ಕುಮಾರ ಪರ್ವತಕ್ಕೆ ಚಾರಣ ಯಾವಾಗಲೂ ಹೊಸ ಹುರುಪು ಉತ್ಸಾಹ ತುಂಬುತ್ತದೆ....
ಹಾಗಾಗಿ ಪ್ರತಿಬಾರಿಯೂ...ಇದು ನನ್ನ ಮೊದಲ ಪ್ರಯತ್ನ ಅನ್ನುವ ಹೊಸತನ ತುಂಬುತ್ತದೆ..
ಈ ಬಾರಿ ನನ್ನ ಪ್ರಯತ್ನಕ್ಕೆ ಯಥಾ ಪ್ರಕಾರ ಸಂದೀಪ್ ಕೈ ಜೋಡಿಸಿದರು...ಅವರ ಜೊತೆಗೆ ಪ್ರಶಾಂತ್, ಕಿಶೋರ್, ಸೋಮು ಶೇಖರ್ ಕೂಡ ಮುಂದೆ ಬಂದರು
ನಮ್ಮ ಸುವರ್ಣ ಸಾರಿಗೆ ವಾಹನ ಅನೇಕ ಹಳ್ಳ ಕೊಳ್ಳ ತುಂಬಿದ ಶಿರಾಡಿ ಘಟ್ಟ ಧಾಟಿ ಕುಕ್ಕೆಗೆ ಬಂದು ನಿಂತಾಗ ಘಂಟೆ ಸುಮಾರು ಮುಂಜಾನೆ ೫.೩೦. ಬೆಳಗಿನ ಲಘು ಉಪಹಾರ ಸ್ವಲ್ಪ ಜಾಸ್ತಿನೆ ಮುಗಿಸಿ ಚಾರಣಕ್ಕೆ ಮನಸನ್ನು, ಹಾಗು ದೇಹವನ್ನು ಸಜ್ಜುಗೊಳಿಸಿಕೊಂಡೆವು..
ಮೊದಲ ಸುಮಾರು ೫.೦೦ ಕಿ.ಮಿ.ಗಳು ನಿಧಾನವಾಗಿ ಸಾಗುತ್ತ, ಒಬ್ಬರಿಗೊಬ್ಬರು ಆಸರೆ ಕೊಡುತ್ತ ಸಾಗಿದೆವು...ಹುಲ್ಲುಗಾವಲು ಬರುವಷ್ಟರಲ್ಲಿ ದೇಹವು ದಣಿದಿದ್ದ ಕಾರಣ...ಅಲ್ಲಿಯೇ ಕುಳಿತು ಉಪಹಾರ ಮುಗಿಸಿದೆವು...ಇಲ್ಲಿ ಸುಮಾರು ಹೊತ್ತು ಕಳೆದ ಕಾರಣ ನಮ್ಮ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗಿ ಬಂತು.
ಭಟ್ಟರ ಮನೆಗೆ ಬಂದು ಸರಿಯಾಗಿ ಊಟ ಬಾರಿಸಿದ ಮೇಲೆ, ಮನಸು ಹಾಗು ದೇಹ ಒಂದು ತಹಬದಿಗೆ ಬಂತು..ಮತ್ತೆ ನಿರ್ಧಾರ ಬದಲಾಗಿ, ಬೇಡದ ಪದಾರ್ಥಗಳನ್ನು ಭಟ್ಟರ ಮನೆಯಲ್ಲಿಯೇ ಬಿಟ್ಟು, ಅರಣ್ಯ ಇಲಾಖೆಯ ಕಚೇರಿ ತಲುಪಿದೆವು...ಅಷ್ಟೊತ್ತಿಗೆ ಕಾರ್ಮೋಡಗಳು ಕುಮಾರ ಪರ್ವತವನ್ನು ಆಕ್ರಮಿಸಿಕೊಳ್ಳುತ್ತ ಇದ್ದವು..ಕಚೇರಿ ಸಿಬ್ಬಂಧಿ...ಚಾರಣ ಮುಂದುವರಿಸುವುದಕ್ಕಿಂತ ಇಲ್ಲಿಯೇ ಉಳಿದು..ಮರು ದಿನ ಬೆಳಿಗ್ಗೆ ಸುಮಾರು ೫-೫.೩೦ಕ್ಕೆ ಹೋಗಬಹುದು ಒಳ್ಳೆಯದು ಎಂದರು. ನಮಗೂ ಅದೇ ಸರಿ ಅನ್ನಿಸಿತು.
ಅಲ್ಲಿಯೇ ಸುಂದರವಾದ ವೀಕ್ಷಣ ತಾಣದಲ್ಲಿ ನಮ್ಮ ಗುಡಾರವನ್ನು ಹಾಕಿ, ಬೆಂಕಿ ಪುಟ ಮಾಡಿಕೊಂಡು ನಮ್ಮ ಸಿದ್ದ ಪಡಿಸಿದ ಎಂ. ಟಿ. ಆರ್. ಪೊಟ್ಟಣವನ್ನು ತಿಂದು ಮುಗಿಸಿದೆವು...ಮಳೆ ಶುರುವಾದ ಕಾರಣ...ಮೂರು ಮಂದಿ ಗುಡಾರದಲ್ಲಿಯು ಮತ್ತು ಉಳಿದ ಇಬ್ಬರು ಅರಣ್ಯ ಇಲಾಖೆ ಕಚೇರಿಯಲ್ಲಿ ಮಲಗುವುದೆಂದು ನಿರ್ಧರಿಸಿದೆವು..
ರಾತ್ರಿ ಇಡಿ ಸೋಮು ಗಾಳಿಯಿಂದ ಗುಡಾರ ಅಲುಗಾಡುವುದು ಗಮನಿಸಿ ..ಯಾವುದೋ ಪ್ರಾಣಿ ಇರಬಹುದು...ಅಥವಾ ಜೋರಾದ ಗಾಳಿ ಗುಡಾರವನ್ನು ಕಿತ್ತು ಹಾಕಬಹುದು ಎನ್ನುವ ಭಯದಲ್ಲಿ ನಿದ್ದೆ ಮಾಡಲು ಆಗಲಿಲ್ಲ...ಆದ್ರೆ ನಾನು ಮತ್ತು ಪ್ರಶಾಂತ್ ಪ್ರಪಂಚದಲ್ಲಿ ಅರಿವು ಹಾಗು ಪರಿವೆ ಇಲ್ಲದೆ ನಿದ್ದೆ ಮಾಡಿದೆವು...
ಬೆಳಿಗ್ಗೆ ಬೇಗ ಇದ್ದು ಶಿಖರದತ್ತ ದಾಪುಗಾಲು ಇಡುತ್ತ..ಹೊರಟೆವು...ನಡುವೆ ಸುಮಾರು ಛಾಯಾಚಿತ್ರಗಳು, ವಿರಾಮಗಳು, ತಮಾಷೆಗಳು ನಡೆಯುತ್ತ ಹೋದವು..
ತುದಿ ತಲುಪಿದಾಗ..ಅಲ್ಲಿ ಎಲ್ಲವು ಶ್ವೇತಮಯಾ...ಎಲ್ಲಿ ನೋಡಿದರು ಬರಿ ಬಿಳಿ, ಬಿಳಿ...ಮುಂದೆ ಏನು ಇದೆ, ಹಿಂದೆ ಏನು ಬರ್ತಾ ಇದೆ ಏನ್ ಕಾಣುತಿಲ್ಲ..ಹೀಗೆ ಸುಮಾರು ಒಂದು ಘಂಟೆ ನಿಸರ್ಗದ ಮಡಿಲಲ್ಲಿ ಕಾಲ ಕಳೆದೆವು...ದಣಿದ ದೇಹ ಆ ತಂಪು ತಂಗಾಳಿಯಲ್ಲಿ ಹೊಸ ಹುರುಪು ಪಡೆದುಕೊಂಡಿತು...
ಕಣ್ಣು, ಮನಸನ್ನು ತುಂಬಿಕೊಂಡು ಹಗುರವಾದ ದೇಹ ಹಾಗು ಭಾರವಾದ ಮನಸಿನಿಂದ ಕೆಳಗೆ ಇಳಿಯಲು ಶುರು ಮಾಡಿದೆವು...ಭಟ್ಟರ ಮನೆ ತಲುಪುವಷ್ಟರಲ್ಲಿ ನಮ್ಮ ಮರ್ಕಟ ಮನಸು ಕೆಲವು ಒಳ್ಳೆ ಪ್ರಸಂಗಗಳನ್ನೂ ಸೃಷ್ಟಿ ಮಾಡಿತು.
ಭಟ್ಟ ಮನೆಗೆ ಬಂದು ಚೆನ್ನಾಗಿ ಊಟ ಮಾಡಿ ಹೊರಡಲು ಸಿದ್ದವಾದೆವು ಆಗ ಸಮಯ ಸುಮಾರು ಸಂಜೆ ೪.೩೦..ಭಟ್ಟರು ಹೊರಡಲೇ ಬೇಕಾ..ಅಂಥಹ ತುರ್ತು ಕೆಲಸ ಇದೆಯಾ ಅಂತ ಕೇಳಿದರು...ಕಾರಣ ಆಗಲೇ "ತುಂತುರು ಅಲ್ಲಿ ನೀರ ಹಾಡು" ಅಂತ ಶುರುವಾಗಿತ್ತು...ಕೆಲವೇ ನಿಮಿಷದಲ್ಲಿ ಅಂಬರ ತೂತು ಬಿದ್ದ ಹಾಗೆ..ಮುಸಲಧಾರೆ ಶುರುವಾಯಿತು..."ಏನು ಮಾಡಲಿ ನಾನು ಏನು ಹೇಳಲಿ" ಅನ್ನುವ ಅಣ್ಣಾವ್ರ ಹಾಡು ನನಗೆ ನೆನಪಿಗೆ ಬಂತು..ಯಾಕೆ ಅಂದ್ರೆ...ಗುಂಪಿನಲ್ಲಿ ಮೂರು ಜನ ಮಳೆಯಲ್ಲೇ ಹೋಗಿ ಕೆಳಗೆ ಇಳಿಯೋಣ ಅಂತ ಇದ್ದರು..ಯಾಕೆ ಅಂದ್ರೆ ಮರುದಿನ ಕೆಲಸಕ್ಕೆ ಹೋಗಲೇಬೇಕಾದ ತುರ್ತು ಇತ್ತು...ಆದ್ರೆ ಈ ಮಳೆಯಲ್ಲಿ...ಜಾರುವ ನೆಲದಲ್ಲಿ, ಸಂಜೆಗತ್ತಲಲ್ಲಿ ಕಾಡಿನ ೫.೦೦ ಕಿ.ಮಿ. ನಡೆಯುವುದು ಸಾಹಸ ಅಂತ ಮನಸು ಹೇಳುತಿತ್ತು...ಆದ್ರೆ ಭಟ್ಟರು ಹೇಳಿದರು ಒಂದು ಮಳೆಯಿಂದ ನೆಲ ಅಷ್ಟು ಜಾರುವುದಿಲ್ಲ...ಸುಮಾರು ಐದು ಆರು ಮಳೆಬಿದ್ದರೆ ಮಾತ್ರ ಹೋಗಲು ಕಷ್ಟ-ಸಾಧ್ಯ ಅಂತ ಹೇಳಿದರು...ಅವರ ಈ ವಾಣಿ ನಮ್ಮ ಉತ್ಸಾಹವನ್ನು ನೂರ್ಮಡಿಗೊಳಿಸಿತು...
ನಿಧಾನವಾಗಿ ಆ ಕತ್ತಲಲ್ಲಿ ಮಿಣುಕು ದೀಪ (ಟಾರ್ಚ್) ಸಹಾಯದಿಂದ ಒಬ್ಬರಾಗಿ ಒಬ್ಬರನ್ನು ಅನುಸರಿಸುತ್ತ ಹೆಜ್ಜೆ ಹಾಕುತ್ತ ಸಾಗಿದೆವು..ಸೋಮು ನಮ್ಮ ಮುಂದಾಳತ್ವ ವಹಿಸಿದರು...ನಂತರ ಸಂದೀಪ್ ಕೆಲವು ದೂರ ಮುಂದಾಳತ್ವ ವಹಿಸಿದರು...ಮಧ್ಯೆ ಪ್ರಶಾಂತ್..ನಂತರ ಕಿಶೋರ್ ಕಡೆಯಲ್ಲಿ ನಾನು ಬೆಂಗಾವಲಾಗಿ ಕುಕ್ಕೆ ಸುಬ್ರಮಣ್ಯ ತಲುಪಿದಾಗ ರಾತ್ರಿ ೮.೪೫..ಲಗುಬಗೆಯಿಂದ ಸ್ನಾನ ಮುಗಿಸಿ ಹೊರಟೆವು...ಆದ್ರೆ ಅಷ್ಟು ಹೊತ್ತಿಗೆ ದೇವಸ್ತಾನ ಬಾಗಿಲು ಮುಚ್ಚುವ ಸಮಯವಾಗಿತ್ತು ಹಾಗು ನಮ್ಮ ಬಸ್ ೧೦.೦೦ ಕ್ಕೆ ಇದ್ದಿದ್ದರಿಂದ ಹೆಚ್ಚು ಸಮಯ ಕಳೆಯಲು ಸಾಧ್ಯವಿರಲಿಲ್ಲ..
ನಮ್ಮನ್ನು ಸುರಕ್ಷಿತವಾಗಿ ಕೆಳಗೆ ಇಳಿಯಲು ಸಹಾಯ ಮಾಡಿದ ದೇವ ಸುಬ್ರಮಣ್ಯನಿಗೆ ಕಣ್ಣಲ್ಲೇ ನಮನ ಸಲ್ಲಿಸಿ ಮತ್ತೆ ಬರುವ ವಿಶ್ವಾಸ ಕೊಟ್ಟು...ಬೆಂಗಳೂರಿಗೆ ಬಂದು ತಲುಪಿದೆವು.









