Showing posts with label Chennapattana.. Show all posts
Showing posts with label Chennapattana.. Show all posts

Wednesday, December 5, 2012

ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಮರೆಹಳ್ಳಿ, ಮಳವಳ್ಳಿ ಒಂದು ಪ್ರವಾಸ

ಕೆಲಸ ಕೆಲಸ ಕೆಲಸ....

ಸದಾ ಕೆಲಸದಲ್ಲಿ ಮಗ್ನರಾಗಿರುವ ನಮ್ಮ ಸೋದರತ್ತೆಯ ಅಳಿಯ (ಲಕ್ಷ್ಮಿಕಾಂತ) ನಮಗೆ ಕರೆ ಮಾಡಿ..."ನಮ್ಮ ಮನೆ ದೇವರಿಗೆ ಅಭಿಷೇಕ ಇಟ್ಟುಕೊಂಡಿದ್ದೇನೆ..ವಾಹನವು ಸಿದ್ಧವಾಗಿದೆ..ಶುಕ್ರವಾರ ಸರಿಯಾಗಿ ಬೆಳಿಗ್ಗೆ ೭.೩೦ಕ್ಕೆ ನೀವೆಲ್ಲ ಮೈಸೂರ್ ರಸ್ತೆಗೆ ಬಂದು ಬಿಡಿ..ಎಲ್ಲರೂ ಹೋಗೋಣ" ಅಂತ ಹೇಳಿ ಫೋನ್ ಇಟ್ಟುಬಿಟ್ಟರು..

ಅಕ್ಕನ ಕಡೆ ನೋಡಿದೆ..ಹೋಗೋಣ ಅಂದಳು...ಮಡದಿಯು ಸಮ್ಮತಿಸಿದಳು...ಸರಿ ಬೆಳಿಗ್ಗೆ ಎಂಟು ಘಂಟೆಗೆ ಹೊರಟಿತು ಅಂಬಾರಿ..ಮಳವಳ್ಳಿ ಕಡೆಗೆ...

ರಾಮನಗರ ದಾಟಿದ ಮೇಲೆ...ನಿಲ್ಲಿಸಿ ನಿಲ್ಲಿಸಿ ಎಂದರು...ಗಾಡಿ ನಿಂತಿತು..ಇಡ್ಲಿ ತುಂಬಿದ ಡಬ್ಬಿ..ಚಟ್ನಿಯಾ ಬಕೆಟ್...ನೀರು..ಎಲ್ಲವು ಗಾಡಿಯಿಂದ ತಾನೇ ತಾನಾಗಿ ಎನ್ನುವಂತೆ ಇಳಿಯಿತು...ಪುಷ್ಕಳವಾಗಿ ಇಡ್ಲಿಯನ್ನು ಹೊಟ್ಟೆಗೆ ತುಂಬಿಕೊಂಡು..ಗಾಡಿಯಲ್ಲಿ ಕೂತಾಗ ಕಣ್ಣು ಹಾಗೆ ಎಳೆಯುತ್ತಿತ್ತು...

ಆ ದೇವಸ್ಥಾನದ ಬಗ್ಗೆ ನಿಖರವಾದ ಮಾಹಿತಿ ಇರಲಿಲ್ಲ...ಮೈಸೂರಿನ ನಿಮ್ಮೊಳಗೊಬ್ಬ ಬಾಲೂ ಬ್ಲಾಗ್ ಖ್ಯಾತಿಯ ಬಾಲೂ ಸರ್ ಕೆಲವು ಮಾಹಿತಿ ಕೊಟ್ಟರು..ಕುತೂಹಲ ಭರಿತ ಕಣ್ಣು ಕ್ಯಾಮೆರಾದ ಜೊತೆಗೆ ಮರೆಹಳ್ಳಿಯಲ್ಲಿ ಇಳಿದೆವು..


ದೇವಸ್ಥಾನಕ್ಕೆ ಬೆಂಗಳೂರಿನಿಂದ ರಸ್ತೆಯ ನಕ್ಷೆ..

ವಿಸ್ತಾರವಾದ ಹೊಲ ಗದ್ದೆಗಳು, ದೇವಸ್ಥಾನದ ಮುಂದೆಯೇ ಕಾವೇರಿ ನದಿಯ ಕಾಲುವೆ, ವಿಶಾಲವಾದ ದೇವಸ್ಥಾನದ ಆವರಣ ನಮ್ಮನ್ನು ಬರ ಮಾಡಿಕೊಂಡವು.

ದೇವಸ್ಥಾನದ ವಿಶಾಲ ಆವರಣ

ದೇವಸ್ಥಾನದ ಮುಂದೆಯೇ ಗರುಡಗಂಭ, ಎಡಪಕ್ಕದಲ್ಲಿದ್ದ  ಕಲ್ಲು ಮಂಟಪ, ಬಲ ಪಕ್ಕದಲ್ಲಿದ್ದ ಎರಡು ಶಿಲಾಮೂರ್ತಿಗಳ                ನೀಳ್ಗಲ್ಲು ದೇವಸ್ಥಾನದ ಒಳಗೆ ಇನ್ನಷ್ಟು ಇದೆ ಎನ್ನುವ ಕುರುಹನ್ನು ತೋರಿಸಿದವು. 

ದೇವಸ್ಥಾನದ ಒಳಗೆ ಸಾಲು ಸಾಲು ಕಲ್ಲಿನ ಕಂಬಗಳು ನಾವು ಸುಮಾರು ಒಂದು ಸಾವಿರಕ್ಕಿಂತ ಹೆಚ್ಚಿನ ವರ್ಷಗಳಿಂದ ನಿಂತೇ ಇದ್ದೇವೆ ಎನ್ನುವ ಹಾಗೆ ಭಾಸವಾಯಿತು.  ಪೂರ ಕಲ್ಲಿನ ದೇವಾಲಯ..ಆದರೆ ಒಳಗೆ ಬಿಸಿ ಇರಲಿಲ್ಲ...ಹಿತವಾದ ತಂಗಾಳಿ ಬೀಸಲು ಜಾಲಂಧ್ರಗಳು ಇದ್ದವು. 

ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿ ಪ್ರಕಾರ..ಇದು ಸುಮಾರು ಒಂದು ಸಾವಿರದ ಆಸು ಪಾಸಿನ ವರ್ಷಗಳಷ್ಟು ಹಳೆಯದು, ಹೊಯ್ಸಳರು, ವಿಜಯನಗರದರಸರು ಕೊಟ್ಟ ಸಹಾಯ ಹಸ್ತಗಳಿಂದ ದೇವಸ್ಥಾನ ತನ್ನ ನೆಲೆ ಕಂಡು ಕೊಂಡಿತು ಎನ್ನಲಾಗಿದೆ.  

ದೇವಸ್ಥಾನದ ಆವರಣಕ್ಕೆ ಹೋಗುವ ಮುನ್ನ...ಎಡಬಾಗದಲ್ಲಿ ಹನುಮ ದರ್ಶನ ಕೊಡುತ್ತ ಅಭಯ ನೀಡುತ್ತಾನೆ...ಒಂದು ನಾಲ್ಕು ಮೆಟ್ಟಿಲು ಹತ್ತಿದರೆ ಸಿಗುವುದು ದ್ವಾರಪಾಲಕರ ಸುಂದರ ಮೂರ್ತಿಗಳು..ನಂತರ ಗರ್ಭಗುಡಿಯ ಕಡೆಗೆ ಹೆಜ್ಜೆ ಹಾಕಿದಾಗ 
ಶಾಂತವಾಗಿ ಲಕ್ಷ್ಮಿಯನ್ನು ಕೂರಿಸಿಕೊಂಡಿರುವ ನರಸಿಂಹ ಮೂರ್ತಿ ಸುಂದರವಾಗಿದೆ, ಭಕ್ತಿ ಭಾವ ಕಾಡುತ್ತದೆ.

ಗರ್ಭಗುಡಿಯಲ್ಲಿನ ಶ್ರೀ ಲಕ್ಹ್ಸ್ಮಿನರಸಿಂಹ ಮೂರ್ತಿ 

ಅಭಿಷೇಕ ಸೇವೆಗೆ ಕೊಟ್ಟಿದ್ದರಿಂದ ನಮ್ಮನ್ನೆಲ್ಲ ಮೂರ್ತಿಯ ಹತ್ತಿರದಲ್ಲೇ  ಕೂರಿಸಿದ್ದರು..ಅಲ್ಲಿನ ಅರ್ಚಕರ ಅಪ್ಪಣೆ ಪಡೆದು ಕ್ಯಾಮೆರಾಗೆ ಕೆಲಸ ಕೊಟ್ಟೆ..ಹಾಲು, ಮೊಸರು, ಜೇನು ತುಪ್ಪ, ತುಪ್ಪ, ಬಾಳೆ ಹಣ್ಣು, ಎಳನೀರು, ಉದಕ, ವಿಭೂತಿ, ..ಹೀಗೆ ಅಭಿಷೇಕಗಳು  ಸಾಂಗೋಪಾಂಗವಾಗಿ ನಡೆದವು. ಕ್ಯಾಮೆರ ಕಣ್ಣು ಧನ್ಯೋಸ್ಮಿ ಎನ್ನುತಿತ್ತು. 

ಪೂರ್ಣ ಅಲಂಕಾರಗೊಂಡ ಲಕ್ಷ್ಮಿ ನರಸಿಂಹ ಮೂರ್ತಿ, ಮಹಾ ಮಂಗಳಾರತಿ, ಪ್ರಸಾದ ಸ್ವೀಕಾರ ಎಲ್ಲವು  ಸುಸೂತ್ರವಾಗಿ ನೆರವೇರಿತು. ಸಕ್ಕರೆ ಪೊಂಗಲ್, ಪುಳಿಯೋಗರೆ, ಬಾಳೆ ಹಣ್ಣಿನ ರಸಾಯನ, ಕಡೆಗೆ ಮೊಸರನ್ನ..ಹೊಟ್ಟೆಯು ಮಾತಾಡಲಾರದ ಸ್ಥಿತಿಗೆ ತಂದು ಬಿಟ್ಟಿತು. ಆ ಗುಂಗಿನಲ್ಲೇ ಕೂತಿದ್ದ ನಮಗೆ ಅರಿವಾದದ್ದು  ದೇವಾಲಯ ಬಾಗಿಲು ಮುಚ್ಚುವ ಸಮಯ ಎಂದು...

ಹೊರಗೆ ಬಂದು ನಮ್ಮ ಪರಿವಾರ ದೇವತೆಗಳೆಲ್ಲರನ್ನು ಒಟ್ಟು ಗೂಡಿಸಿ ಒಂದು ಚಿತ್ರ ತೆಗೆದುಕೊಂಡು, ಶ್ರೀ ಸಂಜೀವರಾಯ ದೇವಾಸ್ಥಾನದ ಕಡೆಗೆ ಹೊರಟಿತು ನಮ್ಮ ಪಯಣ. ಇದು ವಿಜಯನಗರದ ಕಾಲದ ದೇವಸ್ಥಾನ ಎನ್ನುವ ಮಾತು ಕೇಳಿಬಂತು

ಒಂದು ಕುಟುಂಬದ ಚಿತ್ರ!

ಈ ದೇವಸ್ಥಾನ ಚಿಕ್ಕದಾದರೂ ಚೊಕ್ಕವಾಗಿದೆ,  ರಾಮನಗರದ ಕೆಂಗಲ್ ಸಮೀಪ ಇರುವ ದೇವರಹೊಸಹಳ್ಳಿಯ  ಈ ದೇವಾಲಯ ಸುಂದರ ಕಟ್ಟಡದಿಂದ ಮನ ಸೆಳೆಯುತ್ತದೆ.

ಸಂಜೀವರಾಯ ದೇವಸ್ಥಾನದ ಎದುರಲ್ಲಿ ಒಂದು ಜಗಲಿ ಮನೆ ತುಂಬಾ ಇಷ್ಥವಾಯಿತು..

 ದೇವಸ್ಥಾನದ ಎದುರಿಗೆ ಹಳ್ಳಿಯ ಜಗಲಿ ಮನೆ ತುಂಬಾ ಸುಂದರವಾಗಿದೆ.  ಅರ್ಚರಕರಿಂದ ಅರ್ಚನೆ, ತೀರ್ಥ, ಪ್ರಸಾದ ಪಡೆದ ನಾವೆಲ್ಲಾ ಒಂದು ದಿನವನ್ನು ನೆಂಟರಿಷ್ಟರೊಂದಿಗೆ ಕಳೆದ ಸಾರ್ಥಕ ಭಾವ ಮನದಲ್ಲಿ ಮೂಡಿತ್ತು. 

ಈ ಪ್ರವಾಸದ ಖರ್ಚು ವೆಚ್ಚವನ್ನು ಭರಿಸಿ ನಮಗೆ ಮಂಗಳ ಮೂರ್ತಿಯ ದರ್ಶನ ಭಾಗ್ಯ ಮಾಡಲು ಅನುವು ಮಾಡಿಕೊಟ್ಟ ನಮ್ಮ ಸೋದರತ್ತೆಯ ಮಗಳು ಹಾಗೂ ಅಳಿಯ ಸುಧಾ ಹಾಗೂ ಲಕ್ಷ್ಮಕಾಂತ ಕುಟುಂಬಕ್ಕೆ ನಮ್ಮ ಸಹಸ್ರ ವಂದನೆಗಳು.