Friday, December 22, 2017

ಭಾವನೆಗಳ ಭತ್ತದ ... ಬತ್ತದ.... ಕಣಜ.. ಕುಮಾರ ಪರ್ವತ

ಮೊಬೈಲ್ ಚಾರ್ಜ್ ಕಮ್ಮಿ ಆಗ್ತಾ ಇದೆ..

ಹೌದ ಸರಿ ಚಾರ್ಜ್ ಮಾಡ್ತೀನಿ 

ಲ್ಯಾಪ್ಟಾಪ್ ಚಾರ್ಜ್ ಕಡಿಮೆ ಆಗಿದೆ 

ಸರಿ ಚಾರ್ಜ್ ಆಗ್ತೀನಿ 

ಶ್ರೀ ನಿನ್ನ ಎನರ್ಜಿ ಕಡಿಮೆ ಆಗಿದೆ.. 

ಸರಿ ಕುಮಾರ ಪರ್ವತಕ್ಕೆ  ಹೋಗಿ ಬರ್ತೀನಿ.. 

ಅರೆ ಇದೇನಿದು ಸಡನ್ ವಿಭಿನ್ನ ಉತ್ತರ ಅಂದಿರಾ.. ಅದು ಕುಮಾರ ಪರ್ವತದ ತಾಕತ್ತು.. ನನ್ನ ಇಷ್ಟವಾದ ಸಂಖ್ಯೆ ಎಂಟು.. ಇದು ನನ್ನ ಎಂಟನೇ ಬಾರಿಗೆ ಕುಮಾರ ಪರ್ವತದ ಮಡಿಲಿಗೆ.. 

ಹೇಳಬೇಕಿದ್ದು ನೂರಾರು.. ಹೇಳೋಕೆ ಹೊರಟ್ಟಿದ್ದು ಹತ್ತಾರು.. ಹೇಳಿದ್ದು ಒಂದೆರಡು.. ಹೌದು.. ಪ್ರತಿ ಬಾರಿಯೂ ಕುಮಾರಪರ್ವತ ವಿಭಿನ್ನ ಅನುಭವ ಕೊಡುವುದಷ್ಟೇ ಅಲ್ಲದೆ.. ನನ್ನ ಭಾವುಕ ಮನಸ್ಸಿಗೆ ಇನ್ನಷ್ಟು ಸ್ಫೂರ್ತಿ ಕೊಡುವ ತಾಣವೂ ಹೌದು.. 
ಮಹಾ ಪರ್ವ... ಇಲ್ಲಿಂದ ಶುರು.. 
ನವೆಂಬರ್ ಹತ್ತು.. ಚಳಿ ಚಳಿ ಎನ್ನುವ ರಾತ್ರಿ .. ಕುಕ್ಕೆ ಸುಬ್ರಮಣ್ಯದ ಬಸ್ಸಿನಲ್ಲಿ ಕೂತಾಗ.. . ಚಾರಣಕ್ಕೆ ಸಿದ್ಧವಿಲ್ಲದ ದೇಹ.. ಶ್ರೀ ನಾನಿದ್ದೇನೆ.. ನಡಿ ಆಗಿದ್ದು ಆಗಲಿ ಎನ್ನುವ ಮನಸ್ಸು.. ಎಂದಿನಂತೆ ಮನಸ್ಸಿನ ಮಾತು ದಾರಿ ದೀಪವಾಯಿತು.. 

ರಾತ್ರಿ ಇಡೀ.. ಮಾತು ಮಾತು ಮಾತು.. ಮುಗಿಯದ ಮಾತು.. ನಗು.. ಬೆಳಗಿನ ಜಾವ ಮಂಜರಾಬಾದ್ ಕೋಟೆ ಆಸು ಪಾಸಿನಲ್ಲಿ ಬಸ್ಸು ಹೆಡ್ ಲ್ಯಾಂಪ್ ಕೆಟ್ಟಿದೆ ಎಂದು ನಿಂತಾಗ.. ಸ್ವಲ್ಪ ಕಣ್ಣು ಎಳೆಯಲು ಶುರುಮಾಡಿತು.. ಆಗಿದ್ದಾಗಲಿ ಸ್ವಲ್ಪ ನಿದ್ದೆ ಮಾಡುವ ಅಂತ.. ಕಣ್ಣು ಮುಚ್ಚಿದ್ದಷ್ಟೇ ಗೊತ್ತು.. ಇಳೀರಿ ಇಳೀರಿ ಇದೆ ಕಡೆಯ ಸ್ಟಾಪ್ ಎಂದಾಗ ಕಣ್ಣು ಬಿಟ್ಟರೆ ಕುಕ್ಕೆ ತಲುಪಿಯಾಗಿತ್ತು.. 

ಮನಸು ಸಾಂದ್ರತೆಯನ್ನು ಕಳೆದುಕೊಂಡು ಹಕ್ಕಿಯ ಹಾಗೆ ಹಗುರವಾಗುವ ಸಮಯ.. ಬೆಳಗಿನ ವಿಧಿಗಳನ್ನು ಮುಗಿಸಿ.. ಕುಮಾರಕೃಪಾ ಹೋಟೆಲಿನಲ್ಲಿ ಇಡ್ಲಿ ವಡೆ ಬನ್ನು ತಿಂದು.. ಹೊರಟಾಗ ಹೊಟ್ಟೆ ಹಗುರವಾಗಿತ್ತು.. ಕಾರಣ ನನ್ನ ಮಾಮೂಲಿ ಬ್ಯಾಟಿಂಗ್ ಮಾಡಿರಲಿಲ್ಲ.. :-)

"ಹೆಜ್ಜೆ ಹೆಜ್ಜೆ ಮೇಲೆ ಹೆಜ್ಜೆ ಇಡುತ.. ಬಂದ ಬಾಲ ರಾಮ" ಎನ್ನುವ ಕರುಣಾಮಯಿ ಚಿತ್ರದ ಹಾಡಿನಂತೆ..  ನಿಧಾನವಾಗಿ ಚಾರಣದ ಪಥದಲ್ಲಿ ಹೆಜ್ಜೆ ಇಡುತ್ತಾ ಸಾಗಿದೆ.. ದೇಹಕ್ಕೆ ಮಾತು ಬೇಕಿರಲಿಲ್ಲ.. ಮನಸ್ಸು ಮೌನಕ್ಕೆ ಶರಣಾಗಿತ್ತು.. ಮಧ್ಯೆ ಮಧ್ಯೆ ಧಾರಾವಾಹಿಗಳ ನಡುವೆ ನುಸುಳಿ ಬರುವಂತೆ.. ಕೊಂಚ ಮಾತು.. ಕೊಂಚ ನಗು.. ಅಷ್ಟೇ.. 

ತಲೆಯಲ್ಲಿ ಯಾವ ಯೋಚನೆಗಳು ಇರಲಿಲ್ಲ.. ತುತ್ತ ತುದಿ ತಲುಪುತ್ತೇವೆಯೋ ಇಲ್ಲವೋ ಗೊಂದಲ ಇರಲಿಲ್ಲ.. ಅನಿರ್ಧಿಷ್ಟ ಪ್ರಯಾಣ ಮಾಡುವ ಹಾಗೆ ಸುಮ್ಮನೆ ಹೊರಟಿದ್ದೆ.. ನಿತ್ಯ ಹರಿದ್ವರ್ಣ ಕಾಡಿನ ಹಾದಿ... ಹಕ್ಕಿಗಳ ಕಲರವ.. ಜೀರಂಬೆಗಳ ಝೇಂಕಾರ.. ಅಲ್ಲೆಲ್ಲೋ ಸದ್ದಾಗುವ ಎಳೆಗಳ  ನಿನಾದ.. ಗಾಳಿ ಎಲ್ಲಿ ಬೀಸಿತೋ.. ಎಲ್ಲಿ ಬಂತೋ ಅರಿಯದೆ ಮರಗಿಡಗಳ ತೂಗಾಟ.. ಹಸಿಯಾದ ಆದರೆ ಗಟ್ಟಿಯಾದ ಮಣ್ಣು.. ಆ ಮಣ್ಣಿನ ಹದವಾದ ವಾಸನೆ.. ಒಂದು  ರೀತಿಯ ಭಾವುಕ ಲೋಕವನ್ನು ಸೃಷ್ಟಿಸಿತ್ತು.. 

ಆಶ್ಚರ್ಯ ಅಂದರೆ.. ಹಿಂದಿನ ಚಾರಣಗಳಲ್ಲಿ ಬೆವರಿನ ಮುದ್ದೆಯಾಗಿ.. ಸುಸ್ತಾಗಿ.. ಸಾಕಪ್ಪ ಅನ್ನಿಸುತ್ತಿದ್ದ ಮನಸ್ಸು ಇಂದು.. ಅದರ ಯಾವ ಸುಳಿವು ಕೊಡದೆ ಸುಮ್ಮನಿದ್ದದ್ದು.. ಜೊತೆಯಲ್ಲಿ ಆಯಾಸ.. ಮನಸ್ಸಿನ ಮಾತನ್ನು ಕೇಳುತ್ತಾ ಮೆಲ್ಲಗೆ ನನ್ನಿಂದ ದೂರವಾಗಿದ್ದು.. ಇದುವರೆಗೂ ನನಗೆ ಈ ಅನುಭವ ಆಗಿರಲಿಲ್ಲ.. ಜೊತೆಯಿದ್ದಿದ್ದರೆ ಅಂದೇ ಕುಮಾರ ಪರ್ವತದ ತುತ್ತ ತುದಿ ತಲುಪಿಬಿಡುತ್ತೇನೆ ಎನ್ನುವ ವಿಶ್ವಾಸ.. ಆದರೂ ಸುಮ್ಮನೆ ಏನೇನೋ ನಿರ್ಧಾರ ತೆಗೆದುಕೊಳ್ಳದೆ.. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣಾವ್ರು ಹೇಳಿದಂತೆ "ಸ್ನಾನಗೀನ ಎಲ್ಲಾ ದೇಹಕ್ಕಲ್ಲ ಕಂದಾ ಮನಸ್ಸಿಗೆ" ತರಹ ಈ ಚಾರಣ ದೇಹಕ್ಕಲ್ಲ ಮನಸ್ಸಿಗೆ ಎಂದು ಮೊದಲೇ ನಿರ್ಧರಿಸಿ ಆಗಿದ್ದರಿಂದ ಸುಮ್ಮನೆ ಹೆಜ್ಜೆ ಹಾಕುತ್ತಾ ಹೋದೆ.. 

ಮಧ್ಯೆ ಭೀಮನಕಲ್ಲಿನ ಹತ್ತಿರ ಸಿಗುವ ತೊರೆಯಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಹೊಟ್ಟೆ  ತುಂಬಾ ನೀರು ಕುಡಿದು ಮತ್ತೆ ಹೊರತು ನಿಂತಾಗ ಮತ್ತೆ ಹುರುಪು ಮೈಗೂಡಿತ್ತು. .. 

ಭಟ್ಟರ ಮನೆಗೆ ತಲುಪಿದಾಗ ಹೊಟ್ಟೆ ಪಕ ಪಕ ಅನ್ನುತ್ತಿತ್ತು.. ಭಟ್ಟರಿಗೆ ನಮಸ್ಕರಿಸಿದಾಗ.. ನಿಮ್ಮನ್ನು ನೋಡಿದ್ದೇನೆ ಎಂದಾಗ ಖುಷಿಯಾಯಿತು.. ಇದು ನನ್ನ ಎಂಟನೇ ಚಾರಣ ಎಂದಾಗ.. ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.. ಪುಷ್ಕಳವಾದ ಊಟ... ಹಾಗೆ ಸ್ವಲ್ಪ ಹೊತ್ತು ಮಲಗುವ ಅಂದು... ಸೂರ್ಯಾಸ್ತ ಆಗುವ ಹೊತ್ತಿಗೆ ಭಟ್ಟರ ಮನೆಯ ಮುಂದಕ್ಕೆ ಹೋಗಿ ಸೂರ್ಯಾಸ್ತದ ಸೊಬಗನ್ನು ಸವಿಯುವ ಎಂಬ ಹಂಬಲ ಹೊತ್ತು ನಿದ್ದೆ ಮಾಡಿದೆ.. ಕಣ್ಣು ಬಿಟ್ಟಾಗ ಆಗಲೇ ಕತ್ತಲೆ ಶುರುವಾಗಿತ್ತು.. 

ಮರುದಿನಕ್ಕೆ ಮತ್ತೆ ಚಾರಣಕ್ಕೆ ಸಿದ್ಧವಾಗಬೇಕಾದ್ದರಿಂದ ಒಂದಷ್ಟು ವ್ಯಾಯಾಮ ಆಗಲಿ ಎಂದು ಜೀವದ ಗೆಳೆಯನೊಡನೆ ಸುತ್ತು ಹಾಕಿ ಬಂದೆ.. ಒಂದಷ್ಟು ಮೌನ.. ಸಿಕ್ಕಾಪಟ್ಟೆ ಮಾತು.. ನಗು.. ಹಾಸ್ಯ.. ಒಂದಷ್ಟು ಗೊಂದಲಗಳ ನಿವಾರಣೆ.. 

ವಾಪಸ್ ಬಂದಾಗ ನಮ್ಮ ಜೊತೆ ಬಂದಿದ್ದವರು ಚಳಿಗೆ ಬೆಂಕಿ ಹಾಕಿದ್ದರು.. ಅದರ ಜೊತೆಯಲ್ಲಿ ಮತ್ತೆ ಒಂದಷ್ಟು ಚಿತ್ರಗಳು.. ತಮಾಷೆ.. ಸುಂದರ ಸಮಯ ಕಳೆದದ್ದೇ ಗೊತ್ತಾಗಲಿಲ್ಲ.. 

ಹೊಟ್ಟೆ ತುಂಬಾ ಊಟ ಮಾಡಿ ಮಲಗಿದ್ದೆ ಗೊತ್ತು.. ಬೆಳಿಗ್ಗೆ ಆಗಲೇ ದಿನಕರ ತನ್ನ ಕಚೇರಿಗೆ ಬಂದು ತುಂಬಾ ಹೊತ್ತಾಗಿತ್ತು.. ಪ್ರಾತಃವಿಧಿ ಮುಗಿಸಿ.. ಮತ್ತೆ ಅಲೆದಾಟ.. ಆದರೆ ಇಂದು ಸುಮ್ಮನೆ ಒಂದು ಕಡೆ ಕೂತು ಹೊಟ್ಟೆ ತುಂಬುವಷ್ಟು ಮಾತು ಇದೆ ತಲೆಯಲ್ಲಿ ಇತ್ತು.. ಆರಾಮಾಗಿ ಕೂತು ಮಾತಾಡಿದೆವು.. ಸುಮಾರು ಮೂರು ತಾಸು ಗಾಳಿಯ ವೇಗದಲ್ಲಿ ಓಡಿತು.. 
ಒಂದಕ್ಕೆ ಒಂದು ಆಸರೆ.. !
ಕುಮಾರ ಪರ್ವತ ನೋಡುತ್ತಾ ಕೂತೆ.. ಅದರೊಳಗಿಂದ ಹಿಂದಿನ ಅನುಭವಗಳು ಸಿನಿಮಾದ ರೀತಿಯಲ್ಲಿ ಕಣ್ಣ ಮುಂದೆ ಬಂತು.. ಒಂದೊಂದಾಗಿ ಸಿನೆಮಾಗಳು ಖಾಲಿಯಾಗುತ್ತಾ ಬಂದಾ ಹಾಗೆ.. ಬಿಳಿಯ ಪರದೆಯ ಮೇಲೆ ಮೂಡಿದ್ದು.. ಶ್ವೇತಾ ವಸ್ತ್ರಧಾರಿ.. ನಂತರ ಆ ರವಿಯ ಪ್ರಭೆ ಕಾಣಿಸಿತು.. ಅದರೊಂದಿಗೆ ಒಂದಷ್ಟು ಮಾತು.. ಒಂದಷ್ಟು ದುಃಖ ಹಂಚಿಕೊಂಡೆ.. ಇದು ನ್ಯಾಯವೇ ಅಂದೇ.. ಆ ಕಡೆಯಿಂದ ನನ್ನ ನೆಚ್ಚಿನ ಮುಗುಳುನಗೆಯೊಂದೇಸಿಕ್ಕಿದ್ದು .. ಕಣ್ಣುಗಳು ನೀರಿನ ಬಲೂನಾಗಿತ್ತು.. ಒಂದು ಸಣ್ಣ ಗುಂಡು ಸೂಜಿ ಅಲ್ಲ ಹೂವಿನ ಪಕಳೆ ತಾಕಿದ್ದರು.. ಜೋಗದ ಜಲಪಾತವಾಗುತ್ತಿತ್ತು.. ಮೆಲ್ಲನೆ ನನಗೆ ಅರಿಯದೆ ಒಂದು ಹತ್ತಿಯ ವಸ್ತ್ರ ಕಣ್ಣ ಮುಂದೆ ಬಂದು ನಿಂತಿತು.. ಆಶ್ಚರ್ಯ.. ಹತ್ತಿಯ ಬಟ್ಟೆ ಸುಯ್ ಅಂತ  ಕಣ್ಣಲ್ಲಿನ ಲಿಂಗನಮಕ್ಕಿಯನ್ನು ಹೀರಿಕೊಂಡಿತು.. ಮನಸ್ಸು, ಕಣ್ಣುಗಳು ಹಗುರವಾದವು.. 



ಸೂರ್ಯ ಆಗಲೇ ನೆತ್ತಿಯನ್ನು ಸುಡಲು ಶುರುಮಾಡಿದ್ದ.. ಸರಿ ವಾಪಾಸ್ ಹೋಗೋಣ ಅಂತ.. ಮತ್ತೆ ಭಟ್ಟರ ಮನೆಗೆ ಬಂದೆವು.. ಸ್ನಾನ ಮಾಡಿ ಹೊರಬಂದೆ.. ಭಟ್ಟರು ನನ್ನ ಜನಿವಾರ ನೋಡಿ.. ಓಯ್.. ಸಂಧ್ಯಾವಂದನೆ ಮಾಡುವುದುಂಟೇ ಅಂದರು.. ಪರಿಕರ ಕೊಟ್ಟರೆ ಖಂಡಿತ ಅಂದೇ.. ಮುಂದಿನ ಮೂವತ್ತು ನಿಮಿಷ ಆ ಪರ್ವತದ ಮಡಿಲಲ್ಲಿ ಧ್ಯಾನ, ಸಂಧ್ಯಾವಂದನಾ ಆಹಾ ಆಗಲೇ ಹಗುರಾಗಿದ್ದ ಮನಸ್ಸಿಗೆ ರೆಕ್ಕೆ ಮೂಡಿತು.. 

ಭರ್ಜರಿ ಊಟ.. ಮತ್ತೆ ಇಳಿಯಲು ಶುರುವಾಯಿತು ನಮ್ಮ ಪಯಣ.. ಭಟ್ಟರ ಜೊತೆಯಲ್ಲಿ ಒಂದು ಚಿತ್ರ ನೆನಪಿಗೆ.. ಜೊತೆಯಲ್ಲಿ ಅಗಾಧವಾದ ಉತ್ಸಾಹದ ಮೂಟೆಯನ್ನು ಹೊತ್ತು ಇಳಿಯಲು ಶುರುವಾಯಿತು ಪಯಣ.. 
ತಂಡದ ಜೊತೆ ಒಂದು ಚಿತ್ರ 

ಯಾಕೋ ಮನಸ್ಸು ಮೂಕವಾಗಬೇಕು ಎನ್ನಿಸಿತು.. ಇರಲಿ ಮನಸ್ಸಿಗೂ ಒಂದಷ್ಟು ವಿಶ್ರಾಂತಿ ಬೇಕಲ್ಲವೇ.. ನನ್ನ ಹಿಂದೆ ಮುಂದೆ ತಮಾಷೆಯ ಮಾತುಗಳು..  ಪ್ರಕೃತಿಯ ಕಲರವ ಯಾವುದು ನನ್ನ ಕಿವಿಗೆ ಬೀಳುತ್ತಿರಲಿಲ್ಲ.. ಶಾಂತಿ, ನಿಶ್ಯಬ್ಧ.. ಮನಸ್ಸಿಗೆ ನೆಮ್ಮದಿ ಇಷ್ಟೇ ಕಣ್ಣ ಮುಂದೆ ಇದ್ದದ್ದು.. 

ನನ್ನ ಪ್ರೀತಿಯ ಗೆಳೆಯ ಕೇಳಿದ "ತನ್ಹಾಯಿ ಬೇಕಿತ್ತು" ಅದಕ್ಕೆ ಅಂದೇ.. ಓಕೇ ಶ್ರೀ ಎಂದು ಬೆನ್ನು ತಟ್ಟಿತಾಗ ಮನಸ್ಸಿಗೆ ಆನಂದ.. 

ಆಹಾ.. ಈಗ ನನ್ನ ಫಾರ್ಮ್ ಗೆ ಬರುತ್ತಿದ್ದೇನೆ.. ಫೀಲಿಂಗ್ ಬೆಟರ್ ಅಂದೇ.. ಸೂಪರ್ ಎಂದಿತು ಅಶರೀರವಾಣಿಗಳು.. 
ಸವಾಲು, ಜವಾಬು.. ಎಲ್ಲಕ್ಕೂ ಸಿದ್ಧ.. 

ಮುಂದೆ ನೆಡೆದದ್ದು ಮ್ಯಾಜಿಕ್.. ಆಯಾಸವಿಲ್ಲದೆ.. ಬೆಟ್ಟದ ಬುಡ ತಲುಪಿದಾಗ ಆರಾಮ್ ಎನ್ನಿಸಿತು.. 

ನದಿಯ ಕಡೆ ಪಯಣ.. ನದಿಯ ನೀರಲ್ಲಿ ಸ್ವಲ್ಪ ಹೊತ್ತು ಧ್ಯಾನ.. ಮತ್ತೆ ಬಾಸ್ ಗಣಪನ ದರ್ಶನ.. ಮನಸ್ಸಿಗೆ ಇನ್ನಷ್ಟು ಮುದ ನೀಡಿತು.. 
ಬೆಳಕಿನಲ್ಲಿ ದೇವಸ್ಥಾನ 

ಕುಕ್ಕೆ ಸುಬ್ರಮಣ್ಯನ ದೇವಸ್ಥಾನಕ್ಕೆ ಬಂದಾಗ.. ಕಾಲುಗಳು ಪದ ಹೇಳುತ್ತಿದ್ದವು .. ಆದರೆ ಆ ಮಹಾಮಹಿಮ ಸನ್ನಿಧಿ. ಜೊತೆಯಲ್ಲಿ ನೆಡೆಯುತ್ತಿದ್ದ ಉತ್ಸವ ಮೂರ್ತಿಯ ಮೆರವಣಿಗೆ... ಆ ಗಜರಾಜನ ಗಾಂಭೀರ್ಯ ನೆಡಿಗೆ.. ದೇವಸ್ಥಾನದೊಳಗೆ ಹಚ್ಚುತ್ತಿದ್ದ ಸಾಲು ಸಾಲು ಹಣತೆಗಳು.. ಜೊತೆಯಲ್ಲಿ ನಮ್ಮ ಅಳಿಲು ಸೇವೆಯೂ ತಲುಪಿತು..

ಸಾಲು ಸಾಲು ದೀಪಗಳು 
ಗಜರಾಜನ ವೈಭವ 
ದರ್ಶನ ಮಾಡಿ.. ನಮಿಸಿ.. ದೇವಸ್ಥಾನದ ಪ್ರಸಾದ ಸೇವಿಸಿದ ಮೇಲೆ ಮತ್ತಷ್ಟು ಹುರುಪು ತುಂಬಿತು.. 
ಶಕ್ತಿ ಹುಮ್ಮಸ್ಸು ತುಂಬಿದ ಚಾರಣ 

ಮೊದಲೇ ನಿಗಧಿ ಪಡಿಸಿದ್ದ ಬಸ್ಸಿನಲ್ಲಿ ಬಂದು ಕಾಲು ಚಾಚಿ ಮಲಗಿದಾಗ ಸ್ವರ್ಗ ಸುಖ.. ಬೆಳಿಗ್ಗೆ ಎಷ್ಟು ಹೊತ್ತಿಗೆ ಬೆಂಗಳೂರು ತಲುಪಿದೆವೋ ಅರಿವಿಲ್ಲದಂತಹ ನಿದ್ದೆ ... 

ಆರಾಮಾಗಿ ಮನೆಗೆ ಬಂದು.. ಸ್ನಾನ ಮಾಡಿ ಆಫೀಸಿಗೆ ಹೋದಾಗ ಪುನರ್ ನೆನಪುಗಳು ಕಾಡತೊಡಗಿದವು.. 

ಯಾವುದೇ ಏರು ಪೇರಿಲ್ಲದೆ, ತ್ರಾಸದಾಯಕವಿಲ್ಲದ ಚಾರಣ ಇದಾಗಿತ್ತು.. ಕುಮಾರಪರ್ವತದ ಇನ್ನೊಂದು ಅನುಭವ ಮನಸ್ಸಿಗೆ ಮುದ ನೀಡಿತು.. ಮತ್ತೆ ನಮ್ಮ ಅಲೆಮಾರಿಗಳು ತಂಡವನ್ನು ಮತ್ತೆ ಹಳಿಗೆ ತಲುಪುವ ನಿರ್ಧಾರ ಮಾಡಿಕೊಂಡಿತು ಈ ಮನಸ್ಸು.. 
ಅಲೆಮಾರಿಗಳ ಪಯಣ ಶುರು 


೨೦೧೮ ರಲ್ಲಿ ಅಲೆಮಾರಿಗಳು ತಂಡದ ಸಾಹಸ ಮತ್ತೆ ಕೊಂಚ  ಬಹು ಧೀರ್ಘ ವಿರಾಮದ ನಂತರ ಮತ್ತೆ ಮುಂದುವರೆಯಲಿದೆ!!!!

ಹೆಸರಿಗೆ ಒಂದು ಗುರುತು.. 

Sunday, October 22, 2017

ಶ್ರೀ ವೆಂಕಟೇಶಾಯ ಮಂಗಳಂ - ಇನ್ನೊಂದು ಆವೃತ್ತಿ

"ಟೀ  ತಿರುಪತಿಗೆ ಹೋಗ್ತಾ ಇದ್ದೀನಿ"

"ಕಾಲು ಮುರಿದು ಕೂರಿಸ್ತೀನಿ.. ಆ ಊರು ಈ ಊರು ಚೀಲೂರು  ಅಂತ ಸುತ್ತುತ್ತಾ ಇರಿ" ಉಗ್ರಳಾಗಿದ್ದಳು

"ಇಲ್ಲಾ ಟೀ ಜೆ ಎಂ ಜರ್ಮನಿ ಇಂದ ಬಂದಿದ್ದಾನೆ.. ಅವನ ಜೊತೆ ಎಲ್ಲರೂ ಹೋಗ್ತಾ ಇದ್ದೀನಿ.. ಮನೆದೇವರು ಆಲ್ವಾ ಟೀ"

ಸ್ವಲ್ಪ ಮೆತ್ತಗಾದಳು... "ನಾವೂ ಬರ್ತೀವಿ.. ಆದರೆ ನನಗೆ ಬರೋಕೆ ಆಗಲ್ಲ.. ಶೀತಲ್ ಗೆ ನೆಡೆಯೋಕೆ ಆಗಲ್ಲ.. .. ಹೋಗಿ ಬನ್ನಿ ಶ್ರೀ... ಮನೆದೇವರ ಕೃಪೆ ಸದಾ ಇರಲಿ. ಆದರೆ ಒಂದು ಷರತ್ತು.. "

"ನನಗೆ ಗೊತ್ತು ಟೀ ನಿನಗೆ ಬರೋಕೆ ಆಗಲ್ಲ.. ಶೀತಲ್ ನ ಮುಂದಿನ ವರ್ಷ ಕರ್ಕೊಂಡು ಹೋಗಿ ಬರ್ತೀನಿ.. .. ಸರಿ ಅದೇನೋ ಷರತ್ತು ಅಂದೆಯಲ್ಲ ಏನದು?"

"ಪ್ರತಿ ಲೇಖನ ಏನಾದರೂ ಬರೆದು ಬಿಸಾಕ್ತಾ ಇರ್ತೀರ.. ಬೈಕು, ಕಾರು, ನಿಮ್ಮ ಮೊಬೈಲ್, ಕ್ಯಾಮೆರಾ ಎಲ್ಲವೂ ಕಥೆ ಹೇಳುತ್ತವೆ ನಿಮಗೆ.. ಅದನ್ನು ನೀವು ಬರೀತೀರಿ.. ಈ ಲೇಖನ ನಾ ಹೇಳುತ್ತೀನಿ.. ನೀವು ಬರೀರಿ"  ಜೋರಾಗಿ ನಗಲು ಶುರು ಮಾಡಿದಳು..

"ಏನೂ.. ನೀ ಹೇಳ್ತೀಯ.. ನಾ ಬರೆಯೋದೇ.. ಸೂಪರ್ ಸೂಪರ್ ಟೀ .. ನನಗೆ ನಂಬೋಕೆ ಆಗ್ತಾ ಇಲ್ಲ"

"ನಂಬೋಕೆ ಏನಾಗಿದೆ..  ಒಮ್ಮೆ ಚಿಗಟಿಕೊಳ್ಳಿ".. ಇನ್ನೊಮ್ಮೆ ನಕ್ಕಳು..

"ಸರಿ ಟೀ.. ನೀ ಇಷ್ಟು ಹೇಳ್ತಾ ಇದ್ದೀಯ ಎಂದರೆ ಸರಿ.. ಶುರು ಮಾಡೋಣ.. " ಮೆಲ್ಲಗೆ ಅವಳಿಗೆ ಕಾಣದ ಹಾಗೆ ಒಮ್ಮೆ ಚಿಗಟ್ಟಿಕೊಂಡೆ.. ಕನಸಾಗಿರಲಿಲ್ಲ..

ಟೀ ಉವಾಚ.. ಇನ್ನು ಮುಂದೆ ಅವಳ ಪದಗಳಲ್ಲಿ ಈ ಲೇಖನ
                                                               *************************


ಶ್ರೀ ನಿನಗೆ ಯಾವಾಗಲೂ ಬಯ್ಯುತ್ತಲೇ ಇರುವ ವೆಂಕಿಗಾಗಿ ಬಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಕಾಯುತ್ತ ಕುಳಿತಿದ್ದೆ.. ನಿನ್ನ ತಲೆ ಮಧುರ ನೆನಪುಗಳ ತವರೂರಾಗಿತ್ತು.. ನೀ ಮೊಬೈಲ್ ತೆಗೆದು ಒಂದು ಫೋಟೋ ತೆಗೆದು.. ಅವರಿಗೆ ಕಳಿಸಿದೆ.. ನಿನಗೆ ಯಾವಾಗಲೂ ಬಯ್ತಾ ಇದ್ರೂ.. ಸಮಯಕ್ಕೆ ಸರಿಯಾಗಿ ಬರೋಲ್ಲ ಅಂತ.. ಆದರೆ ಇಂದು ನಾ ಸಮಯದ ಬೆನ್ನೇರಿ ನಾನೇ ಕೂತಿದ್ದರಿಂದ ನಿನ್ನ ಸಮಯ ಸರಿಯಾಗಿರಲೇ ಬೇಕು.. ಅಲ್ಲವಾ.. ಅದಕ್ಕೆ ನೀ ನಿಗದಿಯಾದ ಸಮಯಕ್ಕೆ ಮುಂಚೆಯೇ ಬಂದು ಕುಳಿತಿದ್ದೆ.. ಅವರಾರು ನಂಬಲು ಆಗುತ್ತಿರಲಿಲ್ಲ .. ಆದರೆ ನೀ ಬಂದಿದ್ದೆ..

"ಎಲ್ಲೋ ಈ ಶ್ರೀಕಿ ಅವನಿಗೆ ಹುಡುಕ್ತಾ ಇದ್ದೀನಿ.. " ವೆಂಕಟಾಚಲ ಸಂಕಟಾಚಲ ಮೊಬೈಲಿನಲ್ಲಿ ಮಾತಾಡುತ್ತಾ  ಮಾತಾಡುತ್ತಾ ಬರುತ್ತಿದ್ದ.. .. "ಶ್ರೀ ಅಲ್ಲಿ ನೋಡು ವೆಂಕಿ ಬರ್ತಾ ಇದ್ದಾನೆ.. ಹೋಗು ಅವನ ಬೆನ್ನ ಮೇಲೆ ಎರಡು ಬಿಡು ಸರಿಯಾಗಿ.. ಯಾವಾಗಲೂ ನಿನ್ನ ಗೋಳು ಹುಯ್ಕೋತಾ ಇರ್ತಾನೆ.. ಲೇಟ್ ಆಗಿ ಬರ್ತೀಯ ಅಂತ .. ಇವತ್ತು ಅವ್ನೆ ಲೇಟ್.. ಬಿಡು ನೀನು ಅವನಿಗೆ ನಾ ಇದ್ದೀನಿ ನಿನ್ನ  ಜೊತೆ"

ವೆಂಕಿ ತಿರುಗೋದಕ್ಕೂ ಶ್ರೀ ಅವನ ಬೆನ್ನಿಗೆ ಒಂದು ಬಿಡೋಕೂ ಸರಿಯಾಯಿತು.. "ಲೋ ಇಲ್ಲೇ ಇದ್ದಾನೆ ಕಣೋ ಸಿಕ್ದಾ... ಬೇಗ ಬಾರಲೋ.. "

"ಶ್ರೀಕಿ.. ತಗೋ" ವೆಂಕಿ ಕೊಟ್ಟ ರಸ್ಕ್ ಒಮ್ಮೆ ಶ್ರೀ ನನಗೆ ತೋರಿಸಿ ತಿನ್ನಲು ಶುರು ಮಾಡಿದ.. ಕೆ ಆರ್ ಪುರಂ ಸೇತುವೆ ಹತ್ತಿರ ಹೋಗಿ ಇಬ್ಬರೂ ನಿಂತರು..

ಜೊತೆಯಲ್ಲಿ ಮಾತು ಕತೆ... ಜೆ ಎಂ ಮತ್ತು ಶಶಿಗೆ ಒಂದಷ್ಟು ಬೈಗುಳ.. ನೆಡೆದೆ ಇತ್ತು.. ಮಧ್ಯೆ ಮಧ್ಯೆ ಕಾರಣಾಂತರಗಲಿಂದ  ಲೋಕಿಗೂ ಅರ್ಚನೆ ನೆಡೆಯಿತು..

"ಬಿಡು ಶ್ರೀ.. ಬಿಡು ವೆಂಕಿ.. ಆ ಲೋಕಿಗೆ ಯಾವಾಗಲೂ ಏನಾದರೂ ತರಲೆ ಕೆಲಸ ಇದ್ದೆ ಇರುತ್ತೆ.. ನೀವೆಲ್ಲರೂ ಹೋಗಿ ಬನ್ನಿ.. "

"ಫೇಮ್ ಫೇಮ್ .. .. ಇದೇನಾ ಶಶಿಯ ಹೊಸ ಕಾರು ಶ್ರೀ"

"ಹೌದು ಟೀ.. ಹೋದ ತಿಂಗಳು  ತಗೊಂಡ.. ಚೆನ್ನಾಗಿದೆ ಆಲ್ವಾ ಟೀ"

"ನನಗಿಷ್ಟವಾದ ಬಣ್ಣ.. ಶ್ರೀ ನಿನಗೂ ಇಷ್ಟ ಆಲ್ವಾ.. "

"ಹೌದು ಟೀ.. "

ಶಶಿಯ ಹೊಸ ಕಾರು ಬಂತು.. ಶ್ರೀ ತುಂಬಾ ಚೆನ್ನಾಗಿದೆ ಅಲ್ವ.. ಶಶಿ ಒಳ್ಳೆಯ ಕಾರು.. ಸಕ್ಕತಾಗಿದ್ದೆ.. ಜೆ ಎಂ ಚೆನ್ನಾಗಿದೀಯ.. ಹೇಗಿತ್ತು ಇಂಡಿಯಾದ ಪ್ರವಾಸ... ಸ್ವಲ್ಪ ಸಣ್ಣಗಾಗಿದ್ದೀಯ.. ಸಮತಾ ಹೇಗಿದ್ದಾಳೆ .. ಧನುಷ್ ಸ್ಕೂಲ್ ಶುರು ಆಯ್ತು ಆಲ್ವಾ.. ಶಶಿ ಪ್ರತಿಭಾ ಹೇಗಿದ್ದಾಳೆ.. ಅವಳ ಹತ್ತಿರ ಮಾತಾಡೋಕೆ ಆಗ್ತಾ ಇಲ್ಲ.. ಒಮ್ಮೆ ಮಾತಾಡುವೆ.. ವೆಂಕಿ ಸೌಮ್ಯ ಹೇಗಿದ್ದಾಳೆ..ಸುಖಿ ಹೇಗಿದ್ದಾಳೆ.. ಸೌಮ್ಯ ಅವರ ಅಪ್ಪ ಹುಷಾರಾಗಿದ್ದಾರಾ.. ಸುಚಿ ಪಾಪು ನಾಮಕರಣ ಆಯ್ತಾ?"

"ಯೇ ಟೀ.. ಒಂದೇ ಸಮನೇ ಅಷ್ಟು ಪ್ರಶ್ನೆ ಕೇಳಿದರೆ ಅವರೆಲ್ಲ ಹೇಗೆ ಉತ್ತರ ಕೊಡುತ್ತಾರೆ .. ನಿಧಾನವಾಗಿ ಒಂದೊಂದೇ ಪ್ರಶ್ನೆ ಒಬ್ಬೊಬ್ಬರಿಗೆ ಕೇಳು"

"ಲೋ ಶ್ರೀಕಿ ನೀ ಸ್ವಲ್ಪ.. @#$#$#@$@ .. ನೀನು  " ವೆಂಕಿ ಮಾಮೂಲಿನಂತೆ ಶ್ರೀಕಿಗೆ ಒಂದು ಬಿಟ್ಟಾ..

ಶಶಿ, ಜೆ ಎಂ, ವೆಂಕಿ ನಾ ಕೊಟ್ಟ ಪ್ರಶ್ನೆ ಪತ್ರಿಕೆಗೆ ಉತ್ತರಿಸಿದರು...

ದಾರಿಯುದ್ದಕ್ಕೂ ಈ ನಾಲ್ವರು ಕಪಿಗಳಾಗಿದ್ದರು.. ಬರಿ ತರಲೆ ತರಲೆ.. ನನಗೂ ಇವರ ಮಾತುಗಳನ್ನು ಕೇಳುವ ಅವಕಾಶ ಸಿಕ್ಕಿತು... ಮೊದಲೇ ಕಪಿಗಳಾಗಿದ್ದ ಈ ನಾಲ್ಕು ಮಂದಿ.. ಯಾರಂಕುಶವಿಲ್ಲದಿದ್ದರೂ ಎಲ್ಲೇ ಮೀರದೆ ಆಡುತ್ತಿದ್ದ ಮಾತುಗಳು  ಸರಾಗವಾಗಿ ಸಾಗುತಿತ್ತು..

"ತಿರುಪತಿ...  ಯಾವಾಗಲೂ ನಮ್ಮ ಸಿದ್ಧತೆಗಳು ಏನೇ ಇದ್ದರೂ.. ಅಲ್ಲಿ ತಿರುಪತಿ ತಿಮ್ಮಪ್ಪನ ಉದ್ದೇಶ.. ಅವರ ರೂಪು ರೇಷೆಗಳು ಅವರ ಯೋಜನೆಗಳು ಯಾವಾಗಲೂ ಭಿನ್ನ.. ನಾವು ಊಹಿಸಲಾರದ ತಿರುವುಗಳು ಸಿಗುತ್ತವೆ.. ಅದೇ ತಿರುಪತಿ ವಿಶೇಷ.. ಆಲ್ವಾ ಶ್ರೀ.. "

ಹೌದು ಟೀ.. ನೀನೆ ನೋಡಿದ ಹಾಗೆ ನಿನ್ನ ಜೊತೆಯ ಮೂರು ತಿರುಪತಿಗೆ ಪಯಣಗಳು ಅನುಭವ ಕೊಟ್ಟಿದೆ.. ಹಾಗೆಯೇ ಕಳೆದ ವರ್ಷದ ೭೦೦ ಕ್ಷಣಗಳು ತಿಮ್ಮಪ್ಪನ ಜೊತೆಯಲ್ಲಿ ಮಾತುಕತೆ ವಿಶೇಷವಾಗಿತ್ತು.. ಸರಿ ಮುಂದುವರೆಸು ಟೀ"

"ನಾ ನಿಮ್ಮೆಲ್ಲರಿಗಿಂತ ತಿಮ್ಮಪ್ಪನ ಜೊತೆ ಬೇಗ ಹೋಗಿದ್ದರಿಂದ .. ಅವನ ಜೊತೆಯಲ್ಲಿ ೭೦೦ ಕ್ಷಣಗಳು ಮಾತುಕತೆ ನಿನಗೆ ಹೇಳ್ತಾ ಇರ್ತೀನಿ .. ಜೊತೆಯಲ್ಲಿ ನಿಮ್ಮೆಲ್ಲರ ಪ್ರವಾಸದ ವಿವರಗಳನ್ನು ಹೇಳ್ತಾ ಇರ್ತೀನಿ ಆಗಬಹುದೇ ಶ್ರೀ?"

"ನಿನ್ನ ಇಷ್ಟ ಟೀ.. ಈ ಲೇಖನ ನೀನೆ ಹೇಳಿದಂಗೆ ಬರೀತಾ ಇರ್ತೀನಿ ಅಷ್ಟೇ ನನ್ನ ಕೆಲಸ ಮುಂದುವರೆಸು"

"ನನಗೆ ವೆಂಕಟೇಶ್ವರನ ಹತ್ತಿರ ಮಾತಾಡಬೇಕಿತ್ತು .. ಕೈಮುಗಿದು ಪ್ರಾರ್ಥಿಸಿದೆ .. ಶ್ರೀ ಓಂ ನಮೋ ವೆಂಕಟೇಶಾಯ ನಮಃ.. ಓಂ ನಮೋ ನಾರಾಯಣಾಯ ನಮಃ.. "

ದೇದೀಪ್ಯಮಾನವಾದ ಜ್ಯೋತಿ ಕಾಣಿಸಿತು .. ಒಂದು ಕೈಯಲ್ಲಿ ಆಶೀರ್ವಾದದ  ಕಮಲದ ಹೂವು.. ಇನ್ನೊಂದು ಕೈಯಲ್ಲಿ ಶಂಖ.. ಒಂದು ವಿಭಿನ್ನವಾದ ವಸ್ತ್ರ ತೊಟ್ಟ ಸುಂದರ ಆಕೃತಿ ಕಾಣಿಸಿತು..

ಮೆಲ್ಲನೆ ಮಾತುಗಳು ಕೇಳಿಸಿತು " ಹೇಗಿದ್ದೀಯಾ.. ಏನು ಸಮಾಚಾರ .. ನನ್ನ ನೆನಪಿಸಿಕೊಂಡ ಕಾರಣವೇನು.. ನಿನಗೆ ೭೦೦ ಕ್ಷಣಗಳನ್ನು ಕೊಟ್ಟಿದ್ದೇನೆ.. ನಿನ್ನ ಮಾತು ಶುರುಮಾಡು.. "

ಮೆಲ್ಲನೆ ಕಣ್ಣುಗಳನ್ನು ತೆರೆದು ನಾ ಕೇಳಿದ ಮೊದಲ ಪ್ರಶ್ನೆ

"ಇಲ್ಲಿಗೆ ಬರುವ ಭಕ್ತಾದಿಗಳು ಏನೇನೂ ಯೋಜನೆ ಹಾಕಿಕೊಂಡು ಬರುತ್ತಾರೆ .. ಆದರೆ ನಿನ್ನ ಯೋಜನೆಗಳಿಗೆ ಅವರು ತಲೆಬಾಗಲೇ ಬೇಕಾಗುತ್ತದೆ.. ಆದರೆ ನಿನ್ನ ಯೋಜನೆಗಳು ಯಾವಾಗಲೂ ಅವರಿಗೆ ನೇರವಾಗಿರುತ್ತದೆ.. ಇದು ಹೇಗೆ?"

"ನೋಡಮ್ಮ.. ಭಕ್ತಾದಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ಸಿದ್ಧಮಾಡಿಕೊಂಡು ಬರುತ್ತಾರೆ.. ಆದರೆ ನಾ ಇಲ್ಲಿ ಬರುವ ಎಲ್ಲಾ ಭಕ್ತಾದಿಗಳ ಬಗ್ಗೆ ಯೋಚನೆ ಮಾಡಬೇಕಲ್ಲ.. ಹಾಗಾಗಿ ಎಲ್ಲರಿಗೂ ಒಳಿತಾಗುವಂತೆ ನಾ ಯೋಜಿಸಿ ದರುಶನ ನೀಡುತ್ತೇನೆ.... ಕಡೆಯಲ್ಲಿ ಒಂದೇ ಮಾತು ಎಂದರೆ.. ಸರ್ವೇ ಜನೋ ಸುಖಿನೋ ಭವಂತು.. ಇದೆ ನನ್ನ ಮಂತ್ರ"

ಅರೆ ಶ್ರೀ ವೆಂಕಿ ಶಶಿ ಜೆಎಂ ಬಂದರು.. ಕಾರನ್ನು ನಿಲ್ದಾಣದಲ್ಲಿ ಬಿಟ್ಟು.. ಹೆಜ್ಜೆ ಹಾಕುತ್ತಿದ್ದಾರೆ.. `೧೨.೩೦ ರಾತ್ರಿ.. ಆಗಲೇ ಮೆಟ್ಟಿಲುಗಳ ಬಳಿ ಜನಸಾಗರ ಸೇರಿದೆ.. ಅಯ್ಯೋ ಇದೇನಿದು.. ಒಂದು ದಿನಕ್ಕೆ ಬರಿ ೧೪೦೦೦ ಯಾತ್ರಿಗಳಿಗೆ ಮಾತ್ರ ಅವಕಾಶ ಅಂತ ಫಲಕ ಹಾಕಿದ್ದಾರೆ .. ಓಹ್ ಇವರಿಗೆ ದರುಶನ ಹೇಗಪ್ಪಾ ಸಾಧ್ಯ.. ಫಲಕದಲ್ಲಿದ್ದ ಸಂಖ್ಯೆಗಳು ಬದಲಾಗುತ್ತಲೇಇದ್ದವು .. ಇತ್ತ ಕಡೆ "ಗೋವಿಂದ ಗೋವಿಂದ" ಅಂತ ಭಕ್ತಾದಿಗಳು ಕೂಗುತ್ತಲೇ ಇದ್ದಾರೆ..

ಪಾಪ ಶ್ರೀ ಸುಸ್ತಾಗುತ್ತಿದ್ದಾನೆ.. ವೆಂಕಿ ಓಟದ ಸ್ಪರ್ಧೆಯಂತೆ ಓಡೋಡಿ ಹೋಗುತ್ತಿದ್ದಾನೆ.. ಶಶಿ ಮತ್ತು ಜೆಎಂ ಶ್ರೀಕಿಯನ್ನು ಮಗುವಿನ ತರಹ ನೋಡಿಕೊಂಡು .. ಅವನಿಗಾಗಿ ಕಾಯುತ್ತಾ ಜೊತೆಯಲ್ಲಿ ಕರೆದೊಯ್ಯಲು ನಿಲ್ಲುತ್ತಿದ್ದರು...

ಗಾಳಿಗೋಪುರದ ತನಕ ಇದೆ ಮುಂದುವರೆಯಿತು....  ಗಾಳಿಗೋಪುರದ ಹತ್ತಿರ ಕಾಯುತ್ತ ನಿಂತಿದ್ದ ವೆಂಕಿಗೆ ಎಲ್ಲರೂ ಒಂದು ಬಿಟ್ಟು.. ತಕ್ಷಣ ಕೊಟ್ಟಾ ದರುಶನದ ದಿವ್ಯ ದರ್ಶನದ ಚೀಟಿಗೆ  ದರುಶನದ ಸಮಯ ಲಗತ್ತಿಸಿಕೊಂಡು ಮುಂದುವರೆದರು...

ಶ್ರೀಗೆ.. ಹಿಂದಿನ ಯಾತ್ರೆಯ ನೆನಪು ಒತ್ತರಿಸಿಬರತೊಡಗಿತ್ತು.. ಕಣ್ಣೀರು ಬರುವುದು ಹಿಂದಕ್ಕೆ ಹೋಗುವುದು ನೆಡೆಯುತ್ತಲೇ ಇತ್ತು.. ನಾನು ಶ್ರೀಗೆ ಇಲ್ಲಾ ನಾ ಬರೋಕೆ ಆಗಲ್ಲ ಅಂದಿದ್ದರು.. ಅವನೇ ಹುರಿದುಂಬಿಸಿ.. ಉತ್ಸಾಹ ತುಂಬುತ್ತಾ ನನ್ನನ್ನು ಮೆಟ್ಟಿಲುಗಳನ್ನು ಹತ್ತಿಸಿ ಕರೆದೊಯ್ದಿದ್ದ.. ಕೆಲವೊಮ್ಮೆ ನಾ ಕೂಗಾಡಿದ್ದು ಉಂಟು. ನಾ ಬರೋಕೆ ಆಗಲ್ಲ ಅಂತ.. ಆದರೆ ಶಾಂತ ಸ್ವಭಾವದಿಂದ ನನ್ನ ನಗಿಸಿ, ಮುಂದಕ್ಕೆ ಕರೆದೊಯ್ದಿದ್ದ... ಈ ನೆನಪುಗಳು ಅವನ ಕಣ್ಣುಗಳನ್ನು ಮಂಜಾಗಿಸಿತ್ತು..

ಶ್ರೀ ತನ್ನ ಮೊಬೈಲ್ನಲ್ಲಿ ಏನೋ ದಾಖಲಿಸುತ್ತಿದ್ದ... ವೆಂಕಿ ..ಲೋ ಶ್ರೀಕಿ ಬಾರೋ ಬೇಗ ಅಂದಾಗ.. ಶಶಿ ಹೇಳಿದ್ದು ಖುಷಿಕೊಟ್ಟಿತು .. ಅವನಿಗೆ ಬ್ಲಾಗ್ ಬರೆಯುವ ಹುಚ್ಚು ಬಂದಿದೆ.. ಆ ಫ್ಲೋ ಮಿಸ್ ಆಗುತ್ತೆ ಅಂತ.. ಬರ್ತಾನೆ ನಿಧಾನವಾಗಿ ಹೋಗುತ್ತಿರೋಣ ಅಂದ..

ಇಷ್ಟು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದಾರೆ ಶ್ರೀಯನ್ನು ಎಂದು ಖುಷಿಯಾಯಿತು..

"ಕಣ್ಣುಗಳಲ್ಲಿ ನೆನಪಿನ ಬಲೂನು
ನೀರಿನಿಂದ ತುಂಬಿತ್ತು
ಇನ್ನೇನು ಒಡೆದು ಬಲೂನಿನ ನೀರು
ಹೊರಗೆ ಬರಬೇಕು..
ಕಾಣದ ಕೈ ಅದನ್ನು ತಡೆದು ಹೇಳಿತು
ಶ್ರೀ ನಾ ಇರುವೇ ನಿನ್ನ ಜೊತೆ
ಕಣ್ಣಿನ ಬಲೂನು ಬರಿ ಆನಂದ ಭಾಷ್ಪ ಸುರಿಸಬೇಕು"

ಶ್ರೀ ನಿನಗೆ ನನ್ನ ಅಪ್ಪುಗೆ ಬೇಕು ಅನ್ನಿಸಿತ್ತು..ಅಲ್ಲವೇ ..ಇಗೋ ಒಂದು ಅಪ್ಪುಗೆ ನಿನಗೆ..

ಶ್ರೀಯ ಕಣ್ಣುಗಳಲ್ಲಿ ಆ ಹನಿಗಳು ಹಾಗೆಯೇ ಇಂಗಿ ಹೋಯಿತು ..

ಓಡುತ್ತಾ ಹೋಗಿ ಜೆಎಂ.. ಶಶಿ ಮತ್ತು ವೆಂಕಿಯನ್ನು ಶ್ರೀ ಸೇರಿದ..

ಏನಾಯಿತೋ ಅಂತ ವೆಂಕಿ ಕೂಗಿದ..

ಏನೂ ಇಲ್ಲ ಕಣೋ..

ಕಾಫಿ ಕುಡಿಯುತ್ತ ನಿಂತಿದ್ದರು.. ಶ್ರೀ ಕಣ್ಣುಗಳಲ್ಲಿ ಮತ್ತೆ ಆಣೆಕಟ್ಟು ಒಡೆದು ಹೋಗುವಂತೆ ಜಲ ಪ್ರವಾಹ ಬರುತ್ತಲಿತ್ತು... ಮೆಲ್ಲಗೆ ಮುಖ ಆ ಕಡೆಮಾಡಿಕೊಂಡು ಅವರಿಗೆ ಕಾಣದಂತೆ ತನ್ನ ಕರವಸ್ತ್ರದಿಂದ ತಡೆದು ಮತ್ತೆ ತನ್ನ ಕೀಟಲೆ ಮಾತುಗಳಿಗೆ ಶರಣಾದ..

ಅಲ್ಲಿಂದ ಮುಂದೆ.. ಸರ ಸರ ನೆಡೆಯಲು ಶುರು ಮಾಡಿದರು..

"ನಮೋ ವೆಂಕಟೇಶಾಯ ನಮಃ.. ಪಾಪ ಪುಣ್ಯ ಅಂತೆಲ್ಲಾ ಹೇಳುತ್ತಾರಲ್ಲ.. ಇವರೆಲ್ಲರಿಗಿಂತ ಮುಂಚೆ ಬಂದು ದರುಶನಕ್ಕೆ ನಿಂತವರಿಗೆ ತಡವಾಗಿತ್ತು.. ಇವರ ನಂತರ ಬಂದು ನಿಂತವರಿಗೆ ದರುಶನ ಸ್ವಲ್ಪ ಬೇಗ ಆಯಿತು.. ಇದರ ಮಧ್ಯೆ ಅನೇಕ ಮಂದಿ ನಾವು ನಿಂತಿದ್ದ ಸಾಲಿನ ಪಕ್ಕದಿಂದ ಹೊರಗೆ ಹೋಗುತ್ತಿದ್ದರು.. ಇದೆಲ್ಲ ಏನೂ ಅರ್ಥವಾಗಲಿಲ್ಲ?"

"ನಾ ಪ್ರತಿಯೊಬ್ಬರಿಗೂ ದರುಶನ ಕೊಡಬೇಕೆಂದು ಸಮಯ ಕೊಟ್ಟಿರುತ್ತೇನೆ.. ಅದಕ್ಕೆ ಸರಿಯಾದ ಸಮಯಕ್ಕೆ ಬಂದು ಸರತಿ ಸಾಲಿನಲ್ಲಿ ನಿಲ್ಲಬೇಕು.. ಆಗ ಬೇಡದ ಒತ್ತಡ ನಿವಾರಣೆಯಾಗುತ್ತದೆ.. ಹೇಗೂ ಸಮಯಕೊಟ್ಟಿದ್ದಾರೆ ಅಂತ ಆರಾಮಾಗಿ ಹೋದಾಗ ಅವರಿಗೆ ದರುಶನ ತಡವಾಗುತ್ತದೆ.. ಇನ್ನೂ ಕೆಲವರೂ ತುಂಬಾ ಬುದ್ದಿವಂತರಾಗಿ ಅಗತ್ಯಕ್ಕಿಂತ ಮುಂಚೆಯೇ ಬಂದು ನಿಲ್ಲುತ್ತಾರೆ... ಆಗಲೂ ಅವರು ಹೆಚ್ಚು ಹೊತ್ತು ಕಾಯಬೇಕಾಗುತ್ತದೆ.. ಸಮಯಕ್ಕೆ ನಾವು ಕಾಯಬೇಕೆ ಹೊರತು ಸಮಯ ನಮಗೆ ಕಾಯುವುದಿಲ್ಲ  ಅಲ್ಲವೇ.. ಇನ್ನೂ ಕೆಲವರಿಗೆ ನಿಗದಿಯಾದ ಸಮಯಕ್ಕೆ ಕೊಂಚ ತಡವಾಗಿ ಬಂದು.. ಅವರಿಗಿಂತ ಮುಂಚೆ ನಿಂತಿದ್ದವರಿಗಿಂತ ಮುಂಚೆ ದರುಶನ ಆಗುತ್ತೆ ಅದಕ್ಕೆ ಕಾರಣ ಆಮೆ ಮತ್ತು ಮೊಲದ ಓಟದ ಬಗ್ಗೆ ನಿನಗೆ ಗೊತ್ತಿದೆ ಅಲ್ಲವೇ.. ಆ ರೀತಿಯಲ್ಲಿ ನೆಡೆಯುತ್ತದೆ.. ಸಮಯದ ಜೊತೆಯಲ್ಲಿ ಹೆಜ್ಜೆ ಹಾಕಿದವರಿಗೆ ಯಶಸ್ಸು  ಕಟ್ಟಿಟ್ಟ ಬುತ್ತಿ.."

ಓಹ್ ಹೌದು.. ಶ್ರೀ ಯಾವಾಗಲೂ ಇಷ್ಟ ಪಡುವ ರಾಜಕುಮಾರ್ ಚಿತ್ರದ ಒಂದು ಹಾಡು
"If you come today, its too early
If you come tomorrow, its too late
You pick the time
tick tick tick tick tick tick"

"ನಿಜ ಕಣಮ್ಮ.. ನಿನ್ನ ಮಾತು ನಿಜ"

ಶ್ರೀ ಬೆವರಿನ ಮುದ್ದೆಯಾಗಿದ್ದ.. ಜೊತೆಯಲ್ಲಿ ಮಿಕ್ಕವರು ಕೂಡ.. ಮೆಟ್ಟಿಲ ಮೇಲೆ ೩೫೫೦ ಅಂತ ತೋರಿದಾಗ ಎಲ್ಲರೂ ಉಫ್ ಎಂದು ನಿಟ್ಟುಸಿರು ಬಿಟ್ಟು.. ಅಲ್ಲಿ ಉರಿಯುತ್ತಿದ್ದ ಕರ್ಪೂರದ ರಾಶಿಗೆ ಕೈಮುಗಿದು ತಮ್ಮ ತಮ್ಮ ಪ್ರಾರ್ಥನೆ ಮಾಡಿಕೊಂಡರು..

ಅಲ್ಲಿಯೇ ಬಸ್ಸು ಬಂದಿತು.. ಬಸ್ಸಿನಲ್ಲಿ ತುಂಬಾ ಜಾಗವಿರಲಿಲ್ಲ..ವೆಂಕಿ ಮತ್ತು ಜೆಎಂ ಗೆ ಜಾಗ ಸಿಕ್ಕಿತು. ಶಶಿ ಮತ್ತು ಶ್ರೀ ಇಬ್ಬರೂ ಬಸ್ಸಿನ ಮೆಟ್ಟಿಲುಗಳ ಮೇಲೆ ಕೂತರು.. ಎಲ್ಲರೂ ಅಲ್ಲಿಯೇ ಕುಳಿತುಕೊಳ್ಳಬೇಕು ಎಂದು ಆಸೆಯಾಯಿತು.. ಸರಿ ಜೆಎಂ ಮತ್ತು ವೆಂಕಿ ಕೂಡ ಅಲ್ಲಿಗೆ ಬಂದರು..

ಶ್ರೀ ಹೇಳಿದ ಬಹಳ ವರ್ಷಗಳ ನಂತರ ಈ ರೀತಿಯ ಪಯಣ ಖುಷಿ ಕೊಡುತ್ತದೆ.. ರಾಮನಗರಕ್ಕೆ ಹೋದಾಗ ಅನೇಕ ಬಾರಿ ಹೀಗೆ ಬಂದಿದ್ದೆವು ಅಂತ ವೆಂಕಿ ಕೂಡ ಹೇಳಿದ.. ಮಧ್ಯೆ ಮಧ್ಯೆ ತೂಕಡಿಕೆ.. ಆಯಾಸವಾಗಿತ್ತು.. ೪ ಘಂಟೆಗಳಲ್ಲಿ ಬೆಟ್ಟ ಹತ್ತಿದ್ದ ಇವರಿಗೆಲ್ಲ.. ಯಾವಾಗ ಹೋಟೆಲ್ ತಲುಪುತ್ತೇವೋ ಎನ್ನುವ ತವಕವಿತ್ತು .. ಸ್ವಲ್ಪ ತೂಕಡಿಕೆ.. ಸ್ವಲ್ಪ ಎಚ್ಚರ.. ಸಾಗಿತ್ತು ಪಯಣ...

ಅಲಿಪಿರಿ ಅಲಿಪಿರಿ ಅಂತ ಡ್ರೈವರ್ ಕೂಗಿದಾಗ ಅರೆ ಬರೇ ನಿದ್ದೆಯಲ್ಲಿಯೇ ಇಳಿದು ಕಾರಿನತ್ತ ಹೆಜ್ಜೆ ಹಾಕಿದರು..

ಹೋಟೆಲಿಗೆ ಬಂದು.. ಉಫ್ ಅಂತ ಕಾಲು ಚಾಚಿಕೊಂಡು ಮಲಗಿದ್ದು ಗೊತ್ತು ಅಷ್ಟೇ.. ಜೆಎಂ ೬.೩೦ ಕ್ಕೆ ಅಲಾರಾಂ ಇಟ್ಟುಕೊಂಡಿದ್ದ.. ಶ್ರೀ ತನ್ನ ಉರಿಯುತ್ತಿದ್ದ ಕಣ್ಣುಗಳಿಗೆ ಡ್ರಾಪ್ಸ್ ಹಾಕಿಕೊಂಡು ಮಲಗಿದ.. ಶಶಿ ಆಗಲೇ ನಿದ್ರಾದೇವಿಗೆ ಶರಣಾಗಿದ್ದ.. ವೆಂಕಿ ಅವನ ಜೊತೆ ಹಠಕ್ಕೆ ಬಿದ್ದು ನಿದ್ದೆಗೆ ಜಾರಿದ್ದ..

ಅಲಾರಾಂ ಹೊಡೆದ ತಕ್ಷಣ ಸರತಿಯಂತೆ ಜೆಎಂ, ಶ್ರೀ, ಶಶಿ, ವೆಂಕಿ ಎದ್ದು ಸ್ನಾನ ಮಾಡಿ ಸಿದ್ಧವಾದರು.. ಜೆಎಂ ಅಷ್ಟೊತ್ತಿಗೆ ಹೋಟೆಲಿನಲ್ಲಿ ಬೆಳಗಿನ ಉಪಹಾರ ಸಿಗುತ್ತಾ ಅಂತ ಕೇಳಿಕೊಂಡು ಬಂದ ಅಷ್ಟರಲ್ಲಿ ಶಶಿ ತನ್ನ ಮಾವ ಅವರಿಗೆ ಕರೆ ಮಾಡಿ ಬೇರೆ ಕಡೆ ಹೋಗೋಣ ಅಂತ ನಿರ್ಧರಿಸಿದ..

ಉಪಹಾರವನ್ನು ಊಟದ ರೀತಿಯಲ್ಲಿ ಮಾಡಿದೆವು .. ಕೊಟ್ಟ ಹಣಕ್ಕೆ ಮೋಸವಾಗಬಾರದು ಮತ್ತೆ ದರುಶನ ಎಷ್ಟು ಹೊತ್ತು ಆಗುತ್ತೋ.. ಎನ್ನುವ ಆತಂಕ ಇದ್ದದರಿಂದ ಹೊಟ್ಟೆಗೆ ಸರಿಯಾಗಿ ಆಹಾರ ತುಂಬಿಕೊಳ್ಳಲು ಸಿದ್ಧರಾಗಿದ್ದವುರು ...  ಹೊಟೇಲಿಂದ ಹೊರಗೆ ಬಂದಾಗ ಹೆಬ್ಬಾವಿನ ತರಹ ಆಗಿದ್ದರು ..

ದರುಶನಕ್ಕೆ ನಿಗದಿಯಾದ ಸಮಯಕ್ಕೆ ನಿಂತರು.. .. ಸರತಿ ಸಾಲು ತುಸು ವೇಗದಿಂದ ಸಾಗಿದ್ದರಿಂದ.. ಹತ್ತಕ್ಕೆ ನಿಂತವರು ಮುಂದಿನ ನಾಲ್ಕು ಘಂಟೆಗಳಲ್ಲಿ ಹೊರಗೆ ಬಂದಿದ್ದರು.. ದಿವ್ಯ ದರ್ಶನ ನಿಜವಾಗಿಯೂ ದಿವ್ಯವಾಗಿತ್ತು..

ತಮ್ಮ ತಮ್ಮ ಪ್ರಾರ್ಥನೆಗಳು ಸಲ್ಲಿಸಿದ ಮೇಲೆ.. ಎಲ್ಲರ ಅಭಿಮತ ಒಂದೇ ಆಗಿತ್ತು... ಬೆಟ್ಟದ ಕೆಳಗೆ ಹೋಗಿ ಊಟ ಮಾಡುವುದು.. ಆದರೆ ಬೆಟ್ಟದ ಬುಡಕ್ಕೆ ಬಂದಾಗ ಊಟ ಮುಂದಕ್ಕೆ ಹಾಕಬಹುದು ಎನ್ನಿಸಿತ್ತು.. ಯಾಕೆಂದರೆ ಹೆಬ್ಬಾವಿನ ಮದ ಇನ್ನೂ ಇಳಿದಿರಲಿಲ್ಲ.. ಚಿತ್ತೂರಿನ ತನಕ ತಲುಪಿ ಏನಾದರೂ ಲಘು ಉಪಹಾರ  ಮಾಡೋಣ ಅನ್ನಿಸಿ... ಶಶಿ ಕಾರಿನ ಚುಕ್ಕಾಣಿ ಹಿಡಿಡಿದ್ದ..

ಲಘು ಉಪಹಾರ ಮಾಡುತ್ತಾ ಕೂತಿದ್ದಾಗ ಎಲ್ಲರೂ ಮನೆಗೆ ಕರೆ ಮಾಡಿ ಎಷ್ಟು ಹೊತ್ತಿಗೆ ತಲುಪಬಹುದು ಎಂದು ಹೇಳಿದರು.. ಇಲ್ಲಿನ ಮುಂದಕ್ಕೆ ವೆಂಕಿ ಕಾರಿನ ಚಾಲಕನಾಗಿದ್ದ .. ಹೊಸ ಕಾರು ಹೊಸ ಉತ್ಸಾಹ.. ಆರಾಮಾಗಿತ್ತು..

"ವೆಂಕಟೇಶ್ವರ.. ಈ ನಾಲ್ವರು ಅದ್ಭುತ ಹುಡುಗರ ಪಯಣ ಸುಖಕರವಾಗಿತ್ತು.. ಅವರ ಯೋಜನೆಯಂತೆ ತುಸು ಬದಲಾವಣೆ ಬಿಟ್ಟರೆ..ಪಯಣ, ದರುಶನ, ಊಟ, ಉಪಹಾರ ಅಂದುಕೊಂಡ ರೀತಿಯಲ್ಲಿಯೇ ಆಗಿತ್ತು.. ಎಲ್ಲರಿಗೂ ಇದೆ ಆಶ್ಚರ್ಯ ಹೇಗೆ ಇದು ಎಂದು.. "

"ನೋಡ್ರಪ್ಪಾ.. ನಿಮ್ಮ ಯೋಜನೆ ತಪ್ಪು ನನ್ನದು ಸರಿ ಎನ್ನುವ ತತ್ವವೂ ನನ್ನದಲ್ಲ.. ನೀವು ಸರಿ ನಾನೇ ನಿಮಗೆ ನಿಮ್ಮ ಯೋಜನೆಗಳನ್ನು ಬದಲಿಸುತ್ತೇನೆ ಎನ್ನುವ ವಾದವೂ ಅಲ್ಲ.. ನೀವೆಲ್ಲ ಶ್ರದ್ದೆ ಭಕ್ತಿಗಳಿಂದ ನನ್ನ ನೋಡಲು ಬರುತ್ತೀರಾ.. ಶಶಿ ತನ್ನ ಉಗ್ರ ಸ್ವರೂಪ ಬಿಟ್ಟಿದ್ದ.. ವೆಂಕಿಯ ತರಲೆಗಳು ಕಡಿಮೆ ಇದ್ದವು.. ಯಾವಾಗಲೂ ಕಡಿಮೆ ಮಾತಾಡುವ ಜೆಎಂ ತನ್ನ ಇಂದಿನ ಅರೆ ಮೌನವನ್ನು ಕಾಪಾಡಿಕೊಂಡಿದ್ದ.. ಇನ್ನೂ ಶ್ರೀ ಬಗ್ಗೆ ಏನೂ ಹೇಳಲಿ.. ಅವನ ಬ್ಲಾಗ್ ಲೋಕವನ್ನು ನಾ ನೋಡಿದ್ದೇನೆ.. ಎಲ್ಲರ ಮನೋಸ್ಥೈರ್ಯ ಇಷ್ಟು ಬಲವಾಗಿದ್ದಾಗ ದೈವ ಸಹಾಯ ಇದ್ದೆ ಇರುತ್ತದೆ.. ನೋಡು ಅವರೆಲ್ಲರೂ ಸರಿ ಸುಮಾರು ರಾತ್ರಿ ೧೧.೩೦ ಹೊತ್ತಿಗೆ ತಮ್ಮ ತಮ್ಮ ಮನೆ ಸೇರಿಸುತ್ತೇನೆ ಎಂದು ಅಂದುಕೊಂಡಿದ್ದೆ.. ಸರಿಯಾಗಿ ಎಲ್ಲರೂ ಅವರ ಮನೆಗೆ ಸೇರಿದ್ದಾರೆ.. ಸರಿ ನಾ.. ನೋಡು ಇನ್ನೂ ೩೦ ಕ್ಷಣಗಳು ಬಾಕಿ ಇವೆ. ಏನಾದರೂ ಹೇಳುವುದಿದ್ದರೆ ಹೇಳಿಬಿಡು"

"ಓಂ ನಮೋ ನಾರಾಯಣಾಯ ನಮಃ.. ಶ್ರೀ ಗೆ ಮತ್ತು ಶೀತಲ್ ಇಷ್ಟ ಪಡುವ ಹಾಡು ನಮ್ಮ ಮಕ್ಕಳು ಚಿತ್ರದ "ನಿನ್ನೊಲುಮೆ ನಮಗಿರಲಿ ತಂದೆ.. ಕೈಹಿಡಿದು ನೀ ನೆಡೆಸು ಮುಂದೆ" ಇಷ್ಟೇ ನಾ ಹೇಳುವುದು.. ನಿನ್ನ ಅನುಗ್ರಹವಿರುವ ಸದನ ಎಂದೂ ಸಂತಸದಲ್ಲಿರಲಿ.. "

"ತಥಾಸ್ತು.. ಮನೋಬಲ ಸಿದ್ಧಿರಸ್ತು.. ಇಷ್ಟಾರ್ಥ ಸಿದ್ಧಿರಸ್ತು.. "

ದೇದೀಪ್ಯವಾದ ಬೆಳಕು ಸಣ್ಣದಾಗುತ್ತಾ ಟೀ ಒಳಗೆ ಸೇರಿಕೊಂಡಿತು..

                                                                          ******
ಶ್ರೀ ಹೇಗಿತ್ತು.. ಚೆನ್ನಾಗಿತ್ತಾ.. ನನ್ನ ಮನಸ್ಸಿಗೆ ಬಂದ ಹಾಗೆ ಹೇಳಿದೆ.. ಓದುಗರಿಗೆ ಇಷ್ಟವಾಗುತ್ತೋ ಇಲ್ಲವೋ ಗೊತ್ತಿಲ್ಲ.. ಆದರೆ ನನ್ನ ಹಳೆಯ ನೆನಪುಗಳು ಹಾಗೆಯೇ ಕಣ್ಣ ಮುಂದೆ ಬಂದು ನನಗೆ ತೋಚಿದ ರೀತಿಯಲ್ಲಿ ಹೇಳಿದೆ..

ಪ್ರೀತಿಯ ಶ್ರೀ ಲೇಖನದ ಓದುಗರೇ.. ಇದು ಶ್ರೀ ಶೈಲಿಯಲ್ಲ.. ನಾ ಹೇಳಿದೆ...  ಅವನು ಬರೆಡಿದ್ದಾನೆ.. ನಿಮಗೆ ಖುಷಿ ಅನಿಸಿದರೆ ನಿಮಗೆ ಅನಿಸಿದ್ದು ಹೇಳಿ (ಸರಿ ತಪ್ಪು ಏನಿದ್ದರೂ ಸರಿ).. ನನ್ನ ಶ್ರೀ ನಿಮ್ಮೆಲ್ಲರ ಜೊತೆಯಲ್ಲಿ ಸದಾ ಇರುತ್ತಾನೆ .. ಅವನ ಜೊತೆಯಲ್ಲಿ ನಾ ಇರುತ್ತೇನೆ.. ಓಕೆ ನಾ..

ಜೆಎಂ ತನ್ನ ಮೊಬೈಲ್ನಿಂದ ತೆಗೆದ ಚಿತ್ರಗಳನ್ನು ನಿಮಗಾಗಿ ಹಂಚಿಕೊಳ್ಳುತ್ತಿದ್ದೇನೆ..
ಇವರು ಹೀಗೆ ಇರೋದು.. ತರಲೆ ಗ್ಯಾಂಗ್

ನಾಚಿ ನೀರಾದ ವೆಂಕಿ.. 

ನಾಲ್ಕು ತರಲೆಗಳು ಒಂದು ಚಿತ್ರದಲ್ಲಿ 

ಹೆಬ್ಬಾವಿನ ತರಹ ಆಗಿದ್ದು ಇಲ್ಲೇ.. ಸೂಪರ್ ಉಪಹಾರ.
ಪೈ ವೈಸರಾಯ್ ಹೋಟೆಲ್ ತಿರುಪತಿ 

ಫುಲ್ ಎನರ್ಜಿ... ದರುಶನಕ್ಕೆ ಸಿದ್ಧ 
"ಶ್ರೀ ಮತ್ತೆ ಹೇಳುತ್ತಿದ್ದೇನೆ.. ನಿನ್ನ ಕಣ್ಣಿನ ಬಲೂನು ಗಟ್ಟಿ ಮಾಡಿಕೊ.. ನಿನ್ನ ಕಣ್ಣುಗಳಲ್ಲಿ ನನ್ನನ್ನೇ ಕಾಣುತ್ತೇನೆ.. ಬಿಂದುಗಳಲ್ಲಿ ನಾನಿದ್ದಾಗ ಜಾರಿ ಹೋಗದಂತೆ ತಡೆಯುವುದು ನಿನ್ನ ಜವಾಬ್ಧಾರಿ.. ಸರಿ ನಾ ಬರುತ್ತೇನೆ.. "

ನಾ ನೋಡುತ್ತಲೇ ಇದ್ದೆ.. ಜೊತೆಯಲ್ಲಿ ಓಡಾಡುತ್ತಿದ್ದವಳು.. ಕಣ್ಣಿಗೆ ಕಾಣುತ್ತಿದ್ದವಳು ನನ್ನ ಕಣ್ಣುಗಳಿಂದ ಒಳಗೆ ಸೇರಿ ನನ್ನ ಹೃದಯ ಕಮಲದಲ್ಲಿ ಐಕ್ಯವಾದಳು.. !

Tuesday, February 7, 2017

ಮೈಮನಸ್ಸಿನ ಆಯಾಸವನ್ನು ಆವಿಯಾಗಿಸುವ ಪ್ರವಾಸ --- ಮನದನ್ನೆಯ ಜನುಮದಿನಕ್ಕೊಂದು ಉಡುಗೊರೆ

ಕನಸುಗಳು ನನಸಾಗಬೇಕಾದರೆ ಕಣ್ಣು ಮಾತ್ರವಲ್ಲ ಹೃದಯ ಕೂಡ ಆ ಕನಸಿಗೆ ಎರಡೆರಡು ಬಾರಿ ಮಿಡಿಯಬೇಕು..   ಮೊದಲು ಬಾಗಿಲು ತೆಗೆದಾಗ ಕನಸುಗಳನ್ನು ಕಂಡರೆ ಎರಡನೇ ಬಾರಿ ಬಾಗಿಲು ತೆರೆದಾಗ ನನಸುಗಳು ಹೊಕ್ಕುತ್ತವೆ..

ತುರ್ತು ಪರಿಸ್ಥಿತಿ  ಕೆಲಸದ ಒತ್ತಡ.. ಹೋಗಲೇಬೇಕಾದ ಅನಿವಾರ್ಯತೆ.. ಬೇರೆ ದಾರಿ ಇರಲಿಲ್ಲ ನನ್ನ  ಸದಸ್ಯನ ಮೈಯನ್ನು ಒಮ್ಮೆ ತಡವರಿಸಿದೆ... "ಶ್ರೀ ನಾನು ಯಾವತ್ತೂ ಸಿದ್ಧ ಎನ್ನುವ ಸಿದ್ಧ ಉತ್ತರ ಬಂದಿತು"

ಮಡದಿ ಮತ್ತು ಮಗಳು ಆಗಲೇ ಸಿದ್ಧವಾಗಿ ಗೇಟ್ ಹತ್ತಿರ ನಿಂತಾಗಿತ್ತು.. ಸ್ವಲ್ಪ ಹೊತ್ತು ಸುಧಾರಿಸಿಕೊಂಡು.. ನನ್ನ ಅಂಬಾರಿ ಏರಿದಾಗ ಸಮಯ ರಾತ್ರಿ  ೧೧.೦೩. ​ಅಂದು ಅಕ್ಟೋಬರ್ ​ ​೨೫ ನೆ ತಾರೀಕು ೨೦೧೩ ನೆ ಇಸವಿ. ​

ಮೊಟ್ಟ ಮೊದಲ ಪ್ರವಾಸ ಕುಟುಂಬದೊಡನೆ​.. ​ ಅದೂ ಸುಮಾರು ೧೦೦೦ ಕಿ. ಮಿ. ಗಳ ಸುದೀರ್ಘ ಪಯಣ.. ಮಗಳು ಮನೆಯಿಂದ ಹೊರಟ ಎರಡೇ ನಿಮಿಷದಲ್ಲಿ ಹಿಂದಿನ ಸೀಟ್ ನಲ್ಲಿ ಹೊದ್ದಿಕೆ ಹೊದ್ದು ನಿದ್ರಾ ದೇವಿಗೆ ಶರಣಾದಳು..ಮಡದಿ ಕಣ್ಣು ಎಳೆಯುತ್ತಿದ್ದರೂ ಪತಿಗೆ ಜೊತೆ ನೀಡಲು ಹಾಗೂ ಹೀಗೂ ಮಾತಾಡುತ್ತಾ ಕೂತಿದ್ದಳು.. ಮೊದಲ ನೂರು ಕಿ.ಮಿ. ಸಾಗಿದ ಮೇಲೆ ಮಧ್ಯ ರಾತ್ರಿ ಸುಮಾರು ಒಂದೂವರೆ ಘಂಟೆ ನಿದ್ರಾದೇವಿ ಬಾಗಿಲು ತಟ್ಟುತ್ತಿದ್ದಳು.. ಸೊಗಸಾದ ರಸ್ತೆ.. ಬಿಡಲು ಮನಸ್ಸಿಲ್ಲ ಆದರೆ ನಿದ್ರಾದೇವಿ ಬಿಡಲಿಲ್ಲ.. ರಸ್ತೆ ಬದಿಗೆ ಕಾರನ್ನು ನಿಲ್ಲಿಸಿ ಹತ್ತು ನಿಮಿಷ ನಿದ್ರಾದೇವಿಯ ಜೊತೆಯಲ್ಲಿ ಸಲ್ಲಾಪ... ಮತ್ತೆ ಮುಂದುವರೆಯಿತು.. ೭೦ ಕಿಮಿ ಆಗಿರಬಹುದು..ನಾ ಬಂದೆ... ನಾ  ನೋಡ್ದೆ.. ನಾ ಗೆದ್ದೇ  ಅಂದಳು ನಿದ್ರಾಮಾತೆ.. ಸರಿ ಮತ್ತೆ ಒಂದು ಇಪ್ಪತ್ತು ನಿಮಿಷ.. ಹ ಹ
ಚುಮು ಚುಮು ಚಳಿಯಲ್ಲಿಯೂ ನನ್ನ ಜೊತೆ ಸಾಥ್ ಕೊಟ್ಟ ಗೆಳೆಯ 
ಬೆಳಗಿನ ಜಾವ ಐದು ಘಂಟೆ ಸಮಯ.. ಸಕ್ಕರೆ ನಿದ್ದೆಯ ಸಮಯ..ಕಾರಿನ ಡೆಕ್ ನಲ್ಲಿ  ನಿದ್ರಾದೇವಿ ಹಾಡಿದ  "ಎಂದೆದಿಗೂ ನಾ ನಿನ್ನ​... ​ ಬಿಡಲಾರೆ ಬಾ ಚೆನ್ನ" ತೇಲಿ ಬರುತ್ತಿತ್ತು . ಒಂದು ಘಂಟೆ ಸುಧೀರ್ಘ ನಿದ್ದೆ.. "

"ತೇರಾ ಏರಿ ಅಂಬರದಾಗೆ ನೇಸರ ನಗುತಾನೆ..." ಹಾಡು ಮನಸ್ಸನ್ನು ಒಮ್ಮೆಲೇ ಎಚ್ಚರಿಸಿತು.. ಓಹ್ ಬೆಳಗಾಯಿತು.. ಬೀದಿ ಬದಿಯ  ಅಂಗಡಿಯಲ್ಲಿ ಚಹಾ ಕುಡಿದು.. ಮುಖವನ್ನು ಆಗಸದೆಡೆ ಮಾಡಿ. ರವಿ ಮಾಮನಿಗೆ ನಮಿಸಿ ಹೊರಟೆ.. ಅಲ್ಲಿಂದ ಶುರುವಾಯಿತು.. ಒಂದು ಸುಮಧುರ ಯಾನ..

ರಾತ್ರಿ ೧೧ಕ್ಕೆ ಹೊರಟು ಬೆಳಿಗ್ಗೆ ೬ ಆಗಿದ್ದರು ಸವೆದದ್ದು ಬರಿ ೨೦೦ ಕಿ ಮೀ ಮಾತ್ರ.. ಚಿತ್ರದುರ್ಗ ತಲುಪಿದ್ದೆವು ಅಷ್ಟೇ.. ಅನಂತರ ಪಯಣಕ್ಕೆ ಜೋಶ್ ಬಂತು.. ಅಲ್ಲಿಂದ ಉಳಿದ ೩೦೦ ಕಿಮಿ ಮುಂದಿನ ಮೂರು ಘಂಟೆಯಲ್ಲಿ ತಲುಪಿದೆವು..
ಹೆಬ್ಬಾವು ಹೊಟ್ಟೆ ತುಂಬಾ ತಿಂದು ಸುಸ್ತಾಗಿ ಮಲಗಿದಂತೆ ಕಾಣುವ ಸುಧೀರ್ಘ ರಸ್ತೆ.. ತಿರುವಿಲ್ಲ... ಎದುರು ವಾಹನ ಬರುತ್ತದೆ ಅನ್ನುವ ಭಯವಿಲ್ಲ..

ಆ ರಸ್ತೆಯಲ್ಲಿ ವಾಹನ ಚಾಲನೆ ಒಂದು ಅದ್ಭುತ ಅನುಭವ.. ಸುತ್ತಮುತ್ತಲೂ ಹಸಿರು.. ತಂಪಾದ ಗಾಳಿ. ಮನಸ್ಸಿಗೆ ಮುದ ನೀಡುತ್ತಿತ್ತು.. ತಿಂಡಿಗೆ ಅಂತ ಒಂದು ಕಡೆ ನಿಲ್ಲಿಸಿ.. ವಿಶ್ರಾಂತಿ ತೆಗೆದುಕೊಂಡು ಮತ್ತೆ ಪಯಣ ಶುರು.
ವಿಧಾನಸೌಧ ಬೆಳಗಾವಿಯಲ್ಲಿ !!!

ಬೆಳಗಾವಿ ತಲುಪಿದಾಗ ಸುಮಾರು ಒಂಭತ್ತು ಮೂವತ್ತು. ನಿಗದಿ ಪಡಿಸಿದ ಹೋಟೆಲ್ ನಲ್ಲಿ ಪ್ರಾತಃ ಕರ್ಮಾದಿಗಳನ್ನೆಲ್ಲ ಮುಗಿಸಿ.. ಕಾರ್ಯ ನಿಮಿತ್ತ ಬಂದಿದ್ದ ಕಡತಗಳನ್ನೆಲ್ಲ ಅದರ ಸ್ವಸ್ಥಾನಕ್ಕೆ ​ಇಟ್ಟು ಕೆಲಸವನ್ನೆಲ್ಲಾ ಮುಗಿಸಿದಾಗ
ಮಧ್ಯಾಹ್ನವಾಗಿತ್ತು.. ವಿಪರೀತ ತಲೆಶೂಲೆ ಮಧ್ಯಾಹ್ನವನ್ನು ನುಂಗಿ ಹಾಕಿತ್ತು..

ಸಂಜೆ ಹಾಗೆ ಬೆಳಗಾವಿ ರಸ್ತೆಯಲ್ಲಿ ಅಡ್ಡಾಡುತ್ತಾ ಮತ್ತೆ ನನ್ನ ಲೆಕ್ಕ ಪತ್ರ ಅಧಿಕಾರಿಯನ್ನು ಭೇಟಿ ಮಾಡಿ ಅಂದಿನ ಕೆಲಸದ ಒಂದು ಟಿಪ್ಪಣಿ ಮಾಡಿಕೊಂಡು ಅವರ ಜೊತೆಯಲ್ಲಿಯೇ ರಾತ್ರಿ ಊಟಕ್ಕೆ ಹೋದೆವು..

ಮೊದಲ ದಿನ ನಾ ಬಂದ ಕೆಲಸ ಮುಗಿದ್ದದ್ದರಿಂದ.. ಹಾಗೆಯೇ ಮಾರನೆ ದಿನ ಬೆಂಗಳೂರಿಗೆ ಹಿಂದಿರುಗುವ ಮುನ್ನ ನೋಡಬೇಕಾದ ತಾಣಗಳ ಪಟ್ಟಿ ಸಿದ್ಧವಾಗಿದ್ದರಿಂದ..  ಮತ್ತು ಹಿಂದಿನ ದಿನದ ಸುದೀರ್ಘ ವಾಹನ ಚಾಲನೆಯಿಂದ ಸುಸ್ತಾಗಿದ್ದ ದೇಹಕ್ಕೆ ನಿದ್ರೆ ತಾನಾಗೆ ಬರುವ ಮಳೆಯಂತೆ ತಂಪೆರೆಯಿತು..
ನೂರಾರು ಮನಸ್ಸನ್ನು ಬೆಸೆಯುವ ಸೇತುವೆ!!!
ಅಪ್ಪಾ ಗೋಕಾಕ್ ಫಾಲ್ಸ್ ನೋಡೋಣ ಅಂತ ಮಗಳು ಯಾವಾಗಲೂ ಹೇಳುತ್ತಿದ್ದಳು.. ಸರಿ ಅಲ್ಲಿಗೆ ಹೋಗುವುದು ಮೊದಲೇ ನಿರ್ಧಾರವಾಗಿತ್ತಲ್ಲ..!

ಕರುನಾಡಿನ ನಯಾಗರ ಎಂದೇ ಹೆಸರಾಗಿದ್ದ ಜಲಪಾತ ಮಾನವನ ಮಹತ್ವಾಕಾಂಕ್ಷೆ ​ ಅವನ ಅಭಿವೃದ್ಧಿಯ ಮಂತ್ರದ ಪದಗಳಿಗೆ ಸೊರಗಿ ನಾಚಿ ಬಾಡಿ ಹೋಗಿತ್ತು.. ಅಲ್ಲಿ ಕಾಣುತ್ತಿದ್ದ ಬೆತ್ತಲೆ ಕಲ್ಲು ಬಂಡೆಗಳು ಮಾನವನ (ಅತಿ)ಆಸೆಗಳ ಫಲ ನಾವಿಲ್ಲಿ ಅನುಭವಿಸುತ್ತಿದ್ದೇವೆ ಎನ್ನುವಂತೆ ಇತ್ತು..
ಅದರ ಇನ್ನೊಂದು ಮುಖ!!!
ಇಷ್ಟೆಲ್ಲಾ ಆದರು ಪ್ರಕೃತಿ ಮಾತೆ ತನ್ನ ಚೆಲುವನ್ನು ಅಷ್ಟು ಸುಲಭವಾಗಿ ಬಚ್ಚಿಡುವಳು ಅಲ್ಲ ಅಲ್ಲವೇ.. ಆ ನಿಸರ್ಗ ಮಾತೆಯ ನಿರ್ದೇಶನದಲ್ಲಿ ಅವಳ ಶಿಲ್ಪಿ ಸುಂದರವಾಗಿ ಕೊರೆದು ನಿಲ್ಲಿಸಿದ್ದ ಅನೇಕ ಬಂಡೆಗಳು ಸುಂದರವಾಗಿ ಕಾಣುತ್ತಿದ್ದವು.. ಆ ಜಲಪಾತದ ಮೇಲೆಯೇ ನೂರಕ್ಕೂ ಹೆಚ್ಚು ವರ್ಷಗಳಿಂದ ನಿಂತಿರುವ ಸುಮಾರು ೬೫೯ ಅಡಿ ಉದ್ದದ ತೂಗು ಸೇತುವೆ.. ಅದರ ಮಧ್ಯೆ ಹೋದಾಗ ಅದು ಬಳುಕುವ ಚೆಲುವು.. ಹಾಗೆಯೇ ಬಳುಕುವಾಗ ನಡುಗುವ ನಮ್ಮ ಎದೆಯು.. ಆಹಾ ಅದರ ಅನುಭವವೇ ಅನುಭವ..
ಕರುನಾಡ ನಯಾಗರ.. ನೀರಿದ್ದಾಗ.. 
ಘಟಪ್ರಭಾ ನದಿಯ ಒಂದು ತಿರುವು ಮತ್ತು ಅದರ ಮಧ್ಯದಲ್ಲಿ ಬರುವ ಸುಮಾರು ೧೭೦ ಅಡಿ ​ಆಳದ ಕಣಿವೆಯಲ್ಲಿ ಧುಮುಕುವ ಹಾಲಿನ ನೊರೆ ನಯಾಗರ ಜಲಪಾತದ ಅವಳಿ ಎನ್ನುವಂತೆ ಕಾಣುತ್ತದೆ.. ಹೆಚ್ಚು ಕಡಿಮೆ ಕುದುರೆ ಲಾಳದ ಆಕೃತಿಯ ಈ ಜಲಪಾತ ಮಳೆಗಾಲದಲ್ಲಿ ಮೈದುಂಬಿ ಹರಿಯವ ಕನ್ಯಾಕುಮಾರಿಯೇ ಹೌದು.. ನಿಜಕ್ಕೂ ಆ ಸಮಯದಲ್ಲಿ ಕೆಳಗೆ ಬಂಡೆಗಳ ಮಧ್ಯದಲ್ಲಿ ರಭಸದಿಂದ ಹರಿಯುವ ಘಟಪ್ರಭೆ.. ನಂತರ ಕಮರಿಗೆ ಬೀಳುವಾಗ ಎದೆ ನಡುಗಿಸುವ ಸದ್ದು.. ತೂಗುತ್ತಾ ಎದೆ ನಡುಕವನ್ನು ಹೆಚ್ಚಿಸುವ ತೂಗು ಉಯ್ಯಾಲೆ... ಒಮ್ಮೆ ಅನುಭವಿಸಬೇಕು..

ಆದರೆ ನಾವು ಹೋದಾಗ ಬತ್ತಿದ ಬಾಳೆಕಾಯಿ​ಯ ಹಾಗೆ ಆಗಿ ಹೋಗಿತ್ತು ಆ ಸುಂದರ ಜಲಪಾತ.. ಈ ಜಲಪಾತಕ್ಕೆ ನನ್ನದು ಎರಡನೇ ಭೇಟಿ ಆದರೂ ಮೊದಲಿಗೆ ನೋಡುತ್ತಿದ್ದೇನೆ ಎನ್ನುವಂತೆ ಹೊಸ ಲೋಕವನ್ನು ಪ್ರಕೃತಿ ಮಾತೆ ತೆರೆದಿಟ್ಟಿದ್ದಳು..

ಜಲಪಾತದ ವಿಹಂಗಮ ನೋಟ ನೋಡಲು ಸೇತುವೆಯನ್ನು ದಾಟಿ ಸುಮಾರು ಒಂದು ೨೦೦
ಮೀಟ​​ರುಗಳ​ಷ್ಟು  ನಡೆದರೆ ಅಲ್ಲಿ ಚಾಲುಕ್ಯರ ಕಾಲದ ಕೆಲ ದೇವಾಲಯಗಳು ಗೋಚರಿಸುತ್ತವೆ.. ಕೆತ್ತನೆ, ಕುಸುರಿ ಗಮನ ಸೆಳೆಯದಿದ್ದರೂ ಆ ಕಾಲದ ದೇವಾಲಯಗಳನ್ನು ನೋಡುತ್ತಾ..ಕಾಲಘಟ್ಟದಲ್ಲಿ ಅನೇಕ ಘಟನೆಗಳನ್ನು ಮಡಿಲಲ್ಲಿ ಹುದುಗಿಸಿಕೊಂಡಿರುವ ಆ ಪುಣ್ಯ ಭೂಮಿಯ ಜೊತೆಯ ಕೆಲ ಸಮಯದ ಒಡನಾಟ ನಿಜವಾಗಿಯೂ ಮನಸ್ಸಿಗೆ ಹಾಯ್ ಎನ್ನಿಸುತ್ತದೆ..

ಪುರಾತನ ಗೋಕಾಕ್ ಮಿಲ್ಸ್ 
ಈ ದೇವಾಲಯದ ಹಿಂಭಾಗದಲ್ಲಿ ಬಂದು ನಿಂತರೆ ರುದ್ರ ರಮಣೀಯ ಗೋಕಾಕ್ ಜಲಪಾತದ ಸಂಪೂರ್ಣ ದರ್ಶನ ಸಿಗುತ್ತದೆ.. ಅದರ ಜೊತೆಯಲ್ಲಿಯೇ ಆ ಕಣಿವೆ, ಸುಮಾರು ೧೮೮೭ ರಲ್ಲಿ ಸ್ಥಾಪಿತಗೊಂಡ ವಿದ್ಯುತ್ ಉತ್ಪಾದನ ಕೇಂದ್ರ.. ಎಲ್ಲವೂ ಕಾಣಸಿಗುತ್ತದೆ.. ಹಾಗೆಯೇ ಇನ್ನು ಕಾರ್ಯ ನಿರತವಾಗಿರುವ ಗೋಕಾಕ್ ಮಿಲ್ಸ್ ಕಟ್ಟಡ ಮನಸ್ಸೆಳೆಯುತ್ತದೆ..

ಜಲಪಾತದ ದಂಡೆಯಲ್ಲಿರುವ ಶಿವನ ದೇವಸ್ಥಾನ ಗಮನ ಸೆಳೆಯುತ್ತದೆ.. ಜೊತೆಯಲ್ಲಿಯೇ ದೇವಾಲಯದ ಕಟ್ಟಡ ಸೊಬಗು ಒಂದು ಕ್ಷಣ ನಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುತ್ತದೆ..

ಅಲ್ಲಿಂದ ಹೊರಟ ಮೇಲೆ ನಮ್ಮ ಮುಂದಿನ ಪಯಣ ಇದ್ದದ್ದು ಬೆಂಗಳೂರು ಮಾತ್ರ.. ಅಲ್ಲಿಂದ ಯರಗಟ್ಟಿ ಮಾರ್ಗವಾಗಿ ಸವದತ್ತಿ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು ಸೇರುವ ನಮ್ಮ ಪಯಣಕ್ಕೆ ಮತ್ತೆ ತಡೆಯೊಡ್ಡಿದ್ದು ಒಂದು ಅನಾಮಧೇಯ ಜಲಪಾತ..
ಎಲ್ಲೆಡೆ ಹಸಿರು 
ಸಾಮಾನ್ಯ ಸಾಹಸಗಳಿಗೆ ತಲೆ ಹಾಕದ ನನ್ನ ಮಡದಿ ಅಷ್ಟು ನೀರಿಲ್ಲದ ಜಲಪಾತವನ್ನು ನೋಡಿ ಖುಷಿಯಾಗಿ ಸುಮಾರು ಎತ್ತರಕ್ಕೆ ಹತ್ತಿಯೇ ಬಿಟ್ಟಳು.. ನನಗೂ ನನ್ನ ಮಗಳಿಗೂ ಆಶ್ಚರ್ಯ.. ಇಬ್ಬರು ಅವಳನ್ನು ​ಮು​ಟ್ಟಿ ನೋಡಿದೆವು ಜ್ವರ ಏನು ಇರಲಿಲ್ಲ :-) ಆರಾಮಾಗಿಯೇ ಇದ್ದಳು..


ಮೇಲೆ ಹತ್ತಿ ಜಲಪಾತದ ಇನ್ನೊಂದು ಮುಖವನ್ನು ಕಂಡು ಪುಳಕಿತಗೊಂಡೆ. ಗೋಕಾಕ್ ಜಲಪಾತ ತನ್ನ ಮಡಿಲಲ್ಲಿ ಹೆಚ್ಚು ನೀರನ್ನು ಇಟ್ಟುಕೊಳ್ಳದೆ ಬೇಸರಮೂಡಿಸಿದ್ದರೂ.. ಈ ಅನಾಮಧೇಯ ಹಾಗೂ ಅಚ್ಚರಿ ಮೂಡಿಸಿದ ಜಲಪಾತ ಒಂದು ರೀತಿಯ ತಂಪನ್ನು ಎರೆಯಿತು.. ಕೆಲಕಾಲ ಅದರ ಮಡಿಲಲ್ಲಿ ಆಡುತ್ತಾ, ಅನೇಕ ಚಿತ್ರಗಳನ್ನು ಕ್ಯಾಮೆರಾದ ಹೊಟ್ಟೆಯೊಳಗೆ ತುಂಬಿಸಿಕೊಂಡು ಹೊರಟೆವು ಬೆಂಗಳೂರಿನ ಕಡೆಗೆ...

ಹರಿಹರ ತಲುಪಿದಾಗ.. ಸಂಜೆಯಾಗಿತ್ತು.. ಆ ದೇವಾಲಯವನ್ನು ನೋಡಿರಲಿಲ್ಲ.. ಕಾರು ನಿಲ್ಲಿಸಿದ್ದೆ ದೇವಸ್ಥಾನದೊಳಗೆ ಹೆಜ್ಜೆ ಹಾಕಿದ್ದೆ. ಹರಿಹರೇಶ್ವರನಿಗೆ ನಮ್ಮ ಅರ್ಜಿ ಸಲ್ಲಿಸಿ... ಮತ್ತೆ ಬರುವುದಾಗಿ ಹೇಳಿ ಹೊರಟೆವು.
ಹರಿಹರೇಶ್ವರ
ಈ ದೇವಸ್ಥಾನದ ಬಗ್ಗೆ ಕಿರುಮಾತು.. ಈ ದೇವಾಲಯವನ್ನು ನೋಡಬೇಕೆಂಬ ಬಯಕೆ ತುಂಬಾ ವರ್ಷಗಳದಾಗಿತ್ತು.. ಹೆಜ್ಜೆ ಇಟ್ಟಾಗ ಏನೋ ಒಂದು ರೀತಿಯ ಸಂತೋಷ.. ಊರ ಹೊರಗಿದ್ದ ದೇವಾಸ್ಥಾನ.. ನಾಗರೀಕತೆ ಬೆಳೆದು.. ಹಳ್ಳಿ ಪಟ್ಟಣವಾಗಿ.. ಇಂದು ದೇವಸ್ಥಾನ ಅಂಗಣದ ಒಳಗೆ ಅನೇಕ ಸಂಸಾರಗಳು ಬೀಡು ಬಿಟ್ಟು.. ಇದು ಒಂದು ರೀತಿಯ ಮನೆ ದೇವಾಲಯವಾಗಿದೆ.. ಹೊಯ್ಸಳ ಶಿಲ್ಪಕಲೆ ಸುಂದರವಾಗಿದೆ.. ಸಮಯದ ಅಭಾವ.. ಹೆಚ್ಚು ಹೊತ್ತು ನಿಲ್ಲಲು ಆಗಲಿಲ್ಲ..

ದಿನಕರ ಆಗಲೇ ತನ್ನ ಕೆಲಸ ಮುಗಿಸಿ ಹೊರಟಿದ್ದ.. ಕತ್ತಲೆಯಲ್ಲಿ ಡ್ರೈವಿಂಗ್.. ಇಷ್ಟವಾಗಿತ್ತು... ಶಿರಾ ಹತ್ತಿರ ಒಂದು ಕಾಫಿ.. ಮತ್ತೆ ದಾಬಸ್ ಪೇಟೆ ಹತ್ತಿರ ಒಂದು ಕಾಫಿ.. ನಂತರ ಸೀದಾ ಮನೆ..

ಒಂದು ಅದ್ಭುತ ಪ್ರವಾಸ ಮಾಡಿದ ಖುಷಿ ನನ್ನದಾದರೆ, ಇಂದಿಗೂ ಮಗಳು ಹೇಳುತ್ತಾಳೆ..ಅಪ್ಪ ಬೆಳಗಾವಿಗೆ ಹೋಗಿದ್ದೆವಲ್ಲಾ ಆ ತರಹ ಇನ್ನೊಮ್ಮೆ ಬೇರೆ ಕಡೆ ಹೋಗೋಣ.. :-)

ನನ್ನ ಮಡದಿ ನನ್ನ ಜೊತೆ ಪ್ರವಾಸಕ್ಕೆ ಇಂದಿಗೂ ಸಿದ್ಧ.. ಇಡೀ ಪ್ರವಾಸ ದೇಹಕ್ಕೆ ಮನಸ್ಸಿಗೆ ಮುದ ನೀಡಿತ್ತು... ಸಾಮಾನ್ಯ ಪ್ರವಾಸಿ ಲೇಖನವನ್ನು ತಕ್ಷಣಕ್ಕೆ ಬರೆಯುವ ನಾನು.. ಕಾರಣದ ಅರಿವಿಲ್ಲದೆ ಮೂರು ವರ್ಷದ ನಂತರ ಬರೆಯುತ್ತಿದ್ದೇನೆ.. ಆದರೆ ಕಾರಣ ಕಾರಣ ಕಾರಣ ನೂರಾರು ಇರಬಹುದು.. ಆದರೆ ಈ ತಡವೂ ಒಂದು ರೀತಿಯಲ್ಲಿ ವರವಾಗಿದೆ..

ನನ್ನಾಕೆ ನನ್ನ ಜೀವನದಲ್ಲಿ ಹೆಜ್ಜೆ ಇಟ್ಟು ಬಂದು ಹದಿನೈದು ವರ್ಷಗಳಾದವು.. ಇಂದು ಅವಳ ಜನುಮದಿನ.. ಅವಳು ಇಂದಿಗೂ ಇಷ್ಟಪಡುವ ಬೆಳಗಾವಿ ಪ್ರವಾಸದ ಬಗ್ಗೆ ಬರೆಯುದಕ್ಕಿಂತ ಇನ್ನೊಂದು ಉಡುಗೊರೆ ಇರಲಾರದು ಅಲ್ಲವೇ.. !!


ಹಾಗಾಗಿ ಈ ಲೇಖನ ಸವಿತಾ ಜನುಮದಿನಕ್ಕೆ ಅರ್ಪಿತಾ.. ಹ್ಯಾಪಿ ಬರ್ತ್ಡೇ ಟೀಈಈ!!!

Saturday, January 21, 2017

ವೈಟಿಂಗ್ ವೈಟಿಂಗ್ ... !!!

ಟ್ರಿಪ್ಪಿಂಗ್ ಬ್ಲಾಗ್ ನಲ್ಲಿ ಏನಾದರೂ ಬರೆಯೋಣ ಅಂತ.. ಆ ಕೊಂಡಿಯನ್ನು ಒತ್ತಿದೆ.. ಬರಲಿಲ್ಲ.. ಅಂತರ್ಜಾಲ ಸಂಬಂಧ ಸರಿಯಿದೆಯೇ ಎಂದು ಪರೀಕ್ಷಿಸಿದೆ.. ಉಆಹೂಂ ಎಲ್ಲವೂ ಸರಿ ಇತ್ತು.. ಏನಾಯಿತು.. ಅರಿವಾಗಲಿಲ್ಲ... ಲ್ಯಾಪ್ಟಾಪ್ ನ ಬಂದ್ ಮಾಡಿ ಮತ್ತೆ ಶುರು ಮಾಡಿದೆ.. ಸ್ವಲ್ಪ ಹೊತ್ತಾಯಿತು. 

ಮತ್ತೆ ಅದೇ ಕಾಟ.. ಓಪನ್ ಆಗ್ತಾ ಇಲ್ಲ.. ಆ ಲಿಂಕ್ ಮೇಲೆ ಬೆರಳನ್ನು ಸವರಿ 
"ಯಾಕಪ್ಪ ಏನಾಯಿತು" ಎಂದು ಕೇಳಿದೆ..  
ಅಲ್ಲಿಯ ತನಕ ಬೆಳ್ಳಗಿದ್ದ ಆ ಲಿಂಕ್ ಅಚಾನಕ್ ಕೆಂಪಾಯಿತು.. ಗಾಬರಿಯಾದೆ.. 
"ಯಾಕೋ ಏನಾಯಿತು.. ಯಾಕೆ ಕೋಪ.. ಮೈಯೆಲ್ಲಾ ಕೆಂಪಾಗಿದೆ.. ಏನಾಯಿತು" 

"ಲೋ ಶ್ರೀ. ಬ್ಲಾಗ್ ಅಂತ ನೀ ಬರೆಯೋಕೆ ಶುರುಮಾಡಿದ್ದೆ ನನ್ನ ಲಿಂಕ್ ಇಂದ.. ಟ್ರಿಪ್ಪಿಂಗ್ ಲೈಫ್ ಶುರುಮಾಡಿದ ಮೇಲೆ ತಾನೇ ಮಿಕ್ಕ ಏಳು ನನ್ನ ತಮ್ಮಂದಿರು ಬಂದದ್ದು.. ನೀ ಅವರನ್ನ ಮಾತ್ರ ಮಾತಾಡಿಸ್ತಿದ್ದೀಯ.. ನನ್ನನ್ನು ಮರೆತೇ ಬಿಟ್ಟಿದ್ದೀಯ.. ೨೦೧೪ ರಲ್ಲಿ ಏನೂ ಆಗಿರಬಹುದು.. ಅದನ್ನೇ ನೀ ಈಗಲೂ ಮನಸ್ಸಲ್ಲಿ ಇಟ್ಟುಕೊಂಡು ಸುಮ್ಮನಿರುವುದು ನ್ಯಾಯವೇ.. ೨೦೧೬ರಲ್ಲಿ ತಿರುಪತಿ ಪ್ರವಾಸದ ಬಗ್ಗೆ ಬರೆದ ಮೇಲೆ ಮತ್ತೆ ನನ್ನ ಕಡೆ ತಿರುಗಿಯೂ ನೋಡಿಲ್ಲ.. ಯಾಕೆ ನನ್ನ ಮೇಲೆ ಕೋಪವೇ, ಬೇಸರವೇ" ಟ್ರಿಪ್ಪಿಂಗ್ ಬ್ಲಾಗ್ ಮುಖ ಕೆಂಪಗೆ ಮಾಡಿಕೊಂಡೆ ಉತ್ತರಿಸಿತು.. 

"ಹೌದೇ.." ಎಂದು ಆ ಕೊಂಡಿಯನ್ನು ಒತ್ತಿದರೆ.. "ಅರೆ ಹೌದು ೨೦೧೫, ೨೦೧೬ ಪೂರ್ತಿ ಬಣ ಬಣಗುಡುತ್ತಿದೆ.. ಲೇಖನಗಳೇ ಇಲ್ಲ.. ಪ್ರವಾಸ ಆಗೊಮ್ಮೆ ಈಗೊಮ್ಮೆ ಇದ್ದರೂ.. ನಾ ಅಷ್ಟು ದಿನ ಖಾಲಿ ಬಿಡೋಲ್ಲ.. ಸರಿ ಆದದ್ದು ಆಯಿತು.. ಹೋದವರು ಒಳ್ಳೆಯವರೇ.. ಹೋಗಲಿ ಬಿಡು.. ನಿನ್ನ ಯಾತ್ರೆ ಮತ್ತೆ ಶುರುಮಾಡುತ್ತೇನೆ.. ಖಾಲಿ ಬಿಡೋಲ್ಲ.. ಇದು ನಿರ್ಧಾರ ಅಲ್ಲಾ.. ಬದಲಿಗೆ ಎಲ್ಲರನ್ನು ಸಂಭಾಳಿಸುವ ಒಂದು ಯತ್ನ.. "

ಕೆಂಪಗೆ ಕುಡಿಯುತ್ತಿದ್ದ ಮೊಗ.. ನಿಧಾನವಾಗಿ ಅರಳತೊಡಗಿತು.. "ಸರಿಯಪ್ಪ.. ನಿನ್ನ ಮೇಲೆ ನಂಬಿಕೆ ಇದೆ.. ಶುರುಮಾಡು"

"ಧನ್ಯವಾದಗಳು ಕಣೋ.. ನೋಡು ಒಂದು ಲೇಖನ ನಿನಗೋಸ್ಕರ.. ಓದು ಸಂತೋಷ ಪಡು ತೃಪ್ತಿ ಪಡು"

"ವೈಟಿಂಗ್ ವೈಟಿಂಗ್" ಎಂದಿತು ಬ್ಲಾಗ್ ಲಿಂಕ್.. 

ಕಥೆ ಮೂಡಲು ಶುರುವಾಯಿತು
*********
೨೦೦೬ರ ಕಥೆ.. 

ದಸರಾದಲ್ಲಿ ಆಫೀಸಿಗೆ ಒಂದು ವಾರ ವಿರಾಮ ನೀಡಿದ್ದರು.. ಸುಮ್ಮನೆ ಮನೆಯಲ್ಲಿ ಕಳೆಯೋಕೆ ಇಷ್ಟವಿರಲಿಲ್ಲ.. ಸರಿ ಎಲ್ಲಿಗೆ ಹೋಗೋದು ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು.. ನನ್ನ ಬಾಲ್ಯದ ಕನಸಾದ ಕನ್ಯಾಕುಮಾರಿಗೆ ಹೋಗೋದು ಅಂತ. ಪ್ಯಾಕೇಜ್ ಟ್ರಿಪ್ಪಿಗೆ ಹಣ ಕಟ್ಟಿ ಬಂದಾಯ್ತು... ಮನದಲ್ಲಿ ಏಳುತ್ತಿದ್ದ ಅಲೆಗಳು ಹಿಂದೂ ಮಹಾಸಾಗರದಲ್ಲಿ ಏಳುತ್ತಿದ್ದ ತರಂಗಗಳಿಗಿಂತ ದೊಡ್ಡದಾಗಿತ್ತು. ಮಧುರೈ, ರಾಮೇಶ್ವರಂ ಮತ್ತು ಕನ್ಯಾಕುಮಾರಿ ತ್ರಿವಳಿ ಊರುಗಳ ಭೇಟಿ. 

ರಾತ್ರಿ ಹೊರಟ ಬಸ್ ನಮ್ಮನ್ನು ಕರೆತಂದಿದ್ದು ಮಧುರೈ ದೇವಸ್ಥಾನಕ್ಕೆ. ಉತ್ತಮ ಹೋಟೆಲಿನ ಕೋಣೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಸಿಕ್ಕ ಮೇಲೆ, ಸ್ನಾನ ಮಾಡಿ.. ಹೊರಗೆ ಬಂದೆವು. ತಮಿಳುನಾಡಿಗೆ ಅದು ಎರಡನೇ ಭೇಟಿ.. ಊಟ ಉಪಚಾರಗಳ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ.  

ಪ್ಯಾಕೇಜ್ ಟ್ರಿಪ್ನವನು ನಾಳೆ ಬೆಳಿಗ್ಗೆ ಎಂಟರ ಹೊತ್ತಿಗೆ ಹೋಟೆಲ್ ಕೋಣೆ ಖಾಲಿ ಮಾಡಿ ಇಲ್ಲಿಯೇ ನಿಂತಿರಿ, ನಮ್ಮ ಬಸ್ ಬರುತ್ತೆ ರಾಮೇಶ್ವರಕ್ಕೆ ಕರೆದುಕೊಂಡು ಹೋಗುತ್ತೀವಿ ಎಂದು ಹೇಳಿದ್ದ ಹಾಗಾಗಿ ನಮಗೆ ಬೇಕಾದಷ್ಟು ಸಮಯವಿತ್ತು. 

ಮೀನಾಕ್ಷಿ ದೇವಸ್ಥಾನಕ್ಕೆ ಹೋಗಬೇಕಿತ್ತು. ಮೊದಲು ತಿಂಡಿ ತಿನ್ನೋಣ ಎಂದು ಅಕ್ಕ ಪಕ್ಕದ ಹೋಟೆಲಿನಲ್ಲಿ ಕಣ್ಣಿಗೆ ಕಂಡದ್ದು ಮಾರ್ಬಲ್ ಬಿಳುಪಿನ ಇಡ್ಲಿ. ಸರಿ ಹೊಟ್ಟೆಗೆ ಸೇರಿದಷ್ಟು ಇಡ್ಲಿ ತಿಂದು ಹೊರಗೆ ಬಂದೆವು. 

ಹೋಟೆಲಿನವನ ಹತ್ತಿರ ಮೀನಾಕ್ಷಿ ದೇವಸ್ಥಾನಕ್ಕೆ ಹೋಗಬೇಕು ಹೇಗೆ ಹೋಗೋದು ಅಂತ ಕನ್ನಡಲ್ಲಿಯೇ ಕೇಳಿದೆ.. ಅವ ಒಬ್ಬ ಸೈಕಲ್ ರಿಕ್ಷನವನನ್ನು ಕರೆದು ದೇವಸ್ಥಾನಕ್ಕೆ ಕರೆದುಕೊಂಡು ಹೋಗು ಅಂತ ತಮಿಳಿನಲ್ಲಿ ಹೇಳಿದ. 

ನಮಗೂ ಒಂದು ಒಂದು ಸಂಭ್ರಮ.. ಟಾಂಗಾ ಶೈಲಿಯ ಸೈಕಲ್ ರಿಕ್ಷಾದಲ್ಲಿ ಹೋಗೋದು. ಒಂದು ಹತ್ತು ನಿಮಿಷ ಪಾಪ ಕಷ್ಟ ಪಟ್ಟು ಸೈಕಲ್ ತುಳಿದು ದೇವಸ್ಥಾನಕ್ಕೆ ಕರೆದುಕೊಂಡು ಬಂದ. 

ಎಲ್ಲೆಲ್ಲಿ ನೋಡಿದರು ಬರಿ ಗೋಪುರಗಳೇ ಕಾಣುತ್ತಿದ್ದವು. ತಮಿಳಿನಲ್ಲಿ ಒಬ್ಬ ಹೇಳಿದ.. ನನಗೆ ಅರ್ಥವಾಗಿದ್ದು ಇಷ್ಟು "ಸರ್ ನೀವು ಹೋದ ಕಡೆಯಲ್ಲಿಯೇ ಬರೋದು ಕಷ್ಟ.. ನೀವು ಯಾವ ಬಾಗಿಲಿನಿಂದಾದರೂ ಸರಿ ಹೊರಗೆ ಬಂದು.. ನಿಮ್ಮ ಹೋಟೆಲ್ ಕಾರ್ಡ್ ತೋರಿಸಿ ಅಲ್ಲಿಗೆ ಬಿಡುತ್ತಾರೆ. ಗಾಬರಿ ಮಾಡಿಕೊಳ್ಳಬೇಡಿ.. " ಅವನ ಸಲಹೆ ಉತ್ತಮವಾಗಿತ್ತು ಮತ್ತು ಅದನ್ನೇ ಕುರುಡು ರೀತಿಯಲ್ಲಿ ಅನುಸರಿಸಿದ್ದೆವು. 

ದಸರಾ ಸಮಯ... ಮೀನಾಕ್ಷಿ ದೇವಾಲಯ ಗಿಜಿ ಗಿಜಿಗುಡುತಿತ್ತು. ಮೀನಾಕ್ಷಿ ದೇವಿಯ ದರ್ಶನವಾಗಲಿಲ್ಲ.. ಆದರೆ ಸುಂದರೇಶ್ವರನ ದರ್ಶನ ಮಾಡಿ.. ನಮ್ಮ ಅರ್ಜಿಯನ್ನು ನಿನ್ನ ಮಡದಿಗೂ ತಲುಪಿಸಿಬಿಡಪ್ಪಾ ಎಂದು ಕೋರಿಕೊಂಡು.. ಅಲ್ಲೇ ಸ್ವಲ್ಪ ಹೊತ್ತು ಧ್ಯಾನ ಮತ್ತು ಕ್ಯಾಮೆರಾಗೆ ಸ್ವಲ್ಪ ಕೆಲಸ ಕೊಟ್ಟೆ.. 

ಮಧ್ಯಾನ್ಹ ಊಟ ಮಾಡಿ.. ಸ್ವಲ್ಪ ಹೊತ್ತು ಮಲಗಿದ್ದೆವು.. ಸಂಜೆ ಎದ್ದು ಗಾಂಧಿ ಸ್ಮಾರಕಕ್ಕೆ ಬಂದೆವು. ಗಾಂಧೀಜಿಯ ರಕ್ತ ಸಿಕ್ತ ಬಟ್ಟೆಯ ಒಂದು ತುಣುಕನ್ನು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು.. ಅದನ್ನೆಲ್ಲ ಒಂದು ಸುತ್ತಿ ನೋಡಿ ಬಂದು.. ಅದರ ಪಕ್ಕದಲ್ಲಿಯೇ ಶ್ರೀನಿವಾಸನ ದೇವಾಲಯವಿತ್ತು, ಅಲ್ಲಿಂದ ಊರ ಹೊರಗೆ ಇನ್ನೊಂದು ಶ್ರೀನಿವಾಸನ ದೇವಾಲಯ.. ಅದು ತುಂಬಾ ಇಷ್ಟವಾಯಿತು.. 

ನಮ್ಮ ಭಕ್ತಿ ಪೂರಿತ ಅರ್ಜಿಯನ್ನು ತಲುಪಿಸಿ ಹೋಟೆಲಿಗೆ ಬಂದಾಗ ಒಂಭತ್ತಾಗಿತ್ತು. ಮಧ್ಯದಲ್ಲಿ ಊಟ ಮಾಡಲು ಹೋಟೆಲಿಗೆ ಹೋದರೆ.. ಊಟ ಸಿಗೋಲ್ಲ ಇಡ್ಲಿ, ಪರೋಟ ಅದು ಇದು ಎಂದ. ಅನ್ನವಿಲ್ಲದೆ ರಾತ್ರಿ ಮಲಗೋದು ಕಷ್ಟ ನನಗೆ.. ಮೊಸರನ್ನ ಸಿಕ್ಕರೂ ಸರಿ ಅಂತ ಪರೋಟ ಜೊತೆಯಲ್ಲಿ ತಿಂದು.. ಬೆಚ್ಚನೆ ಮಲಗಿದೆವು. 

ಮರುದಿನ.. ಮಿನಿ ಬಸ್ ರಾಮೇಶ್ವರಕ್ಕೆ ಹೋರಡಲು ಸಿದ್ಧವಾಗಿತ್ತು.. ಚಿಕ್ಕ ಗಾಡಿ, ಪುಟ್ಟ ಸೀಟ್.. ಕಷ್ಟವಾಗಿತ್ತು.. ಆದರೆ ಪ್ರಯಾಣ / ಪ್ರವಾಸ ಎಂದರೆ ಅನುಕೂಲತೆಗಳನ್ನು ಹೊರಗೆ ಬಿಸಾಕಿ ಪ್ರವಾಸಕ್ಕೆ ಹೋಗ ಬೇಕು ಎನ್ನುವ ನೀತಿ ತಿಳಿದಿತ್ತು.. ಆದ್ದರಿಂದ "ತೊಂದರೆ" ತೊಂದರೆಯಾಗಿರಲಿಲ್ಲ. 



ರಸ್ತೆಗಳು ಕರ್ರಗೆ.. ಮತ್ತು ಅದರ ಮಧ್ಯದಲ್ಲಿ ಬಿಳಿ ಪಟ್ಟೆಗಳು ಸುಂದರವಾಗಿ ಕಾಣುತ್ತಿದ್ದವು. ೧೮೦ ಕಿಮಿಗಳು ರಿವ್ವನೆ ಹಾರಿ ಹೋಗುತ್ತಿತ್ತು. ಕಡಲ ತಡಿಯ ಗಾಳಿ.. ಸಮುದ್ರದ ಮಟ್ಟ ೦ ಅಡಿ ಈ ಫಲಕ ನೋಡುವುದೇ ಒಂದು ಖುಷಿ. ಕಾರಣ ಬೆಟ್ಟ ಗುಡ್ಡಗಳನ್ನು ಹತ್ತಿ ನಿಂತಾಗ ನೀವೀಗ ಸಮುದ್ರಮಟ್ಟದಿಂದ ಇಷ್ಟು ಅಡಿ ಮೇಲಿದ್ದೀರಾ ಎಂಬ ಫಲಕ ನೋಡಿ ನೋಡಿ ಬೇಜಾರಾಗಿತ್ತು :-)
ಪಾಂಬನ್ ಸೇತುವೆ ನೋಡಿ ಎಂದು ಗೈಡ್ ಕಿರುಚಿದ.. ಸಮುದ್ರ ತೀರದ ಗಾಳಿಗೆ ಒಂದು ಚೂರು ಹತ್ತಿದ್ದ ನಿದ್ದೆ ಮತ್ತೆ ಹಾರಿ ಹೋಯಿತು. 
" ... ತಮಿಳಾ .. ?"
ನನ್ನ ಬಣ್ಣ ನೋಡಿ ಈ ಪ್ರಶ್ನೆ ಕೇಳಿದ್ದ. 
ಎದೆ ತಟ್ಟಿಕೊಂಡು ಹೇಳಿದೆ "... ಕನ್ನಡ... "

"ಬನ್ನಿ ಸರ್.. ನಿಮಗಿಲ್ಲಿ ೨೨ ಬಾವಿಗಳಲ್ಲಿ ಸ್ನಾನ ಮಾಡಿಸುತ್ತೇನೆ.. ರಾಮೇಶ್ವರ ದೇವರ ಪ್ರಸಾದ.. ಇವಿಷ್ಟು ಸೇರಿ ಇಷ್ಟು ದುಡ್ಡು".. 
ಚೌಕಾಸಿ ಮಾಡಲಿಲ್ಲ.. ದುಡ್ಡು ತೆಗೆದೇ.. 

"ಈಗ ಬೇಡ ಪೂರ್ತಿ ಮುಗಿದ ಮೇಲೆ ತೆಗೆದುಕೊಳ್ಳುತ್ತೇನೆ'
"ಮಗುವಿಗೆ ಬಾವಿ ನೀರು ಹಾಕಬೇಕು" ಎಂದೇ.. 
"ಹೌದು ಸರ್.. ಮಗುವಿಗೆ ವಿಶೇಷ ಆಶೀರ್ವಾದ ಬೇಕು.. ಖಂಡಿತ ನಾ ನೋಡಿಕೊಳ್ಳುತ್ತೇನೆ.. " 

ತಲೆ ಅಲ್ಲಾಡಿಸಿದೆವು.. 

ಆವಾ ಹೇಳುತ್ತಿದ್ದ ಮಾಹಿತಿಗಳು ಇಷ್ಟವಾಗುತ್ತಿದ್ದವು.. 

"ಸರ್ ಪ್ರತಿ ಬಾವಿಯ ಹತ್ತಿರ ಕೆಳಗೆ ಕೂತುಕೊಳ್ಳಿ.. ಮೊದಲು ನಾ ಸ್ವಲ್ಪ ನೀರು ಕೊಡುತ್ತೇನೆ ಅದನ್ನು ಕುಡಿಯಿರಿ.. ರುಚಿ ನೋಡಿರಿ ಆಮೇಲೆ ನೀರು ನಿಮ್ಮ ಮೇಲೆ ಸರಿಯಾಗಿ ಬರುವ ಹಾಗೆ ಬಕೆಟ್ ನಲ್ಲಿ ಹಾಕುತ್ತೀನಿ"
ಹೇಳಿದ ಹಾಗೆ ಮಾಡಿದೆವು.. 
ಮಗುವಿಗೆ "ಚಿನ್ನ ಪಾಪ ಚಿನ್ನ ಪಾಪ" ಅಂತ ಒಂದೆರೆಡು ಬಕೆಟ್ ಹೆಚ್ಚಿಗೆ ನೀರು ಹಾಕಿದ.. 
ಮೊದಲಿಗೆ ಅಳುತ್ತಿದ್ದ ಮಗಳು .. ನಂತರ ಅದರ ಸುಖ ಅನುಭವಿಸತೊಡಗಿದಳು.. ಅಪ್ಪ ಅಪ್ಪ ನಂಗೂ ನಂಗೂ ಅಂತ ನಮ್ಮ ಮೇಲೆ ಬಕೆಟ್ ನಲ್ಲಿ ನೀರು ಹಾಕುತ್ತಿದ್ದಾಗ.. ನಮ್ಮ ಜೊತೆಯಲ್ಲಿ ಅವಳು ನುಗ್ಗುತ್ತಿದ್ದಳು.. 

ಅದ್ಭುತ ಪ್ರಕೃತಿ ಸೃಷ್ಠಿ. .. ಸಮುದ್ರ ಮಟ್ಟದಲ್ಲಿ ಇದ್ದ ನೆಲದಿಂದ ಬಾವಿಯ ನೀರು ಒಂದೊಂದು ಬಗೆಯ ರುಚಿ.. ಒಂದು ಕಡು ಉಪ್ಪು, ಇನ್ನೊಂದು ತುಸು ಉಪ್ಪು, ರುಚಿಯಿಲ್ಲದ ನೀರು.. ಸಿಹಿ, ಹಿಮದ ನೀರಿನಂತೆ ತಣ್ಣಗೆ.. ಹೀಗೆ ಒಂದೇ ಅಂಗಣದಲ್ಲಿ ತುಸುವೇ ಅಡಿಗಳ ಅಂತರದಲ್ಲಿ ಇರುವ ಬಾಯಿಯಲ್ಲಿ ಬಗೆ ಬಗೆಯ ಸ್ವಾದದ ನೀರು.. ದೈವನ ಲೀಲೆಯೇ ಲೀಲೆ. 

ರಾಮೇಶ್ವರನ ದರ್ಶನಕ್ಕೆ ಬರುವ ಮುನ್ನ.. ಒಂದು ಛಾವಣಿಯಲ್ಲಿರುವ ಬಸವನ ಚಿತ್ರವನ್ನು ತೋರಿಸಿದರು. ನೀವು ಎಲ್ಲಿಂದಲೇ ನೋಡಿದರು ಆ ಬಸವ ನಿಮ್ಮನ್ನೇ ನೋಡುತ್ತಿರುತ್ತದೆ, ಹೌದು ನಿಜವಾಗಿಯೂ ಅದು ಹಾಗೆ ಇತ್ತು. ಛಾಯಾಚಿತ್ರಣ ನಿಷೇಧ ಇದ್ದದರಿಂದ ಚಿತ್ರಣ ಮಾಡಲಿಲ್ಲ. 

ಸಾಲು ಸಾಲು ಕಂಬಗಳ ಹಜಾರಕ್ಕೆ ಬಂದೆವು .. "ಸರ್ ತಮಿಳು ನಟಿ ರೇವತಿಯವರ ಒಂದು ಚಿತ್ರದ ನೃತ್ಯದ ಚಿತ್ರೀಕರಣ ಇಲ್ಲೇ ನೆಡೆದಿದ್ದು.. " ಅದ್ಭುತ ಸಾಲು ಸಾಲು ಕಂಭಗಳ ಆ ದೃಶ್ಯವನ್ನು ನೋಡುವುದೇ ಒಂದು ಅನುಭವ.. ದಕ್ಷಿಣ ಭಾರತದ ದೇವಾಲಯಗಳ ವಾಸ್ತು ಶಿಲ್ಪಿ ಅದ್ಭುತ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇದು. 

ರಾಮೇಶ್ವರನ ದರ್ಶನ ಮಾಡಿ... ಪ್ರಸಾದ ತೆಗೆದುಕೊಂಡು.. ಆ ಗೈಡ್ ಗೆ ಸಲ್ಲಬೇಕಿದ್ದ ಸಂಭಾವನೆ ಮತ್ತು ತುಸು ಹೆಚ್ಚಿಗೆ ಇನ್ನೊಂದು ನೂರು ಸೇರಿಸಿ ಕೊಟ್ಟೆ.. ಅವನು ಕುಶ್ ನಾವು ಕುಶ್.... 

ಮನಸ್ಸು ಹಾರಾಡುತ್ತಿತ್ತು.. ಶ್ರೀ ರಾಮ ಮತ್ತು ಸೇನೆ ನೆಡೆದಾಡಿದ್ದ ಜಾಗವಿದು. ರಾಮ ಸೇತುವೆ ಕಟ್ಟಿದ ತಾಣವಿದು.. ಆದರೆ ಸಮಯದ ಅಭಾವವಿದ್ದ ಕಾರಣ ಧನುಷ್ಕೋಟಿ .. ರಾಮ ಸೇತುವೆ ಶುರು ಮಾಡಿದ್ದ ತಾಣಕ್ಕೆ ಹೋಗಲು ಆಗಲಿಲ್ಲ. ಹನುಮಂತ ಸಾಗೋರೋಲ್ಲಂಘನ ಮಾಡಲು ವಿಶ್ರಮಿಸಿದ್ದ ತಾಣ ಎಂದು ಒಂದು ದೇಗುಲವನ್ನು ತೋರಿಸಿದರು. ನಮ್ಮ ನಮನಗಳನ್ನು ಸಲ್ಲಿಸಿ ಒಂದೆರಡು ಚಿತ್ರಗಳನ್ನು ತೆಗೆದು ಹೊರಟೆವು. 

ರಾಮ ಸೇತುವೆ ಕಟ್ಟುವಾಗ ಕಲ್ಲಿನ ಬಂಡೆಗಳು ನೀರಲ್ಲಿ ಮುಳುಗುವುದಿಲ್ಲ ಎಂದು ಪುರಾಣದ ಕಥೆಯಲ್ಲಿ ಕೇಳಿದ್ದೆವು. ಅದನ್ನು ಕಣ್ಣಾರೆ ನೋಡುವ ಅವಕಾಶ. ಲಕ್ಷ್ಮಣನ ದೇವಸ್ಥಾನದಲ್ಲಿ ಕಲ್ಲುಗಳನ್ನು, ಬಂಡೆಗಳನ್ನು ನೀರಿನಲ್ಲಿ ಮುಳುಗಿಸಿದ್ದರು, ನಾವೇ ಕೈಯಾರೆ ಅದನ್ನು ಒಳಗೆ ಮುಳುಗಿಸಿನೋಡಿದೆವು ಮರುಕ್ಷಣವೇ ನೀರಿನಿಂದ ಮೇಲಕ್ಕೆ ಎದ್ದು ಬರುತ್ತಿತ್ತು ಹಠ ಮಾಡುವ ಮಗುವಿನ ತರಹ.. :-)

ರಾಮೇಶ್ವರಂ ಗೆ ಒಂದು ನಮನ ಸಲ್ಲಿಸಿ ಹೊರಟೆವು.. ನನ್ನ ಬಾಲ್ಯದ ಕನಸಿನ ತಾಣಕ್ಕೆ.. 

ಪುಟ್ಟ ಬಸ್.. ತಣ್ಣಗೆ ಬೀಸುತ್ತಿದ್ದ ಗಾಳಿ.. ಸೊಗಸಾದ ಊಟ ಮಾಡಿದ್ದ ದೇಹ.. ಸಣ್ಣಗೆ ನಿದ್ದೆಗೆ ಜಾರಿದೆವು.. ಬೆಳಗಿನ ಜಾವ ಸುಮಾರು ಮೂರು ಘಂಟೆ ಇರಬಹುದು.. ಅಚಾನಕ್ ಎಚ್ಚರವಾಯಿತು.. ಕಣ್ಣು ಬಿಟ್ಟು ನೋಡಿದೆ.. ಹುಣ್ಣಿಮೆ ಚಂದಿರ ಭುವಿಯನ್ನು ಬೆಳಗುತ್ತಿದ್ದ.. ರಸ್ತೆಯ ಎರಡು ಬದಿಯಲ್ಲಿ ಕಣ್ಣಿನ ನೋಟ ಹೋದಷ್ಟು ದೂರ ಗಾಳಿ ಪಂಕಗಳು ಕಾಣುತ್ತಿದ್ದವು. ಬೆಂಗಳೂರಿನಿಂದ ಹೊರಗೆ ಹೋದರೆ.. ಅಲ್ಲೊಂದು ಇಲ್ಲೊಂದು ಕಾಣುವ ಈ ಪಂಕಗಳು ಇಲ್ಲಿ ಎಣಿಸಲಾರದಷ್ಟು ಇದ್ದವು.. ಅದನ್ನೇ ನೋಡುತ್ತಾ ಕಣ್ಣುಗಳು ಭಾರವಾಯಿತು.. ಮತ್ತೆ ಯಾವಾಗೋ ನಿದ್ದೆ ಹತ್ತಿತ್ತು.. 


ಬಸ್ ಗಕ್ಕನೆ ನಿಂತಿತು.. ಚಳಿಗಾಳಿ ರಪ್ಪನೆ ಮುಖಕ್ಕೆ ರಾಚಿತು.. ತುಸು ಬೆಳಕು ತುಸು ಕತ್ತಲೆ.. ನನ್ನ ಹೃದಯವನ್ನು ಮುಟ್ಟಿ ನೋಡಿಕೊಂಡೆ.. ೭೨ಕ್ಕಿಂತ ಜಾಸ್ತಿ ಇತ್ತು.. ಆಗ ಅರಿವಾಯಿತು.. ನನ್ನ ಕನಸು ನನಸಾಗುತ್ತಿದೆ.. ಬಸ್ಸಿನವ ಹೇಳಿದ.. ನಿಮ್ಮ ಹೋಟೆಲ್ ಕೋಣೆಗೆ ಹೋಗಿ ಬೇಗ ಬೇಗ ಸ್ನಾನ ಮಾಡಿ.. ಸೂರ್ಯ ಉದಯಿಸುತ್ತಾನೆ.. ಅಲ್ಲಿಗೆ ಹೋಗಿ ನೋಡಬೇಕು.. 

ನನ್ನ ಜೀವನದ ಮೊದಲ ಕಡಲತಡಿಯ ಸೂರ್ಯೋದಯದ ದೃಶ್ಯ ಕಣ್ಣು ತುಂಬಿಕೊಳ್ಳಲು ಮನಸ್ಸು ಮತ್ತು ಕ್ಯಾಮೆರಾ ಕಾಯುತ್ತಿತ್ತು. ನನ್ನ ಮಗಳು ಕೂಡ ಆ ಪುಟ್ಟ ವಯಸ್ಸಿಗೆ ನನ್ನ ಭಾವನೆ ಅರ್ಥವಾಗಿತ್ತೋ ಏನೋ.. ಹಠ ಮಾಡದೆ ಬೇಗನೆ ಸ್ನಾನ ಮಾಡಿ ಸಿದ್ಧವಾಯಿತು. 


ಎಲ್ಲರೂ.. ಕಡಲ ತೀರಕ್ಕೆ ಬಂದಾಗ.. ಭಾಸ್ಕರ.. ಭಾರತ ಭೂಶಿರವನ್ನು ಬೆಳಗಲು... ಕನ್ಯಾಕುಮಾರಿ ತಾಯಿಯ ನತ್ತನ್ನು ಇನ್ನಷ್ಟು ಫಳ ಫಳ ಹೊಳೆಯುವಂತೆ ಮಾಡಲು ಸಿದ್ಧನಾಗುತ್ತಿದ್ದ.  ಆಗ ನನ್ನ ಹತ್ತಿರ ಇದ್ದದ್ದು ರೀಲ್ ಕ್ಯಾಮೆರಾ. ಅಲ್ಲಿಗೆ ಸುಮಾರು ಮಂದಿ ಡಿಜಿಟಲ್ ಕ್ಯಾಮೆರಾ ತಗೊಂಡು ತಾವು ತೆಗೆದಿದ್ದ ಚಿತ್ರವನ್ನು ಅಲ್ಲಿಯೇ ನೋಡುತ್ತಿದ್ದರು.. ಆಗಲೇ ನನ್ನ ಮನದಲ್ಲಿ ಹುಟ್ಟಿದ ಆಸೆ. .ನನ್ನ ಹತ್ತಿರವೂ ಡಿಜಿಟಲ್ ಕ್ಯಾಮೆರಾ ಬೇಕು.. ಮುಂದಿನ ದಸರೆಗೆ ನನ್ನ ಹತ್ತಿರ ಆ ಡಿಜಿಟಲ್ ಪುಟ್ಟ ಕ್ಯಾಮೆರಾ ಬಂದೆ ಬಿಟ್ಟಿತು. 

ಅದ್ಭುತ ಸೌಂದರ್ಯ ರಾಶಿ ಈ ಸೂರ್ಯೋದಯ. ಕಣ್ಣು ಮನಸ್ಸು ತುಂಬಿ ಬಂತು.. ಎದುರಿಗೆ ಕನ್ಯಾಕುಮಾರಿಯ ವಿವೇಕಾನಂದ ಧ್ಯಾನ ಮಂದಿರ.. ಅದನ್ನೇ ಅಲ್ಲವೇ ನೋಡಲು ಇಷ್ಟು ವರ್ಷಗಳು ಕಾದಿದ್ದು.. ಮನಸ್ಸಿಗೆ ಏನೋ ಆನಂದ.. 

"ಬನ್ನಿ ಬನ್ನಿ.. ಬೋಟ್ ಸಿದ್ಧವಾಗಿದೆ.. ಟಿಕೆಟ್ ಪಡೆದು ಬೋಟ್ ಹತ್ತಿ" ಸೂಚನೆ ಹಿಂದಿನಿಂದ ಬರುತ್ತಿತ್ತು.. ಬೇಗ ಬೇಗನೆ ಒಂದಷ್ಟು ಫೋಟೋ ತೆಗೆದು.. ಬಡಿಕೊಳ್ಳುತ್ತಿದ್ದ ಹೃದಯಕ್ಕೆ ಇನ್ನೊಂದು ಅರ್ಧ ಘಂಟೆ ಕಣೋ ಎಂದು ಸಮಾಧಾನ ಹೇಳುತ್ತಾ... ಬೋಟಿನೆಡೆಗೆ ಅಕ್ಷರಶಃ ಓಡಿದೆವು.. 

ಟಿಕೆಟ್ ಪಡೆದು.. ಕಡಲಿನ ಅಬ್ಬರದ ಅಲೆಗಳ ಮೇಲೆ ಹೊರಟೆ ಬಿಟ್ಟಿತು ನನಸಾಗುವತ್ತ ನನ್ನ ಬಾಲ್ಯದ ಕನಸಿನ ಸವಾರಿ... 
ಕಣ್ಣಲ್ಲಿ ಎದುರಿಗೆ ಕಾಣುತ್ತಿದ್ದ ಅದ್ಭುತ ವಿನ್ಯಾಸದ ಕನ್ಯಾಕುಮಾರಿಯ ವಿವೇಕಾನಂದ ಧ್ಯಾನಮಂದಿರ.. ಮನದಲ್ಲಿ ನನಗೆ ಬಲು ಇಷ್ಟವಾಗಿದ್ದ "ಭಾರತ ಭೂಶಿರ ಮಂದಿರ ಸುಂದರಿ" ಮಾನಸ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರ ಅದ್ಭುತ ಚಿತ್ರ "ಉಪಾಸನೆ"ಯ ಹಾಡು..

ಅಲ್ಲಿಗೆ ಕಾಲಿಟ್ಟೊಡನೆ ಏನೋ ಪುಳಕ.. ಮನಸ್ಸಿಗೆ ಹಾಯ್ ಎನ್ನಿಸುವಂತಹ ಅನುಭವ..  

ನಮ್ಮೊಡನೆ ಬರುತ್ತಿದ್ದ ಒಂದು ಕರುನಾಡಿನ ಜೋಡಿ.. "ರೀ ಇಲ್ಲೇ ಅಲ್ವೇನ್ರಿ ಆರತಿ ಹಾಡಿದ ಹಾಡು ಶೂಟಿಂಗ್ ಮಾಡಿದ್ದು" ಗಂಡ ತಲೆ ಕೆರೆದುಕೊಳ್ಳುತ್ತಿದ್ದ... "ಹೌದು ಅನ್ಸುತ್ತೆ ಕಣೆ.. ಹಾಡು ನೆನಪಿಗೆ ಬರುತ್ತಿಲ್ಲ" ಎಂದು ನನ್ನ ಮುಖ ನೋಡಿದ.. ನಾ ಸುಮ್ಮನೆ ಒಂದು ಹಲ್ಲಿನ ಪೋಸ್ ಕೊಟ್ಟೆ.. ಆ ಜೋಡಿಗೆ ಕೇಳುವಂತೆ "ಸವಿತಾ.. ಇಲ್ಲೇ ಕಣೆ.. ಭಾರತ ಭೂಶಿರ ಮಂದಿರ ಸುಂದರಿ" ಹಾಡು ಚಿತ್ರೀಕರಣವಾಗಿದ್ದು.. ನೋಡು ಅಲ್ಲಿಯೇ ಆರತಿ ವೀಣೆಯನ್ನು ಎತ್ತಿಕೊಂಡು ದೇವಸ್ಥಾನದ ಒಳಗೆ ಹೋಗುವುದು.. ಆಗಲೇ ಉಪಾಸನೆ ಅಂತ ಚಿತ್ರದ ಅಂತ್ಯ ತೋರಿಸೋದು.. ಇಲ್ಲೇ ಕಣೆ.. ಆರತಿಯ ಗುರುಗಳು ಕೂತಿದ್ದು, ಇಲ್ಲೇ ಕಣೆ ಆರತಿಯನ್ನು ಸಮಾಧಾನ ಮಾಡಲು ಎಲ್ಲರೂ ಪ್ರಯತ್ನ ಮಾಡೋದು.. " ಹೀಗೆ ಉಪಾಸನೆಯ ಅಂತಿಮ ದೃಶ್ಯವನ್ನು ಹಾಗೆ ಕಣ್ಣ ಮುಂದೆ ತಂದಿಟ್ಟಿದ್ದೆ.. 

ಆ ಜೋಡಿಗೆ ಬೇಕಾದ ಮಾಹಿತಿ ಸಿಕ್ಕಿತು.. ಹೆಂಡತಿಗೆ ತನಗೆ ಬೇಕಿದ್ದ ಮಾಹಿತಿ ಸಿಕ್ಕ ಖುಷಿ.. ಗಂಡನಿಗೆ ತನ್ನ ಮರ್ಯಾದೆ ಉಳಿಸಿದ ನನಗೆ ಒಂದು ತುಸು ನಗೆ ಬೀರಿ ಕೈ ಬೀಸಿ ದೇವಸ್ಥಾನಕ್ಕೆ ಹೊರಟರು.. ನನಗೆ ಒಂದು ಬಗೆಯ ಸಂತೋಷ.. ಅರೆ ನನಗಿಷ್ಟವಾದ ತಾಣ, ನನಗಿಷ್ಟವಾದ ಹಾಡು, ನನಗಿಷ್ಟವಾದ ಚಿತ್ರ.. ನನಗಿಷ್ಟವಾದ ನಿರ್ದೇಶಕ.. ಇದರ ಬಗ್ಗೆ ಯಾರಿಗಾದರೂ ಹೇಳಬೇಕೆಂದರೆ.. .. :-) 

ಒಂದು ಚೂರು ಜಾಗ ಬಿಡದ ಹಾಗೆ.. ಎಲ್ಲವನ್ನು ನೋಡುತ್ತಾ ಬಂದೆ.. ಕಣ್ಣ್ ಮನಸ್ಸು ತಣಿಯುತ್ತಲೇ ಇಲ್ಲ.. ಧ್ಯಾನಮಂದಿರಕ್ಕೆ ಹೋಗಿ ಸ್ವಲ್ಪ ಹೊತ್ತು ಧ್ಯಾನ ಮಾಡಿದೆ.. ಹೊರಕ್ಕೆ ಬಂದರೆ ಕಡಲಿನ ಅಲೆಗಳ ಅಬ್ಬರ.. ಆದರೆ ಆ ಧ್ಯಾನಮಂದಿರಲದಲ್ಲಿ ನಮ್ಮ ಎದೆ ಬಡಿತವೇ ನಮಗೆ ಕೇಳುಸುತ್ತೇನೋ ಅನ್ನಿಸುವಷ್ಟು ನಿಶ್ಯಬ್ಧ.. 

ಇಷ್ಟವಿಲ್ಲದೆ ಹೋದರು.. ಬೆಂಗಳೂರಿಗೆ ಬರಲೇಬೇಕಿತ್ತು.. ಜೊತೆಗೆ ಮುಂದಿನ ಕಾರ್ಯಕ್ರಮದ ಪ್ರಕಾರ ಸುಚಿಂದ್ರಂ ದೇವಸ್ಥಾನಕ್ಕೆ ಭೇಟಿ.. 

ಆಗಾಧವಾಗಿದ್ದ ಹನುಮಂತನ ಮೂರ್ತಿ ಅಬ್ಬಬ್ಬಾ ಎನ್ನಿಸುತ್ತಿತ್ತು.. ಆ ದೇವಾಲಯದ ವಿನ್ಯಾಸವೂ ಸುಂದರವಾಗಿತ್ತು. ತಮಿಳ್, ಮಲಯಾಳಂ, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಆ ದೇವಾಲಯದ ವಿಶೇಷಗಳನ್ನು ಹೇಳುತ್ತಿದ್ದದು ವಿಶೇಷವಾಗಿತ್ತು. ನವಗ್ರಹಗಳು ಛಾವಣಿಯಲ್ಲಿ ನೆಲೆ ನಿಂತದ್ದು ವಿಶೇಷ ಇಲ್ಲಿ.  

ಸುಂದರ ದೇವಾಲಯಕ್ಕೆ ನಮಸ್ಕಾರ ಸಲ್ಲಿಸಿ.. ನಮ್ಮ ಹರಕೆಗಳನ್ನು ಕಾಣಿಕೆಗಳನ್ನು ಸಲ್ಲಿಸಿ.. ಬೇಡವೆಂದರೂ.. ವಿಧಿಯಿಲ್ಲದೇ ಬೆಂಗಳೂರಿನ ಕಡೆಗೆ ಪಯಣ ನೆಡೆಸಿತ್ತು. 

ಈ ಪ್ರವಾಸಕ್ಕೆ ಸುಮಾರು ಹತ್ತು ವರ್ಷಗಳ ಇತಿಹಾಸವಿದೆ.. ನನ್ನ ಸ್ನೇಹಿತೆ ಕಂ ಮಗಳು ಶೀತಲ್ ಹುಟ್ಟಿದ ದಿನವಿದು... ಇಡೀ ಪ್ರವಾಸದಲ್ಲಿ ಆ ಬಿರು ಬಿಸಿಲು.. ನಮ್ಮ ತೊಡೆಯ ಮೇಲೆ ನಿದ್ದೆ.. ಚಿಕ್ಕ ಜಾಗ.. ಕಿರಿ ಎನ್ನಿಸುವ ಕ್ಷಾರಸಹಿತ ಗಾಳಿ.. ಇಷ್ಟಿದ್ದರೂ.. ಒಮ್ಮೆಯೂ ತರಲೆ ಮಾಡದೆ ನಮ್ಮ ಜೊತೆಯಲ್ಲಿಯೇ ಆಕೆಯು ಈ ಪ್ರವಾಸವನ್ನು ಅನುಭವಿಸಿದ್ದು ಖುಷಿಯಾಯಿತು. ಇಂದಿಗೂ ಉಪಾಸನೆ ಹಾಡು ಟಿವಿಯಲ್ಲಿ ಬಂದಾಗ.. ನಾ ಒಮ್ಮೆ ಅವಳ ಕಡೆ ನೋಡುತ್ತೇನೆ.. ಅವಳು ಒಂದಷ್ಟು ಹಲ್ಲು ಬಿಡುತ್ತಾಳೆ.. 

ಹುಟ್ಟಿದ ಹಬ್ಬಕ್ಕೆ ಈ ಉಡುಗೊರೆ ನಿನಗಾಗಿ ತಂದಿದ್ದೇನೆ ನೆನಪಿನ ಪಲ್ಲಕ್ಕಿಯಲ್ಲಿ.. !!!
****

"ಶಭಾಷ್ ಗುರು.. ಬೆಂಕಿಗೆ ಸ್ವಲ್ಪ ತಿದಿ ಒತ್ತಿದರೆ.. ಶಾಖ ಹೆಚ್ಚುತ್ತದೆ.. ಹಾಗೆ ನಿನಗೆ ಸ್ವಲ್ಪ ಕೆಣಕಿದರೆ.. ಹಹಹಹಹಾ.. "

"ತುಂಬಾ ಥ್ಯಾಂಕ್ಸ್ ಗುರು.. ಮತ್ತೆ ಈ ಅಂಕಣವನ್ನು ಖಾಲಿ ಬಿಡೋಲ್ಲ.. ಅವಾಗವಾಗ ತುಂಬುತ್ತಲೇ ಇರುತ್ತೇನೆ.. ಬೇಸರ ಮಾಡಿಕೊಳ್ಳಬೇಡ" 

ಇರಲಿ ಬಿಡು ಶ್ರೀ .. ಅಣ್ಣಾವ್ರು ಹೇಳಿಲ್ವಾ "ನಾನು ನೀನು ನೆಂಟರಯ್ಯ.. ನಮಗೆ ಭೇದ ಇಲ್ಲವಯ್ಯಾ.. "

"ಸ್ನೇಹ ಎಂದರೆ ಇದೆ ಅಲ್ಲವೇ.. "

"ನನ್ನ ಕಡೆಯಿಂದಲೂ ನಿನ್ನ ಮಗಳಿಗೆ.. ಜನುಮದಿನದ ಶುಭಾಶಯಗಳನ್ನು ತಲುಪಿಸು ಶ್ರೀ"

ಟ್ರಿಪ್ಪಿಂಗ್ ಲೈಫ್ ಬ್ಲಾಗ್ ಲಿಂಕ್ ನೋಡಿದೆ.. ನಗು ನಗುತ್ತಾ ಹಸಿರಾಗಿತ್ತು... !