Tuesday, November 6, 2012

Trip to Sirsi - The Journey with the time!!! - Part 2

Please click here for the Trip to Sirsi - Part I

I threw the stone to the beehive, and the bee started stinging one by one!!!

Hey don't look beyond the boundary, just that, we completed a glorious trip to Sirsi - The journey with the time, my soul was wondering, how to present, what to present.  Ideas started flying and stinging like the honey bee's.  

I love to drive my car in the reverse gear, so this blog as well :-)

HOTEL CHARTERED ACCOUNTANT :-)

A small, but a hotel with a moderate interiors welcomed us, out stomach was craving for something which it can hide in it.  I called the service personnel, he came running towards me..before i could open the mouth saying "Ha Ha Ha", the owner/cashier (guessing) triggered the bell saying, "take the token, and eat whatever available".  The ride to roller coaster laughter started from here. 

I collected the token from the cashier, and he said.."you can sit in your place, keep this copy of the token with you, he will serve to your table".  One hand pressing the stomach coz of laughing all the way, and in the other hand holding the token, slowly i started walking towards our table.

Prashanth, Latesh eye brows raised to the extent of second floor, i cooly narrated the story. Curious Prashanth started observing whats happening at the entrance of the kitchen.  

A smart looking "lady" started entering the token details in a ledger, and as and when the service personnel started serving the items we "paid" for, she found to be ticking the items in the ledger.  Since we were laughing more, and eating less, in no time we came to the end of the "paid" items, last arrow from the bow was Curd Rice.  

Our "chariot rider"  Sunil went to the counter, and said two curd rice, the cashier coolly said the "amount", I went and completed rituals for that "paid" items, Raghu was astonishingly looking at the staple served to his table - The curd rice. White rice in a bowl, and a glass of butter milk served separately.  One more surprise was waiting for us "The Vegitable Curd Rice" was served in a platter which we are accustomed with., and the taste was too good.  Till day i rewind the curd rice taste in my tongue :-) 

Latesh, Prashant, Sunil, and myself were laughing loudly, the cashier was looking at us as if we are the aliens.  

Latesh "Sri, if we sit for some more time, then he will switch off the lights in this area, and will say "you people already had dinner, so for talking you don't require lights.  Still, If one of you, found eating then a spot light will put on, point to that guy". We couldn't control myself from the laughter, came out, and "paid" for the Ice Creams, and started laughing again.  One thing is the food was good and economical :-)

Latesh pointed out one box with a caption "Tips for the workers".....Ha Ha Ha Ha Ha. 

With a roller coaster ride on the Gokarna-Honnavara highway,we crossed Siddapura, Saagara, Shivamogga, Arasikere, Gubbi. 

Route map we followed from Gokarna to Bengaluru
On the way he inquired about the availability of fuel, but to our bad luck from that day all petrol bunk across the nation were on strike of working in only day shift.  So we had to wait till around 7.30 in the morning.  By the time, a person,  guided us to a fellow petty shop owner who was filling the vehicles. Strange exactly opposite to the petrol bunk there was one more (????).  By paying Rs.2/- extra per liter, we headed towards Bengaluru, and there by our home.

A fabulous trip, surprisingly low on the fun quotient, but high on the places and its significance,  covered came to an end. 

{Keep watching will rewind back :-) }

Saturday, November 3, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೮ (ಕಡೆಯ ಕಂತು)

ಯಾಣ ದರ್ಶನದಿಂದ ದೇಹದಲ್ಲಿನ ಸೊಕ್ಕು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು.

ದೇವರ ಸೃಷ್ಟಿಯ ಮುಂದೆ ನಾವೆಂತ ಕುಬ್ಜರು ಎನ್ನುವ ಮಾತು  ಯಾಣದ ಭೈರವೇಶ್ವರ ಶಿಖರದ ಮುಂದೆ ನಿಂತಾಗ ಅರಿವಾಯಿತು. ನಾವೇನೆ ಜೀವನದಲ್ಲಿ ಸಾಧಿಸಿದರು ಮಡಿಕೆ ಮಡಿಕೆಯಾಗಿ ಒಗ್ಗಟ್ಟಿನಲ್ಲಿ ನಿಂತು ಚೂಪು ತುದಿಗಳಿಂದ ನಮ್ಮನ್ನು ಅಣಕಿಸುವಂತೆ ಭಾಸವಾಯಿತು. ನಿನ್ನ ಗುರಿ ಹರಿತವಾಗಿದ್ದಾಗ ಏನು ಬೇಕಾದರೂ ಸಾಧಿಸಬಲ್ಲೆ "ಕಾಂತ" ಎನ್ನುವಂತೆ ಭೈರವೇಶ್ವರ ತಂಗಾಳಿ ಬೀಸಿ ಆಶೀರ್ವದಿಸಿದ.  ಮೋಹಿನಿ ಶಿಖರ ಭೈರವೆಶ್ವರನಿಗೆ ಸರಿಸಾಟಿಯಾಗಿ ನಿಂತು..ನೋಡು "ಕಾಂತ" ಭೈರವೇಶ್ವರ ನಿನ್ನ ಗುರಿಯ ಹಾಗೆ.ನಾನು ಅದರ ಫಲಿತಾಂಶದ ಹಾಗೆ.  ಜೀವನದ ಇಳಿಜಾರು ಹಾದಿ ಜಾಸ್ತಿ ಹೊತ್ತು ಇರುವುದಿಲ್ಲ, ನಿನಗೆ ಏರು ಹಾದಿ ಸಧ್ಯದಲ್ಲೇ ದೊರೆಯಲಿದೆ ಎಂದು ಹೇಳಿತು. ಧನ್ಯನಾದೆ ಹರಿ-ಹರ ಎನ್ನುತ್ತಾ ರೊಕ್ಕವನ್ನು ಪರೀಕ್ಷಿಸುವ ಗೋಕರ್ಣದ ಕಡೆಗೆ ಚಲಿಸುವಂತೆ ನಮ್ಮ ವಾಹನಕ್ಕೆ ಹೇಳಿದೆ.

ಯಾಣದಿಂದ  ಗೋಕರ್ಣಕ್ಕೆ ...ಸೊಕ್ಕಿನಿಂದ ರೊಕ್ಕದ ಕಡೆಗೆ ನಕಾಶೆ 

"ಪೂಜೆ ಮಾಡಿಸಬೇಕೆ, ಆತ್ಮ ಲಿಂಗಕ್ಕೆ ನೀವೇ ಅಭಿಷೇಕ ಮಾಡಬಹುದು, ಮನಸಿನಲ್ಲಿ ಏನಾದರು ಪೂಜೆ ಮಾಡಿಸಬೇಕು ಅಂದುಕೊಂಡಿದ್ದರೆ ಅಲ್ಲಿ ಚೀಟಿ ಬರೆಯಿಸಿ..." ಈ ಮಾತುಗಳನ್ನು ಧ್ವನಿಮುದ್ರಿಕೆಯಂತೆ ಅಲ್ಲಿನ ಹಲವಾರು ಅರ್ಚಕರು ಬಾಯಿ ಪಾಠ ಮಾಡಿಕೊಳ್ಳಲು ಇರುವಂತೆ ನಮ್ಮನ್ನು ಕೇಳುತ್ತಲೇ ಇದ್ದರು.  ನಾವು ಬೇಡ ಎಂದು ಸೀದಾ ಗೋಕರ್ಣನಾಥನನ್ನು ದರ್ಶನ ಮಾಡಿ, ಆಶೀರ್ವಾದ ಪಡೆದು ಹೊರಗೆ ಬಂದೆವು.


ಗೋಕರ್ಣ ದೇವಾಲಯದ ಒಂದು ಪ್ರವೇಶ ದ್ವಾರ

 "ಗೊಂಬೆಗಳ" ದೇವಸ್ಥಾನದ ಸಮುದ್ರ ತೀರ ಬಿಟ್ಟು ಎರಡು ಬೆಟ್ಟಗಳ ನಡುವಿನ ಕಣಿವೆಯ  "ಕುಡ್ಲೆ" ಸಮುದ್ರತೀರಕ್ಕೆ ನಮ್ಮ ವಾಹನ ಓಡಿತು.

ಈ ಕಣಿವೆಯನ್ನು ದಾಟಿದರೆ ಸಿಗುವುದು ಕುಡ್ಲೆ ಸಂದುರ ತೀರ !

ಪ್ರಶಾಂತ್ ಅಲ್ಲಿಗೆ ಮೊದಲೇ ಹೋಗಿದ್ದನಾದ್ದರಿಂದ ನಮಗೆ ಸರಳವಾಯಿತು. ನಾ ಕಂಡ ಅಮೋಘ ಸಮುದ್ರ ದಂಡೆ ಈ ಕುಡ್ಲೆ  ಸುಮುದ್ರ ತೀರ.  ಎರಡು ಬೆಟ್ಟಗಳ ನಡುವಿನ ಕಣಿವೆ ಪ್ರದೇಶದಲ್ಲಿ ಸೂರ್ಯ ತನ್ನ ಕಾರ್ಯಕ್ರಮ ಮುಗಿಸಿ ಸಾಗುವುದನ್ನು ನೋಡುವುದೇ ಒಂದು ಸೊಬಗು.  ಹತ್ತಿರದ ಬೆಟ್ಟ ಗುಡ್ಡಗಳನ್ನು ಕಡಿದು ಹೋಟೆಲ್, ರೆಸಾರ್ಟ್ಗಳು ತಲೆ ಎತ್ತಲು ಶುರುಮಾಡಿದ್ದವು..ಆದಷ್ಟು ಬೇಗ ಈ ತಾಣವು ವಾಣಿಜ್ಯ ಕೇಂದ್ರವಾಗಿ ಗಬ್ಬೆದ್ದು ಹೋಗಲು ಹೊರಡಲು ಅನುವಾಗಿತ್ತು.


ಬಂಗಾರದ ಸೀರೆಯನ್ನು ಪ್ರಕೃತಿ ಮಾತೆ ಕೊಟ್ಟ ಕ್ಷಣ

ಸುಂದರವಾದ  ತಣ್ಣಗಾಗುತ್ತಿರುವ ಸೂರ್ಯ ತನ್ನ ಬಂಗಾರದ ಬಣ್ಣದಿಂದ ಇಡಿ ತೀರವನ್ನು ಹೊನ್ನಿನ ಶರಧಿಯನ್ನಾಗಿ  ಪರಿವರ್ತಿಸಿದ್ದ.  ಅಲೆಗಳ ಅಪ್ಪಳಿಸುವಿಕೆ ತುಸು ಜೋರಾಗಿತ್ತು ಕಾರಣ ಮಾರನೆದಿನ ಅಮಾವಾಸ್ಯೆಯಾಗಿತ್ತು (ಹಹಹ).


ಅಲೆಗಳ ಮೆರವಣಿಗೆಯ ಮೇಲೆ ದಿನಕರ 

ಸೂರ್ಯನೊಡನೆ, ಸಮುದ್ರದಲೆಗಳ ಜೊತಗೆ, ಹೊನ್ನಿನ ನೀರಿನಲ್ಲಿ ತುಸು ಆಟವಾದಮೇಲೆ, ಛಾಯಾಚಿತ್ರಗಳ ಮೆರವಣಿಗೆ ಸಾಗಿತ್ತು.

ಅಲೆಗಳ ರಭಸಕ್ಕೆ ದಡಕ್ಕೆ ಬಂದು ಬೀಳುತ್ತಿದ್ದ ಮೀನುಗಳು ಸಂದೀಪ್ ಅವರ ಕುತೂಹಲದ ಕಣ್ಣುಗಳನ್ನು ತೆರೆಸಿತು. ಪರೀಕ್ಷಾ ನಿಟ್ಟಿನಲ್ಲಿ ಸಂದೀಪ್ ಕಂಡಿದ್ದು ಹೀಗೆ.

ಮೀನಿನ ವೀಕ್ಷಣೆಯಲ್ಲಿ ಸಂದೀಪ್ !

ನಮ್ಮ ಸಾರಥಿ ಸುನೀಲ್ "ಜೋಗಿ" ಶೈಲಿಯಲ್ಲಿ ನೆಡೆದು ಬರುತಿದ್ದ ದೃಶ್ಯ ಚಂದವಿತ್ತು.  ಅವರನ್ನು ಗೆಳೆಯರೆಲ್ಲ "ಜೋಗಿ" ಅಂತಾನೆ ಕರೆಯೋದು ಕಾರಣ ಜೋಗಿ ಚಿತ್ರದ ಬಿಡುಗಡೆಯ ಸಮಯದಲ್ಲಿ ಉದ್ದನೆ ಕೂದಲು ಬಿಟ್ಟಿದ್ದರು ಎನ್ನುವ ಕಾರಣಕ್ಕೆ.

ಜೋಗಿ ಶೈಲಿಯಲ್ಲಿ ಸುನೀಲ್ !

ಸೂರ್ಯದೇವನಿಗೆ ಜಗತನ್ನು ಬೆಳಗುವ ಕಲೆ ಚೆನ್ನಾಗಿ ಗೊತ್ತು.  ಆ ದೇವನನ್ನು ಒಂದು ಕೈಯೊಳಗಿನ ಅಂಗಣದಲ್ಲಿ ಸೆರೆ ಹಿಡಿಯೋಣ ಅನ್ನಿಸಿತು. ಸುನೀಲ್ ಬನ್ನಿ ಸರ್ ಈಗ ತೆಗೆಯಿರಿ..ಸರಿಯಾಗಿ ಹಿಡಿದಿದ್ದೀನಿ ಅಂದರು . ನೀವೇ ನೋಡಿ ಆನಂದಿಸಿ.

ಶುಭಕರನಿಗೆ ಕರಗಳಿಂದ ಒಂದು ಚೌಕಟ್ಟು!!!

ಇಕ್ಕಟ್ಟಿನ ಪರಿಸ್ಥಿತಿ ಬಂದಾಗ.ನನ್ನ ಬಾಳು ಅಡಿಕೆ ಕತ್ತರಿಯಾಗಿ ಬಿಟ್ಟಿದೆ ಗುರು ಎನ್ನುವ ಮಾತು ಸಹಜ.ಇಲ್ಲಿ ನೋಡಿ ಭಾನುವನ್ನು ಅಡಿಕೆ ಕತ್ತರಿಯೊಳಗೆ ಸಿಕ್ಕಿಸುವ ಒಂದು ವ್ಯರ್ಥ ಪ್ರಯತ್ನ!!!

ಅಡಿಕೆ ಕತ್ತರಿ ಹಾಗು ಸೂರ್ಯ!

ಈ ಭೂಮಿ ಬಣ್ಣದ ಬುಗುರಿ ಎಂದರು ಡಾ. ವಿಷ್ಣುವರ್ಧನ್..ಅವರ ಅಭಿಮಾನಿಯಾದ ಸುನೀಲ್ ಹೇಳಿದ್ದು ಸರ್ ನಮ್ಮ ಸಾಹಸಿಂಹ ಹೇಳಿದ ಹಾಗೆ ದಿನಕರನು ಬಣ್ಣದ ಬುಗುರಿ..ನೋಡಿ ಸರ್ ಒಮ್ಮೆ ಆಡಿಸುತ್ತೇನೆ..ಎಂದರು..ಅದು ಹೀಗೆ ಮೂಡಿಬಂತು.

ಸೂರ್ಯನೇ ಒಂದು ಬುಗುರು..ಕಾಲ ನಮಗೆ ಚಾವಟಿ 

ಪ್ರತಿಯೊಬ್ಬರ ಜೀವನವನ್ನು ನಕ್ಷತ್ರಗಳು, ರಾಶಿಗಳು, ಗ್ರಹ ಚಲನೆಗಳು ನಿರ್ಧರಿಸುತ್ತವೆ ಎನ್ನುವುದು ಜ್ಯೋತಿಶಾಸ್ತ್ರ ಹೇಳುವ ಮಾತು..ನಮ್ಮ ಪಯಣದ ಹಾದಿಯಲ್ಲಿ ಬಂದು ಸಿಕ್ಕಿದ "ನಕ್ಷತ್ರ" ಮೀನು. 

ಬಾಳಿನ ದಿಕ್ಕನ್ನು ಬದಲಿಸುವ ನಕ್ಷತ್ರ - ನಕ್ಷತ್ರ ಮೀನು 
ವಿವಿಧ ಭಂಗಿಯಲ್ಲಿ ಅಸ್ತಮಿಸುತಿದ್ದ ದಿನಕರನನ್ನು ಸೆರೆ ಹಿಡಿಯಲು ಶ್ರಮಿಸಿ, ಅಲ್ಲಿಂದ ಬೀಳ್ಕೊಡಲು ಅನುವಾದೆವು. ತುಸು ಕತ್ತಲಿನಲ್ಲಿ ಗೋಕರ್ಣದ ಸಮುದ್ರ ತೀರದ ತನಕ ಬರಬೇಕಿತ್ತು ಮತ್ತು ಆದಷ್ಟು ಬೇಗ ಅಲ್ಲಿಂದ ಹೊರಟು  ಬೆಂಗಳೂರು ಸೇರುವ ತವಕ ಹೆಚ್ಚಾಗಿತ್ತು, ಕಾರಣ ಮರುದಿನ ಎಲ್ಲಾರು ತಮ್ಮ ತಮ್ಮ ಕೆಲಸಗಳಿಗೆ ಮರಳಬೇಕಿತ್ತು.

ನಾವು ಕಡಲಿಗೆ ಹೋಗಿದ್ದ ಸಮಯ, ಮತ್ತು ಅಲ್ಲಿಂದ ಹೊರಡುವ ಸಮಯದ ನಡುವೆ ಅಲೆಗಳ ಆರ್ಭಟ ಮುಂದೆ ಮುಂದೆ ಸಾಗಿತ್ತು.  ಕಡಲ ಕೊರೆತವನ್ನು ಅಕ್ಷರಶಃ ನೋಡಿದ ಅನುಭವ

 ಅಲ್ಲಿಂದ ಹೊರಟು, ಸೀದಾ ಕುಮುಟ, ಹೊನ್ನಾವರ, ಸಿದ್ದಾಪುರ, ಸಾಗರ, ಶಿವಮೊಗ್ಗ, ಬೆಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಿದೆವು.

ಗೋಕರ್ಣದಿಂದ ಬೆಂಗಳೂರಿಗೆ ಪಯಣದ ಹಾದಿ 

ಪ್ರವಾಸ ಸುಂದರವಾಗಿತ್ತು, ನಮ್ಮ ಗುಂಪಿನ ಹಾಸ್ಯದ  ಮಾಂತ್ರಿಕತೆ ಈ ಪ್ರವಾಸದಲ್ಲಿ ಕಡಿಮೆ ಇತ್ತು, ಅದರೂ ಎಲ್ಲರೂ 2000 ವರುಷಗಳ ಯಾನದಿಂದ ಮಂತ್ರ ಮುಗ್ಧರಾಗಿದ್ದರು. ಎಂತಹ ಅಮೋಘ ಪ್ರವಾಸ, ಈ ಪ್ರವಾಸದಲ್ಲಿ ಭಕ್ತಿ, ಚರಿತ್ರೆ, ಇತಿಹಾಸ, ಪ್ರಕೃತಿ, ಜಲಪಾತಗಳು, ಎಲ್ಲವು ಸರಿಯಾದ ಪ್ರಮಾಣದಲ್ಲಿ ಸೇರಿದ್ದವು ಹಾಗಾಗಿ ಖರ್ಚು ತುಸು ಹೆಚ್ಚೇ ಆದರೂ ಯಾರಿಗೂ ಅದರ ಬಗ್ಗೆ ಎರಡನೇ ಮಾತೆ ಇರಲಿಲ್ಲ.

ಸಿರಸಿಯ ಮಾರಿಕಾಂಬೆ, ಮಹಾಗಣಪ,  ಸಹಸ್ರ ಲಿಂಗೇಶ್ವರ,  ಬನವಾಸಿಯ ಮಧುಕೇಶ್ವರ. ಭೈರವೇಶ್ವರ, ಗೋಕರ್ಣದ ಪರಶಿವನೇ ನಮ್ಮ ಅಲೆಮಾರಿಗಳ ತಂಡಕ್ಕೆ ಸದಾ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತ ಈ ಪ್ರವಾಸ ಕಥಾನಕದ ಕಡೆ ಕಂತನ್ನು ನಿಮಗೆ ಅರ್ಪಿಸುತ್ತಿದ್ದೇನೆ.

ಇಲ್ಲಿಯವರೆಗೆ ಈ ಪ್ರವಾಸದ ಎಂಟು ಕಂತುಗಳನ್ನು ಓದಿ, ಪ್ರೋತ್ಸಾಹಿಸಿ, ಪ್ರತಿಕ್ರಿಯಿಸಿದ ಎಲ್ಲರಿಗೂ ಅಲೆಮಾರಿಗಳ ತಂಡದ ಪರವಾಗಿ ಧನ್ಯವಾದಗಳು.

Wednesday, October 31, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೭

ಶ್ರೀ ಮಹಾಗಣಪತಿಯ ದರ್ಶನದಿಂದ ನಾಡಿನ ನಾಣ್ಣುಡಿಯನ್ನು ಪರೀಕ್ಷಿಸುವ ಮನಸಾಯಿತು. ಗಣಪನ ಆಶೀರ್ವಾದ, ಲಕ್ಷಿ ಕಟಾಕ್ಷ ಎರಡು ಸೇರಿದರೆ ಇದೇನು ಕಷ್ಟದ ಕೆಲಸವಲ್ಲ ಎನ್ನಿಸಿತು. 

ಮೈಯಲ್ಲಿ ಸೊಕ್ಕಿದ್ದರೆ ಯಾಣ, ಜೇಬಲ್ಲಿ ರೊಕ್ಕವಿದ್ದರೆ ಗೋಕರ್ಣ..ಒಂದೇ ದಿನ ಸೊಕ್ಕು ರೊಕ್ಕ ಎರಡನ್ನು  ಒರೆಗೆ  ಹಚ್ಚೇಬಿಡುವ ತೀರ್ಮಾನ ಆಯಿತು. ನಮ್ಮ ಸಾರಥಿ ನಡೀರಿ ಸರ್ ನೀವು ಕರೆದಲ್ಲಿ ನಾ ಬರುವೆ ಎಂದರು.  ಸರಿ ನಮ್ಮ ಮನಸಿನಂತೆ ನಡೆಯುವ ಸಾರಥಿ ನಮಗೆ ಸಿಕ್ಕಾಗ ಇನ್ನೇನು ಸಮಸ್ಯೆ

ಸಿರ್ಸಿಯಿಂದ ಯಾಣಕ್ಕೆ  ಪಯಣ! 

ವಾಹನ ಸಿರ್ಸಿ ಕುಮಟ ಹಾದಿಯಲ್ಲಿ  ರಿವ್ವನೆ ಸಾಗುತಿತ್ತು...ಅಚಾನಕ್ ಸಾರಥಿ ಸುನೀಲ್ ಹೇಳಿದ್ರು "ಸರ್ ನೀವು ಓಡಿಸಿ ಸ್ವಲ್ಪ ದೂರ" ಎಂದು ಹೇಳಿ "ಶಿವರ್ಲೆ ಟವೇರ" ಗಾಡಿಯನ್ನು ಮಾರ್ಗ ಮಧ್ಯದಲ್ಲೇ ನಿಲ್ಲಿಸಿ ಬಿಟ್ಟರು. ನನಗೆ ಒಂದು ಕಡೆ ಅಳುಕು, ಇನ್ನೊಂದು ಕಡೆ ಏನಾದರೂ ಸಾಹಸ ಮಾಡುವ  ತವಕ. ಸರಿ ಸಾಧಿಸಿಬಿಡೋಣ ಅಂತ ಸಾರಥಿ ಜಾಗದಲ್ಲಿ ಕುಳಿತೆ ಬಿಟ್ಟೆ..ಒಂದಷ್ಟು ಕಿ.ಮಿ.ಗಳನ್ನೂ ಓಡಿಸಿದೆ ಮನಸಿಗೆ ಖುಷಿಯಾಯಿತು.  ನನ್ನ ಮಿತ್ರರು ಉಸಿರು ಬಿಗಿ ಹಿಡಿದು ಕೂತಿದ್ದು ಬೇರೆ ಕಥೆ.

ನಾ ಕೇಳಿದಂತೆ ಮೊದಲು ಸಿರ್ಸಿ ಕುಮಟ ಮಾರ್ಗದಲ್ಲಿ ಸಿಗುವ ಅನೆಗುಂದಿಯಿಂದ ಸುಮಾರು 16-17 ಕಿ.ಮಿ ಗಳಷ್ಟು ದೂರ ದುರ್ಗಮವಾದ ದಟ್ಟಕಾಡಿನಲ್ಲಿ ಇಂಬಳ (ಜಿಗಣೆ)ಗಳು ತುಂಬಿದ್ದ ಹಾದಿಯಲ್ಲಿ ನಡೆದೆ ಹೋಗಬೇಕಿತ್ತು. ಅದಕ್ಕೆ ಮೈಯಲ್ಲಿ ಸೊಕ್ಕಿದ್ದವರು ಮಾತ್ರ ಹೋಗಬಹುದು ಎಂಬ ನುಡಿಗಟ್ಟು ಹುಟ್ಟಿಕೊಂಡದ್ದು ಅನ್ನಿಸುತ್ತದೆ ..ನಂತರ ನಾಗರೀಕತೆ ಬೆಳೆದಂತೆಲ್ಲ ಆ ದೂರ ಕಡಿಮೆಯಾಗುತ್ತ ಬಂದಿತು. ಈಗ ಕೇವಲ 200-300 ಮೀಟರ್ ನಡೆದರೆ ಸಾಕು ಶಿಖರದ ಬುಡ ಮುಟ್ಟಬಹುದು. 

ವಾಹನ ನಿಲುಗಡೆ ಪ್ರದೇಶ..ಇಲ್ಲಿಂದ ಕೇವಲ ಮೀಟರ್ ಗಳ ದೂರದಲ್ಲಿ ಯಾಣ !

ವಾಹನ ನಿಲ್ಲಿಸುವ ಸ್ಥಳದಿಂದ ಕೆಲವೇ ಮೀಟರುಗಳ ಅಂತರದಲ್ಲಿ ನಿಂತಿತ್ತು ಭೈರವೇಶ್ವರ ಶಿಖರ..

ಭೈರವೇಶ್ವರ ಶಿಖರ..ಕಡಿದ ಮರದ ತುಂಡಿನಂತೆ ನಿಂತ ಭಂಗಿ

ಭೈರವೇಶ್ವರನ ಮುಖವನ್ನು ತೋರಿಸಲೆ ಎನ್ನುವಂತೆ  ಕನ್ನಡಿಯಂತೆ  ಎದೆಯುಬ್ಬಿಸಿ ಮುಗಿಲನ್ನು ಚುಂಬಿಸುವಂತೆ  ನಿಂತಿತ್ತು ಮೋಹಿನಿ ಶಿಖರ. 
ನಾನು ನಿಂತೇ ಎನ್ನುವ ಸೊಬಗಿನ ಮೋಹಿನಿ ಶಿಖರ 

ನನ್ನ ತಿಳುವಳಿಕೆಯಂತೆ ಸುರೇಶ ಹೆಬ್ಳೀಕರ್ರವರ ಆಗಂತುಕ ಸಿನಿಮಾದಲ್ಲಿ ಪ್ರಥಮ ಬಾರಿಗೆ ಯಾಣದಲ್ಲಿ  ಚಿತ್ರಿಕರಣವಾಯಿತು  ನಂತರ ನಮ್ಮೊರ ಮಂದಾರ ಹೂವೆ ಸಿನಿಮಾ.  ಆನಂತರ ಈ ತಾಣ ಇನ್ನಷ್ಟು ಪ್ರಸಿದ್ಧಿಗೆ ಬಂತು. 

ಪುರಾಣದಲ್ಲಿ ವಿವರಿಸಿರುವಂತೆ ಭಸ್ಮಾಸುರನ  ವಧೆ ಮಾಡಲು ವಿಷ್ಣು ಮೋಹಿನಿ ರೂಪದಲ್ಲಿ ಬರುತ್ತಾನೆ. ನೃತ್ಯ ಮಾಡುತ್ತಾ ಭಸ್ಮಾಸುರ ತನ್ನ ತಲೆಯ ಮೇಲೆ ಕೈಯನ್ನು ಇಟ್ಟುಕೊಳ್ಳುವಂತೆ ಭಂಗಿ ಪ್ರದರ್ಶನ ಮಾಡುತ್ತಾ ಹೋದಾಗ ಅವನು ಅಲ್ಲೇ ಸುಟ್ಟು ಭಸ್ಮವಾಗಿಬಿಡುತ್ತಾನೆ.  ಆ ಕಾರಣದಿಂದ ಇಲ್ಲಿಯ ಮಣ್ಣು ಕಪ್ಪಾಗಿದೇ ಎಂದು ಹೇಳುತ್ತಾರೆ. ಭಸ್ಮಾಸುರನ ಸಂಹಾರವಾದ ಮೇಲೆ ಶಿವ ಭೈರವೇಶ್ವರ ರೂಪದಲ್ಲಿಯೂ,  ಮತ್ತು ಮೋಹಿನಿ ರೂಪದಲ್ಲಿ ವಿಷ್ಣು ಮತ್ತು ಚಿಕ್ಕ ಚಿಕ್ಕ ಶಿಖರಗಳಾಗಿ ಶಿವಗಣಗಳು ಇಲ್ಲಿಯೇ ನೆಲೆಸುತ್ತಾರೆ.  

ಇಲ್ಲಿ ಪ್ರಧಾನವಾದ ಶಿಖರಗಳು ಭೈರವೇಶ್ವರ ಮತ್ತು ಮೋಹಿನಿ. ಪುರಾಣದ ಹಿನ್ನೆಲೆ ಕೂಡ ಸೊಗಸು, ನೈಸರ್ಗಿಕವಾಗಿಯೂ  ಕೂಡ ಈ ಸ್ಥಳ ನಮ್ಮನ್ನು ಮಂತ್ರ ಮುಗ್ಧರನ್ನಾಗಿ ಮಾಡುವುದು ಸುಳ್ಳಲ್ಲ.  ದೇವಸ್ಥಾನದಲ್ಲಿರುವ ಭೈರವೇಶ್ವರ ಲಿಂಗದ ಮೇಲೆ ಸದಾ ನೀರು (ತೀರ್ಥ) ಜಿನುಗುತ್ತಲೇ ಇರುವುದು ಇಲ್ಲಿನ ವಿಶೇಷ. 

ಶಿಖರದ ಬುಡದಲ್ಲಿರುವ ಶಿವಾಲಯ

ಅತ್ಯಂತ ರಮಣೀಯವಾಗಿ ಕಾಣುವ ಈ ಶಿಖರಗಳು ಚಾರಣಕ್ಕೂ, ಪ್ರವಾಸಿತಾಣವಾಗಿಯೂ, ಭಕ್ತಿ ಸಾರುವ ಕ್ಷೇತ್ರವಾಗಿಯೂ ಪ್ರಸಿದ್ಧಿಯನ್ನು ಹೊಂದಿದೆ.   ಭೈರವೇಶ್ವರ ಶಿಖರವನ್ನು ಒಮ್ಮೆ ಸುತ್ತಿಬರಲು ಅವಕಾಶವಿದೆ.   

ಅಲೆಮಾರಿಗಳ ಗುಂಪು ಗುಹೆಯ ಬುಡದಲ್ಲಿ

ಆ ಶಿಖರದ ಕೆಳಗೆ ನಿಸರ್ಗ ನಿರ್ಮಿತ ಗುಹೆ, ಅದರಲ್ಲಿ ನೆರಳು ಬೆಳಕಿನ ಆಟ, ಸುಂದರ ಕಲಾಕೃತಿ ಮೂಡಿಸಿರುವ ಕಲ್ಲುಗಳು, ಪ್ರತಿಧ್ವನಿ ಎಲ್ಲವೂ ಮನಸಿಗೆ ಮುದ ನೀಡುತ್ತವೆ

ಮುಗಿಲ ಚುಂಬಿಸುವ ಆಸೆಯಲಿ..ಶಿಖರ ಮತ್ತು ಮರಗಳಿಗೆ ಪೈಪೋಟಿ...

ಛಾಯಾಗ್ರಾಹಕರಿಗೆ ಈ ಗುಹೆಯೊಳಗಿನ ನೆರಳು ಬೆಳಕು ಹಬ್ಬವನ್ನೇ ಉಂಟು ಮಾಡುತ್ತದೆ. 


ಹಲ್ಲಿಯೋ ..ಮೊಸಳೆಯೋ ..ಒಟ್ಟಿನಲ್ಲಿ ನೆರಳು ಬೆಳಕಿನ ಆಟ 

ಒಂದು ಕಡೆ ಇಳಿಯಲು ಕಷ್ಟವಾಗಬಹುದೆಂದು ಹಗ್ಗವನ್ನು ಕಟ್ಟಿದ್ದಾರೆ, ಅದನ್ನು ಹಿಡಿದು ನಿಧಾನವಾಗಿ ಇಳಿಯಬಹುದು . ಚಾರಣದ ಮಜಾ ಕೊಡುತ್ತೆ ಈ ತಾಣ. 

ಹಗ್ಗ ಹಿಡಿದು ಇಳಿಯುವ ಸಾಹಸದಲ್ಲಿ ನಮ್ಮ ತಂಡ 

ಸುಮಾರು ಹೊತ್ತು ಕ್ಯಾಮೆರ ಕೈಚಳಕ ಪ್ರದರ್ಶಿಸಿ ಗುಹೆಯನ್ನು ಒಂದು ಸುತ್ತು ಸುತ್ತಿ ಧಣಿವಾದ ಮೇಲೆ,  ಅಲ್ಲಿಯೇ ಇದ್ದ ಒಂದು ಅಂಗಡಿಯಲ್ಲಿ ಕಷಾಯ, ಚುರುಮುರಿ ಎಲ್ಲ ಮೆದ್ದ ಮೇಲೆ ಮೈ ಮನ ಎರಡು "ಇದು ಹಕ್ಕಿಯಲ್ಲ.... ಆದ್ರೆ ಹಾರ್ತೈತಲ್ಲ" ಎಂದು ಹಾಡಲು ಶುರು ಮಾಡಿದವು. 

ಬಂದ ಕಾಡು ಹಾದಿಯಲ್ಲಿ ತಿರುಗಿ ನೋಡಿದಾಗ!

ಮುಂದಿನ ಪಯಣ ಇನ್ನಷ್ಟು ರೋಚಕವಾಗಿತ್ತು, ದಾರಿಯಲ್ಲಿ ವಿಭೂತಿ ಜಲಪಾತಕ್ಕೆ ದಾರಿ ಎನ್ನುವ ಸೂಚನೆಗನುಸಾರ ಕಾಡಿನಲ್ಲಿ ಮತ್ತೆ ಹೊಕ್ಕೆವು. ಯಾಣದಿಂದ  ಕುಮಟ, ಗೋಕರ್ಣ ಹಾದಿಯಲ್ಲಿ ಸುಮಾರು 8 ಕಿ.ಮಿ ಕಳೆದ ಮೇಲೆ ಎಡಕ್ಕೆ ತಿರುಗಿದರೆ ವಿಭೂತಿ ಜಲಪಾತ, ಬಲಕ್ಕೆ ಹೋದರೆ ಕುಮಟ, ಗೋಕರ್ಣಕ್ಕೆ ಹೋಗುತ್ತದೆ. ಸೂಚನಾ ಫಲಕದ ಹತ್ತಿರ ಎಡಗಡೆ ತಿರುಗಿ ಸುಮಾರು 1-2 ಕಿ.ಮಿ.ಒಳಗೆ ಹೋಗಿ ವಾಹನ ನಿಲುಗಡೆಯಾದ ಮೇಲೆ..ಸುಮಾರು ಒಂದು-ಒಂದೂವರೆ ಕಿ.ಮಿ.ನಷ್ಟು ನೆಡೆದು ಸಾಗಬೇಕು.  ಭೋರ್ಗರೆಯುತ್ತಾ ಎರಡು ಹಂತದಲ್ಲಿ ಧುಮುಕುವ ಜಲಾರಾಶಿಯೇ ವಿಭೂತಿ ಜಲಪಾತ.  

ಬೆಳ್ಳನೆ ಹಾಲಿನ ಧಾರೆ!!!
ಜಲಪಾತದ ಮಧ್ಯೆ ಸಣ್ಣ ಸುಣ್ಣದ ಕಲ್ಲಿನ ಮೇಲೆ ಹರಿಯುವ ನೀರು ವಿಭೂತಿಯಂತೆ ಬೆಳ್ಳಗಿರುವುದು  ಈ ಹೆಸರಿಗೆ ಕಾರಣ ಎನ್ನುವುದು ಸ್ಥಳೀಯರ ಮಾತು.  
ವಿಭೂತಿ ಜಲಪಾತದ ಧಾರೆ
ಇಲ್ಲಿ ಅಪಾಯವಿಲ್ಲದೆ ನೀರಲ್ಲಿ ಇಳಿಯಬಹುದು..ನೀರು ದಣಿದ ದೇಹಕ್ಕೆ ಒಂದು ಸುಂದರ ಅನುಭವ ಕೊಡುತ್ತದೆ.  

(ಸಶೇಷ)

Tuesday, October 30, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೬

ಹೋಟೆಲ್ ಮಧುವನದ ಶ್ರೀ ಪ್ರಕಾಶ್ ಅವರಿಂದ ಮಾರ್ಗಸೂಚಿ ಪಡೆದು, ವಿಘ್ನವಿನಾಶಕ ಸಿರ್ಸಿ ಮತ್ತು ಸುತ್ತ ಮುತ್ತಲ ಸ್ಥಳದಲ್ಲಿ ಶಕ್ತಿ ದೇವರು ಎಂದು ಹೆಸರಾದ ದೊಡ್ಡ ಗಣಪತಿ ದೇವಸ್ಥಾನಕ್ಕೆ ಹೋದೆವು.

ಆಶ್ಚರ್ಯ ಎನ್ನುವಂತೆ, ದೇವಸ್ಥಾನ ಒಂದು ಭವ್ಯ ಮನೆಯ ಹಾಗೆ ಇದ್ದದ್ದು.  ನಾವು ಅನುಮಾನದಿಂದಲೇ ಆ ಕಟ್ಟಡದ ಮೆಟ್ಟಿಲು ಹತ್ತಿದಾಗ ಎದುರಿಗೆ ಒಂದು ದೊಡ್ಡ ಗಣಪ ಕೂತಿದ್ದ,  ದೇವರ ಮೂರ್ತಿ ಬಹು ಆಕರ್ಷಕವಾಗಿತ್ತು.

ಶ್ರೀ ಮಹಾಗಣಪತಿಯ ದೇವಸ್ಥಾನ ಪಾರ್ಶ್ವ ನೋಟ 

 ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ಹೆಗಡೆಯವರು ಹೇಳಿದ್ರು ಈ ದೇವಸ್ಥಾನದ ಬಗ್ಗೆ.  ಸಿರ್ಸಿ ಸುತ್ತ ಮುತ್ತ ಜನರು ತಮ್ಮ ಕಾರ್ಯಗಳಿಗೆ ಮುನ್ನ ಈ ಗಣಪನನ್ನು ನೆನೆಯುವುದು, ಹರಕೆ ಕಟ್ಟಿಕೊಳ್ಳುವುದು, ಕೆಲಸ ಕಾರ್ಯಗಳು ನೆರವೇರಿದ ಮೇಲೆ ಹರಕೆಯನ್ನು ಸಲ್ಲಿಸುವುದು ಮುಂತಾಗಿ ಹೇಳಿದ್ದರು.  ಲೇವಾದೇವಿ, ಭೂಮಿ ಕೊಡು ಕೊಳ್ಳುವಿಕೆ, ಹಣಕಾಸಿನ  ವಹಿವಾಟು ವ್ಯವಹಾರ ಎಲ್ಲದಕ್ಕೂ ಗಣಪನ ಪೂಜೆಯೇ ಇಲ್ಲಿ ಪ್ರಥಮ ಎಂದು ಹೇಳಿದ್ದರು.  ಅಂದುಕೊಂಡ ಕಾರ್ಯ ನೆರವೆರಿಸುವಷ್ಟು ಮನೋಸ್ಥೈರ್ಯವನ್ನು ಶ್ರೀ ಮಹಾಗಣಪತಿ ಕೊಡುವನು ಎನ್ನುವ ನಂಬಿಕೆ ಇಲ್ಲಿನ ಪ್ರಾಂತ್ಯದಲ್ಲಿ ಜಾಸ್ತಿ.

ಶ್ರೀ ಮಹಾಗಣಪತಿಯ ದೇವಸ್ಥಾನ ಪಾರ್ಶ್ವ ನೋಟ 

ಮೊದಲೇ ಗಣಪನ ಬಗ್ಗೆ ತುಂಬಾ ಒಲವಿರುವ ನನಗೆ, ಈ ಮಾತುಗಳು ಇನ್ನಷ್ಟು ಹುಮ್ಮಸ್ಸನ್ನು ಕೊಟ್ಟಿತು, ನಮ್ಮ ಹುಡುಗರನ್ನು ಕರೆದುಕೊಂಡು ಈ ಗಣಪನ ಸನ್ನಿಧಾನಕ್ಕೆ ಬಂದು ಕೂತಾಗ ಚಂಡಮಾರುತದ ಅಲೆಗಳಿಗೆ ತೂರಾಡುತಿದ್ದ  ಮನಸಲ್ಲಿ ಏನೋ ಒಂದು ತರಹ ಪ್ರಶಾಂತತೆ, ನೆಮ್ಮದಿ ಕಾಣ ತೊಡಗಿತು.


ದೇವಸ್ಥಾನದ ಮುಂಭಾಗ ಮತ್ತು ಮುಖ್ಯ ದ್ವಾರ 

ದೇವಸ್ಥಾನದ ಸುತ್ತ ಮುತ್ತಲಿನ ಪರಿಸರವನ್ನು ಕ್ಯಾಮೆರ ತನ್ನ ಹೊಟ್ಟೆಗೆ ಸೇರಿಸಿಕೊಳ್ಳುತ್ತಿತ್ತು..ಅಲ್ಲಿಗೆ ಬಂದ ಓರ್ವ "ದೇವರ ಮೂರ್ತಿಯನ್ನು ಚಿತ್ರಿಸಿ ಕೊಳ್ಳಿ" ಅಂದಾಗ, ನಾನೇ ಬೇಡ..ದೇವರ ಚಿತ್ರ ಬೇಡ ಅಂದೇ..ಇಲ್ಲ ಸರ್ ನಾನು ದೇವಸ್ಥಾನದವನೇ, ಫೋಟೋ ತೆಗೆದುಕೊಳ್ಳಬಹುದು ಅಂದ್ರು..ಅಳುಕಿನಿಂದಲೇ ಮತ್ತೆ ದೇವಸ್ಥಾನದ ಒಳಗೆ ಹೋದೆ, ಮತ್ತೆ ಅಲ್ಲಿನ ಅರ್ಚಕರನ್ನು ಕೇಳಿದೆ,  ತಗೊಳ್ಳಿ ತೊಂದರೆ ಇಲ್ಲ ಅಂದ್ರು.

ದೇವಸ್ಥಾನದ ಭವ್ಯ ಒಳಾಂಗಣ 
ಗಣಪನ ಗರ್ಭಗುಡಿ 

 ಸರಿ ಗಣಪನನ್ನು ನನ್ನ ಕ್ಯಾಮೆರಾದಲ್ಲಿ ಹಲವಾರು ಕೋನದಲ್ಲಿ ಚಿತ್ರೀಕರಿಸಿಕೊಂಡು ಹೊರಗೆ ಬರುವಾಗ ಗಣಪನಿಗೆ ನಾನು ಅಂದುಕೊಂಡ ಕಾರ್ಯ ನೆರವೇರಿದ ಮೇಲೆ ನನ್ನ ಮಡದಿ,  ಹಾಗೂ ಮಗಳಿಗೆ ನಿನ್ನ ದರುಶನ ಮಾಡಿಸುತ್ತೇನೆ ಪ್ರಭು ಎಂದು ವಾಗ್ಧಾನ ಮಾಡಿ ಹೊರಗೆ ಬಂದೆ..

ವಿಘ್ನ ವಿನಾಶಕ ಶ್ರೀ ಮಹಾಗಣಪತಿ

ಮಾರಿಕಾಂಬೆ ದೇವಾಸ್ಥಾನದಿಂದ ಮಹಾಗಣಪನ ಗುಡಿಗೆ ನಕಾಶೆ 


ಸಿರ್ಸಿ ಪಟ್ಟಣದಿಂದ ಯಾಣಕ್ಕೆ ಹೋಗುವ ಮಾರ್ಗದಲ್ಲೇ ಸಿರ್ಸಿಯ ಹೃದಯ ಭಾಗದಲ್ಲೇ ಇರುವ ಈ ದೇವಸ್ಥಾನ ಬಹು ಭಕ್ತರನ್ನು ಆಕರ್ಷಿಸುತ್ತಿದೆ.  

(ಸಶೇಷ)

Monday, October 29, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೫

ಸಾತೊಡ್ಡಿ ಜಲಪಾತದ ದೃಶ್ಯ ವೈಭವಕ್ಕೆ ಮರುಳಾಗಿ ಮತ್ತೆ ವಾಸ್ತವ ಲೋಕಕ್ಕೆ ಬಂದಾಗ ವೇಳೆ ಸುಮಾರು ಎಂಟು ಘಂಟೆಯಾಗಿತ್ತು. ಒಂದು ಹುಚ್ಚು ಧೈರ್ಯ ಮನಸನ್ನು ಆವರಿಸಿತ್ತು.  ಶನಿವಾರದ ರಾತ್ರಿ ಕಳೆಯೋಕೆ ಸ್ವಲ್ಪ ಹೊತ್ತು ಹೋಟೆಲ್ ರೂಮಿಗಾಗಿ ಹುಡುಕಾಡಿದೆವು .

ಸಾತೊಡ್ಡಿಯ ಕಾಡಿನ ಹಾದಿ ನಿಜವಾಗಿಯೂ ಒಂದು ದುರ್ಗಮ ಹಾದಿ, ಸುವ್ಯವಸ್ಥಿತ ಕಾರುಗಳು ಅಲ್ಲಿಗೆ ಹೋಗಲು ಬಹಳ ಶ್ರಮ ಪಡಬೇಕು..ದ್ವಿಚಕ್ರ ವಾಹನಗಳು ಉತ್ತಮ, ಇಲ್ಲವೇ ಜೀಪ್ ಗಳು ಕೂಡ ಉತ್ತಮ..ಮಿಕ್ಕಿದ ವಾಹನಗಳು ಯಾವಾಗ ಕೈಕೊಡುತ್ತವೆ ಎನ್ನುವುದು ತಿಳಿಯೋಲ್ಲ.

ಆ ಕತ್ತಲ ಹಾದಿಯಲ್ಲಿ ಬಸವಳಿದು ಬಂದಾಗ ನಮಗೆ ಆ ಅಮಾವಾಸ್ಯೆಯ ರಾತ್ರಿಯಲ್ಲಿ ಸಿಕ್ಕಿದ್ದು "ಪ್ರಕಾಶ"ಮಾನವಾದ ದೀಪಗಳು.  ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ ಹೆಗಡೆಯವರು ಮಧುವನ ಹೋಟೆಲಿನ ಮಾಲೀಕರು ಶ್ರೀ ವಿಶ್ವ ಅವರನ್ನು ಸಂಪರ್ಕಿಸಿ ನಮಗೆ ತಂಗಲು ವ್ಯವಸ್ಥೆ ಮಾಡಿದರು. ಅಲ್ಲಿಗೆ ಹೋದಾಗ ನಮ್ಮನ್ನು ಆದರದಿಂದ ಬರಮಾಡಿಕೊಂಡ ಶ್ರೀ ಪ್ರಕಾಶ್  ಅವರು ಮತ್ತು ಪ್ರಕಾಶ್ ಹೆಗಡೆ ಇಬ್ಬರು ಬಂಧುಗಳು ಎಂದು ತಿಳಿಯಿತು..


ಶ್ರೀ ವಿಶ್ವ ಅವರ ಮಾಲಿಕತ್ವದ ಹೋಟೆಲ್ ಮಧುವನ 

ಶ್ರೀ ವಿಶ್ವ ಅವರ ಮಾಲಿಕತ್ವದ ಹೋಟೆಲ್ ಮಧುವನ 

ಪ್ರಕಾಶ್ ಹೆಗಡೆ ನನಗೆ ಕರೆ ಮಾಡಿ, "ಶ್ರೀಕಾಂತ್ ನಿಮಗೆ ಹೋಟೆಲ್ ಮಧುವನದಲ್ಲಿ ತಂಗಲು ವ್ಯವಸ್ಥೆ ಮಾಡಿದ್ದೇನೆ, ನಿಮ್ಮ ಹೆಸರು ಹೇಳಿದ್ದೇನೆ ಅಲ್ಲಿ ಹೋಗಿ ನನ್ನ ಹೆಸರು ಹೇಳಿ ಪರಿಚಯ ಮಾಡಿಕೊಳ್ಳಿ ನಿಮಗೆ ಅನುಕೂಲ ಮಾಡಿಕೊಡುತ್ತಾರೆ" ಎಂದರು. ಕತ್ತಲಿನ ಹಾದಿಯಲ್ಲಿ ತೋರಿದ ಒಂದು ಬೆಳಕು ನಮ್ಮ ದೇಹಕ್ಕೆ ಬೇಕಾದ ವಿಶ್ರಾಂತಿ ಕೊಟ್ಟಿತು.

ತುಂಬಾ ಮೃದು ಮಾತಿನ "ಪ್ರಕಾಶ್" ಏನು ಯೋಚನೆ ಮಾಡಬೇಡಿ ನಿಮ್ಮ ಆರು ಮಂದಿಗೆ ವ್ಯವಸ್ಥೆ ಮಾಡಿದ್ದೇನೆ, ಹೋಟೆಲ್ ನಲ್ಲಿ ಊಟ ಮುಗಿಯುವ ಮುನ್ನಾ ಹೋಗಿ ಊಟ ಮಾಡಿ ಬನ್ನಿ ನಂತರ ಮಾತಾಡುವ" ಎಂದರು.

ಶ್ರೀ ಪ್ರಕಾಶ್ 

ಪಕ್ಕದಲ್ಲೇ ಇದ್ದ ಹೋಟೆಲ್ ನಲ್ಲಿ ಉತ್ತರ ಭಾರತದ ಶೈಲಿಯ ಊಟ ಮಾಡಿ, ಹೊಟ್ಟೆ ತುಂಬಿಕೊಂಡ ನಂತರ ಸಿಕ್ಕದ್ದು ಸೊಗಸಾದ ಕೋಣೆಗಳು.  ಧಣಿದ ದೇಹಕ್ಕೆ ಇದಕ್ಕಿಂತ ಅನುಕೂಲ ಬೇಕೇ.  ಮತ್ತೆ ನಾನು ಕೆಳಗೆ ಬಂದಾಗ , ಪ್ರಕಾಶರವರು ಊಟ ಮಾಡುತಿದ್ದರು, ಬೇಸರ ಮಾಡಿಕೊಳ್ಳದೆ, ನಮ್ಮ ನಾಳಿನ ಕಾರ್ಯಕ್ರಮವನ್ನು ವಿಚಾರಿಸಿ, ಅನುಕೂಲವಾದ ಮಾಹಿತಿ ಕೊಟ್ಟರು, ಮೊದಲು ಎಲ್ಲಿಗೆ ಹೋಗಬೇಕು, ನಂತರ ಎಲ್ಲಿಗೆ, ಬೆಂಗಳೂರಿಗೆ ಹೋಗಬೇಕಾದರೆ ಎಷ್ಟು ಹೊತ್ತಿಗೆ ಹೊರಡಬೇಕು , ಊಟವೆಲ್ಲಿ ಮಾಡಬೇಕು ಹೀಗೆ  ಒಂದು ದಿನಚರಿ ಪಟ್ಟಿಯನ್ನೇ ನಮಗೆ ಸಿದ್ಧಮಾಡಿಕೊಟ್ಟರು.

ಶ್ರೀ ಪ್ರಕಾಶ್ ಜೊತೆಯಲ್ಲಿ ನಮ್ಮ ಅಲೆಮಾರಿಗಳು ತಂಡ!

ಮನಸು ಹಾರಾಡಿತು, ಕಾಣದ ಊರಿನಲ್ಲಿ, ಕೇವಲ ಬ್ಲಾಗ್ ಲೋಕದಲ್ಲಿ ಸಂಪರ್ಕ ಇರುವ ಅಮೂಲ್ಯ ಸ್ನೇಹಿತರಿಂದ ಅಮೂಲ್ಯವಾದ ಆದ್ರೆ ಬೆಲೆ ಕಟ್ಟಲಾರದ ಸಹಾಯ ಮನಸನ್ನು ಮೂಕನನ್ನಾಗಿಸಿತು. ಹೋಟೆಲ್ ಮಧುವನದ ಮಾಲೀಕರಾದ  ಶ್ರೀ ವಿಶ್ವ ಅವರಿಗೂ..ಹಾಗೂ  ಇಬ್ಬರು ಪ್ರಕಾಶ್ ರಿಗೂ ಮನಸಲ್ಲಿ ವಂದಿಸುತ್ತಾ ನಿದ್ರಾ ಲೋಕಕ್ಕೆ ಜಾರಿದೆವು.

ಬೆಳಿಗ್ಗೆ ಎದ್ದು, ಅವರ ಜೊತೆ ಇನ್ನಷ್ಟು ಹರಟಿದೆವು, ಮನಸಿಗೆ ಸಂತೋಷವಾಯಿತು ಅವರ ಸತ್ಕಾರ ಕಂಡು, ಜೊತೆಯಲ್ಲಿ ನೆನಪಿಗಾಗಿ ಒಂದಷ್ಟು ಚಿತ್ರಗಳನ್ನು ಅವರ ಜೊತೆ ತೆಗಿಸಿಕೊಂಡು ಅವರಿಂದ ಬೀಳ್ಕೊಟ್ಟೆವು.

ಶನಿವಾರದ ಇರುಳನ್ನು ಸುಮಧುರವಾಗಿ ಕಳೆಯಲು ಸಹಾಯ ಮಾಡಿದ ಶ್ರೀ ವಿಶ್ವ , ಶ್ರೀ ಪ್ರಕಾಶ್ , ಮತ್ತು ಶ್ರೀ ಪ್ರಕಾಶ್  ಹೆಗಡೆ ಅವರಿಗೆ ಈ ಬ್ಲಾಗಿನ ಲೇಖನ ಅರ್ಪಿತ, ಮತ್ತು ನಮ್ಮ "ಅಲೆಮಾರಿಗಳು" ತಂಡದ ಪರವಾಗಿ ಧನ್ಯವಾದಗಳನ್ನು ಈ ಮೂಲಕ ಅರ್ಪಿಸುತ್ತಿದ್ದೇನೆ

(ಸಶೇಷ)

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೪

ಗಂಗಾವತರಣದಲ್ಲಿ ಶಿವ ತನ್ನ ಜಟೆಯನ್ನು ಬಿಚ್ಚಿ ಗಂಗೆಯನ್ನು ಸೆರೆ ಹಿಡಿದು ನಿಂತಾಗ...
ಭಗೀರಥ ಮಹಾರಾಜ  "ಇಳಿದು ಬಾ ತಾಯಿ ಇಳಿದು ಬಾ..ಹರನ ಜಡೆಯಿಂದ" ಎಂದು ಹಾಡು ಹೇಳಲು ನಿಲ್ಲುತ್ತಾನೆ...

ಅರೆ ಇದೇನು ಸಹಸ್ರ ಲಿಂಗ ನೋಡಿ ಇವನಿಗೆ ತಲೆ ತಿರುಗಿತೆ ಎನ್ನುವಷ್ಟರಲ್ಲಿ.... ನಮ್ಮ ಅಲೆಮಾರಿಗಳು ತಂಡದ ಖಾಯಂ ಸದಸ್ಯ "Between the Books" ಬ್ಲಾಗಿನ ಸಂದೀಪ್ ಹೇಳಿದ್ದು..."ಶ್ರೀಕಾಂತ್ ನಮ್ಮ ಅಲೆಮಾರಿಗಳು ತಂಡ ಸಾತೊಡ್ಡಿ ಜಲಪಾತದ ದಾರಿಯನ್ನು ಸಂಜೆಯ ಇರುಳು ಬೆಳಕಿನಲ್ಲಿ ನೋಡಿ ಸವಿಯಬೇಕು ಎನ್ನುವುದು ನನ್ನ ಬಯಕೆ" ನೆನಪಿಗೆ ಬಂತು. ಸಾರಥಿಗೆ ಹೇಳಿದೆ."ನಡೀರಿ ಸುನೀಲ್ ಸಾತೊಡ್ಡಿ ಜಲಪಾತಕ್ಕೆ ಹೋಗೋಣ"
ಸಾತೊಡ್ಡಿ ಜಲಪಾತಕ್ಕೆ ಪಯಣದ ಹಾದಿ!
ಸಿರ್ಸಿಯಿಂದ ಯೆಲ್ಲಾಪುರ ತಲುಪಿ ಅಲ್ಲಿಂದ ಬಲಕ್ಕೆ ತಿರುವು ತೆಗೆದುಕೊಂಡು ಸಾಗಿದರೆ ಸಿಗುತ್ತೆ ಸಾತೊಡ್ಡಿ ಜಲಪಾತಕ್ಕೆ ಹಾದಿ. ಮಾಗೋಡ್ ಜಲಪಾತ ಮತ್ತು ಜೇನುಕಲ್ಲು ಗುಡ್ಡದ ವೀಕ್ಷಣ ಸ್ಥಳವನ್ನು ಕೈ ಬಿಟ್ಟೆವು,  ಕಾರಣ, ಸಾತೊಡ್ಡಿ ಜಲಪಾತ ಕಾಡು ದಾರಿಯಲ್ಲಿ ಹಾದು ಹೋಗಬೇಕಿತ್ತು ಮತ್ತು ಆರು ಘಂಟೆ ಆದ ಮೇಲೆ ಆ ಜಲಪಾತ ವೀಕ್ಷಣೆಗೆ ಅವಕಾಶವಿರಲಿಲ್ಲ.

ಸಂದೀಪ್ ಹೇಳಿದಂತೆ ಆ ಕಾಡು ದಾರಿ ನಿಜವಾಗಲೂ ಸಂಜೆಯ ಇರುಳು ಬೆಳಕಿನಲ್ಲೇ ಇತ್ತು..ನಾವು ಹೋದಾಗ ಸುಮಾರು ಐದು ಘಂಟೆ..ಆದ್ರೆ ಆಗಲೇ ಸೂರ್ಯಾಸ್ತವಾದಂತೆ ಕತ್ತಲು ತನ್ನ ದಾಳಿ ಇಟ್ಟಿರುವ ಕುರುಹುಗಳು ಇದ್ದವು..
ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರಲ್ಲಿ ಮುಳುಗುತ್ತಿರುವ ಸೂರ್ಯ
ನಮ್ಮ ಸಾರಥಿ ಸುನೀಲ್ ಇಂತಹ ಜಾಗಗಳನ್ನು ಬಲು ಇಷ್ಟ ಪಡುತ್ತಾರೆ ಹಾಗು ಇಂತಹ ಸಾಹಸ ಜಾಗಗಳಲ್ಲಿ ಅವರ ಡ್ರೈವಿಂಗ್ ಬಗ್ಗೆ ನಮಗೆ ಬಲು ವಿಶ್ವಾಸ..ನಗುತ್ತ ನಲಿಯುತ್ತ ಆ ಇಳಿಜಾರಾದ ಕಾಡಿನ ಹಾದಿಯನ್ನು ಇಳಿಯುತ್ತ ಸಾಗಿತು ನಮ್ಮ ವಾಹನ..
ಎಲ್ಲಿ ನೋಡಿದರು ಹಸಿರು ಹೊದಿಕೆ ಹೊದ್ದು ಮಲಗಿದ್ದಳು ಪ್ರಕೃತಿ ಮಾತೆ

ಸೂರ್ಯ ತನ್ನ ಮನೆಗೆ ಪಯಣ ಬೆಳೆಸುತಿದ್ದ...ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರು ಸುಂದರವಾಗಿ ಕಾಣುತಿತ್ತು..ಜಲಪಾತದ ನೀರು ಅಣೆಕಟ್ಟಿಗೆ ಹರಿದು ಸಾಗುವ ದೃಶ್ಯ ಮನಮೋಹಕವಾಗಿತ್ತು..ಸೂರ್ಯ ತನ್ನ ಮನೆಗೆ ಹೋಗುವ ಮೊದಲು ಹಿನ್ನೀರನ್ನು ಬಂಗಾರದ ನೀರಾಗಿ ಮಾಡಿದ್ದ...ಅದರ ಸೊಗಸು ನೋಡಿಯೇ ಸವಿಯಬೇಕು..ನಮ್ಮ ಕ್ಯಾಮೆರ ಹೊಟ್ಟೆ ಹಸಿವು.. ಇನ್ನಷ್ಟು ಬೇಕು..ಎಂದು ದಯನೀಯವಾಗಿ ಬೇಡುತಿತ್ತು ...ಆದ್ರೆ ಸಮಯದ ಅಭಾವವಿದ್ದ ಕಾರಣ..ವಾಹನದಿಂದಲೇ ಒಂದೆರಡು ಚಿತ್ರಗಳನ್ನು ಸೆರೆಹಿಡಿದು ಸಾಗಿದೆವು.
ಜಲಪಾತ ವೀಕ್ಷಣೆಗೆ ಕೆಲವು ಸೂಚನೆಗಳು 
 ನಮ್ಮ ವಾಹನ ನಿಂತಾಗ, ಅಲ್ಲಿ ಒಂದು ಪುಟ್ಟ ಮಗು "ಟಿಕೆಟ್ ಟಿಕೆಟ್" ಎಂದು ಸುಮಧುರ (?) ಧ್ವನಿಯಲ್ಲಿ ಕೂಗಿತು...ನಾನು "ಟಿಕೆಟ್ ಟಿಕೆಟ್..ಆರು ಟಿಕೆಟ್ ಕೊಡು ಪುಟ್ಟಿ" ಅಂದೇ.ಅಲ್ಲಿದ್ದ ಆ ಮಗುವಿನ ತಾಯಿ ತನ್ನೆಲ್ಲ ಮೊವತ್ತೆರಡು  ದಂತಗಳನ್ನು ತೋರಿಸಿ..ಮೂವತ್ತು ರುಪಾಯಿ ಅಂದರು..
ಕೈ ಬೀಸಿ ಕರೆದಳು ತಾಯಿ ಸಾತೊಡ್ಡಿ ಜಲಪಾತ 
ನಿಜವಾಗಲು ಸಂದೀಪ್ ಮಾತು ನಿಜವಾಗಿತ್ತು..ಆ ಕಾಡಿನ ಹಾದಿ, ಜಲಪಾತ ತಲುಪಲು ಸಾಗುವ ಸುಮಾರು ಅರ್ಧ ಕಿ.ಮಿ.ಮಾರ್ಗ ಸೊಗಸಾಗಿತ್ತು..ನಮ್ಮ ಕ್ಯಾಮೆರಾಗೆ ಹೆಚ್ಚಿನ ಅವಕಾಶ ಕೊಡದೆ.ನಾವು ಜಲಪಾತದ ಬುಡಕ್ಕೆ ಸಾಗಿದೆವು..

ಜಲಪಾತದ ಬುಡಕ್ಕೆ ಸಾಗುವ ಹಾದಿಯಲ್ಲಿ ತಿಂಡಿ ತಿನಿಸಿಗೆ ಅವಕಾಶವಿತ್ತು..ಮೊದಲೇ ಹೇಳಿದರೆ ಊಟ, ಪಲಾವ್ ಕೂಡ ಸಿದ್ಧ ಮಾಡುತ್ತೇವೆ ಎನ್ನುವ ಫಲಕ ಇತ್ತು..ಸಮಯವಿಲ್ಲದ ಕಾರಣ ಅಲ್ಲಿಗೆ ಭೇಟಿ ಕೊಡಲು ಅವಕಾಶವಿರಲಿಲ್ಲ..
ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿ...ಕಣ್ಣು ತುಂಬಿಸಿಕೊಳ್ಳಲು ಇನ್ನರ್ಧ ಕಿಮೀ ಗಳ ಹಾದಿ 
ಆ ಗಂಗಾವತರಣದ ದೃಶ್ಯಗಳನ್ನು ನನ್ನ ಮಾತಿಗಿಂತಲೂ ಚಿತ್ರಗಳೇ ಚೆನ್ನಾಗಿ ವರ್ಣಿಸುತ್ತವೆ..
ದೂರದಲ್ಲಿ ಕೈ ಬೀಸುತ್ತ ಹರಿ ಬೀಳುವ ಜಲಧಾರೆ!!
ಆ ಹಸಿರಿನ ಹೊದಿಕೆ ಹೊದ್ದ ಆ ಕಣಿವೆಯಲ್ಲಿ ಬೂದು ಬಣ್ಣದ ಬಂಡೆಗಳು ಸೆರಗಿಗೆ ಸುಂದರ ನೆರಿಗೆಯನ್ನು ಕೊಟ್ಟರೆ.ತಿಳಿ ಹಾಲಿನ ಜಲಪಾತ ಒಳ್ಳೆಯ ಜರಿಯನ್ನು  ಕೊಟ್ಟಿತ್ತು..ಆ ಸುಂದರ ದೃಶ್ಯ ಮನಮೋಹಕ..


ಈ ಜಲಪಾತವನ್ನು ಅತಿ ಹತ್ತಿರದಿಂದ ಹಾಗೂ ಅತಿ ಕಡಿಮೆ ಎತ್ತರದಿಂದ ಅಗಲವಾಗಿ ಸುರಿಯುವ ಜಲಧಾರೆ ಎಂದರೆ ತಪ್ಪಿಲ್ಲ...ನೀವೇ ನೋಡಿ..
ಹಾಲು ಹಾಲಾಗಿ ಬೀಳುವ ಪರಿ 
 ಎಷ್ಟು ನೋಡಿದರು ಸಾಲದು..ಪ್ರತಿಬಾರಿಯೂ ತನ್ನ ಹೊಸತನ ಬಿಚ್ಚಿಡುವ ಜಲಪಾತ !!!
ಸುಂದರ ಜಲಧಾರೆ...
 ನಾವು ಹೊರಡುವಾಗ.... ಭಾನು "ನಾ ಹೊರಟೆ..ನಿಮಗಾಗಿ ಬಾನನ್ನು ರಂಗು ರಂಗಾಗಿ ಮಾಡಿದ್ದೇನೆ" ಎಂದು ಹೇಳಿದ!!
 "ಭಾನು"ವಿನಿಂದ ರಂಗಾದ "ಬಾನು"!
ಮೊದಲಬಾರಿಗೆ ನನ್ನಲ್ಲಿ ಮೌನ ಮಾತನ್ನು ಸೋಲಿಸಿತು..ಆ ದೃಶ್ಯ ವ್ಯಭವ ನನ್ನನ್ನು ಮೂಕನನ್ನಾಗಿ ಮಾಡಿತ್ತು.  ಸುಂದರ ಜಲಪಾತ, ಪ್ರಾಯಶಃ ಬಲು ಸಾಹಸದ ಹಾದಿಯಾಗಿದ್ದರಿಂದ ಜಲಪಾತದ ಸುತ್ತಾ ಮುತ್ತಾ ಕಸ ಕಡ್ಡಿಗಳು ಕಡಿಮೆ ಇದ್ದವು ಮತ್ತು ಜಲಪಾತವು ಸುಂದರವಾಗಿತ್ತು..ನೀರಲ್ಲಿ ಇಳಿಯುವ ಸಾಹಸದ ಸಾಧ್ಯತೆಗಳು ಕಡಿಮೆ ಇರುವುದು ಈ ಜಲಪಾತವನ್ನು ಸ್ವಚ್ಛವಾಗಿಡಲು ಸಹಾಯ ಮಾಡಿದೆ ಅನ್ನಿಸಿತು. ಯೆಲ್ಲಪುರಕ್ಕೆ ನಮ್ಮ ಪಯಣ ಕತ್ತಲಿನಲ್ಲಿ ಸಾಗಿತ್ತು.ನಮ್ಮ ಸಾರಥಿ ಸುನೀಲ್ ಜಾಗರೂಕತೆಯಿಂದ ನಿಧಾನವಾಗಿ ವಾಹನ ಚಲಿಸುತ್ತಿದ್ದರು..ಮಾತು ಸಾಗಿತ್ತು..ಸುನೀಲ್ "ಸರ್ ನಿಮ್ಮ ಜೊತೆ ಬಂದ್ರೆ..ಕಾಣದೆ ಇರುವ ಜಾಗವನ್ನು ತೋರಿಸುತ್ತೀರಿ..ಸೂಪರ್ ಸರ್ ನಿಮ್ಮ ಗುಂಪು ಎಂದರು"

ಯೆಲ್ಲಾಪುರದ ಚೆಕ್-ಪೋಸ್ಟ್ ಬಳಿ  ಇದ್ದ ಒಂದು ಅಂಗಡಿಯಲ್ಲಿ ಜಲ್ಜೀರ, ಐಸ್ ಕ್ರೀಂ, ಬೋಟಿ ಬಿಸ್ಕೆಟ್, ಕಾಫಿ ಟೀ, ಎಲ್ಲವು ಸೊಗಸಿತ್ತು. ನಮ್ಮ ಮುಂದಿನ ಗುರಿ ಇದ್ದದ್ದು ರಾತ್ರಿಗೆ ವಾಸ್ತವ್ಯದ ವ್ಯವಸ್ಥೆ ..ಅದು ಒಂದು ಸುಂದರ ಕಥೆ..

(ಸಶೇಷ)

Sunday, October 21, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೩


ಅಣ್ಣಾವ್ರ ಭಕ್ತ ಕುಂಬಾರದ ಒಂದು ದೃಶ್ಯ..

ಕುಂಬಾರ ಸಣ್ಣ "ಬಡಿಗೆ"ಯಿಂದ ಸಂತ ನಾಮದೇವರ ತಲೆಗೆ ಟಕ್  ಅಂತ ಬಡಿದು...ಸಂತ ಜ್ಞಾನದೇವರ ಕಡೆಗೆ ತಿರುಗಿ

"ಅಲ್ಪನಿಂದ ದೊಡ್ಡ ಮಾತು...ಸ್ವಾಮೀ ಇದು ಅರ್ಧ ಬೆಂದ ಮಡಿಕೆ" ಎನ್ನುತ್ತಾನೆ..

ಕೋಪಗೊಂಡ ನಾಮದೇವ ಅಲ್ಲಿಂದ ಹೊರಟು ತಕ್ಕ ಗುರುವಿನಾಶ್ರಯ ಹುಡುಕಾಟದಲ್ಲಿ  ತಿರುಗಿ ತಿರುಗಿ ಒಂದು ದೇವಸ್ಥಾನಕ್ಕೆ ಬಂದಾಗ....ಅಲ್ಲಿ ಶಿವಲಿಂಗದ ಮೇಲೆ ತನ್ನ ಕಾಲು ಇಟ್ಟುಕೊಂಡು ಯೋಗ ನಿದ್ರೆಯಲ್ಲಿರುವ ಒಬ್ಬ ವೃದ್ಧನನ್ನ ನೋಡುತ್ತಾನೆ.

ಕೋಪಗೊಂಡು ಬಯ್ಯುತ್ತಾನೆ...

ಆ ವಯೋವೃದ್ಧ.."ಶಿವನಿಲ್ಲದ ಜಾಗದಲ್ಲಿ ನನ್ನ ಕಾಲನ್ನು ಇಡು ..ನಿಶ್ಯಕ್ತಿಯಿಂದ ನನಗೆ ಎತ್ತಿಡಲು ಆಗುತ್ತಿಲ್ಲ" ..ಎಂದಾಗ

ನಾಮದೇವ..ಅದೇನು ಮಹಾ ಎಂದು..ಕಾಲನ್ನು ಶಿವನಿಲ್ಲದ ಸ್ಥಳದಲ್ಲಿ ಇಡಲು ಮುಂದಾಗುತ್ತಾನೆ..

ಆ ವೃದ್ಧರ ಕಾಲನ್ನು ಎಲ್ಲಿ ಇಟ್ಟರೂ  ಅಲ್ಲಿ ಒಂದು ಶಿವಲಿಂಗವಿರುತ್ತದೆ..ಆಗ ನಾಮದೇವನಿಗೆ ಜ್ಞಾನೋದಯವಾಗಿ
"ಅಯ್ಯೋ ನನ್ನ ಅಜ್ಞಾನವೇ.ಶಿವನಿಲ್ಲದ ಸ್ಥಳ ಇರುವುದೇ...ಆ ಜಾಗವೇ ನನ್ನ ತಲೆ.. ನನ್ನ ಅಂಧಕಾರಕ್ಕೆ ಧಿಕ್ಕಾರವಿರಲಿ" ಎಂದು ಗೋಳಿಡುತ್ತಾನೆ...ನಂತರ ಆ ಗುರುವಿನ ಕಾಲನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳುತ್ತಾನೆ.

"ರೀ ಈ ಶ್ರೀಕಾಂತ್ ಮಂಜುನಾಥ್ ಬರಿ ತಲೆ ಹರಟೆ ಕಣ್ರೀ..ಪ್ರವಾಸ ಕಥನ ಬರಿ ಅಂದ್ರೆ ಬರಿ ತಲೆ ಹರಟೆ ಮಾಡ್ತಾನೆ.ಏನು ನಾವೆಲ್ಲಾ ಸಿನಿಮಾ ನೋಡೋಲ್ವೆ ..ನಮಗೆ ಅಣ್ಣಾವ್ರ ಮೇಲೆ ಅಭಿಮಾನ ಇಲ್ಲವೇ..ಇನ್ನು ಇವನ ಬ್ಲಾಗನ್ನು ಬರಿ ಕಡೆ ಕೆಲವು ಸಾಲುಗಳನ್ನ ಮಾತ್ರ ನೋಡ್ಬೇಕು..ಮತ್ತು ಚಿತ್ರಗಳನ್ನು ಮಾತ್ರ ನೋಡಬೇಕು ....ಶುದ್ಧ ತಲೆಹರಟೆ ಬ್ಲಾಗಿದು" ಎಂದು ಕೊಳ್ಳಬೇಡಿ
(ಪ್ಲೀಸ್ ಪ್ಲೀಸ್...ಕೆಲವು ಸಿನಿಮಾಗಳು ಒಂದು ರೀತಿ ನನ್ನ ಜೀವನವನ್ನು ತುಂಬಾ ಬದಲಾಯಿಸಿದೆ :-) ಹಾಗಾಗಿ ಪ್ರತಿಯೊಂದು ಸಿನಿಮಾ ಧಾಟಿಯಲ್ಲೇ ಬರುತ್ತದೆ)

ಶ್ರೀ ಸಹಸ್ರ ಲಿಂಗ ಕ್ಷೇತ್ರಕ್ಕೆ ಕಾಲಿಟ್ಟಾಗ ನನಗೆ ಹೊಳೆದ ದೃಶ್ಯ ಇದು...
ನಮ್ಮ ಪ್ರಯಾಣದ ನಕಾಶೆ
ಬನವಾಸಿಯಲ್ಲಿ ಬಿಸಿ ಬಿಸಿ ಊಟ ಮಾಡಿ..ಶ್ರೀ ಸಹಸ್ರ ಲಿಂಗದ ಕ್ಷೇತ್ರಕ್ಕೆ ಕಾಲಿಟ್ಟೆವು..

ಶ್ರೀ ಸಹಸ್ರ ಲಿಂಗ ಕ್ಷೇತ್ರಕ್ಕೆ ಸ್ವಾಗತ ಫಲಕ!
ಬಯಲಲ್ಲಿರುವ ಕೈಲಾಸ ಎನ್ನಬಹುದು..ಸಂತ ನಾಮದೇವ ಇಲ್ಲಿಗೆ ಬಂದಿದ್ದರೇ ಇನ್ನಷ್ಟು ಗೊಂದಲಕ್ಕೆ ಒಳಗಾಗುತಿದ್ದದು ಸುಳ್ಳಲ್ಲ ..ಎಲ್ಲಿ ನೋಡಿದರೆ ಎಲ್ಲಿ ಕಣ್ಣ ಬಿಟ್ಟ ಕಡೆ, ಕಣ್ಣ ಮುಚ್ಚಿದೆಡೆ ಶಿವಮಯ..ನಂದಿಮಯ...


ಸೋಂದೆ ಅರಸರಿಗೆ ಮಕ್ಕಳಾಗದೆ ಇದ್ದಾಗ.ಕೆಲ ಋಷಿಮುನಿಗಳ ಸಲಹೆಯಂತೆ ಈ ಶಾಲ್ಮಲಾ ನದಿಯಲ್ಲಿ ಹಲವಾರು (ಸಹಸ್ರ) ಲಿಂಗಗಳನ್ನು ನಿರ್ಮಿಸಿ..ಪೂಜಿಸಿದ ಮೇಲೆ ಮಕ್ಕಳಾಯಿತು ಎಂದು ಗೋಡೆಯ ಮೇಲೆ ಬರೆದ ಒಂದು ಬರಹ ಸಾರುತ್ತದೆ..
ಕಾರಣ ಏನೇ ಇದ್ದರು ಇದು ಬಯಲು ಶಿವನ ಸಂಗ್ರಹಾಲಯ ಎಂದು ಹೇಳುವುದರಲ್ಲಿ ಅಡ್ಡಿಯಿಲ್ಲ.

ಸ್ಥಳ ಪುರಾಣ...ಅಂಗ್ಲ ಬಾಷೆಯಲ್ಲಿ.!!!
(ಶಿವಮೊಗ್ಗದ ಬಳಿ ಗಾಜನೂರು ಅಣೆಕಟ್ಟಿಗೆ ಹೋಗುವ ಮಾರ್ಗದಲ್ಲಿ ಹರನಕೆರೆ ಎನ್ನುವ ಜಾಗದಲ್ಲಿಯು ಇಂತಹ ಒಂದು ಕೌತುಕ ಕಾಣ ಸಿಗುತ್ತದೆ...ಅಲ್ಲಿ ಶಿವಲಿಂಗವನ್ನು ಇತ್ತು ಪೂಜಿಸುತ್ತಾರೆ.ಆದ್ದರಿಂದ ಅದಕ್ಕೆ ಹರಕೆರೆ, ಹರನಕೆರೆ, ಅಂತ ಗುರುತಿಸುತ್ತಾರೆ...ಅದೇ ಬಯಲಿನಲ್ಲಿ ಶಿವಮೊಗ್ಗದ ಶ್ರೀ ಕಾಶಿನಾಥ್ ಎನ್ನುವ ಮಹಾನ್ ಶಿಲ್ಪಿ ಒಂದು ಚಿಕ್ಕ ಕೈಲಾಸವನ್ನೇ ನಿರ್ಮಿಸಿದ್ದಾರೆ..ಶಿವ, ಪಾರ್ವತಿ, ಸಪ್ತ ಋಷಿಗಳು,  ಶಿವಗಣ,  ಗಣಪ, ಸುಬ್ರಮಣ್ಯ ಎಲ್ಲವು ಕಾಣ ಸಿಗುತ್ತದೆ...ಅವಕಾಶ ಇದ್ದಾಗ ಹೋಗಿ ಬನ್ನಿ)
ಬಯಲು ಶಿವ ಸಂಗ್ರಹಾಲಯ!!!
ಶಾಲ್ಮಲಾ ನದಿ ಸುಂದರವಾಗಿ ಹರಿಯುತಿತ್ತು...ಆ ಬಂಗಾರದ ಸೂಯನ ಕಿರಣಗಳು ವರ್ಣ ನೀರನ್ನು ಅಕ್ಷರಶಃ ಬಂಗಾರದ ದ್ರಾವಣವನ್ನಾಗಿ ಮಾಡಿತ್ತು..ಶಾಲ್ಮಲಾ ನದಿಯಾ ಪ್ರವಾಹ ಕಡಿಮೆ ಇದ್ದಾಗ ಇನ್ನಷ್ಟು ಲಿಂಗಗಳನ್ನು ಕಾಣಬಹುದು...


ಕಥೆ ಹೇಳಿ ಬೇಸರವಾಗಿ ಸಾಕಪ್ಪ ಎಂದುಕೊಂಡು ಮುಖ ತಿರುಗಿಸಿ ಕೊಂಡು ನಿಂತ ಬಸವನನ್ನು ನೋಡಿದಾಗ ನಂದಿ ನಿನ್ನ ಓಡಾಲಾಲದ ಶರಧಿಯಲ್ಲಿ ನಮ್ಮ ಗಾಳಕ್ಕೆ ಸಿಕ್ಕದೆ ಇರುವ ಇನ್ನೆಷ್ಟು ಇತಿಹಾಸ ಸಾರುವ ಮೀನುಗಳು ಇವೆಯೋ ಎನ್ನುವ ಭಾವ ತುಂಬಿ ಹರಿಯುತಿತ್ತು...

ಕಥೆ ಹೇಳಿ ಹೇಳಿ ಬೇಜಾರಾಗಿ ಬೆನ್ನು ಮಾಡಿ ಕುಳಿತ ಬಸವ..!


ಆ ನದಿಯಲ್ಲಿದ್ದ ಶಿವಲಿಂಗಗಳು ಹೇಗೆ ನಿರ್ಮಿತವಾದವು ಎಂದು ಆಶ್ಚರ್ಯ ಪಡುತಿದ್ದೀರ ..ಪಾಪ ಆ ಬಸವಣ್ಣ ಕತೆ ಹೇಳಿ ಹೇಳಿ ಆ ಕಡೆ ಮುಖ ಮಾಡಿಕೊಂಡು ಕೂತಿದ್ದಾನ..ಇರಲಿ ಬಿಡಿ.ಅವನು ಹೇಳಿದ ಕತೆ ಕೇಳಿ..ನಾನು ನಿಧಾನವಾಗಿ ಮೆಟ್ಟಿಲನ್ನು ಹತ್ತಿ ಇಲ್ಲಿ ನೆರಳಲ್ಲಿ ಬಂದು ಕೂತಿದ್ದೇನೆ...ಬನ್ನಿ ನನ್ನ ಕೈಲಾದ ಮಟ್ಟಿಗೆ ಹೇಳುತ್ತೇನೆ..ಎಂದು ಆಹ್ವಾನ ಕೊಡುತ್ತಿದೆ ಎನ್ನುವ ಹಾಗೆ ಸಾವಾಧಾನವಾಗಿ ಕುಳಿತ ಬಸವ ಹೀಗೆ ಒಂದೇ ಎರಡೇ ನೂರಾರು ಬಸವಗಳು ಶಿವಲಿಂಗಕ್ಕೆ ಪೈಪೋಟಿ ನೀಡುತ್ತ ನಿಂತಿವೆ.


ಎಷ್ಟು ಹೇಳಿದರು ಮುಗಿಯೊಲ್ಲ ಅನ್ನುವ ಬಸವ...!
ಶಿವ ಪಾರ್ವತಿಗೆ "ಸ್ವಾಮಿ ಪೂಜೆಗೆ ಅರಿಶಿನ ಕುಂಕುಮ ತರುತ್ತೇನೆ ಅಂದ್ರೆ ..ಶಿವನು...ಇಲ್ಲ ಶಿವೆ.ನೋಡಲ್ಲಿ ನಮ್ಮ ಸೂರ್ಯದೇವ ತನ್ನ ಕಿರಣಗಳಿಂದ ನೀರನ್ನೇ ಬಂಗಾರದ ವರ್ಣಕ್ಕೆ ತಿರುಗಿಸಿಬಿಟ್ಟಿದ್ದಾನೆ......ಬಂಗಾರದ ನೀರಿನಲ್ಲಿ ಮುಳು ಮುಳುಗಿ ಏಳುತ್ತಾ ನನ್ನ ವಿಭೂತಿಯೆಲ್ಲ ಹರಿದು ಇಲ್ಲೇ ದೂರದಲ್ಲಿ ವಿಭೂತಿ ಜಲಪಾತವಾಗಿಬಿಟ್ಟಿದೆ.ಎನ್ನುವ  ಹಾಗೆ ಆ ಸಂಜೆಯ ಮೋಹಕ ಬೆಳಕಿನಲ್ಲಿ ಶಿವಲಿಂಗಗಳೆಲ್ಲವೂ ಸುವರ್ಣಾಭಿಷೇಕದಿಂದ ಮಿನುಗಿತ್ತಿದ್ದವು..

ಬಂಗಾರದ ನೀರಲ್ಲಿ ಮೀಯುತ್ತಿರುವ ಶಿವಲಿಂಗಗಳು !
ಶಾಲ್ಮಲಾ ನದಿಗೆ (ಗಂಗೆ) ಒಂದು ಕಡೆ ತನ್ನ ಪತಿಗೆ ಅಭ್ಯಂಜನದ ಖುಷಿ..ಇನ್ನೊಂದೆಡೆ ಪಾರ್ವತಿದೇವಿಯಾ ಮೆಚ್ಚುಗೆ ನೋಟ..ಪೂಜೆಗೆ ಕಾವಲಾಗಿ ನಂದಿ ಆಹಾ ಇದು ಅಲ್ಲವೇ ಭೂಕೈಲಾಸ ಎನ್ನುತ್ತಾ ಜುಳು ಜುಳು ಎನ್ನುತ್ತಾ ಘಂಟಾ ನಾದ ಮಾಡಿ ಶಿವ ಪೂಜೆ ಸಲ್ಲಿಸುತ್ತಿದ್ದಳು...

ಏಕಾಂಗಿ ನೀರಲ್ಲಿ ಈಜುತ್ತಿರುವ ಶಿವ!!!

ಶಿವಗಣದ ಜೊತೆ ಬೆಂಗಳೂರಿನಿಂದ ಬಂದ (ವಾ)ನರ ಗುಂಪು ಈ ಪ್ರಕೃತಿಯ ಓಕುಳಿ ಆಟಕ್ಕೆ ಸಾಕ್ಷಿ ಎನ್ನುವಂತೆ ಸಂತಸ ಪದುತಿದ್ದವು...ನೀರೋ..ಇಲ್ಲ ಕೋಲಾರದ ಗಣಿಯಿಂದ ತೆಗೆದ ಚಿನ್ನವನ್ನು ತೊಳೆದು ಹರಿದು ಬಂದ ನೀರೋ ಅನ್ನುವ ಹಾಗೆ ಥಳ ಥಳ ಹೊಳೆಯುತ್ತಿದ್ದ ಶಾಲ್ಮಲೆಯನ್ನು ನೋಡಿ...ಅರೆ..ಶಿವನು ತನ್ನ ಮಡದಿ ಗಂಗೆ ಪಾರ್ವತಿಗೆ ಆಚಾರಿ ಸೂರ್ಯನಿಗೆ ಹೇಳಿಮಾಡಿಸಿದ ಬಂಗಾರದ ಹರಿವಾಣವೇ ಎನ್ನುವಂತೆ  ಇಡಿ ನದಿ ಬಂಗಾರದ ತಟ್ಟೆಯ ಹಾಗೆ ಗೋಚರವಾಯಿತು...
ಬಂಗಾರದ ನೀರು ಬೇಕೇ ಅಭಿಷೇಕಕ್ಕೆ!!!
ಕಣ್ಣು ತುಂಬಾ ತುಂಬಿಕೊಂಡು..ಹಾಗೆ ಮನಸು ಭಕ್ತಿ ಭಾವದಿಂದ ಮನಸು ತೂಗಾಡುತಿತ್ತು....ತನ್ನ ಪೂಜಾ ಕೈಂಕರ್ಯ ಮುಗಿಸಿ ನಾನು ಹೊರಟೆ ಎಂದು ಇನ್ನೊಂದು ದಿಕ್ಕಿಗೆ ಮುಖ ಮಾಡಿ ಶಾಲ್ಮಲೆ ಹರಿಯುತ್ತಾ ಸಾಗಿದಳು...

ನದಿಯ ಇನ್ನೊಂದು ಮುಖ!!!
ನಿಧಾನವಾಗಿ ಮೆಟ್ಟಿಲ ಹತ್ತಿ ಮೇಲೆ ಬಂದು ನೋಡಿದಾಗ.ಅಲ್ಲೊಂದು ತೂಗು ಸೇತುವೆ ಓಲಾಡುತಿತ್ತು..ಸ್ನೇಹಕ್ಕೆ ಒಂದೇ ಮಾತು..ಅದರ ಕಾವಲಿಗೆ ಒಂದೇ ಸೇತುವೆ ಎನ್ನುವಂತೆ..ಶಾಲ್ಮಲೆ ಎರಡು ತಟದ ಜನರನ್ನು ಒಂದು ಗೂಡಿಸಲು ತನ್ನ ಮೇಲೆ ಒಂದು ತೂಗಾಡುವ ಸೇತುವೆ ನಿರ್ಮಿಸಿಕೊಂಡಿದ್ದಾಳೆ..
ತೂಗು ಸೇತುವೆ 
ತಣ್ಣಗೆ ಹರಿಯುತ್ತಿರುವ ಶಾಲ್ಮಲಾ ನದಿ..
ಆ ನದಿಯ ಮೇಲೆ ಮಾನವರು, ಜಾನುವಾರುಗಳು, ವಾಹನಗಳು ಎಲ್ಲವನ್ನು ಹೊತ್ತು ಸಾಗುತ್ತ ಆನಂದದಿಂದ ತೊನೆದಾಡುವಾಗ..ಆ ಸೇತುವೆ ಮೇಲೆ ನಿಂತ್ ನೋಡುತ್ತಾ ನಿಂತಿದ್ದ ನಮ್ಮನ್ನು ಕಂಡು ಶಾಲ್ಮಲೆ ಒಂದು ತೊಟ್ಟು ಆನಂದ ಭಾಷ್ಪವನ್ನು ನಮ್ಮ ಪರವಾಗಿ ಶಿವನಿಗೆ ಅರ್ಪಿಸಿದಂತೆ ಖಂಡಿತು...
ದಾರಿ ಇದ್ದರೆ ಸಾಕು.ನಾವು ಬಂದ್ವಿ...
 ಬೈಕ್ ಗಳು ರಿವ್ವನೆ ಸಾಗುತಿದ್ದವು...ತೂಗು ಸೇತುವೆ ಮೇಲೆ ನಿಂತು ನದಿಯ ಸೌಂದರ್ಯ ಸವಿಯುವುದು, ಗಾಳಿ ಮೇಲೆ ತೇಲಿಬರುವ ಶಿವನ ಧ್ಯಾನ ಗಾನ, ಎಲ್ಲವು ಮಂತ್ರ ಮುಗ್ಧರನ್ನಾಗಿ ಮಾಡುವುದು ಈ ಕ್ಷೇತ್ರದ ವಿಶೇಷ..

ಬರಿ ಭಕ್ತಿಯೊಂದೇ ಅಲ್ಲ.ಸೌಂದರ್ಯ, ಪ್ರಕೃತಿಯ ನಿಗೂಡ ರಹಸ್ಯ,  ಜುಳು ಜುಳು ನದಿ, ತೂಗು ಸೇತುವೆ, ಇತಿಹಾಸ ಎಲ್ಲವು ಮನಸಿಗೆ ಪ್ರಶಾಂತ ಭಾವ ತರುತ್ತದೆ..

(ಸಶೇಷ...)