಚು ಸಾಹಸಕ್ಕೆ ಕೈಹಾಕು ಎಂದಿತು ಮನಸ್ಸು.. ಮನಸ್ಸಿನ ಮಾತನ್ನ ಇದುವರೆಗೂ ತೆಗೆದುಹಾಕಿಲ್ಲ.

ಅವತ್ತು ಆಫೀಸಿಂದ ಹೊರಟಾಗಿನಿಂದ ಮನೆ ತನಕ ಬರುವ ಸುಮಾರು ಒಂದೂವರೆ ಘಂಟೆ ಅದೇ ಹಾಡನ್ನು ತಿರುಗಿಸಿ ತಿರುಗಿಸಿ ಕೇಳುತ್ತಲೇ ಬಂದೆ..

"ಕೆನ್ ಐ"

"ಶ್ಯೂರ್"

ಇಷ್ಟು ಸಾಕು.. ಮಾತಿನ ಬಂಡಿ ಓಡಿಸಲು..

ದಿನಾಂಕ ನಿಗದಿಯಾಯಿತು.. !

ಕಡೂರಿನ ವಾಹನ ನಿಲ್ಧಾಣದಲ್ಲಿ ಮಲ್ಲಿಗೆ ನಗೆ ಬೀರುತ್ತಾ ನನ್ನ ಮಗಳು ನಿಂತಿದ್ದಳು..

ಅಣ್ಣಾ.. ಅಣ್ಣಾ "ನೀ(ವ್) ಇರಲು ಜೊತೆಯಲ್ಲಿ"

"ಹೇಳು ಮಗಳೇ ಯಾಕೆ  ಅಲ್ಲಿಯೇ ನಿಲ್ಲಿಸಿದೆ"

"ನೀ(ವ್) ಇರಲು ಜೊತೆಯಲ್ಲಿ..
"ಬಾಳೆಲ್ಲ ಹಸಿರಾದಂತೆ"

"ಹ ಹ... ನೋಡು ಮಗಳೇ .. ನಿನಗೋಸ್ಕರ ಅದೇ ಹಾಡು ಬರುತ್ತಿದೆ.. "

ಉ. ಕು. ಸಾಂ ಆಯಿತು.. ಸವಿತಾ ಶೀತಲ್ ಮತ್ತು ನನ್ನ ಎರಡನೇ ಮಗಳು.. ಫುಲ್ ಜೋಶ್ ನಲ್ಲಿ ಮಾತಾಡತೊಡಗಿದರು.. ನಾನು ಸುಮ್ಮನೆ ಕಾರು ಓಡಿಸುತ್ತಾ  ಸಾಗಿದೆ.. ಸಂಜೆಗತ್ತಲು ಮುತ್ತುತ್ತಾ ಬೆಳಕನ್ನು ಮುಟ್ಟುತ್ತಾ ಬಂತು..

ಅಣ್ಣಾ ಇದೆಲ್ಲ ಹೆಂಗೆ ಅಣ್ಣಾ.. ನೀವು ಯಾರೋ ನಾನು ಯಾರೋ.. ಅತ್ತಿಗೆ ಈ ಶೀತಲ್ ಪುಟ್ಟು... ಕೇವಲ ಒಂದು ವರ್ಷದ ಹಿಂದೆ ನೀವು ಯಾರೂ ಅಂತಲೇ ಗೊತ್ತಿರಲಿಲ್ಲ.. ಇಂದು  ನೋಡಿದರೆ ನೀವು ನನ್ನ ಮನೆಗೆ ಬರುತಿದ್ದೀರ.. ನನಗೆ ನಂಬೋದಕ್ಕೆ ಆಗುತ್ತಿಲ್ಲ..

"ಭಗವಂತ ಕೊಡುವ ಆಶೀರ್ವಾದ ಕಣೋ ನೀವೆಲ್ಲ...."

ಹೀಗೆ ಸಾಗಿತ್ತು ನಮ್ಮ ಮಾತಿನ ಲಹರಿ.. ಶಿವಮೊಗ್ಗದಲ್ಲಿ ಏನಾದರೂ ಹೊಟ್ಟೆಗೆ ತುಂಬಿಸಿಕೊಳ್ಳೋಣ ಅಂತ.. ನಿಲ್ಲಿಸಿ.. ನನ್ನ ಇಬ್ಬರೂ ಮಕ್ಕಳಿಗೆ ಇಷ್ಟವಾಗುವ ಗೊಲ್ಗುಪ್ಪಾ ಹೊಡೆದೆವು.. 

ಕಾರು ಸಾಗರ ದಾಟಿತು.. ಸಿದ್ದಾಪುರದ ಮಾಯ್ನೋರಮನೆಯ ಮುಂದೆ ಬಂದು ನಿಂತಿತು.. 

ಆ ದೊಡ್ಡ ಮನೆಯಲ್ಲಿ.. ಇರುವವರ ಮನಸ್ಸು ಇನ್ನೂ ದೊಡ್ಡದು.. ಇವರು ಇವರು ಅವರು ಇವರು ಅಂತ  ಪರಿಚಯ ಆಯಿತು.. ಆ ಮನೆಯವರು "ಶ್ರೀಕಾಂತ್ ನೀವು ಏನು ಹೇಳಲೇ ಬೇಡಿ.. ಇವಳು ಆಗಲೇ ಕಿವಿ ತೂತಾಗುವಷ್ಟು ನಿಮ್ಮ ಬಗ್ಗೆ ನಿಮ್ಮ ಮನೆಯವರ ಬಗ್ಗೆ ಎಲ್ಲಾ ಹೇಳಿದ್ದಾಳೆ.. ಹೇಳ್ತಾನೆ ಇರ್ತಾಳೆ.. ನೀವೆಲ್ಲಾ ಬಂದದ್ದು ಬಹಳ ಕುಶಿ ಆಯಿತು.. "

ನನಗೆ ಮನದಲ್ಲಿಯೇ ಸಣ್ಣ ಸಣ್ಣ ಸಂತಸದ ತರಂಗಗಳು ಏಳುತ್ತಿದ್ದವು.. ಬೆಳಿಗ್ಗೆ ಇಂದ ಕಾರು ಪರಿಣಾಮ.. ತಣ್ಣನೆ ಗಾಳಿ.. ಹೊಟ್ಟೆ ತುಂಬಾ ಪೊಗದಸ್ತಾದ ಊಟ.. ನಿದ್ರಾದೇವಿ ಎಳೆಯುತ್ತಿದ್ದಳು.. 

ಆದರೆ ಬೇಸಿಗೆಯಲ್ಲಿ ಈ ಸುಂದರ ಊರಿನ ಪರಿಸರದಲ್ಲಿ ನಿದ್ದೆ ಮಾಡಿ ಸಮಯ ವ್ಯರ್ಥ ಮಾಡುವುದು ನನಗೆ ಇಷ್ಟವಾಗಲಿಲ್ಲ.. ಸಣ್ಣಗೆ ಒಂದಷ್ಟು ದೂರ ನೆಡೆದು ಬಂದೆವು... ಅಂಗಳದಲ್ಲಿಯೇ ಚಾಪೆ ಹಾಸಿಕೊಂಡು.. ಹರಟಿದೆವು.. ಬ್ಲಾಗ್, ಕಾಮೆಂಟ್, ಹಾಡು, ಟ್ರಿಪ್ ಹೀಗೆ ಎಲ್ಲವೂ ಮಾತಿಗೆ ಬಂದವು.. ಶೀತಲ್ ಪ್ರವಾಸದಲ್ಲಿ ನನಗೆ ಅಂತಿಕೊಂಡಿರುವವಳು ಇಂದು ಪಕ್ಷ ಬದಲಾಯಿಸಿಬಿಟ್ಟಿದ್ದಳು.. ಇಬ್ಬರೂ ಮಂಗನಿಂದ ಮಾನವ ಎನ್ನುವ ಸಿದ್ಧಾಂತವನ್ನು ಅದಕ್ಕೆ ತದ್ವಿರುದ್ಧವಾಗಿ  
ನಡೆಸುತ್ತಿದ್ದರು.. 

ಬೆಳಿಗ್ಗೆ ಬೇಗನೆ ಏಳಬೇಕಿತ್ತು.. ಒಲ್ಲದ ಮನಸ್ಸಿನಿಂದ.. ಮಲಗಲು ಹೊರಟೆವು.. 

ಅಣ್ಣಾ.. ಗುಡ್ ಮಾರ್ನಿಂಗ್.. ಪುಟ್ಟು ಗುಡ್ ಮಾರ್ನಿಂಗ್ . ಅತ್ತಿಗೆ ಗುಡ್ ಮಾರ್ನಿಂಗ್  .. ಕೋಗಿಲೆ ಸ್ವರ ಕೇಳಿ ಬಂತು.. ಹಲ್ಲು ಬಿಟ್ಟೆವು.. ಚಕ ಚಕ ಬೆಳಗಿನ ಕಾರ್ಯಕ್ರಮ ಮುಗಿಸಿ.. ತಿಂಡಿ ತಿಂದು.. ನಮ್ಮ ಸವಾರಿ ನಮ್ಮ ಪಯಣದ ಮುಂದಿಯ ಗುರಿ ಸಿರ್ಸಿ ಮಹಾಗಣಪತಿ ದೇವಸ್ಥಾನದ ಕಡೆ ಹೊರಟಿತ್ತು.. 



ದೇವಾಲಯಕ್ಕೆ ಹೋಗಿ.. ಸಲ್ಲಿಸಬೇಕಿದ್ದ ಹರಕೆ.. ಪ್ರಾರ್ಥನೆ.. ನಮನಗಳನ್ನು ಸಲ್ಲಿಸಿದ ಮೇಲೆ.. ಅಲ್ಲಿಯೇ ಅಂಗಡಿಯಲ್ಲಿ ಗಣಪನ ಚಿತ್ರ ತೆಗೆದುಕೊಂಡು.. ಮಾರಿಕಾಂಬೆಯ ದರ್ಶನಕ್ಕೆ ನುಗ್ಗಿದೆವು.. ಕೇವಲ ಒಂದು ವಾರದ ಹಿಂದೆಯಷ್ಟೇ ಜಾತ್ರೆ ಆಗಿದ್ದರಿಂದ.. ದೇವಿ ದರ್ಶನ ಸಾಧ್ಯವಿರಲಿಲ್ಲ... ದೇವಾಲಯವನ್ನು ಸುತ್ತಿ ಸುತ್ತಿ.. ಶೀತಲ್ ಗೆ ಅಲ್ಲಿನ ವಿವರ ಕೊಡುತ್ತಾ ಬಂದೆ..
 

ಅಣ್ಣಾ.. ಅಣ್ಣಾ.. ಬನವಾಸಿ ಬನವಾಸಿ ಎಂದಳು.... ಹೌದು ಕಣೋ.. ಎಲ್ಲಿ ನಿನ್ನ ಗೆಳತಿ ಬರೋಲ್ಲವೇ ಎಂದೇ.. ಬರ್ತಾಳೆ ಬರ್ತಾಳೆ.. ಅಂದಳು.. 


ಏನೇ ತಲೆಕೆಟ್ಟಿದೆಯ ನಿನಗೆ... ಬಿಳಿ ಸೀರೆ ತರಬೇಕ.. ನೀ ಬರದೆ ಹೋದರೆ ನೇಣು ಹಾಕಿಕೊಳ್ಳುತ್ತೇನೆ ಹೀಗೆ ಒಂದು ತುಂಟ ಪುಟ್ಟಿ ನಮಗಾಗಿ ಕಾಯುತ್ತಿತ್ತು... ಇನ್ನು ಮುಂದೆ ನನ್ನ ಕಾರಲ್ಲಿ ಹಾಡು ಇಲ್ಲಾ.. ನನ್ನ ಮಾತು ಇಲ್ಲ.. ಸವಿತಾ.. ಶೀತಲ್.. @#$#@ ಮತ್ತು @#$#@$# ಮಾತು ಮಾತು.. ಕಿವಿ ತೂತಾಗುವಷ್ಟು ಮಾತು ಮುಗಿಸುತ್ತಿದ್ದರು.. 

ಬನವಾಸಿ.. ಅಪ್ಪ ಇದು ಮಯೂರನ ರಾಜ್ಯ.. ಎಂದು ಶೀತಲ್ ಕುಣಿಯಲು ಶುರುಮಾಡಿದಳು.. ನಿಜಕ್ಕೂ ಬನವಾಸಿ ಒಂದು ರೋಮಾಂಚನ ಕೊಡುವ ಅದ್ಭುತ ತಾಣ....  ಕಲ್ಲಿನ ಮಂಟಪ.. ಕಲ್ಲಿನ ಬಸವ.. ಎತ್ತ ನೋಡಿದರು ನಮ್ಮನ್ನೇ ನೋಡುವಂತೆ ಅನ್ನಿಸುವ ಸುಂದರ ಕೆತ್ತನೆಗಳು.. ಇದಕ್ಕೆಲ್ಲಾ ಕಳಶವಿಟ್ಟಂತೆ ಮಧುಕೇಶ್ವರ.. ಜೇನಿನ ಬಣ್ಣದಲ್ಲಿ ಇರುವ ಈಶ್ವರನನ್ನು ಎಷ್ಟು ಭಾರಿ ನೋಡಿದರೂ ಸಮಾಧಾನವಿಲ್ಲ.. 

ಕ್ಯಾಮೆರ ಹೊಟ್ಟೆ ತುಂಬಿಕೊಳ್ಳುತ್ತಿತ್ತು.. 

ಮನಸ್ಪೂರ್ತಿ ಆ ತಾಣದಲ್ಲಿ ಇದ್ದು.. ಬನವಾಸಿ ದೇಶಮಂ.. ಬನವಾಸಿ ದೇಶಮಂ ಎನ್ನುತ್ತಾ ಹೃದಯ ತಟ್ಟಿಕೊಳ್ಳುವಂತೆ ಮಾಡುವ ಈ ತಾಣದಲ್ಲಿ ಇದ್ದಷ್ಟು ಹೊತ್ತು ಇನ್ನೂ ಇರಬೇಕು ಎನ್ನುವ ಹಂಬಲ ಹೆಚ್ಚಾಗುತ್ತಿತ್ತು.. 

ಸೂರ್ಯ ಮುಳುಗಲು ಸಿದ್ಧವಾಗುತ್ತಿದ್ದ.. ಜೊತೆಯಲ್ಲಿ ಇಬ್ಬರೂ ಜಗಳ ಶುರುಮಾಡಿದ್ದರು.. ನನ್ನ ಮನೆ ನಮ್ಮಜ್ಜನ ಮನೆ.. ಇಲ್ಲ್ಲಾ ಇಲ್ಲ ನನ್ನ ಮನೆ.. ಇಲ್ಲ ಕಣೋ ನಮ್ಮಜ್ಜನ ಮನೆ.. ಪೈಪೋಟಿ ನಡೆದೆ ಇತ್ತು.. 

ಮುಂದಿನ ಬಾರಿ ಬಂದಾಗ ಖಂಡಿತ ನಿನ್ನ ಮನೆಯಲ್ಲಿ ಉಳಿಯುವೆ.. ಆದರೆ ಈಗ ಬರುತ್ತೇನೆ.. ಎಂದು ಹೇಳಿ ಅವರ ಮನೆಗೆ ಹೋಗಿ.. ಮನೆಯವರ ಮನಸ್ಸನ್ನು ತಟ್ಟಿ ನಕ್ಕು ನಲಿದು .. ಮಗಳ ಅಜ್ಜನ ಮನೆಗೆ ಹೊರಟೆವು... ಮತ್ತೆ ಚರಿತೆ ಮರಳಿತು.. ಶ್ರೀಕಾಂತ್ ನೀವು ನಿಮ್ಮ ಕುಟುಂಬ ಬಂದದ್ದು ಬಹಳ ಖುಷಿಯಾಯ್ತು.. ಆದರೆ ಇಂದು ನಿಮಗೆ ಆತಿಥ್ಯ ಕೊಡೋಕೆ ಆಗೋಲ್ಲ.. ತೊಂದರೆ ಇಲ್ಲ ಬೆಳಿಗ್ಗೆ ಉಪಹಾರದಲ್ಲಿ ನಿಮ್ಮನ್ನು ಮುಳುಗಿಸುತ್ತೇವೆ ಎಂದರು.. 

ಮತ್ತೊಮ್ಮೆ ಮಾತು ಮಾತು ಮಾತು.. ಆಕಾಶ ತೂತಾಗಿ ಬೀಳುವಷ್ಟು ಮಾತು.. ಕನಸಿನಲ್ಲೂ ಊಹಿಸಿಕೊಳ್ಳದಷ್ಟು ಮಧುರವಾಗಿ ಕ್ಷಣಗಳು ಕಳೆಯುತ್ತಿದ್ದವು.. ಅರೆ ಹೀಗೂ ಉಂಟೆ . ಬರಿ ಅಂತರ್ಜಾಲದಲ್ಲಿ ಪರಿಚಯವಾಗಿ.. ಇಂದು ಮನಸ್ಸಿನ ಮೇಲೆ ನಡೆಯುತ್ತಿರುವ ಈ ರೀತಿಯ ಪ್ರೀತಿ ವಿಶ್ವಾಸ ನಿಜಕ್ಕೂ ಇದು ಇಂದ್ರಜಾಲವೇ ಎನ್ನಿಸುತ್ತಿತ್ತು.. 

ಬೆಳಿಗ್ಗೆ ಒಂದು ಪುಟ್ಟಾ ಸುತ್ತಾ ಮುತ್ತಾ ಇರುವ ವಿಹಂಗಮ ನೋಟ.. ಜೊತೆಯಲ್ಲಿ ಬಿಸಿ ಬಿಸಿ ಕಾಫಿ.. ಆಹಾ.. ಹಳ್ಳಿಯ ವಾತಾವರಣಕ್ಕೆ ಸಾಟಿ.. ಹಳ್ಳಿಯೇ.. !

ಸಹಸ್ರಲಿಂಗ ಕ್ಷೇತ್ರ ಕೆಲವೇ ನಿಮಿಷಗಳ ಹಾದಿಯಾಗಿದ್ದರಿಂದ..ಅಲ್ಲಿಗೆ ಸಾಗಿದೆವು.. ಬಯಲಿನಲ್ಲಿ ಕಾಣುವ ತಾಣವೆಲ್ಲಾ ಲಿಂಗದ ರೂಪವೇ.. ಒಂದು ಕಡೆ ಲಿಂಗ ಇದ್ದಾರೆ ಇನ್ನೊಂದು ಕಡೆ ಬಸವ.. ಎನಿಸಿದರೆ ಎಣಿಕೆ ತಪ್ಪುತ್ತಿತ್ತು.. ಶಾಲ್ಮಲಾ ನದಿಯ ಹರಿವು ಕಡಿಮೆ ಇದ್ದದರಿಂದ ಕಳೆದ ಬಾರಿ ನೋಡಿದ್ದಕ್ಕಿಂತ ಇನ್ನು ಹೆಚ್ಚಿನ ಲಿಂಗಗಳ ದರ್ಶನ ಸಿಕ್ಕಿತು.. ತೂಗು ಸೇತುವೆಯ ಮೇಲೆ ನಡೆದಾಟ.. ಮರೆಯಲು ಆಗುವುದೇ ಇಲ್ಲಾ.. 



ಅವಳ ಅಜ್ಜನ ಮನೆಯ ತಿಂಡಿ ಬಾ ಬಾ ಎಂದು ಕರೆಯುತ್ತಿತ್ತು.. ಹೊಟ್ಟೆಯ ಮೂಲೆ ಮೂಲೆಗೂ ತುರುಕಿಕೊಂಡು.. ಮಾಮೂಲಿಗಿಂತ ತುಸು ಹೆಚ್ಚೇ ತಿಂದೆವು.. 

ಸರ್ಜಿ ನಮಸ್ಕಾರ.. ನೀವು ಯಾರು ಅಂತ ನನಗೆ ಗೊತ್ತು.. "ಹಾವು ಕಚ್ಚಿದ ಪ್ರಸಂಗ" ಇವತ್ತು ನನ್ನನ್ನು ನಗೆಗಡಲಲ್ಲಿ ಮೀಯಿಸುತ್ತದೆ.. ಅರೆ ಇವರೇ ನಮ್ಮ ಪ್ರಕಾಶಣ್ಣ ಅರ್ಥಾತ್ ಪ್ರಕಾಶ್ ಹೆಗ್ಗಡೆಯವರ ಅಗ್ರಜ.  ಚೋಟೆ ಮೀಯ ಚೋಟೆ ಮಿಯ ಬಡೇ ಮಿಯ ಸುಬಾಹನಲ್ಲ ಎನ್ನುವ ಹಾಗೆ.. ಅಣ್ಣ ತಮ್ಮ ಇಬ್ಬರೂ ಒಂದೊಂದು ನಗೆ ಬಾಂಬುಗಳೇ...  ಮನೆಯವರನ್ನು ಭೇಟಿ ಮಾಡಿದ್ದು ಬಹಳ ಖುಷಿಯಾಗಿತ್ತು.. ಪ್ರಕಾಶಣ್ಣ ಅವರ ಅಣ್ಣ ಅತ್ತಿಗೆ.. ಅಕ್ಕ ಭಾವ ಆಹಾ ಒಂದು ಚಂದದ ಸಂಸಾರ.. ! 

ಅಲ್ಲಿಯೇ ಬಹಳ ಹೊತ್ತು ಇರಬೇಕು ಎನ್ನುವ ಹಂಬಲ ಇದ್ದರೂ.. ವಾಪಾಸ್ ಬೆಂಗಳೂರಿಗೆ ಬರುವ ಪ್ಲಾನ್ ಇದ್ದದರಿಂದ ಅವರ ಬಲವಂತದ ಮಧ್ಯೆಯೂ.. ಅವರಿಗೆ ತುಸು ಬೇಜಾರಾಗಿದ್ದರು ಸಮಾಧಾನ ಪಡಿಸಿ.. ಮತ್ತೆ ಮಾಯ್ನೋರಮನೆಯ ಕಡೆ ನಾಗಾಲೋಟದಿಂದ ಕಾರು ಓಡುತ್ತಿತ್ತು.. !

ಸಿದ್ದಾಪುರಕ್ಕೆ ಬಂದು.. ಕೊಂಚ ಹೊತ್ತು ವಿಶ್ರಮಿಸಿಕೊಂಡೆವು.. ಅಡಿಗೆ ಮನೆಯಿಂದ ಘಮ ಘಮ.. ಹೊಟ್ಟೆ ಚೂರು ಚೂರು ಏನಾದರೂ ಬೇಕು ಎಂದು ಅರಚುತ್ತಿತ್ತು... ಊಟ ರೆಡಿ ಅಣ್ಣಾ ಅಂದಾಗ.. !!!!!

ಸುಮಾರು ನಾಲ್ಕು ಘಂಟೆಗೆ ಹೊರಟೆವು... ಮೊದಲ ಗುರಿ ಇದ್ದದ್ದು ವರದ ಹಳ್ಳಿ ಅಥವಾ ಶ್ರೀಧರ ಸ್ವಾಮಿಗಳ ಆಶ್ರಮ.. ಇದರ ಮಧ್ಯೆ ಇಕ್ಕೇರಿಯ ದರ್ಶನ.. ಎರಡು ತರಾತುರಿಯಲ್ಲಿ ಮುಗಿಸಿ.. ಚಿಕಮಗಳೂರಿನತ್ತ ಓಡುತ್ತಿತ್ತು... 

ಅಣ್ಣಾ.. ಅಣ್ಣಾ.. ಕಣ್ಣು ಕೆಂಪಗೆ ಮಾಡಿಕೊಂಡು ಬಿಕ್ಕಳಿಸುತ್ತಿದ್ದಳು.. ಅಳಬೇಡ ಕಣೋ ಇನ್ನೊಮ್ಮೆ ಮತ್ತೆ ಹೋಗೋಣ.. ಒಂದೆರಡು ಮೂರುದಿನ ನಿಮ್ಮ ಮನೆಯಲ್ಲಿ ಇದ್ದು ಬಿಡ್ತೀನಿ.. ಎಲ್ಲೂ ಹೋಗೋದೇ ಬೇಡ .. ಆಯ್ತಾ!!!

ಏನೋ ಗೊತ್ತಿಲ್ಲ ಅಣ್ಣ.. ನಿಮ್ಮನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದೀನಿ.. ಸರಿ ಅಣ್ಣಾ ಸಿಗ್ತೀನಿ ಮತ್ತೆ ಬ್ಲಾಗ್.. ಫೇಸ್ ಬುಕ್, ಜಿಟಾಕ್.. ವ್ಹಾಟ್ಸಪ್.. ಅಣ್ಣ ಒಂದು ಹಗ್ ನಿಮಗೆ ಮತ್ತು ಪುಟ್ಟುಗೆ... 

ಸರಿ ಕಣೋ ಹೊರಡ್ತೀನಿ ಅಂದೇ!!!

ಕಣ್ಣಂಚಿನ ಆ ಮಾತಲ್ಲಿ ನೂರಾರು ಹೇಳಲಾಗದ ಭಾವಗಳು ನಿರೂಪಾಯವಾಗಿ ಸುಮ್ಮನೆ ಕೂತಿದ್ದವು.. 

ಅಣ್ಣಾ ಇನ್ನು ಮುಂದೆ ಪಾ ಎಂದು ಕರೆಯುತ್ತೇನೆ ಎಂದಳು.. ನೀನು ಹೇಗೆ ಕರೆದರೂ ಓಕೆ ಮಗಳೇ ಅಂದೇ.. 

ಸರಿ ಕಣೋ ಬೆಂಗಳೂರಿಗೆ ತಲುಪಿದ ಮೇಲೆ ಮೆಸೇಜ್ ಮಾಡ್ತೀನಿ.. 

ಪಾ ಮೆಸೇಜ್ ಬೇಡ ಕರೆ ಮಾಡಿ... ನಾ ನಿಮ್ಮ ಕರೆಗೆ ಕಾಯ್ತಾ ಇರ್ತೀನಿ.. 

****************************

ರೀ ಶ್ರೀ ರೀ ಶ್ರೀ ರೀ ಶ್ರೀ.. ಆಫೀಸ್ ಗೆ ಹೋಗೋಲ್ವ.. ಆಗಲೇ ಏಳು ಘಂಟೆ.. .. ಸುಮಾರು ಹನ್ನೆರಡು ಘಂಟೆ ಅಷ್ಟೊತ್ತಿಗೆ ಅಲ್ಲಿಗೆ ಬರುತ್ತೇವೆ.. ಹೋಗೋಣ.. ಈಗಲೇ ಕಾರಲ್ಲಿ ಲಗೇಜ್ ಹಾಕಿಬಿಡಿ... !

ಕಣ್ಣುಜ್ಜಿ ಕೊಂಡೆ... ಅರೆ ಇದೇನು.. ಹೋಗುವ ಮೊದಲೇ.. ಕನಸು ಕಂಡು ಬಿಟ್ಟೆನೆ... ಆಹಾ!!!

****************************
ಮತ್ತೆ ಚಡಪಡಿಕೆ ಚಡಪಡಿಕೆ..................................................!

Sunday, September 15, 2013

ಬೆಳ್ಳಿ ಮೋಡದ ಆಚೆಯಿಂದ ಮೂಡಿಬಂದ ಆಶಾಕಿರಣ....

"ಬಾರೋ ಬಾರಪ್ಪ... ಯಾಕೋ ಏನಾಯ್ತು!"

ನನ್ನ ಪ್ರೀತಿಯ ........ !

"ಶ್ರೀ ಯಾಕೋ ಈ ಜಾಗದಿಂದ ಬರೋಕೆ ಮನಸ್ಸೇ ಆಗ್ತಾ ಇಲ್ಲ.. ನೋಡು ಎದುರಿಗೆ ಕಾಣುವ ನೀರು..  ನೀರೋ.. ಅಥವಾ ಚಲನ ಚಿತ್ರ ಜಗತ್ತಿನ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಅವರನ್ನು ಹೃದಯ ಮಂದಿರದಲ್ಲಿಟ್ಟು ಪೂಜಿಸುತ್ತಿರುವ ಅವರ ಅಭಿಮಾನಿಗಳ ಆನಂದಭಾಷ್ಪವೋ.. ಅರಿವಾಗುತ್ತಿಲ್ಲ.. ಅದನ್ನು ದಾಟಲು ಬಹುಶಃ ಶ್ರೀ ಕೃಷ್ಣನನ್ನು ಹೊತ್ತು ಬಂದ ವಸುದೇವನಿಗೆ ದಾರಿ ಬಿಟ್ಟ ಯಮುನೆಯ ರೀತಿ ದಾರಿ ಬಿಟ್ಟರೆ ಮಾತ್ರ ನಾ ಬರಬಲ್ಲೆ..!"

ಈ ಮಾತುಗಳನ್ನು ನೀರಿನ ತೊರೆಯನ್ನು ದಾಟಲು ನಿಂತಾಗ ನನ್ನ ಪ್ರೀತಿಯ ಕಂದ ರಿಟ್ಜ್ ಕಾರು ಹೇಳಿದಂತೆ ಭಾಸವಾಯಿತು. ಮೈ ಕಂಪಿಸುತ್ತದೆ...  ಕಂಪಿಸಬಹುದು.... ಕಂಪಿಸಲೇಬೇಕು ಎನ್ನುವ ನೀತಿ ಅರಿವಾಗಿದ್ದು ಕಂಪಲಾಪುರದ ಶ್ರೀ ಮೋಹನ್ ಅವರ ಜೊತೆಯಲ್ಲಿ, ಚಿತ್ರ ಜಗತ್ತು ಕಂಡ ಶ್ರೇಷ್ಠ ನಿರ್ದೇಶಕ ಶ್ರೀ ಪುಟ್ಟಣ್ಣ ಕಣಗಾಲ್ ಹುಟ್ಟಿದ್ದರು ಎನ್ನಲಾಗುವ, ಒಂದು ತೋಟದ ಭಾಗವನ್ನು ನೋಡಿಕೊಂಡು ಬರುವಾಗ ಅನುಭವಿಸಿದ ಒಂದು ಅಸಾಧಾರಣ ಅನುಭವ!

ಆಸಕ್ತಿಯಿಂದ ವಿಷಯ ಹೇಳಲು ಬಂದ ಗ್ರಾಮಸ್ತರು 
"ಏನೂ.. ನಮ್ಮ ಪುಟ್ಟಣ್ಣನ ಬಗ್ಗೆ ಮಾಹಿತಿ ಬೇಕೇ.. ಬನ್ನಿ ಸರ್.. ಅವರು ನಡೆದಾಡಿದ, ಆಟವಾಡಿದ, ಹುಟ್ಟಿದ ತಾಣವನ್ನೆಲ್ಲ ತೋರಿಸುತ್ತೇನೆ" ಎಂದು ಹೆಮ್ಮೆಯಿಂದ ಬಂದ ಶ್ರೀಯುತರು ಹೇಳಿದ ಪ್ರತಿಮಾತುಗಳು ಮನದ ಪಟಲದಲ್ಲಿ ಪ್ರತಿಧ್ವನಿಸುತ್ತಿತ್ತು.
ಒಬ್ಬ ಅಭಿಜಾತ ನಿರ್ದೇಶಕನ ಬಗ್ಗೆ ಇವರೆಲ್ಲ ತೋರುತ್ತಿದ್ದ ಅಭಿಮಾನವನ್ನ  ನೋಡಿ ನನ್ನ ಕಣ್ಣುಗಳಲ್ಲಿ, ಹೃದಯದಲ್ಲಿ ಮುಂಗಾರು ಮಳೆಯ ಮೋಡಗಳು ಆವರಿಸಿಕೊಳ್ಳುತ್ತಿದ್ದವು.

"ನೋಡಿ ಸರ್ ಇಲ್ಲೇ.. ಈ ಜಾಗದಲ್ಲಿ ಒಂದು ಚಿಕ್ಕ ಮನೆಯಿತ್ತು.. ಇಲ್ಲೇ ನಮ್ಮ ಪುಟ್ಟಣ್ಣ ಹುಟ್ಟಿದ್ದು.. ನನಗೆ ಗೊತ್ತಿದ್ದ ವಿಷಯವನ್ನೆಲ್ಲ ಹೇಳಿದ ಮೇಲೆ ನನಗೆ ಆಗುತ್ತಿರುವ ಸಂತೋಷಕ್ಕೆ ನನ್ನ ಈ ನಗುವೇ ಸಾಕ್ಷಿ" ಎಂದರು ಈ ಮಹನೀಯರು.  ಚಿಕ್ಕ ಚೊಕ್ಕ ಮಾಹಿತಿ ಕೊಟ್ಟು ನಮ್ಮನ್ನು ಕಣಗಾಲ್ ಊರಿಗೆ ಬೀಳ್ಕೊಟ್ಟರು.

ಅವರಿಂದ ನಮ್ಮ ಊರಿಗೆ ಹೆಸರು ಬಂತು 
ಯಾಕೋ ಮೈ ಮನ ಸಣ್ಣಗೆ ಅದುರುತಿತ್ತು.

ಪುಟ್ಟಣ್ಣ ಹಾಗೂ ಅವರ ವಂಶಸ್ತರು ಬಾಳಿ ಬದುಕಿದ್ದ ಮನೆ

ಮೈ ಜುಮ್ ಎನ್ನಿಸುವಂತಹ ಚೌಕಟ್ಟಿನಲ್ಲಿ ನಾನು 
"ಗುರುಗಳೇ..  ಕಸ ತುಂಬಿಕೊಂಡು ಕಂಗೆಟ್ಟಿದ್ದ ಊರಿನ ಈ ದೇವಾಲಯದಲ್ಲಿ ಪುಟ್ಟಣ್ಣ ತಾನೇ ಪೊರಕೆ ತೆಗೆದುಕೊಂಡು ಬಂದು ಇಡಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ಊರಿನ ಜನರಿಗೆ ಬುದ್ದಿ ಮಾತು ಹೇಳಿದ್ದು ಇಲ್ಲೇ" ಎಂದು ಒಂದು ದೇವಾಲಯವನ್ನು ತೋರಿದರು ನಮ್ಮ ಮೋಹನ್ ಸರ್.

ಪುಟ್ಟಣ್ಣನವರ ಮನೆಯ ಬೀದಿ 

ಪುಟ್ಟಣ್ಣನವರು ನೆಡೆದಾಡಿರಬಹುದಾದ ಈ ಭೂ ಮಾತೆಯನ್ನು ಒಮ್ಮೆ ಸ್ಪರ್ಶಿಸುವ ಮನಸ್ಸಾಯಿತು. ಮಳೆ ಬಂದು ರಾಡಿಯಾಗಿದ್ದ ನೆಲವನ್ನೊಮ್ಮೆ ಕೈಯಿಂದ ಮುಟ್ಟಿ ಆ ಮಹಾನ್ ಚೇತನಕ್ಕೆ ಒಮ್ಮೆ ಮನದಲ್ಲಿಯೇ ನಮನ ಸಲ್ಲಿಸಿದೆ.

ಸರ್ ಇದೆ ಮನೆಯಲ್ಲಿ ಸರ್ ಪುಟ್ಟಣ್ಣ ಬೆಳೆದದ್ದು.. ಎಂದು ಆ ಮನೆಯನ್ನು ತೋರಿದರು ಶ್ರೀ ಚಂದ್ರಶೇಖರ್.. "ಇಲ್ಲೇ ಕ್ಯಾಮೆರಾ ಇಟ್ಟು ಆ ಗುಡ್ದವನ್ನೆಲ್ಲ ಚಿತ್ರದಲ್ಲಿ ತೋರಿಸುತ್ತೇನೆ ಎಂದು ಆ ಊರಿನ ಜನತೆಗೆ ಹೇಳಿದ್ದ ಶ್ರೀ ಪುಟ್ಟಣ್ಣ ಇಂದು ಬರಿ ನೆನಪು ಮಾತ್ರ.
ಪುಟ್ಟಣ್ಣನವರ ಬಗ್ಗೆ ಅಪಾರ ಮಾಹಿತಿ ಇರುವ ಮೋಹನ್ ಸರ್ ಹಾಗೂ ಚಂದ್ರಶೇಖರ್ ಸರ್ 

ಇನ್ನೂ ಇಲ್ಲೇ ಸ್ವಲ್ಪ ಹೊತ್ತು ಕಣಗಾಲ್ ಊರಿನಲ್ಲಿ ಇರಬೇಕೆಂದು ಮನಸ್ಸು ಬಯಸಿದ್ದರೂ.. ನನ್ನ ಕಾರು ಹೇಳುತ್ತಿತ್ತು "ಶ್ರೀ ಬೇಗ ಬಾ ಮುಂದೆ ಕಾದಿದೆ ಒಂದು ಅಪರೂಪದ ದೃಶ್ಯ"

ಸುಂದರ ಪರಿಸರದಲ್ಲಿ ಕಾರು ಓಡುತ್ತಿತ್ತು.. ಸುತ್ತ ಮುತ್ತಲ ಪರಿಸರ ನೋಡುತ್ತಾ ಪುಟ್ಟಣ್ಣ ಯಾಕೆ ಪ್ರಕೃತಿ ಮಡಿಲಲ್ಲಿ ಹೆಚ್ಚಿನ ಚಿತ್ರಿಕರಣ ಮಾಡುತ್ತಿದ್ದರು ಎನ್ನುವ ಕುತೂಹಲದ ಪ್ರಶ್ನೆಗೆ....  ಮನ ಮಂದಿರದಲ್ಲಿ ಉತ್ತರ ಸಿಗುತ್ತಿತ್ತು.

ಪ್ರತಿಭೆ ಎಲ್ಲಿದ್ದರೂ ಬೆಳಕಿಗೆ  ಬರುತ್ತದೆ 

"ಸರ್ ಮಲ್ಲರಾಜಪುರದಲ್ಲಿ ಪುಟ್ಟಣ್ಣ ಅವರ ತಮ್ಮ ಇದ್ದಾರೆ ಅವರನ್ನು ಭೇಟಿ ಮಾಡಿ" ಎಂದರು ಪುಟ್ಟಣ್ಣ ಕಣಗಾಲ್ ಇದ್ದ ಮನೆಯ ನೆರೆಹೊರೆಯವರು.

ಇನ್ನು ತಡವೇಕೆ ಎಂದು ಒಮ್ಮೆ "MS (Maruti Suzuki) " ಕಡೆ ನೋಡಿದೆ.. MS ಕಣ್ಣು ಹೊಡೆದು ನಡಿ "SM" (Srikanth Manjunath) ಎಂದ.. ಭರ್ರನೆ ಪ್ರಕೃತಿ ಮಡಿಲಲ್ಲಿ ಸಾಗಿತ್ತು.. ಸುಮಾರು ಮುಸ್ಸಂಜೆಯ ಸಮಯ.. ಅವರಿವರನ್ನು ಕೇಳುತ್ತಾ ಒಂದು ಮನೆಯ ಮುಂದೆ ನಿಂತೆವು. ಅಂತು ಇಂತೂ ಮುಂದೆ ನಡೆಯಬೇಕಿದ್ದ ಒಂದು ಅಪರೂಪದ ರೋಮಾಂಚಕಾರಿ
ಸನ್ನಿವೇಶಕ್ಕೆ ಮನಸ್ಸು ಸಿದ್ಧವಾಗಿತ್ತು

ಸರ್ ನಾನೇ ಪುಟ್ಟಣ್ಣ ಕಣಗಾಲ್ ಅವರ  ತಮ್ಮ ನರಸಿಂಹ ಅಂತ ಹೇಳುತ್ತಾ ನಮ್ಮ ಕಡೆ ಕೈಮುಗಿದರು. ನಮಗೆ ದೇವರನ್ನೇ ಕಂಡಷ್ಟು ಸಂತಸ.
ನಾನೇ ಪುಟ್ಟಣ್ಣ ಕಣಗಾಲ್ ಅವರ  ತಮ್ಮ ನರಸಿಂಹ
ನಾವು ಕೈ ಮುಗಿದೆವು.ಸುಮಾರು ಎಪ್ಪತ್ತೊಂದು ವಸಂತದಲ್ಲಿ ಅನೇಕ ಏರು ಹಾದಿ.. ಇಳಿಜಾರು ಹಾದಿಗಳನ್ನೂ ಕಂಡಿದ್ದರೂ ಕುಗ್ಗದ ಜೀವನೋತ್ಸಾಹ, ಎದೆ ತಟ್ಟಿ ನಾ ಸ್ವಾಭಿಮಾನಿ ಎಂದು ಹೇಳಬೇಕಾಗೆ ಇಲ್ಲದ ಸಾಭಿಮಾನ, ಅಭಿಮಾನ ತುಂಬಿದ ಕಣ್ಣುಗಳು, ಹೇಳುವ ವಿಷಯಗಳಲ್ಲಿ ನಿಖರತೆ,  ಎಲ್ಲವೂ ನಮ್ಮ ಮನದಲ್ಲಿದ್ದ ಪುಟ್ಟಣ್ಣ ಕಣಗಾಲ್  ಎಂಬ ಒಂದು ಸುಂದರ ಮೂರ್ತಿಗೆ ಆನಂದ ಭಾಷ್ಪದಲ್ಲೇ ಅಭಿಷೇಕ ಮಾಡಲು ಮಾನಸಿಕವಾಗಿ ಸಿದ್ಧಪಡಿಸಲು ತಾಕತ್ ಇರುವ ಒಂದು ಸುಂದರ ಮನಸ್ಸಿನ ಸುಮಧುರ ಜೀವಿಯ ಮುಂದೆ ಆಸೀನರಾದೆವು. ಸಹಾಸ್ರಾಕ್ಷ  ಇಂದ್ರನೇ ಬಂದಿದ್ದರೂ ತನಗೆ ಸಿಕ್ಕ ಶಾಪವನ್ನು ಸಹಸ್ರ ಕಿವಿಗಳಿಗೆ ಬದಲಿಸಿಕೊಳ್ಳಲು ಪ್ರೇರೇಪಣೆ ನೀಡುವ ಸನ್ನಿವೇಶ.

ಧನ್ಯನಾದೆ ಎಂದು ಭಾವುಕರಾದ ಬಾಲೂ ಸರ್ 
ಪುಟ್ಟಣ್ಣ ಅವರ ಸಹೋದರರಾದ ಶ್ರೀ ನರಸಿಂಹನವರು ಸುಮಾರು ಎರಡು ಘಂಟೆಗಳ ಕಾಲ ನಮ್ಮನ್ನು ಅಕ್ಷರಶಃ ೪೦ ವರ್ಷಗಳಷ್ಟು ಹಿಂದಕ್ಕೆ ಅನಾಮತ್ತಾಗಿ ಕರೆದೊಯ್ದಿದ್ದರು. ಪುಟ್ಟಣ್ಣ ಅವರ ಆರಂಭಿಕ ಸಾಹಸಮಯ, ಯಾತನಮಯ ಬದುಕು, ಶ್ರದ್ಧೆ, ನಿಷ್ಠೆ, ನಿರ್ದೇಶನ ಮಾಡಲು ಸುಮಾರು ೨೩ ವರ್ಷಗಳಷ್ಟು ಕಾಲ ಪಟ್ಟ ಶ್ರಮ, ಬೆಳ್ಳಿ ಮೋಡ ಚಿತ್ರ ಮಾಡಲು ಪಟ್ಟ ಪಾಡು, ಎಲ್ಲ ದೃಶ್ಯಗಳನ್ನು ಕಾಲನ ವಾಹನದಲ್ಲಿ ಕೂತು ಒಮ್ಮೆ ಹಿಂದಕ್ಕೆ ಹೋಗಿ ಅಲ್ಲಿಯೇ ನಿಂತು ಕಣ್ಣಾರೆ ನೋಡಿದಷ್ಟು ನಿಖರತೆಯಿಂದ ವರ್ಣಿಸಿದರು.

ನನ್ನ ಜೀವನದಲ್ಲಿ ಚಿನ್ನದ ಚೌಕಟ್ಟಿನಲ್ಲಿಲ್ಲಿಡಬೇಕಾದ ಚಿತ್ರ 

ಅವರ ನಿರರ್ಗಳ ಮಾತು ಮುಗಿದಾಗ

"ತುಲಾ ಮಾಸೇತು ಕಾವೇರಿ
ಸರ್ವಾತೀರ್ಥಾಶ್ರಿತಾ  ನದಿ
ಪಂಚ ಪಾತಕ ಸಂಹರ್ತ್ರಿ ವಾಜಿನೇದ ಫಲಪ್ರದ
ಭಕ್ತಾನುಕಂಪೇ ಮುನಿಭಾಗ್ಯ  ಲಕ್ಷ್ಮಿ
ನಿತ್ಯೆ  ಜಗನ್ಮಂಗಳದಾನಶೀಲೇ
ನಿರಂಜನೆ  ದಕ್ಷಿಣದೇಶ  ಗಂಗೆ
ಕಾವೇರಿ ಕಾವೇರಿ ಮಮ ಪ್ರಸೀದ"   

ಎಂದು ಕಣ್ಣಲ್ಲಿ ಹರಿಯುತ್ತಿದ್ದಳು. ಪುಟ್ಟಣ್ಣ ಮತ್ತು ಸಹೋದರರರು ಬಲು ಪ್ರೀತಿ ಗೌರವ ತೋರುವ ಕಾವೇರಿ ನದಿ ನನ್ನ ಕಣ್ಣಲ್ಲಿ ಕಂಡದ್ದು ಅನುಭವಿಸಿದ ಮೇಲೆ ನನಗೆ ನಾನೇ ಧನ್ಯ ಎಂದಿತು ಮನಸ್ಸು.

ಬ್ಲಾಗ್ ಲೋಕ ಪುಟ್ಟಣ್ಣನವರ ಸಹೋದರ ಅವರ ಜೊತೆಯಲ್ಲಿ 

ನಾನು ನಾನಾಗಿರಲಿಲ್ಲ.. ಬಾಲೂ ಸರ್, ಮೋಹನ್ ಸರ್,  ಅಲೆಮಾರಿಗಳು ಗುಂಪಿನ ಪ್ರತಿ ಪ್ರವಾಸದಲ್ಲೂ ನನ್ನ ಜೊತೆ ಕೈಜೋಡಿಸುವ ಸಂದೀಪ್ ಎಲ್ಲರೂ ಅವರವರ ಅಭಿಪ್ರಾಯ, ಅನಿಸಿಕೆ ಹೇಳುತ್ತಿದ್ದರು, ನನ್ನ ಮನಸ್ಸು ಇನ್ನು ಎಪ್ಪತ್ತರ ದಶಕದಲ್ಲಿ ಪುಟ್ಟಣ್ಣ ಅವರ ಸುತ್ತ ಮುತ್ತಲೇ ಓಡಾಡುತ್ತಿತ್ತು.

"ಗುರೂಜಿ ಕಂ ಬ್ಯಾಕ್ ಪ್ಲೀಸ್.. ಕಂ ಬ್ಯಾಕ್ ಪ್ಲೀಸ್" ಎಂದರು ಬಾಲೂ ಸರ್..

ನಿಧಾನವಾಗಿ ಮನಸ್ಸು ತಹಬದಿಗೆ ಬಂದು ಸಂಗೀತ ಗ್ರಾಮ ರುದ್ರ ಪಟ್ಟಣಕ್ಕೆ ಹೊರಟಿತು. ಅರ್ಚಕರಿಗೆ ಕರೆ ಮಾಡಿ ಕಾಯುತ್ತಾ ಕುಳಿತೆವು. ಕೆಲ ಸಮಯದ ನಂತರ ಬಾಗಿಲನ್ನು ಸರಿಸಿ ಒಳಹೋದಾಗ ಕಂಡದ್ದು ಬೃಹದಾಕರವಾದ ವೀಣಾ ಮಂದಿರ.. ಕಟ್ಟಡ ವಿನ್ಯಾಸಗಾರರ ಚಾಕಚಕ್ಯತೆಯ ಕರಗಳಲ್ಲಿ ಅರಳಿದ ಸುಂದರ ಭವನ ಈ ವೀಣಾ ಮಂದಿರ. ವೀಣೆಯ ಆಕೃತಿಯಲ್ಲಿ ನಿರ್ಮಿತಗೊಂಡಿರುವ ಈ ಮಂದಿರದಲ್ಲಿ ಸಂಗೀತವನ್ನೇ ಉಸಿರಾಗಿಸಿಕೊಂಡ ದಾಸಶ್ರೇಷ್ಟರ ಮೂರ್ತಿಯ ಸುಂದರ ಕೆತ್ತನೆಗಳು ಕಂಡು ಬರುತ್ತವೆ. ನಡುವೆ ಸಂಗೀತ ಅಧಿದೇವತೆ ಶಾರದೆಯ ಸುಂದರ ಮೂರ್ತಿ. ಪ್ರತಿ ಮೂರ್ತಿಯ ಮುಂದೆ ನಿಂತು ನಮಸ್ಕರಿಸಿದಾಗ ಮುದ್ರಿತ ಧ್ವನಿಯ ಮೂಲಕ ಆ ಸಂಗೀತ ಸಾಧಕರ ಸ್ಥೂಲ ಪರಿಚಯ ನಮಗಾಗುತ್ತದೆ. ಸಂಗೀತದಲ್ಲಿ ಮಂತ್ರ ಹೇಳಿ ಪೂಜೆಸಲ್ಲಿಸುವ ವಿಶಿಷ್ಟ ವಿಧಾನವಷ್ಟೇ ಅಲ್ಲದೆ ಈ ಇಡಿ ಗ್ರಾಮವೇ ಸಂಗೀತ ಗ್ರಾಮ ಎಂದು ಹೆಸರಾಗಿದೆ. ಮನೆ ಮನದಲ್ಲೂ ಸಂಗೀತವನ್ನೇ ಉಸಿರಾಗಿಸಿಕೊಂಡ ಈ ಗ್ರಾಮ ಕರುನಾಡಿನ ವಿಶಿಷ್ಟ ಕಾಣಿಕೆ ಎನ್ನಬಹುದು.

ರುದ್ರಪಟ್ಟಣ ಸುಂದರ ಮಂದಿರ 

ವೀಣಾ ಭವನ 

ಮೋಹನ್ ಸರ್ ಅವರ ಮನೆಯಲ್ಲಿ ರಾತಿ ಭೋಜನಕ್ಕೆ ಸಿದ್ಧತೆಯಾಗಿದ್ದರಿಂದ ಪಿರಿಯಪಟ್ಟಣಕ್ಕೆ ಬಂದು, ಅವರ ತುಂಬು ಸಂಸಾರದ ಜೊತೆಯಲ್ಲಿ ಕೆಲವು ಆತ್ಮೀಯ ಕ್ಷಣಗಳನ್ನು ಕಳೆದು ಭೂರಿ ಭೋಜನವನ್ನು ಉಂಡು ಬಾಲೂ ಸರ್ ಅವರ ಮೈಸೂರಿನ ಮನೆಗೆ ತಲುಪಿದಾಗ ಘಂಟೆ ರಾತ್ರಿ ೧೧.೩೦ ಎಂದು ಕಿರುಚಿತು. ಹಾಸಿಗೆಗೆ ಹಾಗೆ ತಲೆಕೊಟ್ಟು ಒಮ್ಮೆ rewind ಗುಂಡಿಯನ್ನು ಒತ್ತಿದೆ.

"ಶ್ರೀಕಾಂತ್ ... ನಾನು ರೆಡಿ..ಹೊರಡೋಣ" ಎಂದರು ಸಂದೀಪ್. ಮೈಸೂರು ರಸ್ತೆಯ ದೀಪಾಂಜಲಿ ನಗರದ ಬಳಿಯಿಂದ ಸಂದೀಪ್ ಅವರನ್ನು ಕರೆದುಕೊಂಡು ಮೈಸೂರಿಗೆ ಧಾವಿಸಿತು ನನ್ನ ಮೆಚ್ಚಿನ ರಿಟ್ಜ್. ದಾರಿಯಲ್ಲಿ ಮದ್ದೂರಿನ ಕದಂಬಂನಲ್ಲಿ  ಉಪಹಾರ ಮುಗಿಸಿಕೊಂಡು ಮೈಸೂರಿಗೆ ಬಂದಾಗ ಘಂಟೆ ಬೆಳಿಗ್ಗೆ ಸುಮಾರು ೯.೩೦.

ಬಾಲೂ ಸರ್ ಅವರ ತಾಯಿ, ಮಡದಿ ಅವರ ಜೊತೆಯಲ್ಲಿ ಉ. ಕು. ಸಾಂ ಮುಗಿಸಿ, ಕಾಫಿ ಹೀರಿ ಪಿರಿಯಪಟ್ಟಣದಲ್ಲಿರುವ
ಶ್ರೀ ಕಂಪಲಾಪುರ ಮೋಹನ್ ಅವರ ಮನೆಗೆ ಬಂದೆವು. ಆಗ ಸಮಯ ಸುಮಾರು ೧೧.೩೦.

ಮೋಹನ್ ಸರ್ ಅವರ ಪರಿಚಯ, ಅವರ ದಾರಿ ದೀಪ ಪತ್ರಿಕೆಯ ವಾರ್ಷಿಕೋತ್ಸವ, ಪುಟ್ಟಣ್ಣನವರ ಜೊತೆಯಲ್ಲಿನ ಒಡನಾಟ, ಮೋಹನ್ ಸರ್ ಅವರಿಗೆ ಬಂದ ಪ್ರಶಸ್ತಿಗಳು, ಅಭಿಮಾನ ಪತ್ರಗಳ ಕಡೆ ಕಣ್ಣು ಹಾಯಿಸಿ ಇಂತಹ ಸುಮಧುರ ಮನಸ್ಸಿನ ಸಾಧಕರ ಪರಿಚಯ ಮಾಡಿಕೊಟ್ಟ ಬಾಲೂ ಸರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದೆವು. ಯಾವ ಫಲಾಫಲಗಳ ನಿರೀಕ್ಷೆಯಿಲ್ಲದೆ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಹಾಗು ಕವಿಗಳನ್ನು ಪ್ರೋತ್ಸಾಹಿಸುವ, ಕನ್ನಡ ಬೆಳೆಸುವ, ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡು ಸಾಗುತ್ತಿರುವ ಮನೆ ಮನೆಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ ತಿಂಗಳಿಗೆ ಒಂದರಂತೆ ಸುಮಾರು ೧೭೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ದಾಟಿ ಮುಂದುವರೆಯುತ್ತಿರುವ ಇವರ ಸಾಧನೆಗೆ ನಮ್ಮ ಅನಂತ ನಮಸ್ಕಾರಗಳು. 

ಸರಳ ವಿರಳ ಜೀವಿ ಪುಟ್ಟಣ್ಣ ನವರ ಒಡನಾಟದ ಪುಣ್ಯ ಕಂಡ ಶ್ರೀ ಕಂಪಲಾಪುರ ಮೋಹನ್ 

ಮೋಹನ್ ಸರ್ ಜೊತೆಯಲ್ಲಿ ಬ್ಲಾಗ್ ಲೋಕದ ಮಂದಿ 
ನಮಗೆ ಇನ್ನೊಂದು ಆಶ್ಚರ್ಯ ಕಾದಿದ್ದು....  ನಮಗೆ ಅರಿವಿಗೆ ಬರಲೇ ಇಲ್ಲ. ಸರ್ಕಾರಿ ಪದವಿ ಪೂರ್ವ ಶಾಲೆಯಲ್ಲಿ NSS ವಿಭಾಗದ ವಾರ್ಷಿಕೋತ್ಸವದ ಸಮಾರಂಭಕ್ಕೆ ನಾವು ಹೋದೇವು. ಮೋಹನ್ ಸರ್ ಅವರನ್ನು ಆಹ್ವಾನಿಸಿದ್ದರು. ಹೂವಿನ ಜೊತೆಯಲ್ಲಿ ನಾರು ಸ್ವರ್ಗಕ್ಕೆ ಎನ್ನುವ ಹಾಗೆ ನಮಗೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶಮಾಡಿಕೊಟ್ಟು, ವಿಧ್ಯಾರ್ಥಿನಿಯರೇ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಈ ಸುಂದರ ಕಾರ್ಯಕ್ರಮದಲ್ಲಿ ಕೆಲ ಸಮಯ ಕಳೆದದ್ದು ನಿಜಕ್ಕೂ ಒಂದು ಅನರ್ಘ್ಯ ಅನುಭವ.  ಸುಂದರ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದ ಶ್ರೀ ಮೋಹನ್ ಅವರು, ಉದ್ಘಾಟನೆ ಮಾಡಿದ ಬಾಲೂ ಸರ್. ವಿಜಯವಾಣಿ ಪತ್ರಿಕೆಯ ಪತ್ರಕರ್ತರು, ಪ್ರಾಂಶುಪಾಲರು, ಉಪಾಧ್ಯಾಯರು ಉಪಸ್ಥಿತ ಸಭೆಯಲ್ಲಿ ಮಾತಾಡಿದ, ಹಾಡಿದ ವಿಧ್ಯಾರ್ಥಿನಿಯರು ಅಭಿನಂದನೆಗೆ ಅರ್ಹರು. ಅಲ್ಲಿಂದ ಬೀಳ್ಕೊಡುವ ಮುನ್ನ ರುಚಿಯಾದ ಪಲಾವ್ ನೀಡಿದ ಕಾರ್ಯಕ್ರಮ ರೂವಾರಿಗಳಿಗೆ ಎಷ್ಟು ಧನ್ಯವಾದಗಳನ್ನು ಸಲ್ಲಿಸಿದರು ಕಡಿಮೆಯೇ. 

ನಗಬೇಡಿ ಮೋಹನ್ ಸರ್ ... ಏನ್ ಸರ್ ಹೀಗೆ ಮಾಡಿಬಿಟ್ರಿ ..! 

ಸುಂದರ ಸಮಾರಂಭ 

ಶಾಲೆಯ ಆವರಣ.. ಇಷ್ಟವಾಯಿತು 

ಅಲ್ಲಿಂದ ಮುಂದೆ ಹೋರಟ ನಾವು ಬಂದದ್ದು ರಾಜಬಿಳಗುಲಿ ಎಂಬ ಗ್ರಾಮಕ್ಕೆ. ಪುಟ್ಟಣ್ಣ ಅವರ ತಾಯಿಯ ತವರೂರು. ಇಲ್ಲಿಯೇ ಪುಟ್ಟಣ್ಣನವರ ಸಹೋದರ ಕಣಗಾಲ್ ಪ್ರಭಾಕರ ಶಾಸ್ತ್ರಿ ಹುಟ್ಟಿದ್ದು ಎನ್ನಲಾಗುತ್ತದೆ. ಅಲ್ಲಿಂದ ಮುಂದೆ ಹೊರಟ ನಮಗೆ ಸಿಕ್ಕದ್ದು ಇನ್ನೊಬ್ಬ ಸಾಧಕರ ಸಮಾಗಮ. 
ಸಾಧಕ ಶ್ರೀ ಲಕ್ಶ್ಮಣ ಮತ್ತು ಅವರ ನೆಚ್ಚಿನ ಮೋಹನ್ ಸರ್ 
ಹಳ್ಳಿಯಲ್ಲಿ ಇದ್ದು ಕನ್ನಡದಲ್ಲಿ ಎಂ ಎ ಮುಗಿಸಿ ಆರ್ಥಿಕ ಶಕ್ತಿ ಕೊಡುವ ಯಾವ ಉದ್ಯೋಗವನ್ನು ಅರಸದೆ ಸುತ್ತ ಮುತ್ತಲ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎನ್ನುವ ಅಭಿಲಾಷೆಯಿಂದ ಪ್ರಾರಂಭಿಸಿದ ಶಾಲೆಯಲ್ಲಿ ಇಂದು ಸುಮಾರು ೬೦೦ ಮಕ್ಕಳು ಓದುತ್ತಿದ್ದಾರೆ. ಜೊತೆಗೆ ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ನೂರು ಪ್ರತಿಶತ ಉತ್ತಿರ್ಣ ಶ್ರೇಣಿ ಹೊಂದಿರುವುದು ಈ ಶಾಲೆಯ ಹೆಗ್ಗಳಿಕೆ ಎನ್ನಬಹುದು. ಸರಳ ವಿರಳ ಜೀವಿ ಶ್ರೀ ಲಕ್ಷ್ಮಣ ಅವರಿಗೆ ನಮ್ಮೆಲ್ಲರ ಕಡೆಯಿಂದ ಅಭಿನಂದನೆಗಳನ್ನು ಸಲ್ಲಿಸಿ ಕಣಗಾಲ್ ಕಡೆಗೆ ದೌಡಾಯಿಸಿದೆವು. 
ಶ್ರೀ ಲಕ್ಷ್ಮಣ ಅವರ ಶಾಲೆ 

ಶ್ರೀ ಲಕ್ಷ್ಮಣ ಅವರ ಶಾಲೆ 

ಮನಸ್ಸು "ನೋಡು ಶ್ರೀ.. rewind ಟೇಪ್ ಮುಗಿದಿದೆ... ಇಲ್ಲಿಂದ ಮುಂದೆ ಹೇಳಬೇಕಾದ ವಿಷಯವನ್ನು ಈ ಲೇಖನದ ಆರಂಭದಲ್ಲೇ ಹೇಳಿದ್ದೇನೆ.. ಇನ್ನೊಮ್ಮೆ ಕಂಪ್ಯೂಟರಿನ ಆ ಇಲಿಯನ್ನು ಮೇಲಕ್ಕೆ ಕೊಂಡೊಯ್ದರೆ ಮತ್ತೆ ಮೊದಲಿಂದ ವಿಷಯ ಅರಿವಾಗುತ್ತೆ" ಎಂದು ಹೇಳಿತು.  

ಮುಂಜಾನೆ ಕಾರಿನ ಹತ್ತಿರ ಬಂದು ನಿಂತೇ.. ಕುಕ್ಕ್ ಕುಕ್ಕ್ ಎಂದು ಸದ್ದು ಮಾಡುತ್ತಾ ಬಾಗಿಲನ್ನು ತೆರೆದು ದಂತಪಂಕ್ತಿತೋರಿಸಿತು. "ಶ್ರೀ ಏನೇ ಹೇಳು ಈ ಪ್ರವಾಸ ನನ್ನ ಮನಪಟಲದಲ್ಲಿ ಉಳಿಯಲು ಬೇಕಾದಷ್ಟು ಕಾರಣಗಳಿವೆ.. ನೋಡಿಲ್ಲೇ ಇಲ್ಲೇ dashboard ನಲ್ಲಿ ಬರೆದಿದ್ದೇನೆ ಎಂದಿತು. ನಾನು ಕುತೂಹಲದಿಂದ ಇಣುಕಿ ನೋಡಿದೆ.. ಹಲ್ಲು ಬಿಟ್ಟೆ.. ಸ್ಟೀರಿಂಗ್ ಅನ್ನು ಗಟ್ಟಿಯಾಗಿ ತಬ್ಬಿಕೊಂಡು.. ಕಾರಿಗೆ ಒಂದು ಸುತ್ತು ಬಂದು.... ಒಂದು ಸಿಹಿ ನಗೆಯನ್ನು ಬೀರಿದೆ.... ಒಂದು ಬಾರಿ ಕಣ್ಣು ಮಿಟುಕಿಸಿ ನಮ್ಮನ್ನು ಕರೆದೊಯ್ದು ಬಂದ ಕಾರು ಮತ್ತೆ ನಿಂತದ್ದು ಬೆಂಗಳೂರಿನ ವಿಜಯನಗರದಲ್ಲಿ... 

ಕಾರಿನ ಡ್ಯಾಶ್ ಬೋರ್ಡ್ನಲ್ಲಿ ಕಂಡ ವಿಷಯಗಳು :-

೧. ಶ್ರೀ ಪುಟ್ಟಣ್ಣ ನಭೂತೋ ನಭವಿಷ್ಯತಿ 

ಶ್ರೀ ಪುಟ್ಟಣ್ಣ ನಭೂತೋ ನಭವಿಷ್ಯತಿ 
೨. ಶ್ರೀ ಕಂಪಲಾಪುರ ಮೋಹನ್ ಅವರ ಆಸಕ್ತಿ, ತನಗೆ ಗೊತ್ತಿರುವ ವಿಚಾರವನ್ನು ಇತರರಿಗೆ ತಿಳಿಸುವ ತವಕ ಅಭಿನಂದನೀಯ 
೩. ಶ್ರೀ ಲಕ್ಷ್ಮಣ ಅವರ ಶಿಕ್ಷಣ ಕ್ಷೇತ್ರದ ಕ್ರಾಂತಿಕಾರಕ ದಾಪುಗಾಲು ಮತ್ತು ಪರಿಶ್ರಮ
೪. ಶ್ರೀ ನರಸಿಂಹ ಶಾಸ್ತ್ರಿಯವರ ಕುಗ್ಗದ ಜೀವನೋತ್ಸಾಹ, ವಿಚಾರಗಳನ್ನು ಹೇಳುವಲ್ಲಿ ನಿಖರತೆ, ಕರಾರುವಾಕ್ಕಾಗಿ, ಮತ್ತು ಆಸಕ್ತಿದಾಯಕವಾಗಿ ವಾಸ್ತವಿಕ ಘಟನೆಗಳನ್ನು ಹೇಳುವ ಶೈಲಿ 
೫. ಈ ಇಡಿ ಕಾರ್ಯಕ್ರಮದ ರೂವಾರಿ ಬಾಲೂ ಸರ್ ಅವರ ಸರಳತೆ 
೬. ಶ್ರೀಕಾಂತ್ ನೀವು ಯಾವುದೇ ಪ್ರವಾಸಕ್ಕೆ ಕರೆಯಿರಿ ನನ್ನದು ಡೀಫಾಲ್ಟ್ ಆನ್ಸರ್ ಎನ್ನುತ್ತಾ .. ಇದು ಸೇರಿ ಅಲೆಮಾರಿಗಳು ತಂಡದ ಅವಿರತ ೨೬ನೆ ಪ್ರವಾಸಕ್ಕೆ ಸಂದೀಪ್ ನನ್ನ ಜೊತೆಯಲ್ಲಿ ಕೈಗೂಡಿಸಿದ್ದು
೭. ಈ  ಲೇಖನವನ್ನು ಇ(ಕ)ಷ್ಟ ಪಟ್ಟು ಓದುವ ಎಲ್ಲಾ ನನ್ನ ಆತ್ಮೀಯ ಓದುಗರಿಗೆ ನನ್ನ ಧನ್ಯವಾದಗಳು. 

Wednesday, April 3, 2013

ಹಾಸನದ ಬಳಿಯ ಹಿನ್ನೀರಿನಲ್ಲಿ ಮುಳುಗೇಳುವ ಶೆಟ್ಟಿಹಳ್ಳಿ ಚರ್ಚು!

ಸನಾದಿ ಅಪ್ಪಣ್ಣ ಚಿತ್ರದಲ್ಲಿ ಜಯಪ್ರದ.. ಅಣ್ಣಾವ್ರ (ಅಪ್ಪಣ್ಣ) ಸನಾದಿ ನಾದಕ್ಕೆ ನೃತ್ಯ ಮಾಡಬೇಕು ಎಂದು ಆಸೆ  ಇಟ್ಟುಕೊಂಡಿರುತ್ತಾರೆ. ಆದರೆ ಅದು ಸಾಧ್ಯವಾಗೋಲ್ಲ.. ಹೇಗಾದರೂ ಸರಿ ಅದನ್ನು ಸಾಧಿಸಬೇಕು ಎಂದು ಸ್ವಲ್ಪ ಬುದ್ಧಿವಂತಿಕೆಯಿಂದ ಸನಾದಿ ಹಿಡಿಯಲೂ ಕೂಡ ಬರದ ಬಾಲಣ್ಣ ಅವರನ್ನು ಕರೆಸಿ ಕಾರ್ಯಕ್ರಮ ಸಿದ್ಧಪಡಿಸುತ್ತಾರೆ. ಆ ಊರಿನ ಜನಕ್ಕೆ ಸನಾದಿ ಅಂದ್ರೆ ಅಪ್ಪಣ್ಣ... ಅಪ್ಪಣ್ಣ ಅಂದ್ರೆ ಸನಾದಿ.. ಹಾಗಾಗಿ ಬಾಲಣ್ಣ ಅವರ ಸನಾದಿ ನಾದ ಕೇಳುತ್ತಲೇ ಅಪಶೃತಿ ಅಪಶೃತಿ ಎಂದು ಗಲಾಟೆ ಶುರು ಮಾಡುತ್ತಾರೆ... ಕೋಪಗೊಳ್ಳುವ ಬಾಲಣ್ಣ ಇದು ಅಪಶೃತಿ ಅಲ್ಲ ಕಣ್ರೋ.. ಇದು ಅಪರೂಪದ ಶ್ರುತಿ ಎನ್ನುತ್ತಾರೆ.... !


ಒಂದು ಕಣ್ಣಿನಲ್ಲೇ ಪ್ರಪಂಚ ತೋರುವ 
ಹಾಗೆಯೇ ಕೆಲವೊಂದು ಕಟ್ಟಡಗಳು, ಸ್ಮಾರಕಗಳು ಯಾವುದೋ ಒಂದು ಉದ್ದೇಶದಲ್ಲಿ ಕಟ್ಟಿ ನಂತರ ಇನ್ನ್ಯಾವುದೋ ಯೋಜನೆಗಳಿಗೆ ಬಲಿಯಾಗಿ  ಅಪಶೃತಿಯಾಗಿ...  ಅಪರೂಪದ ವಸ್ತುಗಳು ಎನ್ನುವ ಹಣೆ ಪಟ್ಟಿ ಹೊತ್ತುಬಿಡುತ್ತವೆ.. ಅಂತಹ ಒಂದು ಕಟ್ಟಡ ಕರ್ನಾಟಕದ ಹಾಸನ ಬಳಿಯ ಗೊರೂರು ಎಂಬ ಊರಿನ ಬಳಿ ಇರುವ ಶೆಟ್ಟಿಹಳ್ಳಿಯಲ್ಲಿರುವ ಚರ್ಚ್.

ತಲುಪಲು ನಕಾಶೆ 



ಕೈ ಬೀಸಿ ಕರೆಯುತ್ತಿದೆ 
ಸುಮಾರು ೧೮೬೦ ಇಸವಿಯಲ್ಲಿ  ಫ್ರೆಂಚ್  ಪಾದ್ರಿಗಳಿಂದ  ನಿರ್ಮಾಣವಾದ ಈ ಚರ್ಚ್ ಹಾಸನ, ಸಕಲೇಶಪುರ  ಸುತ್ತಾ ಮುತ್ತಾ  ಪ್ರದೇಶಗಳಲ್ಲಿ ವಾಸವಿದ್ದ  ಕ್ರಿಸ್ಚಿಯನ್ನರಿಗೆ  ಉಪಯೋಗವಾಗುತ್ತಿತ್ತು ಎಂದು ತಿಳಿದುಬರುತ್ತದೆ. ಆ ಕಾಲದಲ್ಲಿ ಈ ಪ್ರದೇಶದ ಸುತ್ತಲು ಹಸಿರು ಹೊಲಗಳು ಇದ್ದಿರಬಹುದು ಎನ್ನುವ ಮಾತಿಗೆ ಸಾಕ್ಷಿಯಾಗಿ ಈಗಲೂ ಕೂಡ ಸುತ್ತ ಮುತ್ತಲು ಅನತಿ ದೂರದಲ್ಲಿ ಅಂತಹ ದೊಡ್ಡ ದೊಡ್ಡ ಕೈಗಾರಿಕೆಗಳಾಗಲಿ ಕಾಣ ಬರುವುದಿಲ್ಲ. ಸರಿ ಸುಮಾರು ೧೯೬೦ ಇಸವಿಯಲ್ಲಿ ಸರಕಾರ ಕುಡಿಯುವ ನೀರಿಗೆ ಹಾಗೂ ನೀರಾವರಿ ಯೋಜನೆಯ ಅಡಿ ಹೇಮಾವತಿ ನದಿಗೆ ಆಣೆಕಟ್ಟು ಕಟ್ಟಿದ ಪರಿಣಾಮ ಈ ಚರ್ಚ್ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿ ಹೋಯಿತು. ಸುತ್ತ ಮುತ್ತಲ ಹಳ್ಳಿಯನ್ನು ಸ್ಥಳಾಂತರಿಸಿದರೂ ಈ ಚರ್ಚ್ ಹಾಗೆಯೇ ಉಳಿಯಿತು .
ಗತ ಕಾಲದ ಇತಿಹಾಸವನ್ನು ಗರ್ಭದೊಳಗೆ ಉಳಿಸಿಕೊಂಡು ನಿಂತಿದೆ 
ಆ ಕಾರಣದಿಂದಾಗಿ ಗೊರೂರು ಅಣೆಕಟ್ಟಿನಲ್ಲಿ ನೀರು ಹೆಚ್ಚಾದಾಗ ಈ ಚರ್ಚ್ ಭಾಗಶಃ ಮುಳುಗಿಹೋಗುತ್ತದೆ. ಅವಾಗ ತೆಪ್ಪಗಳಲ್ಲಿ ಈ ಚರ್ಚಿನ ತನಕ ಹೋಗಬಹುದು.  ಅನತಿ ದೂರದಲ್ಲಿರುವ ಸೇತುವೆ ಮೇಲೆ ನಿಂತು ಮುಳುಗಿ ಹೋದ ಕಟ್ಟಡದ ಮೇಲ್ಬಾಗವನ್ನು ನೋಡಬಹುದು. ಬೇಸಿಗೆಯಲ್ಲಿ ಅಥವಾ ಅಣೆಕಟ್ಟಿನಲ್ಲಿ ನೀರು ಕಡಿಮೆ ಇದ್ದರೇ ಚರ್ಚಿನ ತನಕ ಗಾಡಿಯಲ್ಲೇ ಹೋಗಬಹುದು.


ಒಂದು ಕಾಲದಲ್ಲಿ ಈ ಹಾದಿ ಹೇಗೆ ಇತ್ತು?
ನಾವು ಕಳೆದ ವಾರಾಂತ್ಯದಲ್ಲಿ ಕುಟುಂಬದ ಒಂದು ಕಾರ್ಯಕ್ರಮಕ್ಕೆ ಹಾಸನಕ್ಕೆ ಹೋಗಿದ್ದಾಗ ಈ ಪ್ರದೇಶಕ್ಕೆ ಭೇಟಿ ಕೊಡುವ ಅವಕಾಶ ಕೂಡಿಬಂತು.


ಕುಟುಂಬದ ಜೊತೆಯಲ್ಲಿ ಸ್ಮಾರಕದ ಮುಂದೆ
ಅಲ್ಲಿಗೆ ಹೋಗಿ ನೋಡಿದಾಗ ಆಗಲೇ ಸುಮಾರು ನೂರ ಅರವತ್ತು ವರ್ಷಗಳು ಕಳೆದಿರುವ ಈ ಕಟ್ಟಡ, ಕಳೆದ ೫೦ ವರ್ಷಗಳಿಂದ ನೀರಿನಲ್ಲೇ ಇರುವುದರಿಂದ ಕೆಲ ಭಾಗಗಳು ಬಿದ್ದುಹೋಗಿವೆ .. ಇನ್ನಷ್ಟು ಭಾಗಗಳು ಕಾಲನ ದಾಳಿಗೆ ಕುಸಿಯುವ ಎಲ್ಲಾ ಸೂಚನೆಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ ಎಂದು ಅರಿವಾಯಿತು.. ಭೇಟಿ ಆದಷ್ಟು ಬೇಗ ಮಾಡಿದಷ್ಟು ಈಗಿರುವ ಕಟ್ಟಡವನ್ನು ಅದೇ ಸ್ಥಿತಿಯಲ್ಲಿ ನೋಡಬಹುದು.
ಕಾಲನ ದಾಳಿಗೆ?
ಸುಂದರ ಕಮಾನುಗಳು, ಗವಾಕ್ಷಿಗಳು, ಎತ್ತರದ ಬಾಗಿಲುಗಳು, ಮಿನಾರುಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಧರ್ಮ ಯಾವುದಾದರೇನು ಕಟ್ಟಡ ವಿನ್ಯಾಸ ಮನಸೆಳೆಯುತ್ತದೆ. ಅದನ್ನೆಲ್ಲ ನೋಡಿದಾಗ ಇದು ತನ್ನ ಉಚ್ಚ್ರಾಯ ಸ್ಥಿತಿಯಲ್ಲಿದ್ದಾಗ ಯಾವ ಗತ್ತು ಗಾಂಭೀರ್ಯ ಹೊಂದಿತ್ತು ಎಂದು ಕಲ್ಪಿಸಿಕೊಳ್ಳಬಹುದು.


ಬೃಹದ್ ಬಾಗಿಲು
ಸುಂದರಜಾಗಕ್ಕೆ ಭೇಟಿ ನೀಡಬೇಕು ಎಂಬ ಆಸೆ ಈಡೇರಿದ ಸಮಾಧಾನ ಒಂದು ಕಡೆಯಾದರೆ ಮನುಜನ ಆಸೆ ಆಕಾಂಕ್ಷೆಗಳು ಬೆಳೆಯುತ್ತಲೇ ಅನೇಕ ಸುಂದರ ಕಟ್ಟಡಗಳು, ಸ್ಮಾರಕಗಳು, ಮಂದಿರಗಳು ಅನೈತಿಕ ಚಟುವಟಿಕೆಗೆ ಆಸರೆಯಾಗಿಬಿಡುತ್ತವೆ ಎನ್ನುವ ಬೇಸರ ಕಾಡುತ್ತದೆ. ಎಲ್ಲಿ ನೋಡಿದರು ಒಡೆದ ಬಾಟಲಿಗಳು, ಬೇಡವಾದ ಕೆಲ ಪದಾರ್ಥಗಳು, ನೋಡೋಕೆ ಅಸಹ್ಯ ಎನ್ನಿಸುವಂತೆ ಎಲ್ಲೆಂದರಲ್ಲಿ ಕಾಣ ಸಿಗುತ್ತದೆ. ಗೋಡೆಗಳ ಮೇಲೆಲ್ಲಾ ಪ್ರೇಮಿಗಳ ಕೆತ್ತನೆ ಕೆಲಸಗಳು ಬೇಸರ ತರಿಸುತ್ತವೆ. ಅನೇಕ ಸುಂದರ ಸ್ಮಾರಕಗಳನ್ನೂ ರಕ್ಷಿಸಲಾಗದ ನಾವೇ ಆರಿಸಿದ  ಸರಕಾರ ಇನ್ನು ಜನರ ಸುಖಕ್ಕೆ ಶ್ರಮಿಸುವುದೇ ಎಂಬ ಗೊಂದಲ ಕಾಡುತ್ತದೆ!